ಕೆಪಿಎಸ್ ಸಿ ಹಗರಣ: ಕಲಬುರಗಿ ಪ್ರಾಚಾರ್ಯರ ಮನೇಲಿ ಸಿಕ್ತು 45.70 ಲಕ್ಷ
ಕಲಬುರಗಿ, ಮಾರ್ಚ್ 27: ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್ ಸಿ) ಪರೀಕ್ಷೆ ಅಕ್ರಮಕ್ಕೆ ಸಂಬಂಧಿಸಿದಂತೆ ಇಲ್ಲಿನ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಸೋಮವಾರ ಬರೋಬ್ಬರಿ 45.70 ಲಕ್ಷ ರುಪಾಯಿ ನಗದನ್ನು ಜಪ್ತಿ ಮಾಡಿಕೊಂಡಿದ್ದಾರೆ.
ಕಲಬುರಗಿ ಎ ವಿಭಾಗದ ಎಎಸ್ ಪಿ ಲೋಕೇಶ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಕಲಬುರಗಿ ನಗರದ ನ್ಯಾಷನಲ್ ಬಿ ಇಡಿ ಕಾಲೇಜಿನ ಪ್ರಾಚಾರ್ಯರಾದ ರೆಹಾನಾ ಬೇಗಂ ಎಂಬುವವರು ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ ಹಣವನ್ನು ಜಪ್ತಿ ಮಾಡಿಕೊಂಡಿದ್ದಾರೆ.
12 ಲಕ್ಷಕ್ಕೆ ಸರಕಾರಿ ಕೆಲಸ ಕೊಡಿಸುತ್ತಿದ್ದ ಗ್ಯಾಂಗ್ ಖತರ್ನಾಕ್ ತಂತ್ರ
ಕೆಪಿಎಸ್ ಸಿ ಪರೀಕ್ಷೆಯಲ್ಲಿ ಪಾಸ್ ಮಾಡಲು ತಮ್ಜದ್ ಪಟೇಲ್ ಸೇರಿದಂತೆ ಅನೇಕರು ಅಭ್ಯರ್ಥಿಗಳಿಂದ ಸಂಗ್ರಹಿಸಿದ್ದ ಹಣದಲ್ಲಿ ಒಂದು ಪಾಲನ್ನು ರೆಹೆನಾ ಬೇಗಂಗೂ ನೀಡಿದ್ದರು. ತಮ್ಮ ಕಾಲೇಜಿನಲ್ಲಿ ಅಕ್ರಮ ನಡೆಸಲು ಅವಕಾಶ ಮಾಡಿಕೊಡುತ್ತಿದ್ದರು ರೆಹನಾ ಬೇಗಂ.
ಹಣ ಪಡೆದು ಕೆಪಿಎಸ್ ಸಿಯ ಪರೀಕ್ಷೆ ಪಾಸ್ ಮಾಡುತ್ತಿದ್ದ ತಂಡವನ್ನು ಕಲಬುರಗಿ ಪೊಲೀಸರು ಫೆಬ್ರವರಿಯಲ್ಲಿ ಪತ್ತೆ ಮಾಡಿದ್ದರು. ಬರೋಬ್ಬರಿ ಹದಿಮೂರು ಜನರನ್ನು ಬಂಧಿಸಿದ್ದರು. ಈ ತಂಡವು ಒಬ್ಬೊಬ್ಬರಿಂದ ಹತ್ತರಿಂದ ಹನ್ನರೆಡು ಲಕ್ಷ ರುಪಾಯಿ ಪಡೆದು ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆಯಲು ಅಕ್ರಮವಾಗಿ ಅನುಕೂಲ ಮಾಡಿಕೊಡುತ್ತಿತ್ತು.
ಈಗಾಗಲೇ ಈ ತಂಡ ನೂರಕ್ಕೂ ಹೆಚ್ಚು ಜನರಿಗೆ ಆ ರೀತಿ ಪರೀಕ್ಷಾ ಅಕ್ರಮದಲ್ಲಿ ನೆರವಾಗಿದೆ ಎಂಬುದು ತಿಳಿದುಬಂದಿದೆ.