ನರೇಂದ್ರ ಮೋದಿಯಿಂದ ಮಾತ್ರ ದೇಶ ರಕ್ಷಣೆ ಸಾಧ್ಯ ಎಂದ ಬಾಬಾ ರಾಮ್ ದೇವ್
ಜೈಪುರ್ (ರಾಜಸ್ತಾನ್), ಏಪ್ರಿಲ್ 16: ಪ್ರಧಾನಿ ನರೇಂದ್ರ ಮೋದಿ ಮಾತ್ರ ದೇಶವನ್ನು ರಕ್ಷಿಸಲು ಸಾಧ್ಯ. ಆದ್ದರಿಂದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೇ ಮತ ಹಾಕಬೇಕು ಎಂದು ಯೋಗ ಗುರು ಬಾಬಾ ರಾಮ್ ದೇವ್ ಮಂಗಳವಾರ ಹೇಳಿದ್ದಾರೆ.
ಇನ್ನು ಇಪ್ಪತ್ತು-ಇಪ್ಪತ್ತೈದು ವರ್ಷದಲ್ಲಿ ಭಾರತವನ್ನು ವಿಶ್ವದ ಆರ್ಥಿಕ ಹಾಗೂ ರಾಜಕೀಯದ ಸೂಪರ್ ಪವರ್ ಮಾಡಲು ನಾಅವು ಮೋದಿಯನ್ನು ಬಲಪಡಿಸಬೇಕು. ಅವರ ಕೈಯಲ್ಲಿ ದೇಶವು ಸುರಕ್ಷಿತವಾಗಿರುತ್ತದೆ. ನಮ್ಮ ಯೋಧರ ಭವಿಷ್ಯ ಸುರಕ್ಷಿತ, ಹೆಣ್ಣುಮಕ್ಕಳ ಗೌರವ, ಮರ್ಯಾದೆ ಸುರಕ್ಷಿತ ಹಾಗೂ ರೈತರ ಕೃಷಿ ಜಮೀನು ಸುರಕ್ಷಿತ ಎಂದು ಅವರು ಹೇಳಿದ್ದಾರೆ.
ಧಾರ್ಮಿಕ ವಾಹಿನಿಗಳ ಮೇಲೆ ಹೆಚ್ಚಿನ ತೆರಿಗೆ, ಕೇಂದ್ರದ ವಿರುದ್ಧ ರಾಮ್ ದೇವ್ ಗರಂ
ಜೈಪುರ್ ಗ್ರಾಮಾಂತರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಆಗಿರುವ ಕೇಂದ್ರ ಸಚಿವ ರಾಜ್ಯವರ್ಧನ್ ಸಿಂಗ್ ಬೆಂಬಲಿಸಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಇದು ಒಬ್ಬ ವ್ಯಕ್ತಿಯ ವಿಚಾರವಲ್ಲ. ಭಾರತ ಮಾತೆಯ ಹೆಮ್ಮೆಯಾದ ಮೋದಿಯ ನಡತೆ ಹಾಗೂ ವ್ಯಕ್ತಿತ್ವದ ವಿಚಾರ ಎಂದಿದ್ದಾರೆ.
ಬರೀ ಗಡಿ ರಕ್ಷಣೆ ಮಾಡುವುದಲ್ಲ, ಇಡೀ ದೇಶದ ರಕ್ಷಣೆ ಮಾಡುವ ಬಗ್ಗೆ ಮೋದಿ ಮಾತ್ರ ಖಾತ್ರಿ ನೀಡಬಲ್ಲರು ಎಂದು ರಾಮ್ ದೇವ್ ಹೇಳಿದ್ದಾರೆ.
ರಾಜ್ಯವರ್ಧನ್ ಸಿಂಗ್ ರಾಥೋಡ್ ಮಾತನಾಡಿ, ಕಾಂಗ್ರೆಸ್ ಈಗ 'ನ್ಯಾಯ್' ಮತ್ತು ಈಗ ನ್ಯಾಯ ಆಗಲಿದೆ ಎಂದು ಮಾತನಾಡುತ್ತಿದೆ. ಹಾಗಿದ್ದರೆ ಅದು ಈವರೆಗೆ ಸಾಧಿಸಿದ್ದೇನು ಎಂದು ಪ್ರಶ್ನಿಸಿದರು. ಈಗ ಅವರನ್ನು ಶಿಕ್ಷಿಸುವ ಸಮಯ. ಪ್ರತಿ ಬೂತ್ ನಲ್ಲಿ ನ್ಯಾಯ್ ಆಗುತ್ತದೆ ಮತ್ತು ಅದು ಸಾರ್ವಜನಿಕವಾಗಿ ಕೊಡಲ್ಪಡುತ್ತದೆ ಎಂದು ಪರೋಕ್ಷವಾಗಿ ಬಿಜೆಪಿ ಗೆಲ್ಲುತ್ತದೆ ಎಂದು ಹೇಳಿದ್ದಾರೆ.