ಉದಯಪುರ ಕನ್ಹಯ್ಯಾ ಲಾಲ್ ಪ್ರಕರಣ: ಇಬ್ಬರ ಬಂಧನ
ಉದಯಪುರ ಜೂನ್ 29: ರಾಜಸ್ಥಾನದ ಉದಯಪುರದಲ್ಲಿ ನೂಪುರ್ ಶರ್ಮಾ ಅವರನ್ನು ಬೆಂಬಲಿಸಿ ಸಾಮಾಜಿಕ ಜಾಲತಾಣದಲ್ಲಿ ಸ್ಟೇಟಸ್ ಹಾಕಿದ್ದಕ್ಕಾಗಿ ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದ್ದು ಶಾಂತಿ ಕದಡಿದೆ. ಈ ಘಟನೆಗೆ ಸಂಬಂಧಿಸಿದಂತೆ ಕ್ಯಾಮರಾದಲ್ಲಿ ಕಂಡ ದಾಳಿಕೋರರಾದ ಗೋಸ್ ಮೊಹಮ್ಮದ್ ಮತ್ತು ರಿಯಾಜ್ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಕನ್ಹಯ್ಯಾ ಲಾಲ್ ಟೈಲರ್ ಆಗಿದ್ದು, ಅಂಗಡಿಯಲ್ಲಿ ಜನರ ಬಟ್ಟೆ ಹೊಲಿಯುತ್ತಿದ್ದರು. ಹಂತಕರು ಬಟ್ಟೆ ಹೊಲಿಯುವ ನೆಪದಲ್ಲಿ ಆತನ ಅಂಗಡಿಗೆ ಬಂದು ಹತ್ಯೆಗೈದಿದ್ದಾರೆ. ಅಷ್ಟೇ ಅಲ್ಲ ಇಡೀ ಘಟನೆಯ ವಿಡಿಯೋ ಮಾಡಿ ವೈರಲ್ ಮಾಡಿದ್ದಾರೆ. ಹತ್ಯೆಯ ವಿರುದ್ಧ ನಗರದಲ್ಲಿ ಕೋಲಾಹಲ ಶುರುವಾಗಿದೆ. ಈ ಬಗ್ಗೆ ಸಿಎಂ ಅಶೋಕ್ ಗೆಹ್ಲೋಟ್ ಅವರು ಎಲ್ಲಾ ಜನರು ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದಾರೆ.
ಉದಯಪುರ ಘಟನೆಯ ಕುರಿತು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು, "ಉದಯಪುರದಲ್ಲಿ ಯುವಕನ ಭೀಕರ ಹತ್ಯೆಯನ್ನು ನಾನು ಖಂಡಿಸುತ್ತೇನೆ. ಈ ಘಟನೆಯಲ್ಲಿ ಭಾಗಿಯಾಗಿರುವ ಎಲ್ಲಾ ಅಪರಾಧಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಮತ್ತು ಪೊಲೀಸರು ಅಪರಾಧದ ಸಂಪೂರ್ಣ ತನಿಖೆ ಮಾಡುತ್ತಾರೆ. ಶಾಂತಿ ಕಾಪಾಡುವಂತೆ ಎಲ್ಲ ಪಕ್ಷಗಳಿಗೂ ಮನವಿ ಮಾಡುತ್ತೇನೆ. ಇಂತಹ ಘೋರ ಅಪರಾಧದಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬ ವ್ಯಕ್ತಿಗೂ ಕಠಿಣ ಶಿಕ್ಷೆ ವಿಧಿಸಲಾಗುವುದು'' ಎಂದಿದ್ದಾರೆ.
ಉದಯಪುರ ಕೊಲೆ ಪ್ರಕರಣ: ಇಂಟರ್ ನೆಟ್ ಸ್ಥಗಿತ, ನಿಷೇಧಾಜ್ಞೆ ಜಾರಿ ಮಾಡಿದ ಸರ್ಕಾರ
ಅಶೋಕ್ ಗೆಹ್ಲೋಟ್ ಮನವಿ
ಇದು ಕಳವಳಕಾರಿ ವಿಷಯ ಎಂದು ಸಿಎಂ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ. "ಯಾರನ್ನಾದರೂ ಈ ರೀತಿ ಕೊಲ್ಲುವುದು ದುಃಖ ಮತ್ತು ನಾಚಿಕೆಗೇಡಿನ ಸಂಗತಿ. ವಾತಾವರಣವನ್ನು ಸರಿಪಡಿಸಬೇಕಾಗಿದೆ. ಇಡೀ ದೇಶದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ದೇಶವನ್ನು ಉದ್ದೇಶಿಸಿ ಮಾತನಾಡುವಂತೆ ನಾನು ಪ್ರಧಾನಿ ಮತ್ತು ಗೃಹ ಸಚಿವರಿಗೆ ಪದೇ ಪದೇ ಹೇಳುತ್ತೇನೆ. ನಾವು ಯಾವುದೇ ಕಾರಣಕ್ಕೂ ಹಿಂಸಾಚಾರವನ್ನು ಸಹಿಸುವುದಿಲ್ಲ ಎಂದು ಪ್ರಧಾನಿ ಮನವಿ ಮಾಡಬೇಕು," ಎಂದು ಅವರು ಹೇಳಿದರು. ಎಲ್ಲರೂ ಪ್ರೀತಿ ಮತ್ತು ಸಹೋದರತ್ವದಿಂದ ಇರಲು ನಾನು ಮನವಿ ಮಾಡುತ್ತೇನೆ ಎಂದಿದ್ದಾರೆ.
ಆರೋಪಿಗಳ ಬಂಧನಕ್ಕೆ ಒತ್ತಾಯ
ಮತ್ತೊಂದೆಡೆ, ಉದಯಪುರದಲ್ಲಿ ಮಧ್ಯಾಹ್ನ ಹೃದಯ ವಿದ್ರಾವಕ ಮತ್ತು ನಾಚಿಕೆಗೇಡಿನ ಕೊಲೆ ನಡೆದಿದೆ ಎಂದು ರಾಜಸ್ಥಾನ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಮತ್ತು ಬಿಜೆಪಿ ನಾಯಕ ಗುಲಾಬ್ ಚಂದ್ ಕಟಾರಿಯಾ ಹೇಳಿದ್ದಾರೆ. ವಿಡಿಯೋ ಕೂಡ ವೈರಲ್ ಆಗಿದೆ. ಗ್ಯಾಂಗ್ ಇಲ್ಲದೆ ಈ ರೀತಿಯ ಕೊಲೆ ನಡೆಯಲು ಸಾಧ್ಯವಿಲ್ಲ. ಎಸ್ಪಿ, ಡಿಜಿ ಹಾಗೂ ಸಿಎಂ ಜತೆಯೂ ಮಾತನಾಡಿದ್ದೇನೆ. ಆರೋಪಿಗಳನ್ನು ಶೀಘ್ರ ಬಂಧಿಸಬೇಕು ಎಂದಿದ್ದಾರೆ.
ಶಾಂತಿಗಾಗಿ ಮನವಿ
ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಕೂಡ ಘಟನೆಯನ್ನು ಖಂಡಿಸಿದ್ದು, ಶಾಂತಿ ಕಾಪಾಡುವಂತೆ ಜನರಿಗೆ ಮನವಿ ಮಾಡಿದ್ದಾರೆ. ಅವರು ಟ್ವೀಟ್ ಮಾಡಿದ್ದಾರೆ. "ಉದಯಪುರ ಯುವಕನ ಕ್ರೂರ ಮತ್ತು ಹೃದಯ ವಿದ್ರಾವಕ ಹತ್ಯೆ ಅತ್ಯಂತ ದುಃಖ ಮತ್ತು ಖಂಡನೀಯ, ನಾನು ಇದನ್ನು ಖಂಡಿಸುತ್ತೇನೆ. ಈ ಅಮಾನವೀಯ ಕೃತ್ಯದ ಅಪರಾಧಿಗಳಿಗೆ ಕಠಿಣ ಶಿಕ್ಷೆಯನ್ನು ನೀಡಬೇಕು. ಶಾಂತಿ ಸಹೋದರತ್ವ ಕಾಪಾಡುವಂತೆ ನಾನು ಎಲ್ಲರಿಗೂ ಮನವಿ ಮಾಡುತ್ತೇನೆ" ಎಂದಿದ್ದಾರೆ.
ಕಾನೂನು ಕ್ರಮದ ಭರವಸೆ
ಉದಯಪುರ ಹತ್ಯಾಕಾಂಡದ ನಂತರ ಜನರು ಬೀದಿಗಿಳಿದು ತಮ್ಮ ಪ್ರತಿಭಟನೆಯನ್ನು ಮಾಡಿದ್ದಾರೆ. ಘಟನೆಯ ನಂತರ ಮಾಲ್ದಾಸ್ ಬಜಾರ್ನಲ್ಲಿ ಅಂಗಡಿಗಳನ್ನು ಮುಚ್ಚಲಾಗಿದೆ. ಈ ಸಂದರ್ಭದಲ್ಲಿ ಉದಯಪುರ ಜಿಲ್ಲಾಧಿಕಾರಿ ತಾರಾ ಚಂದ್ ಮೀನಾ ಮಾತನಾಡಿ, "ಅಪರಾಧಕ್ಕೆ ಶಿಕ್ಷೆ ನೀಡಲು ಯಾವುದೇ ಜಾತಿ ಬೇಧವಿಲ್ಲ. ಕಾನೂನು ತನ್ನ ಹಾದಿಯಲ್ಲಿ ಸಾಗುತ್ತಿದ್ದು, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಸಂತ್ರಸ್ತರ ಕುಟುಂಬಕ್ಕೆ ಸಾಧ್ಯವಾದಷ್ಟು ನೆರವು ನೀಡಲಾಗುವುದು. ಅದರಲ್ಲಿನ ನಿಬಂಧನೆಗಳ ಪ್ರಕಾರ ಕ್ರಮ ಕೈಗೊಳ್ಳಲಾಗುವುದು," ಎಂದು ಹೇಳಿದ್ದಾರೆ.