ಪ್ರಧಾನಿಯವರೇ ರೈತರೊಂದಿಗೆ ಏನು ಚರ್ಚಿಸುತ್ತೀರಿ: ರಾಹುಲ್ ಗಾಂಧಿ
ಜೈಪುರ್, ಫೆಬ್ರವರಿ.12: ರೈತರ ಜೊತೆಗೆ ಮಾತನಾಡುವುದಾಗಿ ಹೇಳುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮೊದಲು ಕೇಂದ್ರ ಸರ್ಕಾರ ಜಾರಿಗೊಳಿಸಿರುವ ವಿವಾದಿತ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಲು ಎಂದು ಸಂಸದ ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ.
ರಾಜಸ್ಥಾನದ ಹನುಮಾನ್ ಘರ್ ನಲ್ಲಿ ನಡೆದ ಕಿಸಾನ್ ಮಹಾ ಪಂಚಾಯತ್ ಉದ್ದೇಶಿಸಿ ಅವರು ಮಾತನಾಡಿದರು. ಕೇಂದ್ರ ಸರ್ಕಾರ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದರು.
ಬೆತ್ತ ಅಲ್ಲವೇ ಅಲ್ಲ; ದೆಹಲಿ ಪೊಲೀಸರ ಕೈಗೆ ಕಬ್ಬಿಣದ ಲಾಠಿ!
"ನಾವು ರೈತರ ಜೊತೆಗೆ ಚರ್ಚೆ ನಡೆಸುವುದಕ್ಕೆ ಸಿದ್ಧ ಎನ್ನುವ ಪ್ರಧಾನಮಂತ್ರಿಯವರು ಯಾವ ವಿಷಯದ ಬಗ್ಗೆ ಮಾತನಾಡುತ್ತಾರೆ. ಮೊದಲು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಿರಿ. ತದನಂತರದಲ್ಲಿ ರೈತರ ಜೊತೆಗೆ ಮಾತನಾಡುವುದಕ್ಕೆ ಬನ್ನಿ. ಪ್ರಧಾನಿಯವರು ರೈತರ ಭೂಮಿ ಮತ್ತು ಭವಿಷ್ಯವನ್ನು ಕಿತ್ತುಕೊಂಡು ಮಾತುಕತೆ ನಡೆಸುತ್ತೇವೆ ಎಂದರೆ ಆಗುವುದಿಲ್ಲ. ಕೃಷಿ ಕಾಯ್ದೆ ರದ್ದುಗೊಳಿಸಿ ನಂತರ ರೈತರೊಂದಿಗೆ ಮಾತುಕತೆಗೆ ಮುಂದಾಗಿ" ಎಂದು ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ.
ನವದೆಹಲಿಯಲ್ಲಿ ಕೃಷಿ ಕಾಯ್ದೆ ವಿರುದ್ಧ ಹೋರಾಟ:
ಉತ್ತರ ಪ್ರದೇಶ, ಹರಿಯಾಣ, ಪಂಜಾಬ್ ಸೇರಿದಂತೆ ಉತ್ತರ ಭಾರತದ ಬಹುತೇಕ ರಾಜ್ಯಗಳಲ್ಲಿ ರೈತರ ಪರ ಧ್ವನಿ ಎತ್ತುವುದಕ್ಕಾಗಿ "ಕಿಸಾನ್ ಮಹಾಪಂಚಾಯತ್" ಸಭೆಗಳನ್ನು ನಡೆಸಲಾಗುತ್ತಿದೆ. ಕೃಷಿ ಕಾಯ್ದೆಗಳು ರೈತವಿರೋಧಿ ಎಂದ ಒಕ್ಕೊರಲ ಕೂಗು ಈ ಸಭೆಗಳಲ್ಲಿ ಕೇಳಿ ಬರುತ್ತಿದೆ.
ಕೇಂದ್ರ ಸರ್ಕಾರ ಜಾರಿಗೊಳಿಸಿರುವ ವಿವಾದಿತ ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಕಾಯ್ದೆ, ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ (ಸಬಲೀಕರಣ ಮತ್ತು ಸಂರಕ್ಷಣೆ) ಒಪ್ಪಂದ ಹಾಗೂ ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆಗಳ ವಿರುದ್ಧ ನವಂಬರ್.26 ರಿಂದ ಪ್ರತಿಭಟನೆ ನಡೆಸಲಾಗುತ್ತಿದೆ. ನವದೆಹಲಿಯ ಸಿಂಘು ಗಡಿ, ಟಿಕ್ರಿ ಗಡಿ ಮತ್ತು ಘಾಜಿಪುರ್ ಗಡಿಯಲ್ಲಿ ಸಾವಿರಾರು ರೈತರು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ.