Breaking: ರಾಜಸ್ಥಾನದಲ್ಲಿ ನೂಪುರ್ ಶರ್ಮಾ ಬೆಂಬಲಿಸಿ ಪೋಸ್ಟ್ ಹಾಕಿದ್ದಕ್ಕೆ ಟೈಲರ್ ಶಿರಚ್ಛೇದ
ಜೈಪುರ್, ಜೂನ್ 28: ರಾಜಸ್ಥಾನದ ಉದಯಪುರದಲ್ಲಿ ಬಿಜೆಪಿಯ ಮಾಜಿ ವಕ್ತಾರೆ ನೂಪುರ್ ಶರ್ಮಾರನ್ನು ಬೆಂಬಲಿಸಿ ಪೋಸ್ಟ್ ಹಾಕಿದ ಟೈಲರ್ ಕನ್ಹಯ್ಯಾ ಲಾಲ್ ಅನ್ನು ಹಾಡಹಗಲಿನಲ್ಲೇ ಶಿರಚ್ಛೇಧನ ಮಾಡಿರುವ ಘಟನೆ ನಡೆದಿದೆ.
ತಾಲಿಬಾನ್ ಮಾದರಿಯಲ್ಲಿ ಟೈಲರ್ ಅಂಗಡಿಗೆ ನುಗ್ಗಿದ ಆರೋಪಿಗಳು ಕನ್ಹಯ್ಯಾ ಲಾಲ್ ಕತ್ತು ಕೊಯ್ದು ಹತ್ಯೆ ಮಾಡಿದ್ದಾರೆ. ಹೀಗೆ ಹತ್ಯೆ ಮಾಡಿರುವುದನ್ನು ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ನೂಪುರ್ ಶರ್ಮಾರನ್ನು ಬೆಂಬಲಿಸಿ ಪೋಸ್ಟ್ ಹಾಕಿದ ಕಾರಣಕ್ಕೆ ಇವನನ್ನು ಹತ್ಯೆ ಮಾಡಿರುವುದಾಗಿ ಸ್ವತಃ ಹಂತಕರೇ ಮತ್ತೊಂದು ವಿಡಿಯೋವನ್ನು ಮಾಡಿದ್ದಾರೆ. ಅಲ್ಲದೇ ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಬೆದರಿಕೆ ಹಾಕಿದ್ದಾರೆ. ರಾಜಸ್ಥಾನದಲ್ಲಿ ಟೈಲರ್ ಹತ್ಯೆಯ ನಂತರ ಪರಿಸ್ಥಿತಿ ಮತ್ತಷ್ಟು ವಿಕೋಪಕ್ಕೆ ಹೋಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಹೆಚ್ಚುವರಿ ಭದ್ರತೆಯನ್ನು ನಿಯೋಜಿಸಲಾಗಿದೆ. ಈ ಹತ್ಯೆ ಮತ್ತು ಪ್ರಕರಣದ ಸುತ್ತ ಏನೇನಾಯಿತು ಎಂಬುದನ್ನು ವರದಿಯಲ್ಲಿ ತಿಳಿದುಕೊಳ್ಳೋಣ.
ಉದಯಪುರದಲ್ಲಿ ಹತ್ಯೆ ಮಾಡಿದ ಆರೋಪಿಗಳು ಯಾರು?
ರಾಜಸ್ಥಾನದ ಉದಯಪುರದಲ್ಲಿ ಬಟ್ಟೆ ಹೊಲಿಸಿಕೊಳ್ಳುವ ಸೋಗಿನಲ್ಲಿ ಬಂದ ಆರೋಪಿಗಳು ಬಟ್ಟೆಯ ಅಳತೆ ನೀಡಿದ್ದಾರೆ. ಬಟ್ಟೆ ಅಳತೆ ಬರೆದುಕೊಳ್ಳುತ್ತಿದ್ದ ಸಂದರ್ಭದಲ್ಲಿ ಆರೋಪಿ ಮೊಹಮ್ಮದ್ ರಿಯಾಜ್ ಅನ್ಸಾರಿ ಮತ್ತು ಗೌಸ್ ಮೊಹಮ್ಮದ್ ಅನ್ಸಾರಿ ಏಕಾಏಕಿ ಕತ್ತು ಕತ್ತರಿಸಿದ್ದಾರೆ. ಶಿರಚ್ಛೇಧ ಮಾಡಿರುವ ವಿಡಿಯೋದ ಜೊತೆಗೆ ಬೆದರಿಕೆ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು ಇಬ್ಬರೂ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಉದಯಪುರದಲ್ಲಿ ಹೆಚ್ಚುವರಿ ಭದ್ರತಾ ಸಿಬ್ಬಂದಿ ನಿಯೋಜನೆ
ಜೈಪುರದಿಂದ ಇಬ್ಬರು ಎಡಿಜಿಪಿಗಳು, ಇನ್ನೂ ಒಬ್ಬರು ಎಸ್ಪಿ ಮತ್ತು 600 ಹೆಚ್ಚುವರಿ ಪೊಲೀಸ್ ಪಡೆಯನ್ನು ಉದಯಪುರಕ್ಕೆ ಕಳುಹಿಸಲಾಗಿದೆ. ಅಪರಾಧಿಗಳನ್ನು ಬಿಡುವುದಿಲ್ಲ. ಶೀಘ್ರದಲ್ಲಿಯೇ ಆರೋಪಿಗಳನ್ನು ಬಂಧಿಸಲಾಗುವುದು. ಕಾನೂನು ಸುವ್ಯಸ್ಥೆಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಎಲ್ಲ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಉದಯಪುರದ ಹೆಚ್ಚುವರಿ ನಿರ್ದೇಶಕ ಹವಾಸಿಂಗ್ ಗುಮ್ತಾ ತಿಳಿಸಿದ್ದಾರೆ.
ಉದಯಪುರದಲ್ಲಿ ಇಂಟರ್ ನೆಟ್ ಸ್ಥಗಿತ
ಟೈಲರ್ ಕನ್ಹಯ್ಯಾ ಲಾಲ್ ಹತ್ಯೆಯ ಬೆನ್ನಲ್ಲೇ ಉದಯಪುರದಲ್ಲಿ ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಈ ಹತ್ಯೆಯನ್ನು ಖಂಡಿಸಿ ಜನರು ಪ್ರತಿಭಟನೆ ನಡೆಸುತ್ತಿದ್ದು, ಟೈರ್ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸರ್ಕಾರದ ವಿರುದ್ಧ ಧಿಕ್ಕಾರ ಕೂಗುತ್ತಿದ್ದಾರೆ. ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಮುಂದಿನ 24 ಗಂಟೆಗಳವರೆಗೆ ಇಂಟರ್ ಸೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.
ಸಾರ್ವಜನಿಕರನ್ನು ಉದ್ದೇಶಿಸಿ ಪ್ರಧಾನಿ ಮಾತನಾಡಲಿ ಎಂದ ಗೆಹ್ಲೋಟ್
"ಇದು ದುಃಖಕರ ಮತ್ತು ನಾಚಿಕೆಗೇಡಿನ ಘಟನೆಯಾಗಿದೆ. ಇಂದು ದೇಶದಲ್ಲಿ ಉದ್ವಿಗ್ನ ವಾತಾವರಣವಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ದೇಶವನ್ನು ಉದ್ದೇಶಿಸಿ ಏಕೆ ಮಾತನಾಡುವುದಿಲ್ಲ? ಜನರಲ್ಲಿ ಉದ್ವಿಗ್ನತೆ ಇದೆ. ಪ್ರಧಾನಿಯವರು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಬೇಕು, ಇಂತಹ ಹಿಂಸಾಚಾರವನ್ನು ಸಹಿಸುವುದಿಲ್ಲ, ಶಾಂತಿ ಕಾಪಾಡುವಂತೆ ಮನವಿ ಮಾಡಬೇಕು," ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.