ಹೋಟೆಲ್ ಅಕ್ರಮ: ಮಾಜಿ ಸಚಿವ ಅರುಣ್ ಶೌರಿ ವಿರುದ್ಧ ಪ್ರಕರಣ ದಾಖಲಿಸಲು ಕೋರ್ಟ್ ಆದೇಶ
ಜೋಧಪುರ, ಸೆಪ್ಟೆಂಬರ್ 18: ಸರ್ಕಾರಿ ಸ್ವಾಮ್ಯದ ಐಷಾರಾಮಿ ಹೋಟೆಲ್ ಒಂದನ್ನು ಮಾರುಕಟ್ಟೆ ಮೌಲ್ಯಕ್ಕಿಂತ ತೀರಾ ಕಡಿಮೆ ಬೆಲೆಗೆ ಮಾರಾಟ ಮಾಡಿದ ಪ್ರಕರಣದಲ್ಲಿ ಕೇಂದ್ರದ ಮಾಜಿ ಸಚಿವ ಅರುಣ್ ಶೌರಿ ಅವರಿಗೆ ಸಂಕಷ್ಟ ಎದುರಾಗಿದೆ.
ರಾಜಸ್ಥಾನದ ಉದಯಪುರದಲ್ಲಿರುವ ಸರ್ಕಾರಿ ಸ್ವಾಮ್ಯದ ಲಕ್ಷ್ಮಿ ವಿಲಾಸ ಪ್ಯಾಲೇಸ್ ಪಂಚತಾರಾ ಹೋಟೆಲ್ ಮಾರಾಟದಲ್ಲಿ ಭಾರಿ ಪ್ರಮಾಣದ ಅಕ್ರಮ ನಡೆದಿದೆ ಎಂದು ಸಿಬಿಐ ವಿಶೇಷ ನ್ಯಾಯಾಲಯ ಹೇಳಿದೆ. ಈ ಪ್ರಕರಣದಲ್ಲಿ ಅರುಣ್ ಶೌರಿ, ನಿವೃತ್ತ ಅಧಿಕಾರಿ ಪ್ರದೀಪ್ ಬೈಜಾಲ್ ಮತ್ತು ಹೋಟೆಲ್ ಉದ್ಯಮಿ ಜೋತ್ಸ್ನಾ ಸೂರಿ ವಿರುದ್ಧ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಿ ಪ್ರಕರಣದ ಮರು ವಿಚಾರಣೆ ನಡೆಸುವಂತೆ ಕೋರ್ಟ್ ಸೂಚಿಸಿದೆ.
ರಫೇಲ್ ತೀರ್ಪು ನ್ಯಾಯಾಂಗದ ವಿಶ್ವಾಸಾರ್ಹತೆ ತಗ್ಗಿಸಿದೆ: ಅರುಣ್ ಶೌರಿ
ಅಟಲ್ ಬಿಹಾರಿ ವಾಜಪೇಯಿ ಅವರ ಸರ್ಕಾರದ ವೇಳೆ ಈ ಹೋಟೆಲ್ನಿಂದ ಬಂಡವಾಳ ಹಿಂತೆಗೆದ ಪ್ರಕ್ರಿಯೆ ಶುರುವಾಗಿತ್ತು. ಅಪರಿಚಿತ ಅಧಿಕಾರಿಗಳು ಮತ್ತು ಖಾಸಗಿ ವ್ಯಕ್ತಿಗಳು ಸಂಚು ನಡೆಸಿ 1999-2002ರ ಅವಧಿಯಲ್ಲಿ ಸರ್ಕಾರಕ್ಕೆ ಭಾರಿ ನಷ್ಟ ಉಂಟುಮಾಡಿದ್ದರು. ಒಂದು ಚದರ ಅಡಿಗೆ 45 ರೂ. ನಂತೆ ಮೌಲ್ಯಮಾಪನ ನಡೆಸಿ ಹೋಟೆಲ್ಅನ್ನು ಕೇವಲ 7.5 ಕೋಟಿ ರೂ.ಗೆ ಮಾರಾಟ ಮಾಡಲಾಗಿದೆ. ಆದರೆ ಇದರ ವಾಸ್ತವ ಮೌಲ್ಯ 252 ಕೋಟಿ ರೂ ಇದೆ. ಇದರಿಂದ ಸರ್ಕಾರಕ್ಕೆ ಸುಮಾರು 244 ಕೋಟಿ ರೂ. ನಷ್ಟವಾಗಿದೆ. ವಾಸ್ತವವಾಗಿ 45 ರೂ.ಗೆ ಈ ಹೋಟೆಲ್ನಲ್ಲಿರುವ ಒಂದು ಚಮಚ ಕೂಡ ಬರುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.
ತುರ್ತು ಪರಿಸ್ಥಿತಿಗಿಂತ ಕೆಟ್ಟ ಸ್ಥಿತಿ ಮೋದಿ ಆಡಳಿತದಲ್ಲಿದೆ: ಶೌರಿ
ಈ ಅಕ್ರಮ ವ್ಯವಹಾರದ ಬಗ್ಗೆ 2014ರಲ್ಲಿ ಸಿಬಿಐ ಪ್ರಕರಣ ದಾಖಲಿಸಿಕೊಂಡಿತ್ತು. ಹೋಟೆಲ್ ವ್ಯವಹಾರದಲ್ಲಿ ಭಾರಿ ಅಕ್ರಮವಾಗಿದೆ ಮತ್ತು ಸರ್ಕಾರದ ಬೊಕ್ಕಸಕ್ಕೆ ಅಪಾರ ನಷ್ಟವಾಗಿದೆ ಎಂಬ ಆರೋಪಕ್ಕೆ ಪ್ರಬಲ ಸಾಕ್ಷ್ಯಗಳಿಲ್ಲ ಎಂದು 2019ರಲ್ಲಿ ಕೋರ್ಟ್ಗೆ ತನಿಖೆಯನ್ನು ಸಮಾಪ್ತಿಗೊಳಿಸಿ ವರದಿ ಸಲ್ಲಿಸಲಾಗಿತ್ತು. ಈ ವರದಿಯನ್ನು ಜೋಧಪುರದ ವಿಶೇಷ ನ್ಯಾಯಾಲಯ ತಿರಸ್ಕರಿಸಿದೆ.