ನನ್ನ ಮಗನ ಸೋಲಿಗೆ ಪೈಲಟ್ ಕಾರಣ: ಅಶೋಕ್ ಗೆಹ್ಲೋಟ್
ಜೈಪುರ, ಜೂನ್ 04: ರಾಜಸ್ಥಾನ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಎಲ್ಲಾ 25 ಸ್ಥಾನಗಳಲ್ಲೂ ಸೋಲನುಭವಿಸಿದ ನಂತರ ಕಾಂಗ್ರೆಸ್ ನಲ್ಲೇ ಜಟಾಪಟಿ ಆರಂಭವಾಗಿದೆ.
ಸೋಲಿಗೆ ಒಬ್ಬರನ್ನೊಬ್ಬರು ಬೊಟ್ಟುಮಾಡುವುದಕ್ಕೆ ಆರಂಭಿಸಿದ್ದು, ಇದು ಕಾಂಗ್ರೆಸ್ ಗೆ ಭಾರೀ ತಲೆನೋವಾಗಿ ಪರಿಣಮಿಸಿದೆ.
ಮಗನಿಗಾಗಿ ಪಕ್ಷದ ಹಿತಾಸಕ್ತಿ ಬಲಿಕೊಟ್ಟ ಅಶೋಕ್ ಗೆಹ್ಲೋಟ್ ಸಂಕಷ್ಟದಲ್ಲಿ
ಜೋಧಪುರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ವೈಭವ್ ಗೆಹ್ಲೋಟ್ ಅವರನ್ನು ಬಿಜೆಪಿಯ ಹಾಲಿ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ಅವರ ವಿರುದ್ಧ ಕಣಕ್ಕಿಳಿಸಲಾಗಿತ್ತು. ಆದರೆ ಅವರು ಸುಮಾರು ನಾಲ್ಕು ಲಕ್ಷಕ್ಕೂ ಹೆಚ್ಚು ಮತಗಳ ಭಾರೀ ಅಂತರದಿಂದ ಸೋಲನುಭವಿಸಿದ್ದರು.
"ನನ್ನ ಮಗನನ್ನು ಜೋಧಪುರದಿಂದ ಚುನಾವಣೆಗೆ ನಿಲ್ಲಿಸುವ ಸಲಹೆ ನೀಡಿದ್ದೇ ಸಚಿನ್ ಪೈಲಟ್. ಅವರು ಭಾರೀ ಅಂತರದಿಂದ ಗೆಲ್ಲುತ್ತಾರೆ ಎಂಬ ವಿಶ್ವಾಸವನ್ನೂ ಪೈಲಟ್ ನೀಡಿದ್ದರು. ಆದರೆ ವೈಭವ್ ಸೋತಿರುವುದಕ್ಕೆ ಕಾರಣ ಸಚಿನ್ ಪೈಲಟ್. ನನ್ನ ಮಗನ ಸೋಲಿನ ಜವಾಬ್ದಾರಿಯನ್ನು ಸಚಿನ್ ಪೈಲಟ್ ಅವರೇ ಹೊತ್ತುಕೊಳ್ಳಬೇಕು ಎಂದು ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.
ರಾಜಸ್ತಾನದಲ್ಲಿ ಅಲುಗಾಡುತ್ತಿದೆ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರಕಾರ
ಲೋಕಸಭೆ ಚುನಾವಣೆಯ ಸೋಲಿನ ಹತಾಶೆಯಿಂದ ಹೊರಬರದ ಕಾಂಗ್ರೆಸ್ಸಿಗೆ, ತನ್ನ ಆಡಳಿತವಿರುವ ಕೆಲವೇ ಪ್ರಮುಖ ರಾಜ್ಯಗಳಲ್ಲೊಂದಾದ ರಾಜಸ್ಥಾನದಲ್ಲಿ ನಾಯಕರ ನಡುವಿನ ಅಸಮಾಧಾನ, ಭಿನ್ನಾಭಿಪ್ರಾಯವನ್ನು ತಹಬಂದಿಗೆ ತರುವುದೇ ಒಂದು ಸವಾಲಾಗಿ ಪರಿಣಮಿಸಿದೆ.
ಗೆಹ್ಲೋಟ್ ಪುತ್ರನನ್ನು ಚುನಾವಣೆಗೆ ನಿಲ್ಲಿಸಲು ಕಾಂಗ್ರೆಸ್ ನಲ್ಲೇ ವಿರೋಧವಿತ್ತಾದರೂ, ಹಠ ಬಿಡದ ಗೆಹ್ಲೋಟ್ ಮಗನಿಗೆ ಟಿಕೆಟ್ ಗಿಟ್ಟಿಸಿಕೊಂಡಿದ್ದರು.