ಸದನದಲ್ಲಿ ಆಸನ ಬದಲು: ಹಂಗೇ ಒಂದು ಡೈಲಾಗ್ ಬಿಟ್ಟ ಸಚಿನ್ ಪೈಲಟ್
ಜೈಪುರ, ಆ 14: ಸುಮಾರು ಒಂದೂವರೆ ತಿಂಗಳ ಅತಂತ್ರದ ನಂತರ ರಾಜಸ್ಥಾನದಲ್ಲಿ ಅಶೋಕ್ ಗೆಹ್ಲೋಟ್ ಸರಕಾರ ವಿಶ್ವಾಸಮತವನ್ನು ಗೆದ್ದಿದೆ. ಆ ಮೂಲಕ, ಮಧ್ಯಪ್ರದೇಶದಲ್ಲಿ ನಡೆದ ರಾಜಕೀಯ ಬೆಳವಣಿಗೆ, ಇಲ್ಲೂ ಮರುಕಳಿಸಬಹುದು ಎನ್ನುವ ಲೆಕ್ಕಾಚಾರ ಉಲ್ಟಾ ಹೊಡೆದಿದೆ.
ದೆಹಲಿಯಲ್ಲಿ ಪ್ರಮುಖವಾಗಿ ಪ್ರಿಯಾಂಕ ಗಾಂಧಿ ಸಂಧಾನಸೂತ್ರ ಸಫಲವಾದ ನಂತರ, ಸಚಿನ್ ಪೈಲಟ್ ಅವರ ಬಂಡಾಯದ ಕಾವು ಕಮ್ಮಿಯಾಗಿತ್ತು. ಆಗಲೇ, ಗೆಹ್ಲೋಟ್ ಸರಕಾರ ಸೇಫ್ ಆಗಿತ್ತು. ಶುಕ್ರವಾರ ನಡೆದ ಅವಿಶ್ವಾಸ ಮಂಡನೆಯ ವೇಳೆ, ಹಾಜರಾಗಿದ್ದ ಸಚಿನ್ ಪೈಲಟ್ ಗೆ ಅಚ್ಚರಿಯೊಂದು ಕಾದಿತ್ತು.
ರಾಜಸ್ಥಾನ: ವಸುಂಧರಾ ರಾಜೇ ಮುಂದೆ ಮಂಡಿಯೂರಿದ ಬಿಜೆಪಿ ಹೈಕಮಾಂಡ್
ಬಂಡಾಯಕ್ಕೆ ಮುನ್ನ ಡಿಸಿಎಂ ಆಗಿದ್ದ ಪೈಲಟ್ ಗೆ ಸದನದಲ್ಲಿ ಸಿಎಂ ಗೆಹ್ಲೋಟ್ ಪಕ್ಕದ ಆಸನ ವ್ಯವಸ್ಥೆಯಿತ್ತು. ಆದರೆ, ಈಗ ಅವರಿಗೆ ಗೆಹ್ಲೋಟ್ ಗಿಂತ ದೂರದಲ್ಲಿ ಆಸನ ನೀಡಲಾಗಿತ್ತು. ಇದು, ಸಚಿನ್ ಪೈಲಟ್ ಅವರ ಆಶ್ಚರ್ಯಕ್ಕೂ ಕಾರಣವಾಗಿತ್ತು.
ಆ ವೇಳೆ ಕೊಂಚ ವಿಚಲಿತರಾದ ಪೈಲಟ್, "ನನಗೆ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಆಸನ ವ್ಯವಸ್ಥೆ ಮಾಡಲಾಗಿದೆ. ಎರಡು ನಿಮಿಷ ಈ ಬಗ್ಗೆ ಆಲೋಚನೆ ಮಾಡಿದೆ. ಇದು ಒಂದು ರೀತಿ ಗಡಿಯಿದ್ದಂತೆ"ಎಂದು ಹೇಳಿದರು.
"ಹೆಚ್ಚಾಗಿ ಬಾರ್ಡರ್ ನಲ್ಲಿ ಧೈರ್ಯಶಾಲಿ ಯೋಧರನ್ನು ನಿಯೋಜನೆ ಮಾಡಲಾಗುತ್ತದೆ. ದೆಹಲಿಯಲ್ಲಿ ವೈದ್ಯರನ್ನು ಸಂಪರ್ಕಿಸಿದ್ದೇವೆ. ನಾವೆಲ್ಲಾ ಗುಣಮುಖರಾಗಿದ್ದೇವೆ, ನಮ್ಮ ಪಕ್ಷವನ್ನು ಮತ್ತೆ ಸೇರಿದ್ದೇವೆ"ಎಂದು ಸಚಿನ್ ಪೈಲಟ್ ಹೇಳಿದ್ದಾರೆ.
ರಾಜಸ್ಥಾನ ವಿಧಾನಸಭೆಯಲ್ಲಿ ಗೆಹ್ಲೋಟ್ ಗೆ ಬಹುಮತ ಸಾಬೀತು ಮಾಡಲು ಅಗತ್ಯವಿದ್ದ ನಂಬರ್ 101. ಸರಕಾರದ ಪರವಾಗಿ 125 ಶಾಸಕರು ಬೆಂಬಲ ಸೂಚಿಸಿದ್ದರು. ಆ ಮೂಲಕ, ನಿರಾಯಾಸವಾಗಿ ಸರಕಾರ ಸೇಫ್ ಆಗಿತ್ತು.