'ಜೆಡಿಎಸ್ ಗೆ ದ್ರೋಹ ಬಗೆದರೆ ತಾಯಿಗೆ ದ್ರೋಹ ಬಗೆದಂತೆ'
ಕನಕಪುರ (ರಾಮನಗರ ಜಿಲ್ಲೆ), ಏಪ್ರಿಲ್ 26: ಜೆಡಿಎಸ್ ಪಕ್ಷ ನನ್ನ ಹೆತ್ತ ತಾಯಿ ಇದ್ದ ಹಾಗೆ. ಪಕ್ಷಕ್ಕೆ ದ್ರೋಹ ಬಗೆದರೆ ಹೆತ್ತ ತಾಯಿಗೆ ದ್ರೋಹ ಬಗೆದ ಹಾಗೆ. ನಾನು ಜೆಡಿಎಸ್ ಬಿಟ್ಟು ಯಾವುದೇ ಪಕ್ಷಕ್ಕೂ ಹೋಗುವುದಿಲ್ಲ ಎಂದು ಕನಕಪುರ ಜೆಡಿಎಸ್ ಮುಖಂಡ ಡಿ.ಎಂ.ವಿಶ್ವನಾಥ್ ತಿಳಿಸಿದ್ದಾರೆ.
ಕನಕಪುರದ ಜೆಡಿಎಸ್ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕನಕಪುರ ಕ್ಷೇತ್ರದಿಂದ ನಾರಾಯಣಗೌಡರನ್ನು ಪಕ್ಷದ ವರಿಷ್ಠರು ಕಣಕ್ಕಿಳಿಸಿದ ನಂತರ ನಾನು ಪಕ್ಷ ತೊರೆಯುತ್ತೆನೆ. ಬೇರೆ ಪಕ್ಷದಿಂದ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧೆ ಮಾಡುತ್ತೇನೆ ಎಂದು ಹರಡಿದ್ದ ಊಹಾಪೋಹಗಳನ್ನು ಅಲ್ಲಗಳೆದರು.
ಸಾವಿರ ಕೋಟಿ ಒಡೆಯ ಡಿಕೆಶಿ ಎದುರು 2 ಕೋಟಿ ಸಾಲಗಾರ ಸ್ಪರ್ಧೆ
ಬಿಜೆಪಿಯಿಂದ ಕನಕಪುರ ಕ್ಷೇತ್ರಕ್ಕೆ ನಿಲ್ಲುವಂತೆ ಆಹ್ವಾನ ನೀಡಿದ್ದು ನಿಜ. ಬಿಜೆಪಿಯಿಂದ ಕನಕಪುರದಲ್ಲಿ ನಿಂತರೆ ಆರ್ಥಿಕ ಸಹಾಯ ಜೊತೆಗೆ ಅಧಿಕಾರದ ಆಸೆ ತೋರಿದರು. ಆದರೆ ನಾನು ಜೆಡಿಎಸ್ ಬಿಟ್ಟು ಬರುವುದಿಲ್ಲ ಎಂಬ ಅವರಿಗೆ ಹೇಳಿದ್ದೇನೆ ಎಂದರು.
ಆರ್ಥಿಕ ಸಮಸ್ಯೆಯಿಂದಾಗಿ ಈ ಬಾರಿ ಕನಕಪುರ ಕ್ಷೇತ್ರ ಅಭ್ಯರ್ಥಿಯಾಗಲಿಲ್ಲ ಅಷ್ಟೆ. ನಾನು ಜೆಡಿಎಸ್ ಬಿಟ್ಟು ಎಲ್ಲೂ ಹೋಗುವುದಿಲ್ಲ. ಈ ಚುನಾವಣೆಯಲ್ಲಿ ಡಿ.ಕೆ.ಶಿವಕುಮಾರ್ ಸೋಲಿಸುವುದೇ ನನ್ನ ಗುರಿ. ಜೆಡಿಎಸ್ ಪಕ್ಷದೊಳಗಿನ ಕೆಲ ಮುಖಂಡರು ನನ್ನ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡುತ್ತಾರೆ ಎಂದರು.
ಎಲ್ಲ ಆರೋಪಗಳಿಗೂ ಮುಂದಿನ ದಿನಗಳಲ್ಲಿ ಉತ್ತರ ನೀಡುತ್ತೇನೆ. ಈ ಬಾರಿ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ನಾರಾಯಣ ಗೌಡರನ್ನು ಬೆಂಬಲಿಸುವಂತೆ ಮನವಿ ಮಾಡಿದರು.
ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ಕನಕಪುರ ಕ್ಷೇತ್ರ ಸೇರಿದಂತೆ ಮರಳವಾಡಿ, ಆರೋಹಳ್ಳಿ ಮತ್ತು ಚನ್ನಪಟ್ಟಣ ಕ್ಷೇತ್ರದ ವಿರೂಪಾಕ್ಷಿಪುರ ಹೋಬಳಿಗಳಲ್ಲಿ ಸಂಘಟನೆ ಮಾಡುವಂತೆ ನಿರ್ದೇಶನ ನೀಡಿದ್ದಾರೆ. ಅದರಂತೆ ಕೆಲಸ ಮಾಡಿ ಜೆಡಿಎಸ್ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುತ್ತೇನೆ ಎಂದು ತಿಳಿಸಿದರು.