ಮಧ್ಯ ಪ್ರದೇಶದ ನಂತರ ರಾಜಸ್ಥಾನ, ಛತ್ತೀಸ್ ಗಢದತ್ತ ರಾಹುಲ್ ಚಿತ್ತ
ಜೈಪುರ, ಡಿಸೆಂಬರ್ 13 : ಗುರುವಾರ ಇಡೀದಿನ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಗಳೊಂದಿಗೆ ಮಾತುಕತೆ ನಡೆಸಿದ ನಂತರ ಮಧ್ಯ ಪ್ರದೇಶದ ಮುಖ್ಯಮಂತ್ರಿಗೆ ಇಂಥವರು ಸೂಕ್ತವೆಂದು ನಿರ್ಣಯಿಸಲು ರಾಹುಲ್ ಗಾಂಧಿ ಅವರಿಗೆ ಸಾಕುಬೇಕಾಯಿತು.
ಮುಖ್ಯಮಂತ್ರಿ ಪದವಿಗೆ ಪಟ್ಟು ಹಿಡಿದಿದ್ದ 47 ವರ್ಷದ ಜ್ಯೋತಿರಾಧಿತ್ಯ ಸಿಂಧಿಯಾ ಅವರ ಮನವೊಲಿಸಿ 72 ವರ್ಷದ ಹಿರಿಯ ನಾಯಕ, ಮಾಜಿ ಸಂಸದ ಕಮಲ್ ನಾಥ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಘೋಷಣೆ ಮಾಡಲಾಯಿತು. ಗುರುವಾರ ಮಧ್ಯರಾತ್ರಿಯವರೆಗೆ ಈ ಪ್ರಕ್ರಿಯೆ ನಡೆದೇ ಇತ್ತು.
ಶುಕ್ರವಾರ ರಾಹುಲ್ ಗಾಂಧಿ ಅವರು ರಾಜಸ್ಥಾನ ಮತ್ತು ಛತ್ತೀಸ್ ಗಢದ ಮುಖ್ಯಮಂತ್ರಿ ಪದವಿಗೆ ಯಾರನ್ನು ಆರಿಸಬೇಕೆಂಬ ಬಗ್ಗೆ ಗಮನ ಹರಿಸಲಿದ್ದಾರೆ. ಇಲ್ಲಿ ಮಧ್ಯ ಪ್ರದೇಶಕ್ಕಿಂತ ಮುಖ್ಯಮಂತ್ರಿ ಆಯ್ಕೆ ಕ್ಲಿಷ್ಟಕರವಾಗಿದೆ. ಏಕೆಂದರೆ, ಜ್ಯೋತಿರಾಧಿತ್ಯರಿಗಿಂತಲೂ 41 ವರ್ಷದ ಸಚಿನ್ ಪೈಲಟ್ ಮುಖ್ಯಮಂತ್ರಿ ಆಗಬೇಕೆಂದು ಪಟ್ಟುಹಿಡಿದು ಕುಳಿತಿದ್ದಾರೆ.
ಕಗ್ಗಂಟಾದ ಸಿಎಂ ಆಯ್ಕೆ : ಸೋನಿಯಾ, ಪ್ರಿಯಾಂಕಾ ಜೊತೆ ರಾಹುಲ್ ಚರ್ಚೆ
ಪಕ್ಷದ ಬಹುತೇಕ ನಾಯಕರು 67 ವರ್ಷದ ಹಿರಿಯ ರಾಜಕಾರಣಿ, 2 ಬಾರಿ ಮುಖ್ಯಮಂತ್ರಿ ಆಗಿರುವ ಅಶೋಕ್ ಗೆಹ್ಲೋಟ್ ಅವರು ಮುಖ್ಯಮಂತ್ರಿ ಆಗಬೇಕೆಂಬ ಒಲವು ಹೊಂದಿದ್ದಾರೆ. ಆದರೆ, ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿರುವ ಸಚಿನ್ ಪೈಲಟ್ ಅವರು ಯಾವುದೇ ಕಾರಣಕ್ಕೂ ಬಗ್ಗುತ್ತಿಲ್ಲ. ಇದು ರಾಹುಲ್ ಅವರಿಗೆ ಭಾರೀ ತಲೆನೋವು ತಂದಿದೆ.
ಮಧ್ಯರಾತ್ರಿ ಸಚಿನ್, ಗೆಹ್ಲೋಟ್ ಜೊತೆ ಚರ್ಚೆ
ಗುರುವಾರವೇ ಇಬ್ಬರೂ ನಾಯಕರು ಪ್ರತ್ಯೇಕವಾಗಿ ರಾಹುಲ್ ಗಾಂಧಿ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಮಧ್ಯ ಪ್ರದೇಶದ ನಿರ್ಧಾರಕ್ಕೆ ಬಂದ ನಂತರ ಮತ್ತೊಂದು ಸುತ್ತು ಸಚಿನ್ ಪೈಲಟ್ ಮತ್ತು ಅಶೋಕ್ ಗೆಹ್ಲೋಟ್ ಜೊತೆ ರಾಹುಲ್ ಗಾಂಧಿ ಅವರು ಮಧ್ಯರಾತ್ರಿ ಸಮಯದಲ್ಲಿ ಚರ್ಚೆ ನಡೆಸಿದರು. ನಂತರ ಸೋನಿಯಾ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವದ್ರಾ ಅವರು ಕೂಡ ರಾಹುಲ್ ಗಾಂಧಿ ಅವರೊಂದಿಗೆ ಅವರ ನಿವಾಸದಲ್ಲಿ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ಆದರೆ, ರಾಹುಲ್ ಅವರಿಗೆ ಯಾವುದೇ ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲ.
ರಾಜಸ್ಥಾನ ಸಿಎಂ ಗೆಹ್ಲೋಟ್: ಅಧಿಕೃತ ಘೋಷಣೆಯೊಂದೇ ಬಾಕಿ?
ರಾಜಸ್ಥಾನದ ಉಸ್ತುವಾರಿ ಕೆಸಿ ವೇಣುಗೋಪಾಲ್
ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ಮತ್ತೊಂದು ಸಭೆ ನಡೆಯಲಿದ್ದು, ಆಗ ರಾಜಸ್ಥಾನದ ಮುಖ್ಯಮಂತ್ರಿ ಯಾರಾಗಬೇಕು ಎಂದು ನಿರ್ಧರಿಸಲಾಗುವುದು. ಮುಖ್ಯಮಂತ್ರಿ ಆಯ್ಕೆಯ ನಿರ್ಧಾರಕ್ಕೆ ಬರುವುದು ಅಷ್ಟು ಸುಲಭವಲ್ಲ ಎಂದು ರಾಜಸ್ಥಾನದ ಉಸ್ತುವಾರಿ ವಹಿಸಿಕೊಂಡಿರುವ ಕೆಸಿ ವೇಣುಗೋಪಾಲ್ ಅವರು ಹೇಳಿದ್ದಾರೆ. ಅನುಭವದ ಆಧಾರದ ಮೇಲೆ ಈ ಪದವಿಯನ್ನು ನೀಡಬೇಕೋ ಅಥವಾ ಜನಪ್ರಿಯತೆಯ ಆಧಾರದ ಮೇಲೆ ಯುವ ನಾಯಕನಿಗೆ ಜವಾಬ್ದಾರಿ ಹೊರಿಸಬೇಕೋ ಎಂಬುದು ಇಲ್ಲಿ ಚರ್ಚೆಯ ಸಂಗತಿಯಾಗಿದೆ.
ಮುಖ್ಯಮಂತ್ರಿ ಹುದ್ದೆ ಆಕಾಂಕ್ಷಿಗಳೊಂದಿಗೆ ರಾಹುಲ್ ಮಹತ್ವದ ಸಭೆ
ಬಿದ್ದ ಪಕ್ಷವನ್ನು ಮತ್ತೆ ಕಟ್ಟಿದ್ದು ನಾನು : ಪೈಲಟ್
ಮಧ್ಯರಾತ್ರಿಯ ಸುಮಾರಿಗೆ ಸಚಿನ್ ಪೈಲಟ್ ಅವರೊಂದಿಗೆ ಎರಡನೇ ಸುತ್ತಿನ ಮಾತುಕತೆ ನಡೆಸಿದ ನಂತರ, ಜೈಪುರಕ್ಕೆ ತೆರಳುತ್ತಿದ್ದ ಅಶೋಕ್ ಗೆಹ್ಲೋಟ್ ಅವರನ್ನು ದೆಹಲಿ ವಿಮಾನ ನಿಲ್ದಾಣದಿಂದಲೇ ಮೂರು ಬಾರಿ ವಾಪಸ್ ಕರೆಯಿಸಿಕೊಂಡು ಸಂಕ್ಷಿಪ್ತವಾಗಿ ಚರ್ಚೆ ನಡೆಸಿದರು ರಾಹುಲ್ ಗಾಂಧಿ. 2013ರಲ್ಲಿ ಕಾಂಗ್ರೆಸ್ ಭಾರೀ ಸೋಲು ಕಂಡ ನಂತರ, ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷನಾಗಿ ನಾನು ಸಾಕಷ್ಟು ಕೆಲಸ ಮಾಡಿದ್ದೇನೆ, ಪಕ್ಷವನ್ನು ಮತ್ತೆ ಕಟ್ಟಲು ಸಾಕಷ್ಟು ಬೆವರು ಸುರಿಸಿದ್ದೇನೆ. ಈ ಕಾರಣಕ್ಕಾಗಿ ತಮಗೇ ರಾಜ್ಯ ಸರಕಾರ ಚಲಾಯಿಸುವ ಜವಾಬ್ದಾರಿ ಸಿಗಬೇಕು ಎಂಬುದು ಸಚಿನ್ ಪೈಲಟ್ ಅವರ ಗಟ್ಟಿ ವಾದ. ಆದರೆ, ಪಕ್ಷದ ಇತರ ನಾಯಕರು ಅನುಭವಿ ರಾಜಕಾರಣಿ ಅಶೋಕ್ ಗೆಹ್ಲೋಟ್ ಪರವಾಗಿರುವುದು ಸಮಸ್ಯೆಯನ್ನು ಮತ್ತಷ್ಟು ಕಗ್ಗಂಟಾಗಿಸಿದೆ.
ಮಧ್ಯಪ್ರದೇಶದಲ್ಲಿ ಹಿರಿಯ, ರಾಜಸ್ಥಾನದಲ್ಲಿ?
ಇದು ಕಾಂಗ್ರೆಸ್ ಹೈಕಮಾಂಡಿಗೆ ತಿಳಿಯದ ಸಂಗತಿಯೇನಲ್ಲ. ಇದೀಗ ಮಧ್ಯ ಪ್ರದೇಶದಲ್ಲಿ ಹಿರಿಯ ನಾಯಕರಿಗೆ ಚುಕ್ಕಾಣಿ ನೀಡಿದ ಮೇಲೆ ರಾಜಸ್ಥಾನದಲ್ಲಿ ತದ್ವಿರುದ್ಧವಾಗಿ ಕಿರಿಯ ಮತ್ತು ಕಡಿಮೆ ಅನುಭವವಿರುವ ಸಚಿನ್ ಪೈಲಟ್ ಗೆ ರಾಜಸ್ಥಾನದ ಜವಾಬ್ದಾರಿ ನೀಡಿದರೆ ಕಾಂಗ್ರೆಸ್ ಹೈಕಮಾಂಡ್ ಗೇಲಿಗೀಡಾಗುವ ಸಾಧ್ಯತೆಯೂ ಇದೆ. ಈ ನಡುವೆ, ಸಚಿನ್ ಪೈಲಟ್ ಅಭಿಮಾನಿಗಳು ರಾಜ್ಯ ಹೆದ್ದಾರಿ ಬಂದ್ ಮಾಡಿ, ತಮ್ಮ ನಾಯಕನಿಗೇ ಮುಖ್ಯಮಂತ್ರಿ ಪದವಿ ನೀಡಬೇಕೆಂದು ಹಠ ಹಿಡಿದು ಕುಳಿತಿದ್ದಾರೆ. ನಂತರ, ಟ್ವಿಟ್ಟರ್ ಮೂಲಕ, ಯಾವುದೇ ಆವೇಶಕ್ಕೆ ಅಭಿಮಾನಿಗಳ ಒಳಗಾಗಬಾರದು, ಸಂಯಮದಿಂದ ವರ್ತಿಸಬೇಕು. ಕಾಂಗ್ರೆಸ್ ಹೈಕಮಾಂಡ್ ಯಾವುದೇ ನಿರ್ಧಾರ ತೆಗೆದುಕೊಂಡರೂ ನಾವು ಗೌರವಿಸಬೇಕು ಎಂದು ಸಚಿನ್ ಪೈಲಟ್ ಮನವಿ ಮಾಡಿದ್ದರು.
ಸಿಂಗ್ ದೇವ್ Vs ಭುಪೇಶ್ ಬಘೇಲ್
ಛತ್ತೀಸ್ ಗಢದಲ್ಲಿ ಟಿಎಸ್ ಸಿಂಗ್ ದೇವ್ ಮತ್ತು ವಿವಾದಿತ ರಾಜಕಾರಣಿ ಭೂಪೇಶ್ ಬಘೇಲ್ ಅವರನ್ನು ರಾಯ್ ಪುರದಿಂದ ದೆಹಲಿಗೆ ಕರೆಯಿಸಿಕೊಂಡು ಪಕ್ಷದ ಇತರ ನಾಯಕರು ಮಾತುಕತೆ ನಡೆಸುತ್ತಿದ್ದಾರೆ. ಬಲ್ಲ ಮೂಲಗಳ ಪ್ರಕಾರ ಭೂಪೇಶ್ ಬಘೇಲ್ ಅವರಿಗೆ ರಾಜ್ಯ ಸರಕಾರ ನಡೆಸುವ ಜವಾಬ್ದಾರಿ ಸಿಗುವ ಸಾಧ್ಯತೆ ದಟ್ಟವಾಗಿದೆ, ಜೊತೆಗೆ ಸಿಂಗ್ ಅವರಿಗೂ ಸಾಕಷ್ಟು ಬೆಂಬಲ ವ್ಯಕ್ತವಾಗಿದೆ. ಇಲ್ಲಿ ಮಧ್ಯ ಪ್ರದೇಶ ಮತ್ತು ರಾಜಸ್ಥಾನದಷ್ಟು ಪರಿಸ್ಥಿತಿ ಕಗ್ಗಂಟಾಗಿಲ್ಲದಿದ್ದರೂ ಭೂಪೇಶ್ ಅವರ ಅನುಯಾಯಿಗಳು ಪಕ್ಷದ ಕಚೇರಿಯ ಮುಂದೆ ಕೆಲಸ ಸಮಯ ಗಲಾಟೆ ಮಾಡಿದ್ದಾರೆ.