ಭಾರತ ಲಾಕ್ ಡೌನ್ ನಡುವೆ 'ಗೂಡು' ಬಿಟ್ಟವರ ಗತಿಯೇನು?
ಜೈಪುರ್, ಏಪ್ರಿಲ್.21: ಕೊರೊನಾ ವೈರಸ್ ನಿಯಂತ್ರಿಸುವ ದೃಷ್ಟಿಯಿಂದ ಭಾರತ ಲಾಕ್ ಡೌನ್ ಘೋಷಿಸಲಾಗಿದೆಯೇನೋ ನಿಜ. ಇದರಿಂದ ಊರು ಬಿಟ್ಟು ಊರಿಗೆ, ರಾಜ್ಯ ಬಿಟ್ಟು ರಾಜ್ಯಕ್ಕೆ ವಿದ್ಯಾಭ್ಯಾಸಕ್ಕಾಗಿ ತೆರಳಿದ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಮನೆ ಬಿಟ್ಟು ಹೆತ್ತವರಿಂದ ದೂರ ಉಳಿದ ವಿದ್ಯಾರ್ಥಿಗಳನ್ನು ಮರಳಿ ಗೂಡು ಸೇರಿಸುವ ನಿಟ್ಟಿನಲ್ಲಿ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆಗೆ ಸಮಾಲೋಚನೆ ನಡೆಸಿದ್ದೇನೆ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ತಿಳಿಸಿದ್ದಾರೆ.
ಹೆತ್ತವರಿಗಾಗಿ 100 ಕಿ.ಮೀ ನಡೆದ 12ರ ಬಾಲಕಿ ಸೇರಿದ್ದು ಸಾವಿನ ಮನೆ!
ಭಾರತ ಲಾಕ್ ಡೌನ್ ನಡುವೆ ರಾಜಸ್ಥಾನದಿಂದ ತೆರಳಿ ಬೇರೆ ರಾಜ್ಯಗಳಲ್ಲಿ ಸಿಲುಕಿರುವ ಜನರನ್ನು ಆದಷ್ಟು ಬೇಗ ಹಾಗೂ ವಿದ್ಯಾರ್ಥಿಗಳನ್ನು ಮರಳಿ ಕರೆ ತರಲು ವ್ಯವಸ್ಥೆ ಕಲ್ಪಿಸಲಾಗುತ್ತದೆ. ಈ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾರಿಗೂ ಮನವಿ ಮಾಡಿಕೊಳ್ಳಲಾಗಿದೆ ಎಂದು ಸಿಎಂ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.
ಬೇರೆ ರಾಜ್ಯಗಳಲ್ಲಿ ಸಿಲಿಕಿರುವ ರಾಜಸ್ಥಾನ ವಿದ್ಯಾರ್ಥಿಗಳು
ಕೊರೊನಾ ವೈರಸ್ ನಿಂದ ರಕ್ಷಿಸಿಕೊಳ್ಳಲು ಭಾರತ ಲಾಕ್ ಡೌನ್ ಘೋಷಿಸಲಾಗಿದ್ದು, ಇದರಿಂದ ಬೇರೆ ರಾಜ್ಯಗಳಿಗೆ ವಿದ್ಯಾಭ್ಯಾಸಕ್ಕೆ ತೆರಳಿದ ವಿದ್ಯಾರ್ಥಿಗಳನ್ನು ವಾಪಸ್ ಕರೆಸಬೇಕು ಎನ್ನುವ ಒತ್ತಾಯ ಹೆಚ್ಚಾಗಿದೆ. ಈ ಸಂಬಂಧ ಮಧ್ಯಪ್ರದೇಶ, ಛತ್ತೀಸ್ ಗಢ, ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ಗುಜರಾತ್ ಮುಖ್ಯಮಂತ್ರಿಗಳ ಜೊತೆಗೆ ಚರ್ಚೆ ನಡೆಸಿದ್ದು ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ. ರಾಜಸ್ಥಾನ ಮೂಲದ ವಿದ್ಯಾರ್ಥಿಗಳನ್ನು ಕಳುಹಿಸಿ ಕೊಡುವ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದು ಎಲ್ಲ ರಾಜ್ಯಗಳ ಸಿಎಂಗಳು ಭರವಸೆ ನೀಡಿದ್ದಾರೆ ಅಂತಾ ಗೆಹ್ಲೋಟ್ ತಿಳಿಸಿದ್ದಾರೆ.
ರಾಜಸ್ಥಾನ ಇತರೆ ರಾಜ್ಯಗಳಿಗೆ ಹೋಲಿಸಿದರೆ ಭಿನ್ನ
ಭಾರತ ಲಾಕ್ ಡೌನ್ ನಿಂದ ಅತಿಹೆಚ್ಚು ಸಂಕಷ್ಟ ಅನುಭವಿಸುತ್ತಿರುವುದು ರಾಜಸ್ಥಾನ ಮೂಲದ ಜನರು. ಏಕೆಂದರೆ ಬೇರೆ ರಾಜ್ಯಗಳಿಗೆ ಹೋಲಿಸಿದರೆ ರಾಜಸ್ಥಾನದ ಜನರು ಅತಿಹೆಚ್ಚಾಗಿ ಬೇರೆ ರಾಜ್ಯಗಳಿಗೆ ವಲಸೆ ಹೋಗಿರುತ್ತಾರೆ. ಕೆಲಸ ಮತ್ತು ವಿದ್ಯಾಭ್ಯಾಸಕ್ಕಾಗಿ ಅಸ್ಸಾಂ, ಪಶ್ಚಿಮ ಬಂಗಾಳ, ತಮಿಳುನಾಡು, ಆಂಧ್ರ ಪ್ರದೇಶ, ಕರ್ನಾಟಕ ಹಾಗೂ ಮಹಾರಾಷ್ಟ್ರಕ್ಕೆ ವಲಸೆ ಹೋಗಿರುತ್ತಾರೆ. ಈಗ ಲಾಕ್ ಡೌನ್ ನಿಂದ ಅಲ್ಲಿ ಇರಲು ಆಗದೇ ಇಲ್ಲಿಗೆ ವಾಪಸ್ ಬರುವುದಕ್ಕೂ ಆಗದೇ ಅವಸ್ಥೆ ಪಡುತ್ತಿದ್ದಾರೆ. ಇದನ್ನು ಅರ್ಥ ಮಾಡಿಕೊಂಡು ರಾಜಸ್ಥಾನಕ್ಕೆ ಕರೆ ತರುವ ನಿಟ್ಟಿನಲ್ಲಿ ಕಾರ್ಯವನ್ನು ಕೈಗೊಳ್ಳಲಾಗುತ್ತದೆ ಎಂದು ಸಿಎಂ ಭರವಸೆ ನೀಡಿದ್ದಾರೆ.
ವಲಸೆ ತೆರಳಿದ ಕಾರ್ಮಿಕರ ಕುರಿತು ಸಿಎಂ ಪತ್ರ
ಇನ್ನು, ವಿದ್ಯಾಭ್ಯಾಸಕ್ಕಾಗಿ ಬೇರೆ ರಾಜ್ಯಗಳಿಗೆ ತೆರಳಿದವರು ಅಷ್ಟೇ ಅಲ್ಲ. ತುತ್ತಿನ ಚೀಲ ತುಂಬಿಸಿಕೊಳ್ಳಲು ದುಡಿಮೆಗಾಗಿ ಬೇರೆ ರಾಜ್ಯಗಳಿಗೆ ವಲಸೆ ಹೋಗಿರುವವರ ಸ್ಥಿತಿ ಇಂದು ಶೋಚನೀಯವಾಗಿದೆ. ಮಾನಸಿಕವಾಗಿ ಖಿನ್ನತೆಗೆ ಒಳಗಾಗುವಂತಾ ಸ್ಥಿತಿ ನಿರ್ಮಾಣವಾಗಿ ಬಿಟ್ಟಿದೆ. ಈ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಸವಿವರವಾಗಿ ಪತ್ರವನ್ನು ಬರೆದಿದ್ದೇನೆ.
ಕೋಟಾದಿಂದ ವಲಸಿಗರನ್ನು ಕಳುಹಿಸಿಕೊಡಲು ವ್ಯವಸ್ಥೆ
ಉತ್ತರ ಪ್ರದೇಶ ಸರ್ಕಾರವು ಈಗಾಗಲೇ ರಾಜಸ್ಥಾನದ ಕೋಟಾದಲ್ಲಿದ್ದ ತಮ್ಮ ರಾಜ್ಯದ ಜನರನ್ನು ವಾಪಸ್ ಕರೆಸಿಕೊಂಡಿದೆ. ಇದರ ಬೆನ್ನಲ್ಲೇ ಅಸ್ಸಾಂ, ಪಶ್ಚಿಮ ಬಂಗಾಳ, ಛತ್ತೀಸ್ ಗಢ, ಮಧ್ಯಪ್ರದೇಶ, ಗುಜರಾತ್ ಸರ್ಕಾರಗಳು ಕೋಟಾದಲ್ಲಿ ಇರುವ ತಮ್ಮ ರಾಜ್ಯದ ವಿದ್ಯಾರ್ಥಿಗಳನ್ನು ವಾಪಸ್ ಕರೆಸಿಕೊಳ್ಳಲು ಸಹಮತ ವ್ಯಕ್ತಪಡಿಸಿವೆ. ರಾಜ್ಯ ಸರ್ಕಾರವು ಈ ನಿಟ್ಟಿನಲ್ಲಿ ಅಗತ್ಯ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಕೋಟಾದಲ್ಲಿ ಇರುವ ಬೇರೆ ರಾಜ್ಯಗಳ ಸುಮಾರು 4,000 ವಿದ್ಯಾರ್ಥಿಗಳನ್ನು ಕಳುಹಿಸಿ ಕೊಡುವುದಕ್ಕಾಗಿ 250ಕ್ಕೂ ಹಚ್ಚು ಬಸ್ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಸಿಎಂ ಅಶೋಕ್ ಗೆಹ್ಲೋಟ್ ತಿಳಿಸಿದರು.
ಆರ್ಥಿಕತೆ ಮತ್ತು ಆರೋಗ್ಯದ ಸಮಾನ ನಿರ್ವಹಣೆ
ಭಾರತ ಲಾಕ್ ಡೌನ್ ನಡುವೆ ರಾಜಸ್ಥಾನ ಸರ್ಕಾರವು ಆರ್ಥಿಕತೆ ಮತ್ತು ಆರೋಗ್ಯ ವಲಯಕ್ಕೆ ಶಕ್ತಿ ತುಂಬುವ ನಿಟ್ಟಿನಲ್ಲಿ ಸಮಾನ ಆದ್ಯತೆ ನೀಡಿ ಕೆಲಸ ಮಾಡುತ್ತಿದೆ. ರಾಜ್ಯದ ಜನರು ಮನೆಯಲ್ಲಿ ಇರುವ ಮೂಲಕ ಕೊರೊನಾ ವೈರಸ್ ವಿರುದ್ಧ ಹೋರಾಟಕ್ಕೆ ಕೈ ಜೋಡಿಸಬೇಕು. ಅಗತ್ಯವಾಗಿ ಹೊರಗೆ ಹೋಗಬೇಕಿದ್ದಲ್ಲಿ ಕಡ್ಡಾಯವಾಗಿ ಮಾಸ್ಕ್ ಗಳನ್ನು ಧರಿಸಬೇಕು. ಕಡ್ಡಾಯವಾಗಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು. ಪದೇ ಪದೆ ಕೈಗಳನ್ನು ಶುದ್ಧವಾಗಿ ತೊಳೆದುಕೊಳ್ಳುವುದರ ಜೊತೆಗೆ ರಸ್ತೆಗಳಲ್ಲಿ ಉಗುಳದಂತೆ ಪ್ರಜೆಗಳಲ್ಲಿ ಸಿಎಂ ಮನವಿ ಮಾಡಿಕೊಂಡಿದ್ದಾರೆ.
ರಾಜಸ್ಥಾನದಲ್ಲಿ ಸೋಂಕಿತರು ಮತ್ತು ಸಾವಿನ ಸಂಖ್ಯೆ?
ಭಾರತದಲ್ಲಿ ಕೊರೊನಾ ವೈರಸ್ ಸೋಂಕಿತ ರಾಜ್ಯಗಳ ಪೈಕಿ ರಾಜಸ್ಥಾನ ನಾಲ್ಕನೇ ಸ್ಥಾನದಲ್ಲಿದೆ. ರಾಜಸ್ಥಾನದಲ್ಲಿ ಕೊರೊನಾ ವೈರಸ್ ನಿಂದ ಇದುವರೆಗೂ 25ಕ್ಕೂ ಅಧಿಕ ಮಂದಿ ಪ್ರಾಣ ಬಿಟ್ಟಿದ್ದಾರೆ. ಇದುವರೆಗೂ 1,628ಕ್ಕೂ ಹೆಚ್ಚು ಜನರಿಗೆ ಸೋಂಕು ತಗಲಿದ್ದು, ಈ ಪೈಕಿ 205 ಜನರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಮಂಗಳವಾರ ಒಂದೇ ದಿನ 52ಕ್ಕೂ ಅಧಿಕ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ.