ರಾಜಸ್ತಾನ ಚುನಾವಣೆಯಲ್ಲಿ ಕ್ಷೀಣಿಸುತ್ತಿದೆ ರಾಜ ಮನೆತನದವರ ಪ್ರಭಾವ
ರಾಜಸ್ತಾನ ವಿಧಾನಸಭಾ ಚುನಾವಣೆಗಳಲ್ಲಿ ರಾಜ ಮನೆತನದವರು ಪಾಲ್ಗೊಳ್ಳುವುದು ಕ್ರಮೇಣ ಕಡಿಮೆ ಆಗುತ್ತಾ ಬರುತ್ತಿದೆ. ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಏಳು ರಾಜ ಮನೆತನದವರು ಸ್ಪರ್ಧೆಯಲ್ಲಿದ್ದರು. ಈ ಬಾರಿ ಆ ಸಂಖ್ಯೆ ಐದಕ್ಕೆ ಇಳಿದಿದೆ. ಅದರಲ್ಲೂ ಬಹುತೇಕ ಮಂದಿ ಭಾರತೀಯ ಜನತಾ ಪಕ್ಷದಿಂದ ಸ್ಪರ್ಧಿಸುತ್ತಿದ್ದಾರೆ.
ಐದು ರಾಜ ಮನೆತನದವರ ಸ್ಪರ್ಧೆಯ ಪೈಕಿ ನಾಲ್ವರು ಬಿಜೆಪಿಯಿಂದ ಹಾಗೂ ಒಬ್ಬರು ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸುತ್ತಿದ್ದಾರೆ. ದೇಶದಲ್ಲಿ ಪ್ರಜಾಪ್ರಭುತ್ವ ಆದರೂ ರಾಜಸ್ತಾನದಲ್ಲಿ ರಾಜ ಮನೆತನಗಳ ಬಗೆಗಿನ ಪ್ರೀತಿ ಮಾತ್ರ ಹಾಗೇ ಇದೆ. ಆ ಕಾರಣಕ್ಕೆ ರಾಜ ಮನೆತನದವರ ಭಾಗವಹಿಸುವಿಕೆ ಇಲ್ಲದೆ ಯಾವುದೇ ಚುನಾವಣೆ ನಡೆದಿಲ್ಲ.
ರಾಜಸ್ತಾನ ಜನತೆಗೆ ಭರಪೂರ ಭರವಸೆ ನೀಡಿದ ಭಾಜಪ, ಎಂಥ ಆಶ್ವಾಸನೆಗಳು!
ರಾಜ ಮನೆತನದವರು 1962, 1967 ಮತ್ತು 1972ರಲ್ಲಿ ಚುನಾವಣೆಗೆ ಭಾಗವಹಿಸಿದ್ದರು. ಅದೂ ತಮ್ಮದೇ ರಾಜಕೀಯ ಪಕ್ಷ ಸ್ವತಂತ್ರ್ ಪಕ್ಷ ರಚಿಸಿ, 1962ರಲ್ಲಿ 36 ಸ್ಥಾನ ಗಳಿಸಿದ್ದರು. 1967ರಲ್ಲಿ 49 ಹಾಗೂ 1972ರಲ್ಲಿ 11 ಸ್ಥಾನ ಪಡೆದಿದ್ದರು. ರಾಜಸ್ತಾನದ ಎಲ್ಲ ದೊಡ್ಡ ರಾಜ ಮನೆತನದವರೂ ಒಂದಲ್ಲ ಒಂದು ಸಮಯದಲ್ಲಿ ಚುನಾವಣೆಯ ಭಾಗವಾಗಿದ್ದಾರೆ.
ವಿವಿಧ ರಾಜ ಮನೆತನದವರು ಸ್ಪರ್ಧೆಯಲ್ಲಿ
ಜೈಪುರದ ಮಾಜಿ ಮಹಾರಾಣಿ ಗಾಯತ್ರಿ ದೇವಿ ಜೈಪುರ್ ನಿಂದ ಮೂರು ಬಾರಿ ಸಂಸದೆಯಾಗಿ ಆಯ್ಕೆಯಾಗಿದ್ದರು. ಅವರ ಮಗ ಭವಾನಿ ಸಿಂಗ್ ಲೋಕಸಭೆಗೆ ಸ್ಪರ್ಧಿಸಿ, ಸೋತರು. ಜೋಧ್ ಪುರ್ ನ ಗಜ್ ಸಿಂಗ್, ಅರವಿಂದ್ ಸಿಂಗ್ ಮೇವಾಡ್ ಆಫ್ ಉದಯ್ ಪುರ್, ಬಿಕನೇರ್ ನ ಕರ್ಣಿ ಸಿಂಗ್, ಆಳ್ವಾರ್ ನ ಮಹಾರಾಣಿ ಮಹೇಂದ್ರ ಕುಮಾರಿ ಕೂಡ ಲೋಕಸಭೆಗೆ ಸ್ಪರ್ಧಿಸಿದ್ದರು. ಜೈಪುರ್, ಆಳ್ವಾರ್, ಭರತ್ ಪುರ್, ಧೌಲ್ ಪುರ್, ಕೋಟಾ, ಬಿಕನೇರ್, ಬಿಜೌಲಿಯಾ ಮತ್ತು ಕರೌಲಿಯ ರಾಜ ಮನೆತನದವರು ರಾಜಸ್ತಾನದ ಚುನಾವಣೆ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ.
ಕಳೆದ ಬಾರಿ ಚುನಾವಣೆಯಲ್ಲಿ ಏಳು ಕಡೆ ಆಯ್ಕೆ
ಕಳೆದ ಬಾರಿ ಚುನಾವಣೆಯಲ್ಲಿ ರಾಜಸ್ತಾನದ ಇನ್ನೂರು ವಿಧಾನಸಭಾ ಕ್ಷೇತ್ರದಲ್ಲಿ ಏಳು ಕಡೆ ರಾಜ ಮನೆತನದವರು ಶಾಸಕರಾಗಿ ಆಯ್ಕೆಯಾಗಿದ್ದರು. ಅದರಲ್ಲಿ ಧೌಲ್ ಪುರ್ ರಾಜ ಮನೆತನದ ಸೊಸೆ ಮತ್ತು ಸದ್ಯದ ಮುಖ್ಯಮಂತ್ರಿ ವಸುಂಧರಾ ರಾಜೇ, ಭರತ್ ಪುರ್ ರಾಜ ಮನೆತನಕ್ಕೆ ಸೇರಿದ ಹಾಗೂ ಪ್ರವಾಸೋದ್ಯಮ ಸಚಿವರಾದ ಕೃಷ್ಣೇಂದ್ರ ಕೌರ್ ದೀಪಾ, ಭರತ್ ಪುರ್ ರಾಜ ಕುಟುಂಬದ ವಿಶ್ವೇಂದ್ರ ಸಿಂಗ್, ಜೈಪುರ್ ರಾಜ ಮನೆತನದ ದಿಯಾ ಕುಮಾರಿ, ಕರೌಲಿ ರಾಜ ಮನೆತನದ ಸೊಸೆ ರೋಹಿಣಿ ಕುಮಾರಿ, ಬಿಕನೇರ್ ರಾಜ ಕುಟುಂಬದ ಮಗಳು ಸಿದ್ಧಿ ಕುಮಾರಿ ಹಾಗೂ ಬಿಜೌಲಿಯಾ ರಾಜ ಮನೆತನದ ಸೊಸೆ ಕೀರ್ತಿ ಕುಮಾರಿ ಒಳಗೊಂಡಿದ್ದರು.
ಶಮನವಾಗದ ಬಂಡಾಯ, ಕಾಂಗ್ರೆಸ್ಸಿಗೆ ಕಾಂಗ್ರೆಸ್ಸಿಗರಿಂದಲೇ ತಾಪತ್ರಯ!
ಮೂರು ರಾಜ ಕುಟುಂಬಗಳು ಸಕ್ರಿಯವಾಗಿಲ್ಲ
ಆದರೆ, ಈ ಬಾರಿ ಮೂರು ರಾಜ ಕುಟುಂಬಗಳು ಸಕ್ರಿಯವಾಗಿಲ್ಲ. ಜೈಪುರ್ ಅ ದಿಯಾ ಕುಮಾರಿ, ಕರೌಲಿಯ ರೋಹಿಣಿ ಕುಮಾರಿ ಅವರಿಗೆ ಟಿಕೆಟ್ ನೀಡಿಲ್ಲ. ಆದರೂ ದಿಯಾ ಕುಮಾರಿ ಪಕ್ಷದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಕೀರ್ತಿ ಕುಮಾರಿ ನಿಧನರಾಗಿದ್ದಾರೆ. ಆದರೆ ಕೋಟಾ ರಾಜ ಕುಟುಂಬದ ಸೊನೆ ಲಡ್ ಪುರ ಕ್ಷೇತ್ರದಿಂದ ಸ್ಪರ್ಧೆಗೆ ಇಳಿದಿದ್ದಾರೆ. ಆಕೆಯ ಪತಿ ಕಾಂಗ್ರೆಸ್ ನ ಸಂಸದರಾಗಿದ್ದರು. ಧೌಲ್ ಪುರ್ ನ ವಸುಂಧರಾ ರಾಜೇ, ಬಿಕನೇರ್ ನ ಸಿದ್ಧಿ ಕುಮಾರಿ, ಭರತ್ ಪುರ್ ನ ವಿಶ್ವೇಂದ್ರ ಸಿಂಗ್, ಕೃಷ್ಣೇಂದ್ರ ಹಾಗೂ ದೀಪಾ ಕುಮಾರಿ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ.
ರಾಜಸ್ಥಾನ : ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್ v/s ಬಿಜೆಪಿ ಸಮರ
ರಾಜಸ್ತಾನ ಚುನಾವಣೆ ದಿನಾಂಕ ಮತ್ತಿತರ ವಿವರಗಳು
ಡಿಸೆಂಬರ್ 7ನೇ ತಾರೀಕು ರಾಜಸ್ತಾನ ವಿಧಾನಸಭಾ ಚುನಾವಣೆ ನಡೆಯಲಿದೆ. ಅದಾಗಿ ನಾಲ್ಕು ದಿನಕ್ಕೆ ಇತರ ನಾಲ್ಕು ರಾಜ್ಯಗಳ ಜತೆಗೆ ಈ ರಾಜ್ಯದ ಫಲಿತಾಂಶವೂ ಬರಲಿದೆ. ಸದ್ಯಕ್ಕೆ ಬಿಜೆಪಿ ಆಡಳಿತಾರೂಢ ಪಕ್ಷವಾಗಿದೆ. 200 ಸದಸ್ಯ ಬಲದ ರಾಜಸ್ತಾನದಲ್ಲಿ ಅಧಿಕಾರದ ಗದ್ದುಗೆಗೆ ಏರಲು 101 ಸ್ಥಾನಗಳಲ್ಲಿ ಜಯ ಪಡೆಯಬೇಕಾಗಿದೆ. ಆಡಳಿತ ವಿರೋಧಿ ಅಲೆಯೂ ಸೇರಿದಂತೆ ವಿವಿಧ ಕಾರಣಗಳಿಗಾಗಿ ಬಿಜೆಪಿಗೆ ಪೂರಕವಾದ ವಾತಾವರಣ ಇಲ್ಲ ಎಂಬ ಅಭಿಪ್ರಾಯ ತಜ್ಞರಲ್ಲಿ ಇದೆ. ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಕೂಡ ಈ ಬಾರಿ ಕಾಂಗ್ರೆಸ್ ಅಧಿಕಾರ ಹಿಡಿಯಲಿದೆ ಎಂದು ಭವಿಷ್ಯ ನುಡಿಯಲಾಗಿದೆ.