ರಾಜಸ್ಥಾನ: ತುರ್ತು ಅಧಿವೇಶನಕ್ಕೆ ಸಿಎಂ ಗೆಹ್ಲೋಟ್ ಒತ್ತಡದ ಹಿಂದಿನ ಅಸಲಿ ಗುಟ್ಟು
ಜೈಪುರ, ಜುಲೈ 25: ಬಂಡಾಯ ನಾಯಕ ಸಚಿನ್ ಪೈಲಟ್ ಮತ್ತು ರಾಜಸ್ಥಾನದ ಸಿಎಂ ಅಶೋಕ್ ಗೆಹ್ಲೋಟ್ ನಡುವಿನ ರಾಜಕೀಯ ಮೇಲಾಟ, ಹೊಸ ಸ್ವರೂಪ ಪಡೆದಿದ್ದು, ಈಗ ಅದು ಗೆಹ್ಲೋಟ್ ಮತ್ತು ರಾಜ್ಯಪಾಲರ ನಡುವಿನ ಸಂಘರ್ಷವಾಗಿ ತಿರುಗಿ ಕೊಂಡಿದೆ.
Recommended Video
ತುರ್ತು ಅಧಿವೇಶನದ ಕರೆದು, ಬಹುಮತ ಸಾಬೀತು ಪಡಿಸಲು ಅನುಮತಿ ನೀಡಬೇಕೆಂದು ಗೆಹ್ಲೋಟ್ ಮನವಿಗೆ, ರಾಜ್ಯಪಾಲರಾದ ಕಲರಾಜ್ ಮಿಶ್ರಾ, ಇದುವರೆಗೂ ಸಕಾರಾತ್ಮಕವಾಗಿ ಸ್ಪಂದಿಸದೇ ಇರುವುದು, ಸಿಎಂಗೆ ತಲೆನೋವಾಗಿ ಪರಿಣಮಿಸಿದೆ.
ರಾಜಕೀಯ ಬಿಕ್ಕಟ್ಟಿನ ನಡುವೆ ರಾಜಸ್ಥಾನದಲ್ಲಿ ಕೊರೊನಾ ಸ್ಥಿತಿ ಹೇಗಿದೆ?
ಗುರುವಾರ (ಜು 23) ರಾಜ್ಯಪಾಲರನ್ನು ಭೇಟಿಯಾಗಿದ್ದ ಸಿಎಂ ಗೆಹ್ಲೋಟ್, ಅಧಿವೇಶನ ಕರೆಯುವಂತೆ ಮನವಿ ಮಾಡಿದ್ದರೂ, ಇದಕ್ಕೆ ರಾಜ್ಯಪಾಲರು ಗ್ರೀನ್ ಸಿಗ್ನಲ್ ನೀಡಿರಲಿಲ್ಲ. ಮತ್ತೆ ನೂರು ಶಾಸಕರೊಂದಿಗೆ ಗೆಹ್ಲೋಟ್, ರಾಜಭವನಕ್ಕೆ ತೆರಳಿ, ಶಕ್ತಿಪ್ರದರ್ಶನ ಮಾಡಿದ್ದರು.
ಇದಕ್ಕೂ ರಾಜ್ಯಪಾಲರಿಂದ ಪ್ರತಿಕ್ರಿಯೆ ಬರದಿದ್ದಾಗ, ರಾಜಭವನದಲ್ಲೇ ಗೆಹ್ಲೋಟ್ ಬೆಂಬಲಿತ ಶಾಸಕರು ಧರಣಿ ಕೂತಿದ್ದರು. ಇದಕ್ಕೆ, ರಾಜ್ಯಪಾಲರು, ಸಿಎಂಗೆ ಪತ್ರ ಬರೆದು ಬೇಸರ ವ್ಯಕ್ತಪಡಿಸಿದ್ದರು. ತುರ್ತು ಅಧಿವೇಶನಕ್ಕೆ ಗೆಹ್ಲೋಟ್ ಪಟ್ಟು ಹಿಡಿದಿರುವ ಹಿಂದಿನ ಅಸಲಿಯತ್ತು ಏನು?
ಸರ್ವೋಚ್ಚ ನ್ಯಾಯಾಲಯದಲ್ಲಿ ಜುಲೈ 27 ವಿಚಾರಣೆಗೆ
ಸಚಿನ್ ಪೈಲಟ್ ಮತ್ತು ಅವರ ಬಣದಲ್ಲಿರುವ ಹದಿನೆಂಟು ಶಾಸಕರ ಅನರ್ಹತೆಯ ವಿಚಾರದ ಅರ್ಜಿ, ಸರ್ವೋಚ್ಚ ನ್ಯಾಯಾಲಯದಲ್ಲಿ ಸೋಮವಾರದಂದು (ಜುಲೈ 27) ವಿಚಾರಣೆಗೆ ಬರಲಿದೆ. ಅದಕ್ಕೂ ಮುನ್ನ, ಸದನದಲ್ಲಿ ಬಹುಮತ ಸಾಬೀತು ಪಡಿಸಿದರೆ, ಮುಂದಿನ ಆರು ತಿಂಗಳು, ಸರಾಗವಾಗಿ ಸರಕಾರವನ್ನು ನಡೆಸಿಕೊಂಡು ಹೋಗಬಹುದು ಎನ್ನುವುದು ಸಿಎಂ ಅಶೋಕ್ ಗೆಹ್ಲೋಟ್ ಅವರ ಲೆಕ್ಕಾಚಾರ.
ಸರಕಾರ ಉರುಳುವ ಭಯ: ನೇರ ಪ್ರಧಾನಿ ಮೋದಿಗೆ ಪತ್ರ ಬರೆದ ಅಶೋಕ್ ಗೆಹ್ಲೋಟ್
ಭಾರತೀಯ ಟ್ರೈಬಲ್ ಪಕ್ಷ
ಸಚಿನ್ ಪೈಲಟ್ ಅವರ ಬೆಂಬಲಿಗರನ್ನು ಸ್ಫೀಕರ್ ಅನರ್ಹತೆಗೊಳಿಸಿರುವುದನ್ನು ನ್ಯಾಯಾಲಯ ರದ್ದು ಪಡಿಸಿದರೆ, ಗೆಹ್ಲೋಟ್ ಲೆಕ್ಕಾಚಾರವೆಲ್ಲಾ ಉಲ್ಟಾ ಆಗಲಿದೆ. ಅಂತಹ ಸಂದರ್ಭದಲ್ಲಿ, ಹತ್ತು ಪಕ್ಷೇತರರು ಮತ್ತು ಭಾರತೀಯ ಟ್ರೈಬಲ್ ಪಕ್ಷದ ಇಬ್ಬರು ಶಾಸಕರಲ್ಲಿ, ಮೂವರು ತಮ್ಮ ನಿಯತ್ತು ಬದಲಿಸಿದರೂ, ಗೆಹ್ಲೋಟ್ ಸರಕಾರ ಪತನಗೊಳ್ಳಲಿದೆ.
ರಾಜಸ್ಥಾನದ ಸಿಎಂ ಅಶೋಕ್ ಗೆಹ್ಲೋಟ್
ಪೈಲಟ್ ಮತ್ತು ಅವರ ಬೆಂಬಲಿಗರು ಹದಿನೆಂಟು ಶಾಸಕರೆಂದು ಗೆಹ್ಲೋಟ್ ಬಣ ಹೇಳುತ್ತಿದ್ದರೂ, ಆ ಸಂಖ್ಯೆ ಜಾಸ್ತಿಯಿದೆ ಎನ್ನುವ ಭೀತಿ ಸಿಎಂಗೆ ಕಾಡುತ್ತಿದೆ. ಸದ್ಯದ ಮಟ್ಟಿಗೆ ಪಕ್ಷೇತರರು ಮತ್ತು ಬಿಟಿಪಿ ಶಾಸಕರೇ ಗೆಹ್ಲೋಟ್ ಬಣಕ್ಕೆ ನಿರ್ಣಾಯಕ. ನಾನೇ ಕಿಂಗ್ ಮೇಕರ್ ಎಂದು ಬಿಟಿಪಿ ಶಾಸಕರು ಈಗಾಗಲೇ ಹೇಳುತ್ತಿದ್ದಾರೆ.
ಗೆಹ್ಲೋಟ್ ಲೆಕ್ಕಾಚಾರವೆಲ್ಲಾ ಉಲ್ಟಾ ಆಗುವ ಸಾಧ್ಯತೆಯಿಲ್ಲದಿಲ್ಲ
ಸ್ಪೀಕರ್ ತೀರ್ಪು ಸರಿ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದರೆ ಮತ್ತು ಇಂದು ಅಥವಾ ನಾಳೆ, ತುರ್ತು ಅಧಿವೇಶನ ಕರೆಯಲು ರಾಜ್ಯಪಾಲರು ಅನುಮತಿ ನೀಡಿದರೆ, ಸಿಎಂ ಗೆಹ್ಲೋಟ್ ಬಚಾವ್ ಆಗಲಿದ್ದರೆ. ಒಂದು ವೇಳೆ, ಸ್ಪೀಕರ್ ತೀರ್ಪನ್ನು ನ್ಯಾಯಾಲಯ ಅನೂರ್ಜಿತಗೊಳಿಸಿದರೆ, ಗೆಹ್ಲೋಟ್ ಲೆಕ್ಕಾಚಾರವೆಲ್ಲಾ ಉಲ್ಟಾ ಆಗುವ ಸಾಧ್ಯತೆಯಿಲ್ಲದಿಲ್ಲ.