ದೇವಸ್ಥಾನ ಭೂ ವಿವಾದ: ಅರ್ಚಕರ ಮೇಲೆ ಪೆಟ್ರೋಲ್ ಸುರಿದು ಬೆಂಕಿ
ಜೈಪುರ್, ಅಕ್ಟೋಬರ್.09: ಭೂಮಿ ವಿವಾದಕ್ಕೆ ಸಂಬಂಧಿಸಿದಂತೆ ದೇಗುಲದ ಅರ್ಚರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಈ ಘಟನೆ ಹಿನ್ನೆಲೆ ಆರು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಜೈಪುರ್ ನಿಂದ 177 ಕಿ.ಮೀ ದೂರದಲ್ಲಿರುವ ಕರೌಲಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ರಾಧಾ-ಕೃಷ್ಣ ದೇವಸ್ಥಾನಕ್ಕೆ ಸೇರಿದ 5.2 ಎಕರೆ ಭೂಮಿಗಾಗಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದೆ. ವಿರೋಧಿ ಗುಂಪಿನ ಸದಸ್ಯರು ದೇವಸ್ಥಾನದ ಅರ್ಚಕನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ.
11 ಲಕ್ಷಕ್ಕಾಗಿ ಕಾರಿನಲ್ಲೇ ಉದ್ಯಮಿಯನ್ನು ಸುಟ್ಟು ಹಾಕಿದ ದುಷ್ಕರ್ಮಿಗಳು
ಕಳೆದ ಬುಧವಾರ ರಾಧಾ-ಕೃಷ್ಣ ದೇವಸ್ಥಾನದ ಅರ್ಚಕ ಬಾಬು ಲಾಲ್ ವೈಷ್ಣವ್ ಎಂಬುವವರ ಮೇಲೆ ಮೀನಾ ಸಮುದಾಯದ ವಿರೋಧಿ ಗುಂಪಿನ ಜನರು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಅರ್ಚಕರನ್ನು ಆಸ್ಪತ್ರೆಗೆ ದಾಖಲಿಸಲಾಗಿಯಿತಾದರೂ, ಚಿಕಿತ್ಸೆ ಫಲಕಾರಿಯಾಗದೇ ಅರ್ಚಕರು ಪ್ರಾಣ ಬಿಟ್ಟಿದ್ದಾರೆ.
ಮುಖ್ಯ ಪುರೋಹಿತರಿಗೆ 5.2 ಎಕರೆ ಭೂಮಿ ನೀಡಿದ ಟ್ರಸ್ಟ್
ರಾಜಸ್ಥಾನದ ಕರೌಲಿ ಗ್ರಾಮದಲ್ಲಿರುವ ರಾಧಾ ಕೃಷ್ಣ ದೇವಾಲಯದ ಟ್ರಸ್ಟ್ಗೆ ಸೇರಿದ ಸುಮಾರು 5.2 ಎಕರೆ ಭೂಮಿಯನ್ನು ಹೊಂದಿದ್ದು, ಈ ಭೂಮಿಯನ್ನು ಮುಖ್ಯ ಅರ್ಚಕರಿಗೆ ಆದಾಯದ ಮೂಲವಾಗಿ ನೀಡಲಾಗಿತ್ತು. ದೇವಾಲಯದ ಟ್ರಸ್ಟ್ಗಳಿಗೆ ಸೇರಿದ ಈ ರೀತಿಯ ಭೂಮಿಯನ್ನು ಸಾಮಾನ್ಯವಾಗಿ ದೇವಸ್ಥಾನಗಳಲ್ಲಿ ಪೂಜೆ ಕಾರ್ಯಗಳನ್ನು ನೆರವೇರಿಸುವ ಮತ್ತು ಆಚರಣೆಗಳ ಉಸ್ತುವಾರಿ ನೋಡಿಕೊಳ್ಳುವ ಪುರೋಹಿತರ ಬಳಕೆಗಾಗಿ ನೀಡಲಾಗುತ್ತದೆ.
ಪುರೋಹಿತರ ಆದಾಯದ ಮೂಲವಾಗಿದ್ದ ಭೂಮಿ ಸುತ್ತ ವಿವಾದ
ಟ್ರಸ್ಟ್ ವತಿಯಿಂದ ಪುರೋಹಿತರಿಗೆ ನೀಡುವ ಭೂಮಿಯನ್ನು 'ಮಂಡಿ ಮಾಫಿ' ಎಂದು ಕರೆಯಲ್ಪಡಲಿದ್ದು, ಇಂಥ ಭೂಮಿಯೇ ಪುರೋಹಿತರ ಆದಾಯದ ಮೂಲವಾಗಿರುತ್ತದೆ. ಆದರೆ ರಾಜಸ್ಥಾನದ ಕರೌಲಿಯಲ್ಲಿ ಇಂಥ ಭೂಮಿಯೇ ವಿವಾದದ ಕೇಂದ್ರ ಬಿಂದುವಾಗಿದ್ದು, ಕೊಲೆಗೂ ಕಾರಣವಾಗಿದೆ. ಪುರೋಹಿತ ಬಾಬು ಲಾಲ್ ವೈಷ್ಣವ್, ಸಣ್ಣ ಬೆಟ್ಟದ ಗಡಿಯಲ್ಲಿರುವ ತನ್ನ ಜಮೀನಿಗೆ ಸಮೀಪವಿರುವ ಜಾಗದಲ್ಲಿ ಒಂದು ಮನೆಯನ್ನು ನಿರ್ಮಿಸಲು ಬಯಸಿದ್ದರು. ನಿರ್ಮಾಣ ಪ್ರಾರಂಭಿಸುವ ಸಲುವಾಗಿ ಭೂಮಿಯನ್ನು ಭೂ-ಸಾಗಣೆದಾರರಿಂದ ನೆಲಸಮಗೊಳಿಸಿದ್ದರು.
ಇನ್ನೊಂದು ಗುಂಪಿನಿಂದ ಮನೆ ನಿರ್ಮಾಣಕ್ಕೆ ವಿರೋಧ
ಟ್ರಸ್ಟ್ ನೀಡಿದ ಭೂಮಿಯನ್ನಿ ಮನೆ ನಿರ್ಮಾಣಕ್ಕೆ ಮುಂದಾದ ಪುರೋಹಿತ ಬಾಬು ಲಾಲ್ ವೈಷ್ಣವ್ ವಿರುದ್ಧ ಮತ್ತೊಂದು ಸಮುದಾಯವು ವಿರೋಧ ವ್ಯಕ್ತಪಡಿಸಿತು. ಟ್ರಸ್ಟ್ ಭೂಮಿಯು ತನಗೆ ಸಂಬಂಧಿಸಿದ್ದು ಎಂದು ಮೀನಾ ಸಮುದಾಯವು ಹಕ್ಕು ಮಂಡನೆ ಮಾಡಿತು. ಗ್ರಾಮದಲ್ಲಿರುವ ಪಂಚರ ನೇತೃತ್ವದಲ್ಲಿ ಪುರೋಹಿತನ ಪರವಾಗಿ ನ್ಯಾಯ ತೀರ್ಮಾನ ಮಾಡಲಾಯಿತು. ನಂತರ ಪುರೋಹಿತರು ನೆಲಸಮ ಮಾಡಿದ ಭೂಮಿಯಲ್ಲಿ ತಮ್ಮದೇ ಆದ ಗುಡಿಸಲು ನಿರ್ಮಿಸಲು ಪ್ರಾರಂಭಿಸಿದರು ಎಂದು ಆರೋಪಿಸಲಾಗಿದೆ.
ಸಾವಿೂ ಮುನ್ನ ನೀಡಿದ ಹೇಳಿಕೆ ಆಧರಿಸಿ 6 ಜನರ ಬಂಧನ
ವಿವಾದಿತ ಭೂಮಿಯಲ್ಲಿ ಗುಡಿಸಲು ನಿರ್ಮಾಣಕ್ಕೆ ಮುಂದಾಗಿದ್ದೇ ವಾಗ್ವಾದಕ್ಕೆ ಕಾರಣವಾಯಿತು. "ಕಳೆದ ಬುಧವಾರ ನಾನು ಗುಡಿಸಲಿನಲ್ಲಿ ಮಲಗಿದ್ದೆ. ಅವರು ನನ್ನ ಗುಡಿಸಲಿನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದರು, ಇದೇ ವೇಳೆ ನನ್ನ ಮೇಲೆಯೂ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲಾಯಿತು" ಎಂದು ಮೃತ ಪುರೋಹಿತ ಬಾಬು ಲಾಲ್ ವೈಷ್ಣವ್ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಯನ್ನೇ ಆಧರಿಸಿ ಕೈಲಾಸ್ ಮೀನಾ, ಶಂಕರ್, ನಮೋ ಮೀನಾ ಸೇರಿದಂತೆ ಒಟ್ಟು ಆರು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಹರ್ಜಿ ಲಾಲ್ ಯಾದವ್ ಮಾಹಿತಿ ನೀಡಿದ್ದಾರೆ.