ರಾಜಸ್ಥಾನದಲ್ಲಿ ಶಾಸಕರ ಕುದುರೆ ವ್ಯಾಪಾರ ಭಯ: ರೆಸಾರ್ಟ್ ಪ್ರದೇಶದಲ್ಲಿ ಇಂಟರ್ನೆಟ್ ಸೇವೆ ಬಂದ್
ಜೈಪುರ, ಜೂನ್ 10: ರಾಜ್ಯಸಭಾ ಚುನಾವಣೆ ಕೆಲವೇ ಗಂಟೆಗಳಿರುವ ಹೊತ್ತಿನಲ್ಲಿ ರಾಜಕೀಯ ಮೇಲಾಟಕ್ಕೆ ಹೆಸರಿ, ರಾಜಸ್ಥಾನ ಸರ್ಕಾರ ಗುರುವಾರ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲು ಆದೇಶಿಸಿದೆ.
ಉದಯಪುರದಿಂದ ಹಿಂದಿರುಗಿದ ಕೆಲ ಕಾಂಗ್ರೆಸ್ ಶಾಸಕರು ಗುರುವಾರ ರಾತ್ರಿ 9 ಗಂಟೆಯಿಂದ ಶುಕ್ರವಾರ ಬೆಳಗ್ಗೆ 9 ಗಂಟೆಯವರೆಗೆ ಜೈಪುರ ಜಿಲ್ಲೆಯ ಅಮೇರ್ ಪ್ರದೇಶದಲ್ಲಿ 12 ಗಂಟೆಗಳ ತನಕ ತಂಗಿದ್ದಾರೆ.
Breaking; ರಾಜ್ಯಸಭೆ, ಕಾಂಗ್ರೆಸ್ ಶಾಸಕರು ರೆಸಾರ್ಟ್ನಿಂದ ವಾಪಸ್
ಸಂಸತ್ತಿನ ಮೇಲ್ಮನೆಗೆ ಶುಕ್ರವಾರ ಮತದಾನ ನಡೆಯಲಿದೆ. ಪ್ರಮುಖವಾಗಿ, ಎಲ್ಲಾ ಕಾಂಗ್ರೆಸ್ ಶಾಸಕರನ್ನು ಅಮೇರ್ ಪ್ರದೇಶದ ಹೋಟೆಲ್ ಲೀಲಾಗೆ ಸ್ಥಳಾಂತರಿಸಲಾಗಿದ್ದು, ಅಲ್ಲಿ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಅಧಿಸೂಚನೆಯ ಪ್ರಕಾರ, ಪ್ರದೇಶದಲ್ಲಿ ಧ್ವನಿ ಕರೆಗಳು ಮತ್ತು ಬ್ರಾಡ್ಬ್ಯಾಂಡ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ರಾಜ್ಯಸಭಾ ಚುನಾವಣೆ: ಮತ ಚಲಾಯಿಸಲು ಮಲಿಕ್, ದೇಶಮುಖ್ಗೆ ಜಾಮೀನು ನಿರಾಕರಣೆ
ಶುಕ್ರವಾರ ನಡೆಯಲಿರುವ ರಾಜ್ಯಸಭಾ ಚುನಾವಣೆಯ ಮತದಾನಕ್ಕೆ ಮುಂಚಿತವಾಗಿ ರಾಜಸ್ಥಾನದ ಕಾಂಗ್ರೆಸ್ ಶಾಸಕರನ್ನು ಉದಯಪುರದಿಂದ ಜೈಪುರಕ್ಕೆ ಸ್ಥಳಾಂತರಿಸಲಾಯಿತು ಮತ್ತು ಸಂಸತ್ತಿನ ಮೇಲ್ಮನೆಯಲ್ಲಿ ಮೂರು ಸ್ಥಾನ ಪಡೆಯಲು ಕಾಂಗ್ರೆಸ್ ತನ್ನ ಶಾಸಕರನ್ನು ಭದ್ರಪಡಿಸಿಕೊಂಡಿದೆ.
ಕಾಂಗ್ರೆಸ್ಗೆ ಆಪರೇಷನ್ ಕಮಲದ ಭೀತಿ
ರಾಜಸ್ಥಾನ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸ್ವತಂತ್ರ ಅಭ್ಯರ್ಥಿ ಸುಭಾಷ್ ಚಂದ್ರ ಗೆಲುವಿಗಾಗಿ ಬಿಜೆಪಿ ಅಡ್ಡದಾರಿ ಹಿಡಿದಿದೆ ಎಂದು ಕಾಂಗ್ರೆಸ್ ಆರೋಪ ಮಾಡಿತ್ತು.
ಶಾಸಕರಿಗೆ ಹಣದ ಆಮಿಷ ತೋರಿಸಿ ತಮ್ಮ ಅಭ್ಯರ್ಥಿ ಗೆಲುವಿಗೆ ಬಿಜೆಪಿ ಮುಂದಾಗಿದೆ ಎಂದು ಆರೋಪಿಸಿದ್ದ ಆಡಳಿತಾರೂಢ ಕಾಂಗ್ರೆಸ್, ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು. ಸರ್ಕಾರದ ಮುಖ್ಯ ಸಚೇತಕ ಹಾಗೂ ಜಲಸಂಪನ್ಮೂಲ ಸಚಿವ ಡಾ.ಮಹೇಶ್ ಜೋಶಿ ಮತದಾನಕ್ಕೆ ಆಮಿಷದ ಸಾಧ್ಯತೆಗಳ ಕುರಿತು ಮುಖ್ಯ ಚುನಾವಣಾಧಿಕಾರಿಗೆ ದೂರು ನೀಡಿದ್ದಾರೆ.
40 ಕೋಟಿ ರೂಪಾಯಿ ಡೀಲ್ ಎಂದ ಆಪ್
ಕಾಂಗ್ರೆಸ್ ಜೊತೆಗೆ ಆಪ್ ಕೂಡ ಬಿಜೆಪಿ ವಿರುದ್ಧ ಗಂಭೀರ ಆರೋಪ ಮಾಡಿದೆ. ರಾಜಸ್ಥಾನದಲ್ಲಿ ಬಿಜೆಪಿಯ ಮಿತ್ರಪಕ್ಷವಾಗಿರುವ ನಾಗೌರ್ ಸಂಸದ ಹನುಮಾನ್ ಬೇನಿವಾಲ್ನ ರಾಷ್ಟ್ರೀಯ ಲೋಕತಾಂತ್ರಿಕ್ ಪಾರ್ಟಿ (ಆರ್ಎಲ್ಪಿ) ಮೂವರು ಶಾಸಕರು ಬಿಜೆಪಿ ಅಭ್ಯರ್ಥಿ ಸುಭಾಷ್ ಚಂದ್ರಗೆ ಬೆಂಬಲಿಸಲಿದ್ದಾರೆ. ಈ ಮೂವರು ಶಾಸಕರ ಮತಗಳಿಗೆ ಬಿಜೆಪಿ 40 ಕೋಟಿ ರೂಪಾಯಿ ಡೀಲ್ ಮಾಡಿದೆ ಎಂದು ಆಪ್ ಆರೋಪಿಸಿದೆ.
ಬಿಜೆಪಿ ಪಕ್ಷದಿಂದ ನಾಲ್ಕನೇ ಸುಭಾಷ್ ಚಂದ್ರ ಕಣಕ್ಕಿಳಿದಿದ್ಧಾರೆ. ಸುಭಾಷ್ ಚಂದ್ರ ಗೆಲುವನ್ನು ಪ್ರತಿಷ್ಠೆಯನ್ನಾಗಿ ತೆಗೆದುಕೊಂಡಿರುವ ಬಿಜೆಪಿ ತನ್ನ ಅಭ್ಯರ್ಥಿ ಗೆಲುವಿಗಾಗಿ ಚುನಾವಣಾ ರಣತಂತ್ರವನ್ನು ರೂಪಿಸುತ್ತಿದೆ. ಅದರಲ್ಲೂ ಎದುರಾಳಿ ಪಕ್ಷದ ಶಾಸಕರನ್ನು ಸೆಳೆಯುವ ಕಸರತ್ತು ಜೋರಾಗಿದೆ ಎಂದು ಆಪ್ ಹೇಳಿದೆ.
ಕಾಂಗ್ರೆಸ್ ಪ್ರತಿತಂತ್ರ
ಬಿಜೆಪಿ ಕುದುರೆ ವ್ಯಾಪಾರದ ಮುನ್ಸೂಚನೆ ದೊರೆಯುತ್ತಿದ್ದಂತೆ ಎಚ್ಚೆತ್ತ ಕಾಂಗ್ರೆಸ್, ತನ್ನ ಶಾಸಕರನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಿದೆ. ಈ ಮೂಲಕ ಕಾಂಗ್ರೆಸ್ ಶಾಸಕರು ಆಪರೇಷನ್ ಕಮಲಕ್ಕೆ ಒಳಗಾಗದಂತೆ ಎಚ್ಚರಿಕೆ ವಹಿಸಿದೆ.
ಬಿಜೆಪಿಗೆ ತಿರುಗೇಟು ನೀಡಿರುವ ಕಾಂಗ್ರೆಸ್ ರಘು ಶರ್ಮಾ, "ಈಗ ಬಿಜೆಪಿಗೆ ಸ್ಪಷ್ಟವಾಗಿರಬೇಕು, ಬಿಜೆಪಿ ತನ್ನ ಕುತಂತ್ರಗಳ ಮೂಲಕ ಕಾಂಗ್ರೆಸ್ನ ಒಗ್ಗಟ್ಟನ್ನು ಒಡೆಯಲು ಸಾಧ್ಯವಿಲ್ಲ. ಕಾಂಗ್ರೆಸ್ ಶಾಸಕರು ಒಗ್ಗಟ್ಟಾಗಿದ್ದಾರೆ ಮತ್ತು ರಾಜ್ಯಸಭಾ ಚುನಾವಣೆಯ ಎಲ್ಲಾ 3 ಸ್ಥಾನಗಳನ್ನು ಗೆಲ್ಲುತ್ತದೆ. ಕಾಂಗ್ರೆಸ್ನ ಎಲ್ಲಾ ಶಾಸಕರು ತಮ್ಮ ಅಭ್ಯರ್ಥಿ ಪರ ಮತ ಚಲಾಯಿಸಲಿದ್ದಾರೆ," ಎಂದು ಹೇಳಿದ್ದಾರೆ.
ಅಡ್ಡ ಮತದಾನ ಮಾಡಲ್ಲ ಎಂದ ಅಶೋಕ್ ಗೆಹ್ಲೋಟ್
ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿನ ಬಗ್ಗೆ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಡ್ಡ ಮತದಾನದ ಸಾಧ್ಯತೆಯನ್ನು ನಿರಾಕರಿಸಿದ್ದಾರೆ.
"ನಾವು ಎಲ್ಲಾ ಮೂರು ಸ್ಥಾನಗಳನ್ನು ಗೆಲ್ಲುತ್ತೇವೆ. ಕಾಂಗ್ರೆಸ್ ಶಾಸಕರು ಒಟ್ಟಾಗಿ ನಿಲ್ಲುತ್ತೇವೆ. ಬಿಜೆಪಿಗೆ ಭಯವಾಗಿದೆ. ಅವರು ಚುನಾವಣಾ ಆಯೋಗಕ್ಕೆ, ಜಾರಿ ನಿರ್ದೇಶನಾಲಯಕ್ಕೆ (ಇಡಿ) ಹೋಗುತ್ತಿದ್ದಾರೆ" ಗೆಹ್ಲೋಟ್ ಹೇಳಿದರು.
ರಾಜಸ್ಥಾನದಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಶುಕ್ರವಾರ ಚುನಾವಣೆ ನಡೆಯಲಿದ್ದು, ಆಡಳಿತಾರೂಢ ಕಾಂಗ್ರೆಸ್ ಪಕ್ಷವು 3 ಅಭ್ಯರ್ಥಿಗಳಾದ ರಣದೀಪ್ ಸಿಂಗ್ ಸುರ್ಜೆವಾಲಾ, ಮುಕುಲ್ ವಾಸ್ನಿಕ್ ಮತ್ತು ಪ್ರಮೋದ್ ತಿವಾರಿ ಅವರನ್ನು ಕಣಕ್ಕಿಳಿಸಿದೆ.
200 ಸದಸ್ಯ ಬಲದ ರಾಜ್ಯ ವಿಧಾನಸಭೆಯಲ್ಲಿ ಕಾಂಗ್ರೆಸ್ ಪ್ರಸ್ತುತ 108 ಶಾಸಕರನ್ನು ಹೊಂದಿದೆ ಮತ್ತು ಮೂರು ಸ್ಥಾನಗಳನ್ನು ಗೆಲ್ಲಲು 123 ಮತಗಳ ಅಗತ್ಯವಿದೆ.
ಆಪರೇಷನ್ ಕಮಲ, ರೆಸಾರ್ಟ್ ರಾಜಕೀಯ, ಕುದುರೆ ವ್ಯಾಪಾರ ರಾಷ್ಟ್ರ ರಾಜಕಾರಣದಲ್ಲಿ ಸಾಮಾನ್ಯ ಎನ್ನುವಂತಾಗಿದೆ. ಮತಕ್ಕಾಗಿ ಲಂಚ, ಹಣ ಪಡೆದು ಮತದಾನ ಮಾಡುವುದು ಪ್ರಜಾಪ್ರಭುತ್ವದ ವ್ಯಂಗ್ಯವೇ ಸರಿ.