85 ನೇ ಕನ್ನಡ ಸಾಹಿತ್ಯ ಸಮ್ಮೇಳನ; ಕಳೆಗಟ್ಟಿದ ಕಲಬುರಗಿ
ಕಲಬುರಗಿ, ಫೆಬ್ರವರಿ 4; 85 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ತೇರು ಎಳೆಯಲು ಶರಣರ ನಾಡು, ತೊಗರಿಯ ಕಣಜ ಕಲಬುರಗಿ ಸರ್ವಸಿದ್ಧಗೊಂಡಿದೆ. ನಗರದ ಗುಲ್ಬರ್ಗಾ ವಿಶ್ವವಿದ್ಯಾಲಯ ಆವರಣದಲ್ಲಿ ಬುಧವಾರದಿಂದ ಮೂರು ದಿನ (ಫೆಬ್ರವರಿ 5, 6 ಮತ್ತು 7) ನುಡಿ ಜಾತ್ರೆ ನಡೆಯಲಿದೆ.
ಈ ಬಾರಿ ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ಹಿರಿಯ ಕವಿ ಎಚ್ ಎಸ್ ವೆಂಕಟೇಶಮೂರ್ತಿ ವಹಿಸಿದ್ದಾರೆ. ಸಮ್ಮೇಳನ ಯಶಸ್ವಿಗೊಳಿಸಲು ಕನ್ನಡ ಸಾಹಿತ್ಯ ಪರಿಷತ್, ಕಲಬುರಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಕಲಬುರಗಿ ಜಿಲ್ಲಾಡಳಿತ ಸರ್ವಸನ್ನದ್ಧವಾಗಿದೆ.
85ನೇ ಕನ್ನಡ ಸಾಹಿತ್ಯ ಸಮ್ಮೇಳನ; 10 ಕೋಟಿ ಅನುದಾನ ಬಿಡುಗಡೆ
ಈ ಹಿಂದೆ 1928, 1949, ಹಾಗೂ 1987 ರಲ್ಲಿ ಕಲಬುರಗಿಯಲ್ಲಿ ಅಖಿಲ ಬಾರತ ಸಾಹಿತ್ಯ ಸಮ್ಮೇಳನ ನಡೆದಿದ್ದವು. 1928 ರಲ್ಲಿ ಬಿ ಎಂ ಶ್ರೀಕಂಠಯ್ಯ 1949 ರಲ್ಲಿ ಉತ್ತಂಗಿ ಚನ್ನಪ್ಪ, 1987 ರಲ್ಲಿ ಸಿದ್ದಯ್ಯ ಪುರಾಣಿಕ ಅಧ್ಯಕ್ಷತೆ ವಹಿಸಿದ್ದರು.
ಸಮ್ಮೇಳನದ ಮೊದಲ ದಿನ ಏನು?
ಸಮ್ಮೇಳನ ನಡೆಯುವ ಜಾಗಕ್ಕೆ "ಮಹಾ ಮಂಟಪ; ಅನುಭವ ಮಂಟಪ' ಎಂದು ಹೆಸರಿಡಲಾಗಿದೆ. ಶ್ರೀವಿಜಯ ಪ್ರಧಾನ ವೇದಿಕೆಯಲ್ಲಿ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ. ಬೆಳಿಗ್ಗೆ 8;30 ಕ್ಕೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಡಾ.ಎಸ್.ಎಂ.ಪಂಡಿತ್ ರಂಗಮಂದಿರದಿಂದ ಆರಂಭವಾಗಲಿದ್ದು, ಕುಸನೂರು ರಸ್ತೆ ಮಾರ್ಗವಾಗಿ ಪ್ರಧಾನ ವೇದಿಕೆ ತಲುಪಲಿದೆ. ಬೆಳಿಗ್ಗೆ 11;30 ಕ್ಕೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಸಮ್ಮೇಳನ ಉದ್ಘಾಟಿಸಲಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮನು ಬಳಿಗಾರ್ ಸಾಥ್ ನೀಡಲಿದ್ದಾರೆ. ಎಚ್ ಎಸ್ ವೆಂಕಟೇಶಮೂರ್ತಿ ಸಮ್ಮೇಳನಾಧ್ಯಕ್ಷರ ಭಾಷಣ ಮಾಡಲಿದ್ದಾರೆ. ಮಂಗಳವಾರವೇ ವೆಂಕಟೇಶಮೂರ್ತಿ ಅವರು ಕಲಬುರಗಿ ತಲುಪಿದ್ದಾರೆ.
ಸಮ್ಮೇಳನದಲ್ಲಿ ಒಟ್ಟು 22 ಗೋಷ್ಠಿಗಳು
ಕಲಬುರಗಿ ಕೋಟೆಯನ್ನು ಹೋಲುವ ಶ್ರೀವಿಜಯ ಪ್ರಧಾನ ವೇದಿಕೆಯಲ್ಲಿ ಪ್ರಮುಖ ಗೋಷ್ಠಿಗಳು ನಡೆಯಲಿವೆ. ಕಲ್ಯಾಣ ಕರ್ನಾಟಕ ಅಂದು-ಇಂದು-ಮುಂದು, ಸಮಕಾಲೀನ ಸಾಹಿತ್ಯ; ಚಹರೆ ಮತ್ತು ಸವಾಲುಗಳು, ಸ್ರ್ತೀ ಲೋಕ; ತವಕ ತಲ್ಲಣಗಳು, ಕನ್ನಡ ಉಳಿಸಿ, ಬೆಳೆಸುವ ಬಗೆಯ ಬಗ್ಗೆ ಇತಿಹಾಸಕಾರ ಷ.ಶಟ್ಟರ್ ಅವರ ವಿಶೇಷ ಉಪನ್ಯಾಸಗಳು ನಡೆಯಲಿವೆ. ಗುಲ್ಬರ್ಗಾ ವಿಶ್ವವಿದ್ಯಾಲಯದ ಆವರಣದ 35 ಎಕರೆ ಪ್ರದೇಶದಲ್ಲಿ ಬೃಹತ್ ವೇದಿಕೆ ಸಜ್ಜಾಗಿದ್ದು, ಶ್ರೀವಿಜಯ ಪ್ರಧಾನ ವೇದಿಕೆಯಲ್ಲಿ 10 ಗೋಷ್ಠಿ ಹಾಗೂ ಸಮಾನಂತರ ವೇದಿಕೆಯಲ್ಲಿ 12 ಗೋಷ್ಠಿಗಳು ನಡೆಯಲಿವೆ.
ಎಚ್ಎಸ್ವಿಗೆ ಒಲಿದ 85ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ
11;15 ಕ್ಕೆ ಕಲಬುರಗಿಗೆ ಸಿಎಂ
ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬೆಂಗಳೂರಿನಿಂದ ವಿಶೇಷ ವಿಮಾನದ ಮೂಲಕ ಫೆ 5 ರಂದು ಬೆಳಿಗ್ಗೆ 11.15ಕ್ಕೆ ನಗರಕ್ಕೆ ಬರಲಿದ್ದಾರೆ. ಬೆಳಿಗ್ಗೆ 11.35ಕ್ಕೆ ಸಮ್ಮೇಳನವನ್ನು ಉದ್ಘಾಟಿಸುವರು. ಮಧ್ಯಾಹ್ನ 2ಕ್ಕೆ ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ಪ್ರಯಾಣ ಬೆಳೆಸಲಿದ್ದಾರೆ.
ಮೆರವಣಿಗೆಯಲ್ಲಿ 60 ಕಲಾ ತಂಡಗಳು
ಈ ಸಾರಿಯ ಸಮ್ಮೇಳನದ ಮೆರವಣಿಗೆಯಲ್ಲಿ ಕಲಬುರ್ಗಿ ಜಿಲ್ಲೆಯ 23 ಕಲಾ ತಂಡಗಳು ಸೇರಿ ಕೊಪ್ಪಳ, ಗದಗ, ಚಾಮರಾಜನಗರ, ಚಿಕ್ಕಮಗಳೂರ, ಚಿತ್ರದುರ್ಗ, ತುಮಕೂರ, ದಾವಣಗೆರೆ, ಧಾರವಾಡ, ಬಳ್ಳಾರಿ, ಬಾಗಲಕೋಟೆ, ಮಂಡ್ಯ, ರಾಯಚೂರು, ಶಿವಮೊಗ್ಗ, ಹಾಸನ, ಆಂಧ್ರ ಗಡಿನಾಡು ಘಟಕ, ಹಾಸನ, ಉಡುಪಿ ಸೇರಿ ವಿವಿಧ ಜಿಲ್ಲೆಗಳ ಒಟ್ಟು 60 ಕಲಾ ತಂಡಗಳು ಈ ಮೆರವಣಿಗೆಯಲ್ಲಿ ಭಾಗವಹಿಸಲಿವೆ.
ಕಲಬುರಗಿಯಲ್ಲಿ ನಾಳೆಯಿಂದ 85 ನೇ ಅಕ್ಷರ ಜಾತ್ರೆ
ಸಮ್ಮೇಳನಾಧ್ಯಕ್ಷರ ಪರಿಚಯ
ಹಿರಿಯ ಸಾಹಿತಿ ಡಾ.ಎಚ್ ಎಸ್ ವೆಂಕಟೇಶಮೂರ್ತಿ ಅವರು ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ವೆಂಕಟೇಶಮೂರ್ತಿ ಅವರು ಮೂಲತಃ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಹೊದಿಗೆರೆ ಗ್ರಾಮದವರು. ತಂದೆ ನಾರಾಯಣ ಭಟ್, ತಾಯಿ ನಾಗರತ್ನಮ್ಮ. 76 ವಯಸ್ಸಿನ ಎಚ್ ಎಸ್ ವೆಂಕಟೇಶಮೂರ್ತಿ ಅವರು, ಕನ್ನಡ ಸಾರಸ್ವತ ಲೋಕದಲ್ಲಿ ಎಚ್ಎಸ್ವಿ ಮೇಷ್ಟ್ರು ಎಂದೇ ಜನಪ್ರಿಯರಾಗಿದ್ದಾರೆ. ಬೆಂಗಳೂರಿನ ಸೇಂಟ್ ಜೋಸೆಪ್ ಕಾಮರ್ಸ್ ಕಾಲೇಜಿನಲ್ಲಿ ದಶಕಗಳ ಕಾಲ ಪ್ರಾಧ್ಯಾಪಕರಾಗಿದ್ದ ಅವರು, ಕನ್ನಡ ಕಟ್ಟುವ ಕಾಯಕದಲ್ಲಿ ಇಂದಿಗೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ಸಮ್ಮೇಳನಕ್ಕೆ 10ಕೋಟಿ ಅನುದಾನ ಬಿಡುಗಡೆ
85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ರಾಜ್ಯ ಸರ್ಕಾರ 10 ಕೋಟಿ ರೂ ಅನುದಾನ ಬಿಡುಗಡೆ ಮಾಡಿದೆ. ಸಾಹಿತ್ಯ ಪರಿಷತ್ತು ಸಾಹಿತ್ಯ ಸಮ್ಮೇಳನಕ್ಕೆ 14 ಕೋಟಿ ಅನುದಾನ ನೀಡುವಂತೆ ಮನವಿ ಮಾಡಿತ್ತು. ಆದರೆ, ಸರ್ಕಾರ 10 ಕೋಟಿ ರೂ. ನೀಡಿದೆ. ಕಳೆದ ಬಾರಿ ಧಾರವಾಡದಲ್ಲಿ ಸಮ್ಮೇಳನ ನಡೆದಾಗಲೂ 10 ಕೋಟಿ ರೂ ಅನುದಾನವನ್ನು ನೀಡಲಾಗಿತ್ತು.
ಮೂರು ದಿನ ಶಾಲಾ ಕಾಲೇಜಿಗೆ ರಜೆ
ಸಾಹಿತ್ಯ ಸಮ್ಮೇಳನದ ಅಂಗವಾಗಿ ಜಿಲ್ಲೆಯ ಎಲ್ಲ ಶಾಲಾ-ಕಾಲೇಜು, ವಿಶ್ವವಿದ್ಯಾಲಯಗಳಿಗೆ ಫೆ 5ರಿಂದ 7ರ ವರೆಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಶರತ್ ಬಿ. ಆದೇಶ ಹೊರಡಿಸಿದ್ದಾರೆ. ಜಿಲ್ಲೆಯ ಎಲ್ಲಾ ಶಾಲಾ-ಕಾಲೇಜುಗಳ ಉಪನ್ಯಾಸಕರು, ಶಿಕ್ಷಕರು ಹಾಗೂ ಮಕ್ಕಳು ಈ ಸಮ್ಮೇಳನದಲ್ಲಿ ಭಾಗವಹಿಸಲು ಅನುಕೂಲವಾಗುವಂತೆ ರಜೆ ನೀಡಲಾಗಿದೆ.
ಒಟ್ಟು 618 ವಿವಿಧ ಮಳಿಗೆಗಳು
ಸಾಹಿತ್ಯ ಸಮ್ಮೇಳನದಲ್ಲಿ 405 ಪುಸ್ತಕ ಮಳಿಗೆಗಳು, 193 ವಾಣಿಜ್ಯ ಮಳಿಗೆಗಳು ಹಾಗೂ 20 ಚಿತ್ರಕಲಾ ಪ್ರದರ್ಶನ ಮಳಿಗೆಗಳನ್ನು ಸಜ್ಜುಗೊಳಿಸಲಾಗಿದೆ. ಮಳಿಗೆಗಳ ನಿರ್ವಹಣೆಗಾಗಿ 80 ಸ್ವಯಂಸೇವಕರನ್ನು ನಿಯೋಜಿಸಲಾಗಿದೆ. ಅಷ್ಟೂ ಮಳಿಗೆಗಳಿಗೆ ನೆಲಹಾಸು ಹಾಕಲಾಗಿದ್ದು, ಸಮ್ಮೇಳನಕ್ಕೆ ಆಗಮಿಸುವವರಿಗೆ ಉತ್ತಮ ವ್ಯವಸ್ಥೆ ಕಲ್ಪಿಸಲಾಗಿದೆ.
ಮಳಿಗೆಗಳಿಗೆ ವಿವಿಧ ಹೆಸರು
ಪುಸ್ತಕ ಮಳಿಗೆಗಳಿಗೆ ಕಾಗಿಣಾ, ಭೀಮಾ, ಕೃಷ್ಣಾ, ಕಾರಂಜಾ ಎಂದು ನಾಮಕರಣ ಮಾಡಲಾಗಿದೆ. ಕಾಗಿಣಾ ನದಿಯು ಕವಿರಾಜಮಾರ್ಗ ಕೃತಿ ರಚನೆಯಾದ ಮಳಖೇಡ ಸೀಮೆಯಲ್ಲಿದೆ. ಭೀಮಾ ನದಿಯು ಕಲಬುರಗಿ ಜಿಲ್ಲೆಯನ್ನು ಪ್ರತಿನಿಧಿಸಿದರೆ, ಕೃಷ್ಣಾ ನದಿಯು ಕಲ್ಯಾಣ ಕರ್ನಾಟಕದ ಜಿಲ್ಲೆಗಳಾದ ರಾಯಚೂರು ಹಾಗೂ ಯಾದಗಿರಿ ಜಿಲ್ಲೆಗಳನ್ನು ಪ್ರತಿನಿಧಿಸುತ್ತದೆ. ಕಾರಂಜಾ ನದಿಯು ಪಕ್ಕದ ಬೀದರ್ ಜಿಲ್ಲೆಯನ್ನು ಪ್ರತಿನಿಧಿಸುತ್ತದೆ.
ಕಲಬುರಗಿಯಲ್ಲಿ ಏನು ವಿಶೇಷ
ಶರಣರು, ಸೂಫಿ ಸಂತರು, ನಡೆದಾಡಿದ ನೆಲ, ಸಾವಿರಾರು ವರ್ಷದ ಇತಿಹಾಸ ಹೊಂದಿದ ಈ ಜಿಲ್ಲೆಯಲ್ಲಿ ಹಲವು ಪುರಾತನ ಕುರುಹುಗಳಿವೆ. ಹಲವು ಶಿಲ್ಪ ಕೆತ್ತನೆಗಳನ್ನು ಹೊಂದಿದೆ. ಕಾಳಗಿಯಲ್ಲಿರುವ ಕಲ್ಲಿನ ಮೂರ್ತಿಗಳು, ರಾಷ್ಟ್ರಕೂಟರ ರಾಜಧಾನಿಯಾದ ಮಳಖೇಡದ ಕೋಟೆಗಳು, ಚಿಂಚೋಳಿ ವನ್ಯಧಾಮ, ಅಮರ್ಜಾ ಜಲಾಶಯದಂತಹ ಐತಿಹಾಸಿಕ ಸ್ಥಳಗಳ ಬೀಡು ಈ ಕಲಬುರಗಿ. ಜಿಲ್ಲಾ ಕೇಂದ್ರದಲ್ಲಿ ಶರಣಬಸವೇಶ್ವರರ ದೇವಸ್ಥಾನ, ಸರ್ವ-ಧರ್ಮಗಳ ಸಂಕೇತವಾದ ಖಾಜಾ ಬಂದಾ ನವಾಜ್ ದರ್ಗಾ, ಬುದ್ಧನ ಸಂದೇಶ ಹೇಳುವ ಬೌದ್ಧ ವಿಹಾರ ಎಲ್ಲವೂ ಕಲಬುರಗಿಗೆ ಮುಕುಟ ಮಣಿಯಂತೆ ಕಾಣುತ್ತವೆ.
ಕಲಬುರಗಿಗೆ ಹೋಗುವುದು ಹೇಗೆ?
ಕಲಬುರಗಿಗೆ ಬೆಂಗಳೂರಿನಿಂದ ಹೋಗಲು ಉತ್ತಮ ಸಾರಿಗೆ ಸೌಲಭ್ಯ ಇದೆ. ಬೆಂಗಳೂರಿನಿಂದ ಕಲಬುರಗಿಗೆ 570 ಕಿಲೋ ಮೀಟರ್ ದೂರ ಇದೆ. ಹೋಗಲು ಬಸ್, ರೈಲು ಹಾಗೂ ವಿಮಾನದ ಸೌಲಭ್ಯವಿದೆ. ಬೆಂಗಳೂರು ಹಾಗೂ ಹುಬ್ಬಳ್ಳಿಯಿಂದ ರೈಲು ಹಾಗೂ ಬಸ್ ಸೌಲಭ್ಯವಿದ್ದರೆ, ಬೆಂಗಳೂರಿನಿಂದ ಮಾತ್ರ ವಿಮಾನ ಸೌಲಭ್ಯವಿದೆ. ಹನ್ನೊಂದು ಗಂಟೆಯ ಪ್ರಯಾಣ ಬಸ್ಸು ರೈಲಿನದಾಗಿದೆ.