ಜೈಪುರ್ ಕೋರ್ಟ್ ಬಳಿ ಕನ್ಹಯ್ಯಾ ಲಾಲ್ ಹಂತಕರ ಮೇಲೆ ದಾಳಿ
ಜೈಪುರ್, ಜುಲೈ 02: ರಾಜಸ್ಥಾನದ ಉದಯಪುರ್ ಜಿಲ್ಲೆಯಲ್ಲಿ ನಡೆದ ಟೈಲರ್ ಕನ್ಹಯ್ಯಾ ಲಾಲ್ ಹತ್ಯೆ ಪ್ರಕರಣದ ಇಬ್ಬರು ಹಂತಕರ ಮೇಲೆ ಶನಿವಾರ ಜೈಪುರ್ ನ್ಯಾಯಾಲಯದ ಹೊರಗೆ ದೊಡ್ಡ ಗುಂಪೊಂದು ದಾಳಿ ನಡೆಸಿದೆ.
ಜೈಪುರ ನ್ಯಾಯಾಲಯದ ಹೊರಗೆ ಗುಂಪೊಂದು ಆರೋಪಿಗಳ ಮೇಲೆ ಹಲ್ಲೆ ನಡೆಸಿದ್ದು, ಬಟ್ಟೆ ಹರಿದು ಹಾಕಿರುವುದು ಗೊತ್ತಾಗಿದೆ. ಆದರೆ ಪೊಲೀಸರು ಕೂಡಲೇ ಅವರನ್ನು ವಾಹನದಲ್ಲಿ ಸೇರಿಸುವ ಮೂಲಕ ಯಾವುದೇ ದೊಡ್ಡ ಪ್ರಮಾಣದ ಗಾಯಗಳ ಆಗದಂತೆ ತಪ್ಪಿಸಿದ್ದಾರೆ.
ಉದಯ್ಪುರ: ಬಿಜೆಪಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡ ಕನ್ಹಯ್ಯಾ ಹಂತಕರು
ಕಳೆದ ಜೂನ್ 28ರಂದು ಉದಯಪುರ್ ನಲ್ಲಿ 48 ವರ್ಷದ ಟೈಲರ್ ಕನ್ಹಯ್ಯಾ ಲಾಲ್ ಮೇಲೆ ದಾಳಿ ನಡೆಸಿದ ಇಬ್ಬರು ಹಂತಕರು ತಾಲಿಬಾನ್ ಮಾದರಿಯಲ್ಲಿ ಶಿರಚ್ಛೇದ ಮಾಡಿದ್ದರು. ಈ ಕೃತ್ಯವನ್ನು ವಿಡಿಯೋ ಮಾಡಿಕೊಂಡಿದ್ದ ಹಂತಕರು, ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು. ಇದೂ ಅಲ್ಲದೇ ಹತ್ಯೆ ನಂತರ ಮಾಡಿದ ಮತ್ತೊಂದು ವಿಡಿಯೋದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಬೆದರಿಕೆ ಹಾಕಿದ್ದರು.
ಒಟ್ಟು ನಾಲ್ವರನ್ನು ಬಂಧಿಸಿದ ಜೈಪುರ್ ಪೊಲೀಸರು
ಬಿಜೆಪಿ ನಾಯಕಿ ನೂಪುರ್ ಶರ್ಮಾ ಬೆಂಬಲಿಸಿ ಪೋಸ್ಟ್ ಹಾಕಿದ್ದರು ಎಂಬ ಒಂದೇ ಕಾರಣಕ್ಕೆ ಬರ್ಬರವಾಗಿ ಕನ್ಹಯ್ಯಾ ಲಾಲ್ ಕತ್ತು ಸೀಳಿ ಹತ್ಯೆ ಮಾಡಿದ ಮೊಹಮ್ಮದ್ ಅಖ್ತರ್ ಅನ್ಸಾರಿ ಮತ್ತು ಗೌಸ್ ಮೊಹಮ್ಮದ್ ಅನ್ಸಾರಿಯನ್ನು ಪೊಲೀಸರು ಬಂಧಿಸಿದ್ದರು. ಹತ್ಯೆ ನಡೆದ ದಿನವೇ ಇಬ್ಬರೂ ಹಂತಕರನ್ನು ಬಂಧಿಸುವಲ್ಲಿ ಜೈಪುರ್ ಪೊಲೀಸರು ಯಶಸ್ವಿಯಾಗಿದ್ದರು. ಇವರ ಜೊತೆಗೆ ಹತ್ಯೆಗೆ ಸಂಚು ರೂಪಿಸಿದರು ಎಂಬ ಆರೋಪದಡಿ ಮತ್ತಿಬ್ಬರು ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದರು. ಆ ಮೂಲಕ ಪ್ರಕರಣ ಸಂಬಂಧ ಒಟ್ಟು ನಾಲ್ವರನ್ನು ಬಂಧಿಸಿದ ಪೊಲೀಸರು ವಿಚಾರಣೆಗೆೆ ಒಳಪಡಿಸಿದ್ದರು.
ಜೈಪುರದ ಎನ್ಐಎ ನ್ಯಾಯಾಲಯಕ್ಕೆ ಆರೋಪಿಗಳು ಹಾಜರ್
ಕನ್ಹಯ್ಯಾ ಲಾಲ್ ಹತ್ಯೆ ನಡೆಸಿದ ನಾಲ್ವರು ಆರೋಪಿಗಳನ್ನು ಶನಿವಾರ ಜೈಪುರದ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಈ ವೇಳೆ ನ್ಯಾಯಾಲಯದ ಆವರಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಅದಾಗ್ಯೂ ಕೆಲವು ವಕೀಲರು "ಪಾಕಿಸ್ತಾನ್ ಮುರ್ದಾಬಾದ್" ಮತ್ತು "ಕನ್ಹಯ್ಯಾ ಕೆ ಹತ್ಯಾರೋನ್ ಕೋ ಫ್ಯಾನ್ಸಿ ದೋ" ಅಂದರೆ ಕನ್ಹಯ್ಯಾ ಹಂತಕರಿಗೆ ಮರಣದಂಡನೆ ವಿಧಿಸಿ ಎಂಬ ಘೋಷಣೆಗಳನ್ನು ಕೂಗಿದರು.
ಹಂತಕರನ್ನು ಎನ್ಐಎ ಕಸ್ಟಡಿಗೊಪ್ಪಿಸಿದ ಕೋರ್ಟ್
ಉದಯಪುರ್ ಟೈಲರ್ ಕನ್ಹಯ್ಯಾ ಲಾಲ್ ಹತ್ಯೆ ನಡೆಸಿದ ನಾಲ್ವರು ಆರೋಪಿಗಳನ್ನು ಜೈಪುರದ ರಾಷ್ಟ್ರೀಯ ತನಿಖಾ ಸಂಸ್ಥೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಈ ವೇಳೆ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ಆರೋಪಿಗಳನ್ನು ಮುಂದಿನ ಜುಲೈ 12ರವರೆಗೂ ಎನ್ಐಎ ಕಸ್ಟಡಿಗೆ ಒಪ್ಪಿಸಿ ಆದೇಶ ಹೊರಡಿಸಿತು.
ನೂಪುರ್ ಶರ್ಮಾ ಬೆಂಬಲಿಸಿದ್ದಕ್ಕೆ ಮಹಾರಾಷ್ಟ್ರದಲ್ಲೂ ಕೊಲೆ
ಕನ್ಹಯ್ಯಾ ಲಾಲ್ ಹತ್ಯೆಗೆ ಒಂದೆರೆಡು ದಿನಕ್ಕೂ ಮೊದಲು ಅವರು ಬಿಜೆಪಿಯ ನೂಪುರ್ ಶರ್ಮಾ ಅನ್ನು ಬೆಂಬಲಿಸಿ ಪೋಸ್ಟ್ ಹಾಕಿದ್ದರು. ಈ ಪೋಸ್ಟ್ ಬೆನ್ನಲ್ಲೇ ಬೆದರಿಕೆ ಸಂದೇಶ ಮತ್ತು ಫೋನ್ ಕರೆಗಳು ಬಂದಿದ್ದವು ಎಂದು ಪೊಲೀಸರು ತಿಳಿಸಿದ್ದರು. ರಾಜಸ್ಥಾನದಲ್ಲಿ ನಡೆದ ಹತ್ಯೆ ಮಾದರಿಯಲ್ಲೇ ಮಹಾರಾಷ್ಟ್ರದ ಅಮರಾವತಿಯಲ್ಲಿ ರಸಾಯನಶಾಸ್ತ್ರಜ್ಞನ ಹತ್ಯೆಯು ನಡೆದಿದೆ. ಈ ಬಗ್ಗೆಯೂ ಭಯೋತ್ಪಾದನಾ ವಿರೋಧಿ ತನಿಖಾ ಸಂಸ್ಥೆಯು ತನಿಖೆ ನಡೆಸುತ್ತಿದೆ.
Recommended Video