ಉದಯ್ಪುರ ಪ್ರಕರಣ: ಕನ್ಹಯ್ಯಾ ಲಾಲ್ ಅಂತಿಮ ಸಂಸ್ಕಾರಕ್ಕೆ ಜನಸ್ತೋಮ- ಬಿಗಿ ಭದ್ರತೆ
ಜೈಪುರ, ಜೂನ್ 29: ಕನ್ಹಯ್ಯಾ ಲಾಲ್ ಹತ್ಯೆಯ ನಂತರ ರಾಜಸ್ಥಾನದ ಉದಯಪುರ ಜಿಲ್ಲೆಯಲ್ಲಿ ಉದ್ವಿಗ್ನ ವಾತಾವರಣವಿದೆ. ಇಂದು ಮರಣೋತ್ತರ ಪರೀಕ್ಷೆಯ ನಂತರ, ಕನ್ಹಯ್ಯಾ ಲಾಲ್ ಅವರ ದೇಹವನ್ನು ಅವರ ಮನೆಗೆ ತರಲಾಯಿತು. ಅಲ್ಲಿ ನೂರಾರು ಜನರು ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದರು. ವಿಷಯದ ಗಂಭೀರತೆಯನ್ನು ಪರಿಗಣಿಸಿ, ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ. ಇದರೊಂದಿಗೆ ಶಾಂತಿ ಕಾಪಾಡುವಂತೆ ಎಲ್ಲರಿಗೂ ಮನವಿ ಮಾಡಲಾಗುತ್ತಿದೆ.
ಮತ್ತೊಂದೆಡೆ, ಮರಣೋತ್ತರ ಪರೀಕ್ಷೆಯ ವರದಿಯ ಪ್ರಕಾರ, ಕನ್ಹಯ್ಯಾ ಲಾಲ್ ಅನ್ನು ಹರಿತವಾದ ಆಯುಧದಿಂದ ಕೊಲ್ಲಲಾಗಿದೆ. ಆತನ ಮೈಮೇಲೆ 26 ಇರಿತದ ಗುರುತುಗಳಿವೆ. ಪ್ರಸ್ತುತ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರೂ ಆರೋಪಿಗಳನ್ನು ರಾಜಸ್ಥಾನ ಪೊಲೀಸರು ಬಂಧಿಸಿದ್ದಾರೆ. 38 ವರ್ಷದ ರಿಯಾಜ್ ಮತ್ತು 39 ವರ್ಷದ ಘೋಷ್ ಮೊಹಮ್ಮದ್ ಬಂಧಿತರ ಆರೋಪಿಗಳಾಗಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ, ಹಂತಕರು ಹತ್ಯೆಯ ಮೂರನೇ ವಿಡಿಯೋ ಮಾಡಲು ಅಜ್ಮೀರ್ಗೆ ಹೋಗುತ್ತಿದ್ದರು ಎಂದು ತಿಳಿದು ಬಂದಿದೆ. ಎರಡು ವಿಡಿಯೊಗಳನ್ನು ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಬಿಡುಗಡೆ ಮಾಡಿದ್ದಾರೆ. ನಂತರ ಪೊಲೀಸರು ಅವರನ್ನು ಬಂಧಿಸಿದ್ದಾರೆ ಎನ್ನಲಾಗುತ್ತಿದೆ.
ಮತ್ತೊಂದೆಡೆ ಬಿಜೆಪಿ ಕಾರ್ಯಕರ್ತರು ಈ ಹತ್ಯಾಕಾಂಡವನ್ನು ವಿರೋಧಿಸುತ್ತಿದ್ದಾರೆ. ಮಾಹಿತಿ ಪ್ರಕಾರ, ಕನ್ಹಯ್ಯಾ ಲಾಲ್ ಅಂತ್ಯಕ್ರಿಯೆಗೆ ಸಿದ್ಧತೆ ನಡೆಯುತ್ತಿದ್ದಾಗ ಪೊಲೀಸರು ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ವಾಗ್ವಾದ ನಡೆದಿದೆ. ಪ್ರತಿಭಟನೆ ವೇಳೆ ಸಿಕ್ಕಿಬಿದ್ದವರನ್ನು ಬಿಡುಗಡೆ ಮಾಡುವಂತೆ ಬಿಜೆಪಿ ಕಾರ್ಯಕರ್ತರು ಒತ್ತಾಯಿಸುತ್ತಿದ್ದಾರೆ. ಇದರಿಂದಾಗಿ ಅಂತ್ಯಕ್ರಿಯೆಯೂ ತಡವಾಗಿರುವುದು ತಿಳಿದುಬಂದಿದೆ.
ಇದೇ ವೇಳೆ ಈ ಘಟನೆ ಹಿಂದೆ ವಿದೇಶಿ ಷಡ್ಯಂತ್ರದ ವಿಷಯವೂ ಮುನ್ನೆಲೆಗೆ ಬರುತ್ತಿದೆ. ಹೀಗಾಗಿ ಗೃಹ ಸಚಿವಾಲಯ ತನ್ನ ತನಿಖೆಯನ್ನು ಎನ್ಐಎಗೆ ವಹಿಸಿದೆ. ಮೂಲಗಳ ಪ್ರಕಾರ ಎನ್ ಐಎ ತಂಡ ರಾಜಸ್ಥಾನ ತಲುಪಿದೆ. ಏಕಕಾಲಕ್ಕೆ ಆರೋಪಿಗಳಿಬ್ಬರನ್ನೂ ವಿಚಾರಣೆ ನಡೆಸಲಾಗುತ್ತಿದೆ. ಮತ್ತೊಂದೆಡೆ, ವದಂತಿಗಳು ಹರಡುವುದನ್ನು ತಡೆಯಲು, ರಾಜಸ್ಥಾನ ಸರ್ಕಾರ ಇಡೀ ರಾಜ್ಯದಲ್ಲಿ ಇಂಟರ್ನೆಟ್ ಸೇವೆಯನ್ನು ನಿಲ್ಲಿಸಿದೆ. ಅಲ್ಲದೆ, ಉದಯಪುರದ 7 ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕರ್ಫ್ಯೂ ವಿಧಿಸಲಾಗಿದೆ.