ಅತ್ಯಾಚಾರ ಪ್ರಕರಣ: ಅಸಾರಾಂ ಬಾಪು ಮಧ್ಯಂತರ ಜಾಮೀನು ಅರ್ಜಿ ವಜಾ
ಜೋಧಪುರ್, ಫೆಬ್ರವರಿ 21: ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಸ್ವಯಂ ಘೋಷಿತ ದೇವಮಾನವ ಅಸಾರಾಂ ಬಾಪು ಅವರು ಸಲ್ಲಿಸಿದ್ದ ಮಧ್ಯಂತರ ಜಾಮೀನು ಅರ್ಜಿ ರದ್ದುಗೊಂಡಿದೆ.
ಜೋಧಪುರದಲ್ಲಿ ಸ್ಥಾಪಿಸಲಾಗಿಸಿರುವ ವಿಶೇಷ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಕೋರ್ಟ್ ಜಸ್ಟೀಸ್ ಸಂದೀಪ್ ಮೆಹ್ತಾ ಅವರು ಅರ್ಜಿ ತಿರಸ್ಕರಿಸಿದ್ದಾರೆ. ನನ್ನ ಪತ್ನಿ ಲಕ್ಷ್ಮಿ ದೇವಿ ತೀವ್ರವಾಗಿ ಅನಾರೋಗ್ಯ ಪೀಡಿತವಾಗಿದ್ದು, ಆಕೆಯನ್ನು ನೋಡಲು ನೋಡಲು ಅನುಮತಿ ನೀಡುವಂತೆ ಅಸಾರಾಂ ಬಾಪು ಅರ್ಜಿಯಲ್ಲಿ ಕೋರಿದ್ದರು.
ಸ್ವಯಂ ಘೋಷಿತ ದೇವ ಮಾನವ ಅಸಾರಾಮ್ ಬಾಪು ರೇಪ್ ಕೇಸ್ : ಟೈಮ್ ಲೈನ್
2013ರ ಅತ್ಯಾಚಾರ ಪ್ರಕರಣದಲ್ಲಿ ಏಪ್ರಿಲ್ 25,2018ರಂದು ಜೋಧಪುರದ ನ್ಯಾಯಾಲಯ ಅಸರಾಂ ಬಾಪುಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಅಪ್ರಾಪ್ತ ಬಾಲಕಿಯ ಮೇಲೆ ಐದು ವರ್ಷಗಳ ಹಿಂದೆ ಅತ್ಯಾಚಾರ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಶಿಕ್ಷೆ ನೀಡಲಾಗಿದೆ.
ಅಸಾರಾಂ ಸಹಾಯಕರಾದ ಶರದ್ ಚಂದ್ರ ಮತ್ತು ಸಂಚಿತಾ ಅಲಿಯಾಸ್ ಶಿಲ್ಪಿ ಎಂಬ ಇಬ್ಬರಿಗೆ ಜೋಧಪುರ ನ್ಯಾಯಾಲಯ 20 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು.
ಜೋಧಪುರ ಸಮೀಪದ ಮನಾಯ್ ನಲ್ಲಿರುವ ಆಶ್ರಮಕ್ಕೆ 2013ರ ಆಗಸ್ಟ್ 15ರಂದು ತನ್ನನ್ನು ಕರೆಸಿಕೊಂಡು ತನ್ನ ಮೇಲೆ ಅಂದೇ ರಾತ್ರಿ ಅತ್ಯಾಚಾರ ನಡೆಸಲಾಗಿತ್ತು ಎಂದು 16 ವರ್ಷದ ಬಾಲಕಿ ದೂರು ಸಲ್ಲಿಸಿದ್ದಳು. ಈ ಪ್ರಕರಣದಲ್ಲಿ ಅಸರಾಂ ಶಿಕ್ಷೆಗೆ ಗುರಿಯಾಗಿದ್ದರು.
ಉತ್ತರ ಪ್ರದೇಶದ ಶಹಜಾನ್ಪುರಕ್ಕೆ ಸೇರಿದ ಯುವತಿ ಮಧ್ಯ ಪ್ರದೇಶದ ಛಿಂದ್ವಾರದಲ್ಲಿರುವ ಅಸರಾಂ ಆಶ್ರಮದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಳು. ಇದರ ಮಧ್ಯದಲ್ಲಿ ಆಕೆಯ ಮೇಲೆ ಅಸರಾಂ ಅತ್ಯಾಚಾರ ನಡೆಸಿದ್ದ.