ದೇವರ ದುಡ್ಡು: ದೇಣಿಗೆ ಹಣ, ಚಿನ್ನ, ಬೆಳ್ಳಿ ಎಣಿಸುವುದರಲ್ಲಿ ಸಿಬ್ಬಂದಿ ಸುಸ್ತೋಸುಸ್ತು.!
ಜೈಪುರ್, ಫೆಬ್ರವರಿ.11: ಭಾರತೀಯರು ಧಾರ್ಮಿಕ ಕೇಂದ್ರಗಳಿಗೆ ದೇವಸ್ಥಾನಗಳಿಗೆ ದೇಣಿಗೆ ಮತ್ತು ದಕ್ಷಿಣೆ ನೀಡುವ ವಿಚಾರದಲ್ಲಿ ವಿಶಾಲ ಹೃದಯದವರು ಎಂದೇ ಹೇಳಲಾಗುತ್ತದೆ. ಇದನ್ನು ಸಾಬೀತುಪಡಿಸುವಂತಾ ಘಟನೆಯೊಂದು ರಾಜಸ್ಥಾನದಲ್ಲಿ ಇತ್ತೀಚಿಗೆ ವರದಿಯಾಗಿದೆ.
ರಾಜಸ್ಥಾನದ ಚಿತ್ತೋರಘರ್ ಸಮೀಪದ "ಶ್ರೀ ಸನ್ವಾಲಿಯಾ ಸೇಥ್" ದೇವಸ್ಥಾನದಲ್ಲಿ ಸಂಗ್ರಹವಾಗಿದ್ದ ಹಣದ ರಾಶಿಯನ್ನು ಎಣಿಕೆ ಮಾಡುವುದರಲ್ಲೇ ಸಿಬ್ಬಂದಿ ಸುಸ್ತು ಹೊಡೆದಿದ್ದಾರೆ. ಚತುರ್ದಶಿ ಹಿನ್ನೆಲೆಯಲ್ಲಿ ದೇವಸ್ಥಾನದ ಹುಂಡಿಯಲ್ಲಿ ಕೋಟಿ ಕೋಟಿ ರೂಪಾಯಿ ದಕ್ಷಿಣೆ ಜೊತೆಗೆ ಚಿನ್ನ, ಬೆಳ್ಳಿ ಸಹ ಸಂಗ್ರಹವಾಗಿದೆ.
ವೈಕುಂಠ ಏಕಾದಶಿಯ ಒಂದೇ ದಿನದಂದು ತಿರುಮಲದಲ್ಲಿ ಒಂದೇ ದಿನ ರು. 4.39 ಕೋಟಿ ಸಂಗ್ರಹ
ದೇವಾಲಯದ ಹುಂಡಿ ಎಣಿಕೆ ಕಾರ್ಯದಲ್ಲಿ 12ಕ್ಕೂ ಹೆಚ್ಚು ಸಿಬ್ಬಂದಿಯನ್ನು ಬಳಸಿಕೊಳ್ಳಲಾಗಿತ್ತಾದರೂ, ಎಣಿಕೆ ಕಾರ್ಯ ಬುಧವಾರ ಒಂದೇ ದಿನಕ್ಕೆ ಪೂರ್ಣವಾಗಲಿಲ್ಲ. ಈ ಹಿನ್ನೆಲೆ ಗುರುವಾರ ಸಹ ಹುಂಡಿ ಹಣ ಎಣಿಕೆ ಕಾರ್ಯ ನಡೆಸಲಾಗುತ್ತದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.
6 ಕೋಟಿ ನಗದು, 91 ಗ್ರಾಂ ಚಿನ್ನ, 4 ಕೆಜಿ ಬೆಳ್ಳಿ ಸಂಗ್ರಹ:
ರಾಜಸ್ಥಾನದ ಚಿತ್ತೋರಘರ್ ಸಮೀಪದ "ಶ್ರೀ ಸನ್ವಾಲಿಯಾ ಸೇಥ್" ದೇವಸ್ಥಾನದ ಹುಂಡಿಯಲ್ಲಿ ಒಂದು ದಿನದ ಎಣಿಕೆ ಪೂರ್ಣಗೊಂಡಾಗ 6 ಕೋಟಿ 17 ಲಕ್ಷ 12 ಸಾವಿರ ರೂಪಾಯಿ ನಗದು ಹಣದ ಜೊತೆಗೆ 91 ಗ್ರಾಂ ಬಂಗಾರ, 4 ಕೆಜಿ 200 ಗ್ರಾಂ ಬೆಳ್ಳಿ ಸಂಗ್ರಹವಾಗಿದೆ. ಗುರುವಾರ ಮತ್ತೆ ಹುಂಡಿ ಹಣದ ಎಣಿಕೆ ಕಾರ್ಯ ಮುಂದುವರಿಸಲಾಗುತ್ತದೆ ಎಂದು ದೇವಸ್ಥಾನ ಆಡಳಿತ ಮಂಡಳಿಯ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ರತನ್ ಕುಮಾರ್ ಸ್ವಾಮಿ ತಿಳಿಸಿದ್ದಾರೆ.