ಉದಯಪುರ ಕೊಲೆ ಪ್ರಕರಣ: ಇಂಟರ್ ನೆಟ್ ಸ್ಥಗಿತ, ನಿಷೇಧಾಜ್ಞೆ ಜಾರಿ ಮಾಡಿದ ಸರ್ಕಾರ
ಜೈಪುರ, ಜೂನ್ 29: ಇಬ್ಬರು ಮುಸ್ಲಿಂ ಯುವಕರು ಟೈಲರ್ ಕನ್ನಯ್ಯಾ ಕುಮಾರ್ ನನ್ನು ಕೊಂದು, ಪ್ರಧಾನಿ ಮೋದಿಗೆ ಜೀವ ಬೆದರಿಕೆ ಹಾಕಿದ ಬೆನ್ನಲ್ಲೇ ರಾಜಸ್ಥಾನದಲ್ಲಿ ಪ್ರತಿಭಟನೆ ಹೆಚ್ಚಾಗಿದೆ. ಹಿಂಸಾಚಾರ, ಕೋಮು ಸಂಘರ್ಷವನ್ನು ತಪ್ಪಿಸಲು ಮುಂಜಾಗ್ರತಾ ಕ್ರಮವಾಗಿ ಇಡೀ ರಾಜ್ಯಾದ್ಯಂತ ಒಂದು ತಿಂಗಳು ಜನರು ಗುಂಪುಗೂಡುವುದನ್ನು ನಿಷೇಧಿಸಲು, ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
ಹತ್ಯೆ ಮಾಡುತ್ತಿರುವ ವಿಡಿಯೋ ವೈರಲ್ ಆಗುತ್ತಿದ್ದು, ಪ್ರಚೋದನೆಯನ್ನು ತಪ್ಪಿಸಲು ಮತ್ತು ದ್ವೇಷ ಭಾವನೆ ಬಿತ್ತುವುದವನ್ನು ತಪ್ಪಿಸಲು 24 ಗಂಟೆಗಳ ಕಾಲ ಮೊಬೈಲ್ ಇಂಟರ್ ನೆಟ್ ಸೇವೆಗಳನ್ನು ಬಂದ್ ಮಾಡಲಾಗಿದೆ.
Breaking: ಕನ್ಹಯ್ಯಾ ಲಾಲ್ ಹತ್ಯೆ ಬೆನ್ನಲ್ಲೇ ಉದಯಪುರದಲ್ಲಿ ಕರ್ಫ್ಯೂ ಜಾರಿ
ರಾತ್ರಿ 8 ಗಂಟೆಗೆ ಉದಯಪುರ ನಗರದ ಏಳು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮುಂದಿನ ಆದೇಶದವರೆಗೆ ಕರ್ಫ್ಯೂ ಘೋಷಿಸಲಾಗಿದೆ. ಹತಿಪೋಲ್ ಪ್ರದೇಶದಲ್ಲಿ ಎರಡು ಮೋಟಾರ್ಸೈಕಲ್ಗಳಿಗೆ ಬೆಂಕಿ ಹಚ್ಚಲಾಯಿಗೆ ಮತ್ತು ಧನ್ ಮಂಡಿಯ ಮಸೀದಿಯೊಂದಕ್ಕೆ ಗುಂಪೊಂದು ಕಲ್ಲು ತೂರಾಟ ನಡೆಸಿದೆ, ಪೊಲೀಸರು ಗುಂಪನ್ನು ಚದುರಿಸಿದ್ದಾರೆ.
ಕೇಂದ್ರ ಗೃಹ ಸಚಿವಾಲಯವು ರಾಷ್ಟ್ರೀಯ ತನಿಖಾ ಸಂಸ್ಥೆಯಿಂದ (ಎನ್ಐಎ) ತಂಡವನ್ನು ಉದಯಪುರಕ್ಕೆ ಕಳುಹಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಿಯಾಜ್ ಅಖ್ತರಿ ಮತ್ತು ಘೌಸ್ ಮೊಹಮ್ಮದ್ ಎನ್ನುವ ಇಬ್ಬರನ್ನು ಬಂಧಿಸಿದ ಕೂಡಲೇ ರಾಜಸ್ಥಾನ ಪೊಲೀಸರು ವಿಶೇಷ ತನಿಖಾ ತಂಡವನ್ನು (ಎಸ್ಐಟಿ) ರಚಿಸಲಾಗಿದೆ.
Breaking: ರಾಜಸ್ಥಾನದಲ್ಲಿ ನೂಪುರ್ ಶರ್ಮಾ ಬೆಂಬಲಿಸಿ ಪೋಸ್ಟ್ ಹಾಕಿದ್ದಕ್ಕೆ ಟೈಲರ್ ಶಿರಚ್ಛೇದ
ಶಾಂತಿ ಕಾಪಾಡುವಂತೆ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮನವಿ
ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಶಾಂತವಾಗಿರುವಂತೆ ಟ್ವಿಟರ್ನಲ್ಲಿ ಮನವಿ ಮಾಡಿದ್ದಾರೆ ಮತ್ತು ವೀಡಿಯೊಗಳನ್ನು ಹಂಚಿಕೊಳ್ಳದಂತೆ ಜನರನ್ನು ಕೇಳಿಕೊಂಡರು.
"ತಪ್ಪಿತಸ್ಥರನ್ನು ಬಿಡಲಾಗುವುದಿಲ್ಲ. ಇಡೀ ಪೊಲೀಸ್ ತಂಡವು ಸಂಪೂರ್ಣ ಜಾಗರೂಕತೆಯಿಂದ ಕೆಲಸ ಮಾಡುತ್ತಿದೆ. ಕೊಲೆಯಿಂದಾಗಿ ಜನರಲ್ಲಿ ಇರುವ ಕೋಪವನ್ನು ನಾನು ಊಹಿಸಬಲ್ಲೆ. ಅದರಂತೆ ನಾವು ಕ್ರಮ ತೆಗೆದುಕೊಳ್ಳುತ್ತಿದ್ದೇವೆ" ಎಂದು ಅವರು ಜೋಧ್ಪುರದಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ದೇಶದಲ್ಲಿ ಕೋಮು ಉದ್ವಿಗ್ನತೆಯಿದ್ದು, ಪ್ರಧಾನಿ ಜನರನ್ನು ಉದ್ದೇಶಿಸಿ ಮಾತನಾಡಬೇಕು ಎಂದು ಗೆಹ್ಲೋಟ್ ಹೇಳಿದರು. ಹಿಂದೂಗಳು ಮತ್ತು ಮುಸ್ಲಿಮರು ಸದ್ಯದ ಬೆಳವಣಿಗೆಗಳಿಂದ ಆತಂಕಗೊಂಡಿದ್ದಾರೆ ಎಂದು ಅವರು ಹೇಳಿದರು.
"ಪ್ರಧಾನಿ ಮಾತನಾಡಿದರೆ ಅದು ಹೆಚ್ಚು ಪರಿಣಾಮ ಬೀರುತ್ತದೆ. ಈ ಸಂದರ್ಭದಲ್ಲಿ ಪ್ರಧಾನಿ ದೇಶವನ್ನು ಉದ್ದೇಶಿಸಿ ಮಾತನಾಡಬೇಕು ಮತ್ತು ನಾವು ಯಾವುದೇ ಕಾರಣಕ್ಕೂ ಹಿಂಸಾಚಾರವನ್ನು ಸಹಿಸುವುದಿಲ್ಲ ಎಂದು ಮನವಿ ಮಾಡಬೇಕು" ಎಂದು ಹೇಳಿದರು.
ನೂಪುರ್ ಶರ್ಮಾ ಬೆಂಬಲಿಸಿದ್ದಕ್ಕೆ ಹತ್ಯೆ
ಆರೋಪಿ ಅಖ್ತರಿ ಆ ವ್ಯಕ್ತಿಯ "ತಲೆ ಕತ್ತರಿಸಿದ್ದೇವೆ" ಎಂದು ವಿಡಿಯೋದಲ್ಲಿ ಹೇಳಿದ್ದಾನೆ ಮತ್ತು ಪ್ರಧಾನಿ ನರೇಂದ್ರ ಮೋದಿಗೂ ಜೀವ ಬೆದರಿಕೆ ಹಾಕಿದ್ದಾನೆ. ಪ್ರವಾದಿ ಮೊಹಮ್ಮದ್ ಕುರಿತ ಹೇಳಿಕೆಗೆ ಸಂಬಂಧಿಸಿದಂತೆ ಪಕ್ಷದಿಂದ ಅಮಾನತುಗೊಂಡಿರುವ ಬಿಜೆಪಿ ನಾಯಕಿ ನೂಪುರ್ ಶರ್ಮಾರನ್ನು ಬೆಂಬಲಿಸಿ ವಾಟ್ಸ್ಅಪ್ ಸ್ಟೇಟಸ್ ಹಾಕಿಕೊಂಡಿದ್ದಕ್ಕೆ ಈ ಕೃತ್ಯ ಎಸಗಲಾಗಿದೆ.
ಟೈಲರ್ ಆಗಿದ್ದ ಕನ್ಹಯ್ಯಾ ಲಾಲ್ ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ನೂಪುರ್ ಶರ್ಮಾ ಬೆಂಬಲಿಸಿ ಪೋಸ್ಟ್ ಮಾಡಿದ ಮೇಲೆ ಜೂನ್ 15 ರಂದು ಸ್ಥಳೀಯ ಪೊಲೀಸರು ಬಂಧಿಸಿದ್ದರು. ಜಾಮೀನಿನ ಮೇಲೆ ಇರುವಾಗ ಬೆದರಿಕೆ ಕರೆಗಳು ಬರುತ್ತಿವೆ ಎಂದು ಕನ್ಹಯ್ಯಾ ಪೊಲೀಸರಿಗೆ ತಿಳಿಸಿದ್ದರು.
ಸ್ಥಳೀಯ ಎಸ್ಎಚ್ಒ ಎರಡೂ ಕಡೆಯವರನ್ನು ಠಾಣೆಗೆ ಕರೆಸಿ ವಿಷಯ ಇತ್ಯರ್ಥಪಡಿಸಿದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕೊಲೆಯ ನಂತರ, ಕರ್ತವ್ಯ ನಿರ್ಲಕ್ಷ್ಯದ ಆರೋಪದ ಮೇಲೆ ಸಹಾಯಕ ಸಬ್ ಇನ್ಸ್ಪೆಕ್ಟರ್ ಅನ್ನು ಅಮಾನತುಗೊಳಿಸಿದ್ದಾರೆ.
ಅಖ್ತರಿ ಸ್ಥಳೀಯ ಮಸೀದಿಯಲ್ಲಿ ಕೆಲಸ ಮಾಡುತ್ತಿದ್ದು, ಮತ್ತೊಬ್ಬ ದುಷ್ಕರ್ಮಿ ದಿನಸಿ ಅಂಗಡಿ ನಡೆಸುತ್ತಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
50 ಲಕ್ಷ ರು. ಪರಿಹಾರ ನೀಡುವಂತೆ ಒತ್ತಾಯ
ಈ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ಉದ್ವಿಗ್ನತೆ ಹೆಚ್ಚಾಯಿತು. ಸ್ಥಳೀಯ ಮಾರುಕಟ್ಟೆಗಳಲ್ಲಿ ಅಂಗಡಿಕಾರರು ಶಟರ್ಗಳನ್ನು ಉರುಳಿಸಿದರು ಮತ್ತು ಗುಂಪೊಂದು ಕಲ್ಲು ತೂರಾಟ ನಡೆಸಿ ಎರಡು ಮೋಟಾರ್ಸೈಕಲ್ಗಳಿಗೆ ಬೆಂಕಿ ಹಚ್ಚಿದರು.
ಹಲವಾರು ಗಂಟೆಗಳ ಕಾಲ, ಸ್ಥಳೀಯ ಅಂಗಡಿಯವರು ಕನ್ಹಯ್ಯಾ ಶವವನ್ನು ತೆಗೆದುಕೊಂಡು ಹೋಗದಂತೆ ಪೊಲೀಸರನ್ನು ತಡೆದರು, ಕೊಲೆಗಾರರನ್ನು ಬಂಧಿಸಿದ ನಂತರವೇ ಶವವನ್ನು ಹೊರತೆಗೆಯಲು ಅವಕಾಶ ನೀಡುತ್ತೇವೆ ಮತ್ತು ಸಂತ್ರಸ್ತ ಕುಟುಂಬಕ್ಕೆ 50 ಲಕ್ಷ ರುಪಾಯಿ ಪರಿಹಾರ ಮತ್ತು ಸರ್ಕಾರಿ ಉದ್ಯೋಗವನ್ನು ನೀಡಬೇಕು ಎಂದು ಒತ್ತಾಯಿಸಿದರು. ಅಧಿಕಾರಿಗಳು ಬೇಡಿಕೆ ಈಡೇರಿಸುವ ಭರವಸೆ ನೀಡಿದ ನಂತರ ಶವ ಕೊಂಡೊಯ್ಯಲು ಒಪ್ಪಿಗೆ ಸೂಚಿಸಿದರು.
ವಿಚಾರಣೆ ಮಾಡಲು ವಿಶೇಷ ತನಿಖಾ ತಂಡ ರಚನೆ
ವಿಶೇಷ ಕಾರ್ಯಾಚರಣೆ ಗುಂಪಿನ ಹೆಚ್ಚುವರಿ ಮಹಾನಿರ್ದೇಶಕ ಅಶೋಕ್ ರಾಥೋಡ್ ನೇತೃತ್ವದ ನಾಲ್ಕು ಸದಸ್ಯರ ಪೊಲೀಸ್ ಎಸ್ಐಟಿಗೆ ಪ್ರಕರಣದ ತನಿಖೆಯನ್ನು ಒಪ್ಪಿಸಲಾಗಿದೆ. ಭಯೋತ್ಪಾದನಾ ನಿಗ್ರಹ ದಳದ ಇನ್ಸ್ಪೆಕ್ಟರ್ ಜನರಲ್ ಪ್ರಫುಲ್ ಕುಮಾರ್ ಕೂಡ ತಂಡದ ಭಾಗವಾಗಿದ್ದಾರೆ.
ಬಿಜೆಪಿ ರಾಜ್ಯ ಮುಖ್ಯಸ್ಥ ಸತೀಶ್ ಪೂನಿಯಾ ರಾಜಸ್ಥಾನದ ಕಾಂಗ್ರೆಸ್ ಸರ್ಕಾರವನ್ನು ಗುರಿಯಾಗಿಸಿಕೊಂಡು, ಹತ್ಯೆಯು ಅದರ ಓಲೈಕೆಯ ನೀತಿಯ ಪರಿಣಾಮವಾಗಿದೆ ಎಂದು ಹೇಳಿದ್ದಾರೆ. ಕನ್ಹಯ್ಯ ಲಾಲ್ ಭದ್ರತೆ ಕೇಳಿದ್ದರು ಆದರೆ ಪೊಲೀಸರು ಅದನ್ನು ನೀಡಲಿಲ್ಲ ಎಂದು ಅವರು ಆರೋಪಿಸಿದ್ದಾರೆ, ಇದು ರಾಜ್ಯದ ಕಾಂಗ್ರೆಸ್ ಸರ್ಕಾರದ ನಿರಾಸಕ್ತಿಯನ್ನು ಸೂಚಿಸುತ್ತದೆ, ಎಂದು ಹೇಳಿದ್ದಾರೆ.
ವಿರೋಧ ಪಕ್ಷದ ನಾಯಕ ಗುಲಾಬ್ ಚಂದ್ ಕಟಾರಿಯಾ ಕೂಡ ಘಟನೆಯನ್ನು ಖಂಡಿಸಿದ್ದಾರೆ ಮತ್ತು ಅವರು ಮಂಗಳವಾರ ರಾತ್ರಿ ಉದಯಪುರ ತಲುಪುತ್ತಿರುವುದಾಗಿ ಹೇಳಿದರು. ಆದಾಗ್ಯೂ, ಸಿಆರ್ ಪಿಸಿ ಸೆಕ್ಷನ್ 144 ರ ಜಾರಿಯಲ್ಲಿರುವುದರಿಂದ ಮೂರಕ್ಕಿಂತ ಹೆಚ್ಚು ಜನ ಸೇರುವ ಅವಕಾಶವಿಲ್ಲ.
ರಾಜಸ್ಥಾನ ಸಶಸ್ತ್ರ ಕಾನ್ಸ್ಟಾಬ್ಯುಲರಿಯ ಐದು ವಿಭಾಗಗಳು ಸೇರಿದಂತೆ ಸುಮಾರು 600 ಪೊಲೀಸರನ್ನು ಉದಯಪುರಕ್ಕೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳನ್ನೂ ನಗರಕ್ಕೆ ದೌಡಾಯಿಸಲಾಯಿತು. ರಾಜ್ಯದ "ಕೇಸ್ ಆಫೀಸರ್ ಸ್ಕೀಮ್" ಅಡಿಯಲ್ಲಿ ವಿಚಾರಣೆಯನ್ನು ತ್ವರಿತವಾಗಿ ಟ್ರ್ಯಾಕ್ ಮಾಡಲಾಗುವುದು ಎಂದು ಸಿಎಂ ಗೆಹ್ಲೋಟ್ ಹೇಳಿದರು.