ಅಧಿವೇಶನ ನಡೆಸಿ; ರಾಜ್ಯಪಾಲರಿಗೆ ಅಶೋಕ್ ಗೆಹ್ಲೋಟ್ ಮನವಿ!
ಜೈಪುರ, ಜುಲೈ 24 : ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ತಮ್ಮ ಬೆಂಬಲಿತ ಶಾಸಕರೊಂದಿಗೆ ರಾಜ್ಯಪಾಲರನ್ನು ಭೇಟಿ ಮಾಡಿದರು. ಸೋಮವಾರ ವಿಧಾನಸಭೆ ವಿಶೇಷ ಅಧಿವೇಶನ ಕರೆಯುವಂತೆ ಅವರು ಮನವಿ ಮಾಡಿದರು.
ಶುಕ್ರವಾರ ಅಶೋಕ್ ಗೆಹ್ಲೋಟ್ ರಾಜ್ಯಪಾಲ ಕಲ್ರಾಜ್ ಮಿಶ್ರಾರನ್ನು ಭೇಟಿಯಾದರು. ಅಶೋಕ್ ಗೆಹ್ಲೋಟ್ ಇದಕ್ಕೂ ಮೊದಲು ತಮ್ಮ ಬೆಂಬಲಿಗ ಶಾಸಕರ ಜೊತೆ ಹೋಟೆಲ್ನಲ್ಲಿ ಒಂದು ಸುತ್ತಿನ ಸಭೆ ನಡೆಸಿದರು. ಬಳಿಕ ಶಾಸಕರ ಜೊತೆಯೇ ರಾಜಭವನಕ್ಕೆ ಬಂದರು.
ಸಚಿನ್ ಪೈಲೆಟ್ ಅನರ್ಹತೆ ಪ್ರಕರಣ; ಹೈಕೋರ್ಟ್ ತೀರ್ಪು ಪ್ರಕಟ
ರಾಜ್ಯಪಾಲರ ಭೇಟಿ ಬಳಿಕ ಮಾತನಾಡಿದ ಅಶೋಕ್ ಗೆಹ್ಲೋಟ್. "ರಾಜ್ಯದ ರಾಜಕೀಯ ಪರಿಸ್ಥಿತಿ, ಕೊರೊನಾ ವಿಚಾರಗಳ ಕುರಿತು ಚರ್ಚಿಸಲು ವಿಧಾನಸಭೆ ಅಧಿವೇಶನ ಕರೆಯುವಂತೆ ಮನವಿ ಮಾಡಲಾಗಿದೆ" ಎಂದು ಮುಖ್ಯಮಂತ್ರಿಗಳು ಹೇಳಿದರು.
ಸಚಿನ್ ಪೈಲೆಟ್ ಅನರ್ಹತೆ; ಸೋಮವಾರ ಸುಪ್ರೀಂ ಕೋರ್ಟ್ ತೀರ್ಪು
"ರಾಜ್ಯಪಾಲರು ಕೆಲವು ವಿಚಾರದಲ್ಲಿ ಒತ್ತಡದಲ್ಲಿದ್ದಾರೆ. ಆದ್ದರಿಂದ, ವಿಧಾನಸಭೆ ಅಧಿವೇಶವನ್ನು ಕರೆಯುತ್ತಿಲ್ಲ. ಸೋಮವಾರವೇ ಅಧಿವೇಶನ ಕರೆಯುವಂತೆ ನಾವು ಮನವಿ ಮಾಡಿದ್ದೇವೆ. ಈ ಕುರಿತು ಅವರು ಶೀಘ್ರದಲ್ಲಿಯೇ ತೀರ್ಮಾನ ಕೈಗೊಳ್ಳುವ ನಿರೀಕ್ಷೆ ಇದೆ" ಎಂದು ಅಶೋಕ್ ಗೆಹ್ಲೋಟ್ ತಿಳಿಸಿದರು.
ಗೆಹ್ಲೋಟ್ ಜೇಬಲ್ಲಿ ಮ್ಯಾಜಿಕ್ ನಂಬರ್; ಕಾಂಗ್ರೆಸ್ ಸರ್ಕಾರ ಸುಭದ್ರ!
ರಾಜ್ಯಪಾಲರ ಭೇಟಿ
ರಾಜಸ್ಥಾನ ಕಾಂಗ್ರೆಸ್ ಬಂಡಾಯ ನಾಯಕ ಸಚಿನ್ ಪೈಲೆಟ್ ಸೇರಿದಂತೆ 19 ಕಾಂಗ್ರೆಸ್ ಶಾಸಕರನ್ನು ಅನರ್ಹಗೊಳಿಸಲು ಸ್ಪೀಕರ್ ನೋಟಿಸ್ ನೀಡಿದ್ದರು. ಇದನ್ನು ಪ್ರಶ್ನಿಸಿ ಶಾಸಕರು ಹೈಕೋರ್ಟ್ ಮೊರೆ ಹೋಗಿದ್ದರು. ಅರ್ಜಿಯ ವಿಚಾರಣೆ ನಡೆಸಿದ ರಾಜಸ್ಥಾನ ಹೈಕೋರ್ಟ್ ತೀರ್ಪನ್ನು ಪ್ರಕಟಿಸಿದೆ. ಯಥಾಸ್ಥಿತಿ ಕಾಪಾಡಿಕೊಳ್ಳುವಂತೆ ಸೂಚನೆ ನೀಡಿದೆ. ಈ ಆದೇಶದ ಬಳಿಕ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ರಾಜ್ಯಪಾಲರನ್ನು ಭೇಟಿ ಮಾಡಿದರು.
ಎಷ್ಟು ಶಾಸಕರು ಇದ್ದಾರೆ?
ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ವಿರುದ್ಧ ಬಂಡಾಯವೆದ್ದು ಸಚಿನ್ ಪೈಲೆಟ್ ಸರ್ಕಾರದಿಂದ ದೂರವಾಗಿದ್ದಾರೆ. ಆದರೆ, ಹಲವು ಶಾಸಕರು ಅವರ ಜೊತೆಗೆ ಇದ್ದಾರೆ. ವಿಧಾನಸಭೆ ಅಧಿವೇಶನ ನಡೆದು ಸರ್ಕಾರ ವ ವಿಶ್ವಾಸಮತ ಯಾಚನೆ ಮಾಡಲು ಮುಂದಾದರೆ ಯಾರ ಬಣದಲ್ಲಿ ಎಷ್ಟು ಶಾಸಕರು ಇದ್ದಾರೆ? ಎಂಬ ಚಿತ್ರಣ ಲಭ್ಯವಾಗಲಿದೆ.
104 ಶಾಸಕರು ಇದ್ದಾರೆ
200 ಸದಸ್ಯ ಬಲದ ರಾಜಸ್ಥಾನ ವಿಧಾನಸಭೆಯಲ್ಲಿ ಅಶೋಕ್ ಗೆಹ್ಲೋಟ್ ಬಣ 104 ಶಾಸಕರನ್ನು ಹೊಂದಿದೆ ಎಂದು ಅಂದಾಜಿಸಲಾಗಿದೆ. ಸಚಿನ್ ಪೈಲೆಟ್ ಪರವಾಗಿ 21 ಶಾಸಕರು ಇದ್ದಾರೆ. ಆದರೆ, ಖಚಿತವಾಗಿ ಯಾರ ಕಡೆ ಎಷ್ಟು ಶಾಸಕರು ಇದ್ದಾರೆ? ಎಂಬುದು ಇನ್ನೂ ಖಚಿತವಾಗಿಲ್ಲ.
ಸೋಮವಾರ ಸುಪ್ರೀಂ ತೀರ್ಪು
ಶಾಸಕರ ಅನರ್ಹತೆ ನೋಟಿಸ್ ಕುರಿತು ಯಾವುದೇ ಕ್ರಮ ಕೈಗೊಳ್ಳದಂತೆ ರಾಜಸ್ಥಾನ ಹೈಕೋರ್ಟ್ ಸ್ಪೀಕರ್ ಸಿ. ಪಿ. ಜೋಶಿಗೆ ಸೂಚನೆ ನೀಡಿತ್ತು. ಹೈಕೋರ್ಟ್ ನೀಡಿದ್ದ ತಡೆ ಪ್ರಶ್ನಿಸಿ ಅವರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ. ಗುರುವಾರ ಅರ್ಜಿಯ ವಿಚಾರಣೆಯನ್ನು ಪೂರ್ಣಗೊಳಿಸಲಾಗಿದ್ದು, ಜುಲೈ 27ರ ಸೋಮವಾರ ತೀರ್ಪು ಪ್ರಕಟವಾಗಲಿದೆ.