ರಾಜಸ್ಥಾನ: ವಸುಂಧರಾ ರಾಜೇ ಮುಂದೆ ಮಂಡಿಯೂರಿದ ಬಿಜೆಪಿ ಹೈಕಮಾಂಡ್
ಜೈಪುರ, ಆ 11: ಬಂಡಾಯ ನಾಯಕನಾಗಿದ್ದ ಸಚಿನ್ ಪೈಲಟ್ ಮತ್ತು ಅವರ ಬೆಂಬಲಿಗರ ಬಲ ಬಿಜೆಪಿಗೆ ಸಿಕ್ಕಿದ್ದರೂ, ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ ಅವರ ಸಪೋರ್ಟ್, ಬಿಜೆಪಿಗೆ ಸಿಗದಿದ್ದರೆ, ಅಲ್ಲಿ, ಸರಕಾರ ರಚಿಸುವ ಕನಸು, ನನಸಾಗುವುದಿಲ್ಲ ಎನ್ನುವ ಮಾತು ಬಿಜೆಪಿ ವಲಯದಲ್ಲೇ ಕೇಳಿಬರುತ್ತಿತ್ತು.
ರಾಜಸ್ಥಾನದಲ್ಲಿ ನಡೆಯುತ್ತಿದ್ದ ಎಲ್ಲಾ ಬೆಳವಣಿಗೆಗಳ ಬಗ್ಗೆ ದಿವ್ಯಮೌನಕ್ಕೆ ಶರಣಾಗಿದ್ದ ವಸುಂಧರಾ, ಎರಡು ದಿನಗಳ ಹಿಂದೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿಯಾಗಿದ್ದರು. ಇದರ ಜೊತೆಗೆ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರನ್ನೂ ಭೇಟಿಯಾಗಿದ್ದರು.
ರಾಜಸ್ಥಾನ: ವಿಶ್ವಾಸಮತಕ್ಕೆ ಮುನ್ನ ತಣ್ಣಗಾದ ಸಿಎಂ ಗೆಹ್ಲೋಟ್
ಬಂಡಾಯ ಎದ್ದಾಗಿನಿಂದ ತಮ್ಮ ಪಕ್ಷದ ಹೈಕಮಾಂಡ್ ನಿಂದ ಬುಲಾವ್ ಬಂದಿದ್ದರೂ, ತಲೆಕೆಡಿಸಿಕೊಳ್ಳದಿದ್ದ ಸಚಿನ್ ಪೈಲಟ್, ಸೋಮವಾರ (ಆ 10) ರಾಹುಲ್ ಮತ್ತು ಪ್ರಿಯಾಂಕ ಗಾಂಧಿಯವರನ್ನು ಭೇಟಿಯಾಗಿದ್ದಾರೆ.
ರಾಜಸ್ಥಾನದಲ್ಲಿ ಗೆಹ್ಲೋಟ್ ಬೆನ್ನಿಗೆ ನಿಂತ ವಸುಂಧರಾ ರಾಜೇ: ಬಿಜೆಪಿ ಸರಕಾರ ರಚನೆಯ ಮಹತ್ವಾಕಾಂಕ್ಷೆಗೆ ತಣ್ಣೀರು?
ಸದ್ಯದ ಮಟ್ಟಿಗೆ ಪೈಲಟ್ ಅವರ ಕೋಪ ಶಮನವಾದಂತೆ ಕಾಣುತ್ತಿದ್ದರೂ, ವಸುಂಧರಾ ಅವರ ಕಠಿಣ ನಿಲುವಿನಿಂದಾಗಿ, ಬಿಜೆಪಿ, ತಮ್ಮ ಸರಕಾರ ರಚಿಸುವ ಪ್ರಯತ್ನಕ್ಕೆ ಸದ್ಯಕ್ಕೆ ಬ್ರೇಕ್ ಹಾಕಿದ್ದೇ ಕಾರಣ ಎಂದು ವ್ಯಾಖ್ಯಾನಿಸಲಾಗುತ್ತಿದೆ.
ವಸುಂಧರಾ ದೆಹಲಿ ಭೇಟಿ
ಬಿಜೆಪಿಯ ಪ್ರಮುಖರ ಜೊತೆ ಸತತ ಸಂಪರ್ಕದಲ್ಲಿದ್ದ ಸಚಿನ್ ಪೈಲಟ್ ಅವರಿಗೆ ಮುಖ್ಯಮಂತ್ರಿ ಹುದ್ದೆ ಸಿಗುವ ಬಗ್ಗೆ ಯಾವುದೇ ಖಚಿತ ಭರವಸೆ ಸಿಕ್ಕಿರಲಿಲ್ಲ ಎನ್ನುವ ಮಾತು ಕೇಳಿಬರುತ್ತಿದೆ. ಯಾಕೆಂದರೆ, ವಸುಂಧರಾ ರಾಜೇ, ಬಂಡಾಯ ಏಳುವ ಭಯ, ಬಿಜೆಪಿ ಹೈಕಮಾಂಡ್ ಗೆ ಕಾಡುತ್ತಿತ್ತು. ತಮ್ಮ ದೆಹಲಿ ಭೇಟಿಯ ವೇಳೆ, ವಸುಂಧರಾ, ಈ ವಿಚಾರದ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದ್ದರು ಎಂದು ಹೇಳಲಾಗುತ್ತಿದೆ.
ಬಿಜೆಪಿ ಸೇರುವುದಿಲ್ಲಎನ್ನುವ ಹೇಳಿಕೆ - ಸಚಿನ್ ಪೈಲಟ್
ಬಿಜೆಪಿಯಿಂದ ಸಿಎಂ ಹುದ್ದೆಯ ಭರವಸೆ ಸಿಗದ ನಂತರವಷ್ಟೇ, 'ಬಿಜೆಪಿ ಸೇರುವುದಿಲ್ಲ'ಎನ್ನುವ ಹೇಳಿಕೆ ಸಚಿನ್ ಪೈಲಟ್ ಕಡೆಯಿಂದ ಬಂತು ಎಂದು ವ್ಯಾಖ್ಯಾನಿಸಲಾಗುತ್ತಿದೆ. "ಸಚಿನ್ ಪೈಲಟ್ ನೇತೃತ್ವದಲ್ಲಿ ಹೊಸ ಪ್ರಾದೇಶಿಕ ಪಕ್ಷ ಸ್ಥಾಪಿಸಲಾಗುವುದು" ಎನ್ನುವ ಹೇಳಿಕೆ ಸಚಿನ್ ಪೈಲಟ್ ಬೆಂಬಲಿಗರಿಂದ ಬಂದಿತ್ತು.
ಗೆಹ್ಲೋಟ್ ಜೊತೆಗೆ, ವಸುಂಧರಾ ರಾಜೇ ಮೃದು ಧೋರಣೆ
ರಾಜಸ್ಥಾನದ ಸಿಎಂ ಅಶೋಕ್ ಗೆಹ್ಲೋಟ್ ಜೊತೆಗೆ, ವಸುಂಧರಾ ರಾಜೇ ಮೃದು ಧೋರಣೆ ತಾಳಿರುವ ವಿಚಾರದ ಬಗ್ಗೆ ಹಿಂದೆಯೂ ಸುದ್ದಿ ಹರಿದಾಡುತ್ತಿತ್ತು. ಇದರ ಜೊತೆಗೆ, ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷ ಸತೀಶ್ ಪೂನಿಯಾ ಜೊತೆಗೂ, ವಸುಂಧರಾ ಭಿನ್ನಾಭಿಪ್ರಾಯವನ್ನು ಹೊಂದಿದ್ದರು. ಅಲ್ಲದೇ, ಗೆಹ್ಲೋಟ್ ಸರಕಾರ ಉರುಳಿಸುವ ಕೆಲಸಕ್ಕೆ ನನ್ನ ಬೆಂಬಲವಿಲ್ಲ ಎನ್ನುವ ಸ್ಪಷ್ಟ ಸಂದೇಶವನ್ನು ವಸುಂಧರಾ, ಬಿಜೆಪಿ ಹೈಕಮಾಂಡ್ ಗೆ ಸ್ಪಷ್ಟ ಪಡಿಸಿದ್ದರು.
ಲೋಕತಾಂತ್ರಿಕ ಪಕ್ಷದ ಸಂಸದ ಹನುಮಾನ್ ಬೇನಿವಾಲ್
ಸಚಿನ್ ಪೈಲಟ್, ಪಕ್ಷದಲ್ಲಿ ತಮಗೆ ಪ್ರಬಲ ಪ್ರತಿಸ್ಪರ್ಧಿಯಾಗಬಲ್ಲ ಎನ್ನುವ ಮುಂದಾಲೋಚನೆಯಿಂದ, ವಸುಂಧರಾ, ಬಿಜೆಪಿಯ ಸರಕಾರ ರಚಿಸುವ ಪ್ರಯತ್ನಕ್ಕೆ ಬೆಂಬಲ ನೀಡುತ್ತಿಲ್ಲ ಎಂದು ಹೇಳಲಾಗುತ್ತಿದೆ. ಬಿಜೆಪಿಯ ಮಿತ್ರಪಕ್ಷ ಲೋಕತಾಂತ್ರಿಕ ಪಕ್ಷದ ಸಂಸದ ಹನುಮಾನ್ ಬೇನಿವಾಲ್, "ರಾಜಸ್ಥಾನದ ಕಾಂಗ್ರೆಸ್ಸಿನ ಜಾಟ್ ಸಮದಾಯದ ಪ್ರತೀ ಶಾಸಕರ ಬಳಿ ಮಾತನಾಡಿ, ಗೆಹ್ಲೋಟ್ ಅವರನ್ನು ಬೆಂಬಲಿಸುವಂತೆ ವಸುಂಧರಾ ರಾಜೇ ಮನವಿ ಮಾಡಿದ್ದಾರೆ". ಎಂದು ಟ್ವೀಟ್ ಮಾಡಿದ್ದಾರು.
ಕಾಂಗ್ರೆಸ್ಸಿನ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವುದಿಲ್ಲ
ಕಾಂಗ್ರೆಸ್ಸಿನ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವುದಿಲ್ಲ ಎಂದು ಬಿಜೆಪಿ ಹೇಳುತ್ತಿದ್ದರೂ, ಮಾಜಿ ಸಿಎಂ ವಸುಂಧರಾ ರಾಜೇ ಅವರ ಅಸಹಕಾರದಿಂದ, ಬಿಜೆಪಿ, ಸರಕಾರ ರಚಿಸುವ ಪ್ರಯತ್ನದಿಂದ ಹಿಂದಕ್ಕೆ ಸರಿದಿದೆ ಎಂದು ಹೇಳಲಾಗುತ್ತಿದೆ. ಸದ್ಯದ ಮಟ್ಟಿಗೆ, ವಸುಂಧರಾ ಕಠಿಣ ನಿಲುವಿನ ಮುಂದೆ, ಬಿಜೆಪಿ ಹೈಕಮಾಂಡ್ ತಣ್ಣಗಾಗಿದೆ.