ಉದಯ್ಪುರ: ಬೈಕ್ನ 2611 ನಂಬರ್ ಪ್ಲೇಟ್ ಹಿಂದಿನ ರಹಸ್ಯವೇನು?
ಉದಯ್ಪುರ ಜುಲೈ 02: ಉದಯಪುರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅತ್ಯಂತ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ವಿಷಯ ತಿಳಿದರೆ ಕೊಲೆಗಾರರ ಮನಸ್ಥಿತಿ ಹೇಗಿದೆ ಎಂದು ನೀವೂ ಬೆಚ್ಚಿ ಬೀಳುತ್ತೀರಿ. ಕನ್ಹಯ್ಯಾ ಲಾಲ್ ಹತ್ಯೆಯಾಗುವ ಒಂಬತ್ತು ವರ್ಷಗಳ ಹಿಂದೆ ಮೊಹಮ್ಮದ್ ರಿಯಾಜ್ ಅತ್ತಾರಿ ತನ್ನ ಬೈಕ್ಗೆ '2611' ನಂಬರ್ ಪ್ಲೇಟ್ ಪಡೆಯಲು 1000 ರೂ. ಖರ್ಚು ಮಾಡಿದ್ದನು. ಇದೇ ಬೈಕ್ನ್ನು ಹತ್ಯೆ ಬಳಿಕ ಪರಾರಿಯಾಗಲು ಬಳಸಿದ್ದಾನೆ.
'2611' ಇದು 2008ರ ಮುಂಬೈ ಭಯೋತ್ಪಾದನಾ ದಾಳಿಯ ದಿನಾಂಕವನ್ನು ಉಲ್ಲೇಖಿಸುತ್ತದೆ. 2611 ಸಂಖ್ಯೆಗೆ ಡಿಮ್ಯಾಂಡ್ ಡ್ರಾಫ್ಟ್ ಮೂಲಕ ವಾಹನ ಮಾಲೀಕರಿಂದ 1000 ರೂಪಾಯಿಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಉದಯಪುರ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಪ್ರಭು ಲಾಲ್ ಬಮಾನಿಯಾ ತಿಳಿಸಿದ್ದಾರೆ. 2013ರ ಮಾರ್ಚ್ 15ರಂದು ಬೈಕ್ ನೋಂದಣಿ ಮಾಡಲಾಗಿತ್ತು ಎಂದು ತಿಳಿಸಿದ್ದಾರೆ. ಮಾತ್ರವಲ್ಲದೆ ಹತ್ಯೆ ಬಳಿಕ ಇಬ್ಬರೂ ಒಂದೇ ನಂಬರಿನ ಬೈಕಿನಲ್ಲಿ ಸ್ಥಳದಿಂದ ಪರಾರಿಯಾಗಿದ್ದರು ಎಂದು ಪೊಲೀಸ್ ತನಿಖೆಯಿಂದ ಬಯಲಾಗಿದೆ.
ಬಿಜೆಪಿಯ ಮಾಜಿ ವಕ್ತಾರರಾದ ನೂಪುರ್ ಶರ್ಮಾ ಅವರು ಪ್ರವಾದಿ ಮೊಹಮ್ಮದ್ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆಯನ್ನು ಬೆಂಬಲಿಸಿದ್ದಕ್ಕಾಗಿ ಟೈಲರ್ ಕನ್ಹಯ್ಯಾ ಲಾಲ್ ಅವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದರು. ಜೊತೆಗೆ ಹತ್ಯೆಯ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ವಿಡಿಯೋದಲ್ಲಿ ಪ್ರಧಾನಿ ನರೇಂದ್ರ ಮೋದಿಗೂ ಕೂಡ ಬೆದರಿಕೆ ಹಾಕಲಾಗಿತ್ತು. ಘಟನೆ ಬಳಿಕ ಹಂತಕರು 2611 ನಂಬರ್ನ ಬೈಕ್ನಲ್ಲಿ ಪರಾರಿಯಾಗಿದ್ದರು ಎಂದು ಅವರ ಬಂಧನದ ಬಳಿಕ ತಿಳಿದು ಬಂದಿದೆ.
ಅತ್ತಾರಿ ಮತ್ತು ಗೌಸ್ ಮೊಹಮ್ಮದ್ ಅವರು ಕನ್ಹಯ್ಯಾ ಲಾಲ್ ಅವರನ್ನು ಕೊಂದ ನಂತರ ಎರಡೂ ಸ್ಥಳಗಳಿಂದ '2611' ನಂಬರ್ ಪ್ಲೇಟ್ ಇರುವ ಬೈಕ್ನಲ್ಲಿ ಪರಾರಿಯಾಗಲು ಪ್ರಯತ್ನಿಸಿದ್ದರು. ಇಬ್ಬರು ಪರಾರಿಯಾದ ಬೈಕ್ ನ ನೋಂದಣಿ ಸಂಖ್ಯೆ ಆರ್ ಜೆ 27 ಎಎಸ್ '2611' ಎಂದು ಪೊಲೀಸರು ಖಚಿತಪಡಿಸಿದ್ದಾರೆ. ಇಬ್ಬರನ್ನೂ ರಾಜಸ್ಥಾನ ಪೊಲೀಸರು ರಾಜಸಮಂದ್ನಿಂದ ಬಂಧಿಸಿದ್ದಾರೆ.
ಹಂತಕರ ಮನಸ್ಥಿತಿ ಹೇಗಿತ್ತು?
ಕಳೆದ ಕೆಲವು ವಾರಗಳಿಂದ ರಿಯಾಜ್ ವಾಟ್ಸಾಪ್ ಗ್ರೂಪ್ನಲ್ಲಿ ಇಂತಹ ಕೆಲಸಗಳನ್ನು ಮಾಡುತ್ತಿದ್ದರು ಎಂದು ಬೆಳವಣಿಗೆಗಳ ಪರಿಚಯವಿರುವ ವ್ಯಕ್ತಿಯೊಬ್ಬರು ಹೇಳಿದ್ದಾರೆ. ಇದು ಅವರ ಮನಸ್ಥಿತಿಯನ್ನು ತೋರಿಸುತ್ತದೆ. ಹತ್ಯೆಯ ನಂತರ ಅವರು ಪೋಸ್ಟ್ ಮಾಡಿದ ವಿಡಿಯೊ ಮತ್ತು ಅವರು ಮಾತನಾಡಿದ ವಿಷಯವು ದ್ವೇಷದಿಂದ ತುಂಬಿತ್ತು. ಈ ಸಂದೇಶಗಳ ಮೂಲಕ ಅವನು ತನ್ನ ಮನಸ್ಥಿತಿಯನ್ನು ಹೇಳುತ್ತಿದ್ದನು ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಭರವಸೆ
ಕನ್ಹಯ್ಯಾ ಲಾಲ್ ಟೈಲರ್ ಹತ್ಯೆ ಪ್ರಕರಣದಲ್ಲಿ (ರಾಜಸ್ಥಾನ ಟೈಲರ್ ಕನ್ಹಯ್ಯಾಲಾಲ್) ಅವರ ಮಗ ಯಶ್ ಅಪರಾಧಿಗಳಿಗೆ ಮರಣದಂಡನೆ ವಿಧಿಸಬೇಕೆಂದು ಒತ್ತಾಯಿಸಿದ್ದಾರೆ. ಮಗ ರಾಜ್ಯ ಸರ್ಕಾರ ಮತ್ತು ಪೊಲೀಸ್ ಆಡಳಿತದಿಂದಲೂ ಭದ್ರತೆಯನ್ನು ಕೋರಿದ್ದಾನೆ. ಅಪರಾಧಿಗಳಿಗೆ ಮರಣದಂಡನೆ ವಿಧಿಸುವುದಾಗಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಭರವಸೆ ನೀಡಿದ್ದಾರೆ.
10-15 ದಿನಗಳಿಂದ ಕೊಲೆ ಬೆದರಿಕೆ
ಕನ್ಹಯ್ಯಾ ಲಾಲ್ ಟೈಲರ್ ಅವರನ್ನು ಹಾಡಹಗಲೇ ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಈ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಲಾಗಿದ್ದು, ಜುಲೈ 13ರವರೆಗೆ ಕಸ್ಟಡಿಗೆ ನೀಡಲಾಗಿದೆ. ಕನ್ಹಯ್ಯ ಲಾಲ್ ಅವರ ಪತ್ನಿ ಯಶೋದಾ ಅವರ ಪ್ರಕಾರ, ಅವರಿಗೆ 10-15 ದಿನಗಳಿಂದ ಕೊಲೆ ಬೆದರಿಕೆಗಳು ಬರುತ್ತಿತ್ತವು. ಕೊಲೆ ಮಾಡುವುದಾಗಿ ಫೋನ್ ನಲ್ಲಿ ಹೇಳಲಾಗಿತ್ತು. ಅಂಗಡಿಗೆ ಬಂದ ಮೇಲೂ ಜನರು ಬೆದರಿಕೆ ಹಾಕುತ್ತಿದ್ದರು.
ನೂಪುರ್ ಶರ್ಮಾ ಬೆಂಬಲಿಸಿದ್ದಕ್ಕೆ ಕೊಲೆ
ರಾಜಸ್ಥಾನದ ಉದಯಪುರ ಜಿಲ್ಲೆಯಲ್ಲಿ ಮಂಗಳವಾರ (ಜೂ. 28) ದರ್ಜಿ ಕನ್ಹಯ್ಯಾ ಲಾಲ್ ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಈ ಘಟನೆ ನಡೆದ ಬಳಿಕ ಇಲ್ಲಿ ಪರಿಸ್ಥಿತಿ ತುಂಬಾ ಉದ್ವಿಗ್ನವಾಗಿದೆ. ಈ ಪರಿಸ್ಥಿತಿಯಿಂದಾಗಿ ರಾಜಸ್ಥಾನ ಸರ್ಕಾರವು ಉದಯಪುರ ಸೇರಿದಂತೆ ಇಡೀ ರಾಜ್ಯದಲ್ಲಿ ಒಂದು ತಿಂಗಳ ಕಾಲ ಸೆಕ್ಷನ್ 144 ವಿಧಿಸಿದೆ. ಅಲ್ಲದೆ, 24 ಗಂಟೆಗಳ ಕಾಲ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು. ಗೌಸ್ ಮೊಹಮ್ಮದ್ ಮತ್ತು ರಿಯಾಜ್ ಬಲವಂತವಾಗಿ ಟೇಲರ್ ಕನ್ಹಯ್ಯಾಲಾಲ್ ಅವರ ಅಂಗಡಿಗೆ ನುಗ್ಗಿ ಹರಿತವಾದ ಆಯುಧಗಳಿಂದ ಕತ್ತು ಸೀಳಿದ್ದಾರೆ. ಅಷ್ಟೇ ಅಲ್ಲ, ಈ ನಿರ್ದಯ ಹತ್ಯೆ ಮಾಡಿದ ಬಳಿಕ ವಿಡಿಯೋ ಮಾಡಿ ತನ್ನ ಚಿತ್ರವನ್ನೂ ಕ್ಲಿಕ್ಕಿಸಿದ್ದಾನೆ. ನೂಪುರ್ ಶರ್ಮಾ ಅವರನ್ನು ಬೆಂಬಲಿಸಿದ ನಂತರ ಟೇಲರ್ ಕನ್ಹಯ್ಯ ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
Recommended Video