ರಾಜಸ್ಥಾನಕ್ಕೆ ಬಂದರೂ ಪೈಲಟ್ ಕಚೇರಿಗೆ ಕಾಲಿಡುವಂತಿಲ್ಲ!
ಜೈಪುರ, ಜುಲೈ 13: ರಾಜಸ್ಥಾನದಲ್ಲಿ ರಾಜಕೀಯ ಅಸ್ಥಿರತೆ, ಆಡಳಿತ ಪಕ್ಷ ಕಾಂಗ್ರೆಸ್ಸಿನ ಬಿಕ್ಕಟ್ಟು ಯಾವ ಫಲಿತಾಂಶ ಹೊರ ಹಾಕುವುದೋ ಗೊತ್ತಿಲ್ಲ. ಆದರೆ, ಬಂಡಾಯವೆದ್ದಿರುವ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ಅವರು ಜೈಪುರದ ತಮ್ಮ ಕಚೇರಿಗೆ ಕಾಲಿಡದಂಥ ಪರಿಸ್ಥಿತಿ ನಿರ್ಮಾಣವಾಗಿದೆ.
Recommended Video
ದೆಹಲಿಯಲ್ಲಿ ಬೀಡುಬಿಟ್ಟಿರುವ ಸಚಿನ್ ಮತ್ತೆ ರಾಜಸ್ಥಾನಕ್ಕೆ ಹಿಂತಿರುಗುವ ವೇಳೆಗೆ ಪಕ್ಷ ಬದಲಾಯಿಸಿ ಕಮಲ ಪಕ್ಷದ ಬೆಂಬಲದೊಂದಿಗೆ ಮುಂದಿನ ಸಿಎಂ ಗದ್ದುಗೆಯಲ್ಲಿರುತ್ತಾರೆ ಎಂದು ಅಭಿಮಾನಿಗಳು ನಂಬಿದ್ದಾರೆ. ಆದರೆ, ಜೈಪುರದಲ್ಲಿ ಸಚಿನ್ ಪೈಲಟ್ ಕಚೇರಿಗೆ ಕೊವಿಡ್ 19 ಹೊಡೆತ ಬಿದ್ದಿದೆ. ಕಚೇರಿಯ ಇಬ್ಬರು ಸಿಬ್ಬಂದಿಗೆ ಕೊರೊನಾವೈರಸ್ ಸೋಂಕು ಪತ್ತೆಯಾಗಿದೆ. ಹೀಗಾಗಿ, ಕಚೇರಿ ಸಂಪೂರ್ಣ ಬಂದ್ ಆಗಿದ್ದು, ಪೈಲಟ್ ಕಚೇರಿ ಪ್ರವೇಶಿಸುವಂತಿಲ್ಲ.
ಸಚಿನ್ಗೆ ಸಿಂಧಿಯಾ ಸಿಂಪಥಿ, ಕಮಲ ಪಕ್ಷದತ್ತ ಪೈಲಟ್ ಪಯಣ?
ಸಚಿನ್ ಪೈಲಟ್ ಕಚೇರಿಯ ಪಂಚಾಯತ್ ರಾಜ್ ಹಾಗೂ ಗ್ರಾಮೀಣ ಅಭಿವೃದ್ಧಿ ಕೇಂದ್ರ ಕಚೇರಿ ಸಿಬ್ಬಂದಿಗೆ ಕೊವಿಡ್ 19 ಪಾಸಿಟಿವ್ ಆಗಿದ್ದು, ಜುಲೈ 14ರ ತನಕ ಬಂದ್ ಮಾಡಲು ಪಾಲಿಕೆ ಸೂಚಿಸಿದೆ. ಸದ್ಯಕ್ಕೆ ಆನ್ ಲೈನ್, ದೂರವಾಣಿ ಮೂಲಕ ಮಾತ್ರ ಸಂಪರ್ಕ ಸಾಧ್ಯ ಎಂದು ಅಧಿಕೃತವಾಗಿ ಪ್ರಕಟಿಸಲಾಗಿದೆ.
ಜೈಪುರದಲ್ಲಿ ಒಟ್ಟು 2857 ಕೊರೊನಾವೈರಸ್ ಪ್ರಕರಣಗಳು ಕಾಣಿಸಿಕೊಂಡಿದ್ದು, 2248 ಮಂದಿ ಗುಣಮುಖರಾಗಿದ್ದಾರೆ. 149 ಮಂದಿ ಅಸುನೀಗಿದ್ದಾರೆ. ರಾಜಸ್ಥಾನದಲ್ಲಿ 23748 ಪ್ರಕರಣಗಳಿದ್ದು, 503 ಮಂದಿ ಮೃತಪಟ್ಟಿದ್ದರೆ, 17 869 ಮಂದಿ ಗುಣಮುಖರಾಗಿದ್ದಾರೆ.
ಈ ನಡುವೆ ದೆಹಲಿಯಲ್ಲಿ ಬಿಜೆಪಿ ಹಿರಿಯ ಮುಖಂಡರ ಜೊತೆ ಪೈಲಟ್ ಮಾತುಕತೆ ನಡೆಸಿದ್ದು, ಅಧ್ಯಕ್ಷ ಜೆಪಿ ನಡ್ಡಾ ಸಮ್ಮುಖದಲ್ಲಿ ಬಿಜೆಪಿ ಸೇರಲಿದ್ದಾರೆ ಎಂಬ ಸುದ್ದಿಯೂ ಹರಿದಾಡುತ್ತಿದೆ. ಸಚಿನ್ ಅವರು 30 ಕ್ಕೂ ಅಧಿಕ ಕಾಂಗ್ರೆಸ್ ಹಾಗೂ ಪಕ್ಷೇತರ ಶಾಸಕರ ಬೆಂಬಲ ಹೊಂದಿದ್ದಾರೆ, ಅಶೋಕ್ ಸರ್ಕಾರವನ್ನು ಉರುಳಿಸುತ್ತಾರೆ ಎಂಬ ಸುದ್ದಿ ಏನಾಗಲಿದೆ ಕಾದು ನೋಡಬೇಕಿದೆ.
ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ರಾಜ್ಯಸಭಾ ಚುನಾವಣೆ ಸಮಯದಿಂದಲೂ ಕಾಂಗ್ರೆಸ್ ಸರ್ಕಾರವನ್ನು ಕೆಡವಲು ಬಿಜೆಪಿ ಪ್ರಯತ್ನ ನಡೆಸುತ್ತಿದೆ ಎಂದು ಆರೋಪ ಮಾಡುತ್ತಿದ್ದಾರೆ. ಈಗ ಮೂವರು ಪಕ್ಷೇತರ ಶಾಸಕರಿಗೆ 25 ರಿಂದ 30 ಕೋಟಿ ಹಣದ ಆಮಿಷವೊಡ್ಡಿದ್ದಾರೆ ಎಂದು ಆರೋಪ ಮಾಡಲಾಗಿದ್ದು, ಈ ಕುರಿತು ತನಿಖೆ ಆರಂಭವಾಗಿದೆ. ಈ ಪ್ರಕರಣಕ್ಕೂ ಪೈಲಟ್ ಗೂ ನಂಟಿದೆ ಎಂದು ಕೇಳಿ ಬಂದಿದ್ದರಿಂದ ಸಚಿನ್ ಬಂಡಾಯವೆದ್ದಿದ್ದಾರೆ.