ರಾಜಸ್ಥಾನ: ರಾಮ ಮಂದಿರ ನಿರ್ಮಾಣಕ್ಕೆ 1 ರೂಪಾಯಿ ಸಂಗ್ರಹ!
ಜೈಪುರ್, ಫೆಬ್ರವರಿ.03: ರಾಜಸ್ಥಾನದಲ್ಲಿ ಯುವ ಕಾಂಗ್ರೆಸ್ ಘಟಕ ಮತ್ತು ಭಾರತದ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟವು "ಶ್ರೀರಾಮನ ಹೆಸರಿನಲ್ಲಿ 1 ರೂಪಾಯಿ ಸಂಗ್ರಹ" ಅಭಿಯಾನ ನೆಡಸುತ್ತಿದೆ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ವಿದ್ಯಾರ್ಥಿಗಳಿಂದ 1 ರೂಪಾಯಿ ಸಂಗ್ರಹಿಸಲಾಗುತ್ತಿದೆ.
ಜೈಪುರ್ ಕಾಲೇಜ್ ವೊಂದರಲ್ಲಿ ಭಾರತದ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ ರಾಜ್ಯಾಧ್ಯಕ್ಷ ಅಭಿಷೇಕ್ ಚೌಧರಿ, ಶ್ರೀರಾಮನ ಹೆಸರಿನಲ್ಲಿ 1 ರೂ. ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿದರು. ಬಿಜೆಪಿ ಮತ್ತು ಎಬಿವಿಪಿ ಸೇರಿಕೊಂಡು ದೇವಸ್ಥಾನ ನಿರ್ಮಾಣದ ಹೆಸರಿನಲ್ಲಿ ಜನರನ್ನು ಲೂಟಿ ಹೊಡೆಯುತ್ತಿದ್ದಾರೆ ಎಂದು ಆರೋಪಿಸಿದರು.
ರಾಮ ಮಂದಿರ ನಿರ್ಮಾಣ ಯಾವಾಗ ಪೂರ್ಣ, ತಗುಲುವ ವೆಚ್ಚವೆಷ್ಟು?
ಶ್ರೀರಾಮ ಮಂದಿರವು ನಂಬಿಕೆಗೆ ಸಂಬಂಧಿಸಿದ ವಿಷಯವಾಗಿದ್ದು, ದೇವಸ್ಥಾನ ಕಟ್ಟುವ ಹೆಸರಿನಲ್ಲಿ ಜನರಿಂದ ಲಕ್ಷಾಂತರ ರೂಪಾಯಿ ಸಂಗ್ರಹಿಸುತ್ತಿರುವುದು ಸರಿಯಲ್ಲ. ಇದರ ವಿರುದ್ಧ ನಮ್ಮ ಅಭಿಯಾನ ಮುಂದಿನ 15 ದಿನಗಳವರೆಗೂ ನಡೆಯಲಿದೆ. ಒಬ್ಬರಿಂದ 1 ರೂಪಾಯಿಯಂತೆ ಸಂಗ್ರಹಿಸಿದ ಹಣವನ್ನು ರಾಮ ಮಂದಿರ ಟ್ರಸ್ಟ್ ಗೆ ನೀಡಲಾಗುತ್ತದೆ ಎಂದು ಭಾರತದ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ ರಾಜ್ಯಾಧ್ಯಕ್ಷ ಅಭಿಷೇಕ್ ಚೌಧರಿ ತಿಳಿಸಿದ್ದಾರೆ.
ಎನ್ಎಸ್ ಯುಐ ಅಭಿಯಾನದ ಗುರಿ:
ಶ್ರೀರಾಮ ಮಂದಿರವು ಇಡೀ ಭಾರತಕ್ಕೆ ಸಂಬಂಧಿಸಿದ್ದಾಗಿದೆಯೇ ಹೊರತೂ ನಿರ್ದಿಷ್ಟ ಗುಂಪು ಅಥವಾ ಸಮುದಾಯಕ್ಕೆ ಸೇರಿದ್ದಲ್ಲ ಎಂಬುದನ್ನು ಸಾರುವ ಉದ್ದೇಶದಿಂದ ಶ್ರೀರಾಮನ ಹೆಸರಿನಲ್ಲಿ 1 ರೂಯ ಸಂಗ್ರಹ ಅಭಿಯಾನ ಆರಂಭಿಸಲಾಗಿದೆ. ಭಾರತದ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ ಪ್ರತಿಯೊಬ್ಬ ಸದಸ್ಯರು ರಾಜ್ಯದ ಪ್ರಮುಖ ಶಿಕ್ಷಣ ಸಂಸ್ಥೆಗಳು, ಕಾಲೇಜುಗಳಿಗೆ ತೆರಳಿ ಹಣ ಸಂಗ್ರಹಿಸುತ್ತಾರೆ ಎಂದು ಅಭಿಷೇಕ್ ಚೌಧರಿ ತಿಳಿಸಿದರು.
ರಾಮ ಮಂದಿರಕ್ಕಾಗಿ ವಿಹೆಚ್ ಪಿ ನಿಧಿ ಸಂಗ್ರಹ:
ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಕ್ಕಾಗಿ ವಿಶ್ವ ಹಿಂದೂ ಪರಿಷತ್ ಈಗಾಗಲೇ ನಿಧಿ ಸಂಗ್ರಹ ಅಭಿಯಾನವನ್ನು ಆರಂಭಿಸಿದೆ. ಜನವರಿ.15ರಿಂದ ಫೆಬ್ರವರಿ.27ರವರೆಗೂ 5.25 ಲಕ್ಷ ಗ್ರಾಮಗಳ 13 ಕೋಟಿ ಕುಟುಂಬಗಳ 65 ಕೋಟಿ ಹಿಂದೂಗಳನ್ನು ಭೇಟಿ ಮಾಡಿ ನಿಧಿ ಸಂಗ್ರಹಿಸುವ ಗುರಿ ಇಟ್ಟುಕೊಳ್ಳಲಾಗಿದೆ. ಕಳೆದ ಆಗಸ್ಟ್.05ರಂದು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭೂಮಿ ಪೂಜೆ ನೆರವೇರಿಸಿದ್ದರು.