ಸೊನ್ನ ಬ್ಯಾರೇಜ್ನಿಂದ 2 ಲಕ್ಷ ಕ್ಯುಸೆಕ್ ನೀರು ಹೊರಕ್ಕೆ
ಕಲಬುರಗಿ, ಅಕ್ಟೋಬರ್ 15 : ಕಲಬುರಗಿ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದೆ. ಪಕ್ಕದ ಮಹಾರಾಷ್ಟ್ರದಲ್ಲಿ ಸಹ ಮಳೆಯಾಗುತ್ತಿದ್ದು, ಭೀಮಾ ನದಿಗೆ ಹೆಚ್ಚಿನ ನೀರು ಹರಿದು ಬರುತ್ತಿದೆ. ಸೊನ್ನ ಬ್ಯಾರೇಜಿನಿಂದ ಭೀಮಾ ನದಿಗೆ 2,23,000 ಕ್ಯುಸೆಕ್ ನೀರು ಹರಿಬಿಡಲಾಗುತ್ತಿದೆ.
ಭೀಮಾ ಜಲಾನಯನ ಪ್ರದೇಶದಲ್ಲಿ ಹೆಚ್ಚು ಮಳೆಯಾಗುತ್ತಿದೆ. ಮಹಾರಾಷ್ಟ್ರದ ಉಜನಿ ಮತ್ತು ವೀರ್ ಜಲಾಶಯದಿಂದ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಭೀಮಾ ನದಿಗೆ ಬಿಟ್ಟಿರುವುದರಿಂದ ಸೊನ್ನ ಬ್ಯಾರೇಜಿಗೆ 1,98,000 ಕ್ಯುಸೆಕ್ ಒಳ ಹರಿವು ಬರುತ್ತಿದೆ.
ಕಲಬುರಗಿ; ಮಳೆ, ಪ್ರವಾಹ, ಸಹಾಯವಾಣಿ ಸಂಖ್ಯೆಗಳು
"ಗುರುವಾರ ಬೆಳಗ್ಗೆ 8 ಗಂಟೆಗೆ ಸೊನ್ನ ಬ್ಯಾರೇಜಿನಿಂದ ನದಿಗೆ 2,23,000 ಕ್ಯುಸೆಕ್ ನೀರು ಹರಿಬಿಡಲಾಗಿದೆ" ಎಂದು ಕರ್ನಾಟಕ ನೀರಾವರಿ ನಿಗಮ ನಿಯಮಿತ ಕಲಬುರಗಿ ವೃತ್ತದ ಅಧೀಕ್ಷಕ ಅಭಿಯಂತ ಜಗನ್ನಾಥ ಹಲಿಂಗೆ ತಿಳಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಮಳೆ; ಮುನ್ನೆಚ್ಚರಿಕಾ ಕ್ರಮಕ್ಕೆ ರಮೇಶ್ ಜಾರಕಿಹೊಳಿ ಸೂಚನೆ
ಹೀಗಾಗಿ ಬ್ಯಾರೇಜಿನ ಕೆಳ ಪಾತ್ರದಲ್ಲಿ ಬರುವ ಅಫಜಲಪೂರ, ಚಿತ್ತಾಪುರ, ಜೇವರ್ಗಿ ಹಾಗೂ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ನದಿ ಪಾತ್ರದ ಜನರು ನದಿ ದಂಡೆಗೆ ಹೋಗಬಾರದು ಮತ್ತು ತಮ್ಮ ಜಾನುವಾರಗಳೊಂದಿಗೆ ಸುರಕ್ಷತಾ ಕ್ರಮದೊಂದಿಗೆ ಎಚ್ಚರಿಕೆಯಿಂದಿರುವಂತೆ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಕಲಬುರಗಿ; 4819 ಮನೆಗೆ ಹಾನಿ, 48 ಕಾಳಜಿ ಕೇಂದ್ರ ಆರಂಭ
ಕಲಬುರಗಿ ಜಿಲ್ಲೆಯಲ್ಲಿ ಅಕ್ಟೋಬರ್ 13ರಿಂದ 16ರ ತನಕ ಧಾರಕಾರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಣೆ ಮಾಡಿದೆ. ಜಿಲ್ಲೆಯ ನದಿ ದಂಡೆಯಲ್ಲಿರುವ ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಡಳಿತ ಮನವಿ ಮಾಡಿದೆ.
ಮಹಾರಾಷ್ಟ್ರದಲ್ಲಿ ಕೂಡಾ ಹೆಚ್ಚಿನ ಮಳೆ ಆಗುವ ಸಂಭವವಿದೆ. ಭೀಮಾ ನದಿಯಲ್ಲಿಯೂ ಪ್ರವಾಹ ಉಂಟಾಗುವ ಸಾಧ್ಯತೆ ಇದೆ. ಜಿಲ್ಲೆಯ ಜಲಾಶಯಗಳಿಗೆ ಒಳ ನೀರಿನ ಹರಿವು ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ.
ಜಲಾಶಯ ಮತ್ತು ಜಲಾಶಯದ ಕಾಲುವೆಗಳ ದಂಡೆಯಲ್ಲಿ ಬರುವ ಗ್ರಾಮಗಳ ಗ್ರಾಮಸ್ಥರು ನದಿಯ ದಂಡೆಗೆ ಹೋಗದಂತೆ ಹಾಗೂ ನದಿ ದಂಡೆಯಲ್ಲಿ ಬಟ್ಟೆ ಒಗೆಯುವುದಾಗಲಿ, ವಾಹನ ತೊಳೆಯುವುದಾಗಲಿ ಮಾಡಬಾರದು ಎಂದು ಜಿಲ್ಲಾಡಳಿತ ಹೇಳಿದೆ.