ಕಲಬುರಗಿಯಲ್ಲಿ ನಾಳೆಯಿಂದ 85 ನೇ ಅಕ್ಷರ ಜಾತ್ರೆ
ಕಲಬುರಗಿ, ಫೆಬ್ರವರಿ 04: ನೃಪತುಂಗನ ನಾಡು ಕಲಬುರಗಿಯಲ್ಲಿ ನಾಳೆಯಿಂದ ಮೂರು ದಿನಗಳ ಕಾಲ ನಡೆತುವ 85 ನೇ ಅಕ್ಷರ ಜಾತ್ರೆಗೆ ಚಾಲನೆ ಸಿಗಲಿದೆ.
ಈ ಭಾಗದ ಸಾಹಿತ್ಯಾಸಕ್ತರಿಗೆ ಮತ್ತು ಕನ್ನಡ ಮನಸ್ಸುಗಳಿಗೆ ಮೂರು ದಶಕಗಳ ನಂತರ ಮತ್ತೊಮ್ಮೆ ಕನ್ನಡ ತೇರು ಎಲೆಯುವ ಸೌಭಾಗ್ಯ ಒಲಿದು ಬಂದಿದೆ. ಕಲಬುರಗಿ ವಿಶ್ವವಿದ್ಯಾಲಯದಲ್ಲಿ ಫೆ. 5, 6 ಮತ್ತು 7 ರಂದು 85 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ.
85ನೇ ಕನ್ನಡ ಸಾಹಿತ್ಯ ಸಮ್ಮೇಳನ; 10 ಕೋಟಿ ಅನುದಾನ ಬಿಡುಗಡೆ
ನೃಪತುಗನ ಕವಿರಾಜಮಾರ್ಗದ ತೊಟ್ಟಿಲು, ತೊಗರಿ ಕಣಜವೆಂದೇ ದೇಶದಲ್ಲಿ ಹೆಸರುವಾಸಿಯಾಗಿರುವ ಈ ನಾಡಲ್ಲಿ ಕನ್ನಡಾಂಬೆಯ ಉತ್ಸವ ಜರುಗಲಿದೆ.
ಶರಣರು, ಸೂಫಿ ಸಂತರು, ನಡೆದಾಡಿದ ನೆಲ, ಸಾವಿರಾರು ವರ್ಷದ ಇತಿಹಾಸ ಹೊಂದಿದ ಈ ಜಿಲ್ಲೆಯಲ್ಲಿ ಹಲವು ಪುರಾತನ ಕುರುಹುಗಳಿವೆ. ಹಲವು ಶಿಲ್ಪ ಕೆತ್ತನೆಗಳನ್ನು ಹೊಂದಿದೆ. ಕಾಳಗಿಯಲ್ಲಿರುವ ಕಲ್ಲಿನ ಮೂರ್ತಿಗಳು, ರಾಷ್ಟ್ರಕೂಟರ ರಾಜಧಾನಿಯಾದ ಮಳಖೇಡದ ಕೋಟೆಗಳು, ಚಿಂಚೋಳಿ ವನ್ಯಧಾಮ, ಅಮರ್ಜಾ ಜಲಾಶಯದಂತಹ ಐತಿಹಾಸಿಕ ಸ್ಥಳಗಳ ಬೀಡು ಈ ಕಲಬುರಗಿ.
ಜಿಲ್ಲಾ ಕೇಂದ್ರದಲ್ಲಿ ಶರಣಬಸವೇಶ್ವರರ ದೇವಸ್ಥಾನ, ಸರ್ವ-ಧರ್ಮಗಳ ಸಂಕೇತವಾದ ಖಾಜಾ ಬಂದಾ ನವಾಜ್ ದರ್ಗಾ, ಬುದ್ಧನ ಸಂದೇಶ ಹೇಳುವ ಬೌದ್ಧ ವಿಹಾರ ಎಲ್ಲವೂ ಕಲಬುರಗಿಗೆ ಮುಕುಟ ಮಣಿಯಂತೆ ಕಾಣುತ್ತವೆ.
ಸಾಹಿತ್ಯ ಪ್ರೇಮಿಗಳ ಕನಸು ನನಸು ಮಾಡಲು ಮೂರು ದಶಕಗಳ ನಂತರ ಮತ್ತೆ ಸಾಹಿತ್ಯ ಸಮ್ಮೇಳನದ ಆತಿಥ್ಯ ವಹಹಿಸುವ ಅವಕಾಶ ಬಂದಿರುವುದು ಮತ್ತೊಂದು ಹೆಮ್ಮೆಯ ಸಂಗತಿಯಾಗಿದೆ.
ಕವಿಶ್ರೇಷ್ಠ ಎಚ್.ಎಸ್.ವೆಂಕಟೇಶ ಮೂರ್ತಿಯವರು ಅಧ್ಯಕ್ಷರಾಗಿರುವ 85 ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ ಜಿಲ್ಲೆಯಿಂದ ಅಷ್ಟೇ ಅಲ್ಲದೇ ಹೊರರಾಜ್ಯ, ದೇಶ-ವಿದೇಶಗಳಿಂದ ಸಾಹಿತ್ಯಾಸಕ್ತರು ಆಗಮಿಸುತ್ತಿದ್ದಾರೆ.
ಗುಲ್ಬರ್ಗಾ ವಿಶ್ವವಿದ್ಯಾಲಯದ ಆವರಣದ 35 ಎಕರೆ ಪ್ರದೇಶದಲ್ಲಿ ಬೃಹತ್ ವೇದಿಕೆ ಸಜ್ಜಾಗಿದ್ದು, ಶ್ರೀವಿಜಯ ಪ್ರಧಾನ ವೇದಿಕೆಯಲ್ಲಿ 10 ಗೋಷ್ಠಿ ಹಾಗೂ ಸಮಾನಂತರ ವೇದಿಕೆಯಲ್ಲಿ 12 ಗೋಷ್ಠಿಗಳು ನಡೆಯಲಿವೆ.