ಸಾಲ್ಟ್ ಲೇಕ್: ಸಾವಿರಾರು ವಲಸೆ ಹಕ್ಕಿಗಳ ನಿಗೂಢ ಸಾವು
ಜೈಪುರ, ನವೆಂಬರ್ 12: ರಾಜಸ್ಥಾನದ ಸಾಂಭಾರ್ ಉಪ್ಪು ಸರೋವರದಲ್ಲಿ ಸಾವಿರಕ್ಕೂ ಅಧಿಕ ವಲಸೆ ಹಕ್ಕಿಗಳು ನಿಗೂಢ ರೀತಿಯಲ್ಲಿ ಸಾವಿಗೀಡಾಗಿವೆ. ಕಲುಷಿತ ನೀರು ಅಥವಾ ವಿಷಪೂರಿತ ಪಾಚಿಗಳಿಂದಾಗಿ ಈ ಸಾಮೂಹಿಕ ಸಾವು ಸಂಭವಿಸಿರಬಹುದು ಎನ್ನಲಾಗಿದೆ.
ಬೇರೆ ಬೇರೆ ದೇಶಗಳಿಂದ ಚಳಿಗಾಲದ ಅವಧಿಯಿಂದ ತಪ್ಪಿಸಿಕೊಳ್ಳಲು ಸಾವಿರಾರು ಮೈಲು ದೂರ ವಲಸೆ ಬರುವ ಹಕ್ಕಿಗಳು ಈ ರೀತಿ ಸಾಯುತ್ತಿರುವುದು ಆಘಾತ ಮೂಡಿಸಿದೆ. ಕಳೆದ ಐದು ದಿನಗಳಲ್ಲಿ ರಾಜ್ಯವು ಹಕ್ಕಿಗಳ ಸ್ಮಶಾನವಾಗುತ್ತಿರುವುದು ಇದು ಎರಡನೆಯ ಬಾರಿ.
ಕೊಕ್ಕರೆ ಬೆಳ್ಳೂರಿನಲ್ಲಿ ಮತ್ತೆ ಪೆಲಿಕಾನ್ ಸಾವು; ಜಂತುಹುಳು ಕಾರಣ?
ಜೈಪುರದಿಂದ 80 ಕಿ.ಮೀ ದೂರದಲ್ಲಿರುವ ಸಾಂಭಾರ್ ಸಾಲ್ಟ್ ಲೇಕ್ನಲ್ಲಿ ಹಕ್ಕಿಗಳ ಸಾವಿಗೆ ಕಾರಣವಾಗುವ ಯಾವುದೇ ಪುರಾವೆ ದೊರೆತಿಲ್ಲ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ಗುರುವಾರವಷ್ಟೇ ಆಲ್ವಾರ್ ಜಿಲ್ಲೆಯ ವಿಜಯ್ ಸಾಗರ್ ಸರೋವರದಲ್ಲಿ 31 ಕೊಕ್ಕರೆಗಳು ಸತ್ತಿದ್ದವು. ಈ ಕೊಕ್ಕರೆಗಳು ವಿಷಪೂರಿತ ಧಾನ್ಯಗಳನ್ನು ತಿಂದು ಮೃತಪಟ್ಟಿರಬಹುದು ಎಂದು ಹೇಳಲಾಗಿದೆ.
ಸಾಂಭಾರ್ ಸರೋವರದಲ್ಲಿ ಸೋಮವಾರ ರುಡಿ ಷೆಲ್ಡಕ್, ಗಲ್ ಬಿಲ್ಲಡ್ ಟರ್ನ್, ರೆಡ್ಶಾಂಕ್ಸ್, ಸ್ಟಿಂಕ್ಸ್, ಪ್ಲೋವರ್ಸ್, ಅವೊಕೆಟ್ಸ್, ಶೋವೆಲರ್ಸ್ ಮತ್ತು ಸ್ಯಾಂಡ್ ಪೈಪರ್ಸ್ ಸೇರಿದಂತೆ ವೈವಿಧ್ಯಮಯ ಜಾತಿಯ ಬಾತುಕೋಳಿ ಹಾಗೂ ಜಲಚರಗಳ ಮಾರಣಹೋಮ ನಡೆದಿದೆ.
ಕುಕ್ಕರಹಳ್ಳಿಯಲ್ಲಿ ಪೆಲಿಕಾನ್ ಸಾವು; ಹಕ್ಕಿಜ್ವರ ಕಾರಣವಲ್ಲ
ಸುಮಾರು ಹತ್ತು ಪ್ರಭೇದಗಳ 1,500 ಪಕ್ಷಿಗಳು ಮೃತಪಟ್ಟಿವೆ ಎಂದು ಊಹಿಸಲಾಗಿದೆ. ಸೋಂಕು ಹರಡದಂತೆ ತಡೆಯಲು ಎಲ್ಲ ಪಕ್ಷಿಗಳನ್ನೂ ಸಾಮೂಹಿಕವಾಗಿ ಹೂತುಹಾಕಲಾಗಿದೆ.