ರಾಜಸ್ಥಾನ ಸರ್ಕಾರಕ್ಕೆ ಕಂಟಕ? ಮಾಯಾವತಿ ಆಟ ಬಲ್ಲವರ್ಯಾರು?!
ಜೈಪುರ, ಜನವರಿ 11: ರಾಜಸ್ಥಾನದಲ್ಲಿ ಬಿಜೆಪಿ ಸರ್ಕಾರವನ್ನು ಕೆಡವಿ ಕಾಂಗ್ರೆಸ್ ಸರ್ಕಾರ ಈಗಾಗಲೇ ಅಸ್ತಿತ್ವಕ್ಕೆ ಬಂದಿದೆ. ಆದರೆ ಸರ್ಕಾರಕ್ಕೆ ಯಾವುದೇ ತೊಂದರೆಯಾಗದಂತೆ ಆಡಳಿತ ನಡೆಸಿಕೊಂಡು ಹೋಗುವುದು ಕಾಂಗ್ರೆಸ್ಸಿಗೆ ಹೂವಿನ ಹಾಸಿಗೆಯಂತೂ ಅಲ್ಲ.
ಏಕೆಂದರೆ ಕಳೆದ ತಿಂಗಳು ನಡೆದ ವಿಧಾನಸಭಾ ಚುನಾವಣೆಯಲ್ಲಿ 199 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆದ್ದಿದ್ದು 99 ಕ್ಷೇತ್ರಗಳನ್ನಿರಬಹುದು. ಆದರೆ ಬಿಜೆಪಿ 73 ಮತ್ತು ಇತರರು 27 ಸ್ಥಾನ ಗಳಿಸಿರುವುದರಿಂದ ಯಾವುದೇ ಕ್ಷಣದಲ್ಲೂ ಸರ್ಕಾರವನ್ನು ಬೀಳಿಸುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.
ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಏಕಾಂಗಿಯಾದರೆ ಫಲಿತಾಂಶ ಏನಾಗಲಿದೆ?
ಜೊತೆಗೆ ರಾಜಸ್ಥಾನದಲ್ಲಿ ಕಾಂಗ್ರೆಸ್ಸಿಗೆ ಬಿಎಸ್ಪಿ(ಬಹುಜನ ಸಮಾಜವಾದಿ ಪಕ್ಷ) ಬೆಂಬಲ ನೀಡುವುದಾಗಿ ಸದ್ಯಕ್ಕಂತೂ ಹೇಳಿದೆ. ರಾಷ್ಟ್ರೀಯ ಲೋಕದಳದ ಅಜಿತ್ ಸಿಂಗ್ ಬೆಂಬಲದ ನೆರವಿನೊಂದಿಗೆ ಕಾಂಗ್ರೆಸ್ ಸರ್ಕಾರ ರಚಿಸಿದೆ. ಆದರೆ ಆಲ್ವಾರ್ ಜಿಲ್ಲೆಯ ರಾಮಗರ್ ಕ್ಷೇತ್ರದಲ್ಲಿ ಇನ್ನೂ ಚುನಾವಣೆಯಾಗಿಲ್ಲ. ಈ ಕ್ಷೇತ್ರದಲ್ಲಿ ಚುನಾವಣೆ ನಡೆದು ಕಾಂಗ್ರೆಸ್ ಸೋತರೆ ಸರ್ಕಾರಕ್ಕೆ ಕಂಟಕವೇ. ಆ ಕ್ಷೇತ್ರದಲ್ಲಿ ಗೆದ್ದಿದ್ದೇ ಆದರೆ 100 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದಂತಾಗುತ್ತದೆ. ಸರ್ಕಾರವೂ ಸುಭದ್ರವಾಗುತ್ತದೆ.
ಈ ಕ್ಷೇತ್ರದಲ್ಲಿ ಚುನಾವಣೆ ಏಕೆ?
ರಾಜಸ್ಥಾನದಲ್ಲಿ ಒಟ್ಟು 200 ವಿಧಾನಸಭಾ ಕ್ಷೇತ್ರಗಳಿದ್ದು, ಇಲ್ಲಿನ ಆಲ್ವಾರ್ ಜಿಲ್ಲೆಯ ರಾಮಗರ್ ಕ್ಷೇತ್ರದ ಬಿಎಸ್ಪಿ ಅಭ್ಯರ್ಥಿ ಲಕ್ಷ್ಮಣ್ ಸಿಂಗ್ 2018 ರ ನ.29 ರಂದು ಹೃದಯಾಘಾತದಿಂದ ಮೃತರಾಗಿದ್ದರು. ಆ ಕಾರಣ ಈ ಕ್ಷೇತ್ರದ ಚುನಾವಣೆಯನ್ನು ಮುಂದೂಡಲಾಗಿತ್ತು. ಜನವರಿ 28 ರಂದು ಈ ಕ್ಷೇತ್ರದಲ್ಲಿ ಚುನಾವಣೆ ನಡೆಯಲಿದ್ದು, ಬಿಎಸ್ಪಿ ಅಭ್ಯರ್ಥಿ ಹೃದಯಾಘಾತದಿಂದ ಮೃತರಾಗಿದ್ದರಿಂದ ಅನುಕಂಪದ ಮತವನ್ನು ಇದೀಗ ಸ್ಪರ್ಧಿಸುವ ಬಿಎಸ್ಪಿ ಅಭ್ಯರ್ಥಿ ಪಡೆಯಬಹುದು. ಹಾಗೊಮ್ಮೆ ಆಗಿ ಬಿ ಎಸ್ಪಿ ಗೆದ್ದರೆ ಕಾಂಗ್ರೆಸ್ ಗೆ ಸಂಕಷ್ಟ ತಪ್ಪಿದ್ದಲ್ಲ.
ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಏಕಾಂಗಿಯಾದರೆ ಫಲಿತಾಂಶ ಏನಾಗಲಿದೆ?
ನಟ್ವರ್ ಸಿಂಗ್ ಪುತ್ರ ಬಿಎಸ್ಪಿ ಅಭ್ಯರ್ಥಿ
ರಾಮ್ ಗರ್ ಕ್ಷೇತ್ರದಲ್ಲಿ ಮಾಜಿ ವಿದೇಶಾಂಗ ಸಚಿವ ನಟ್ವರ್ ಸಿಂಗ್ ಪುತ್ರ ಜಗತ್ ಸಿಂಗ್ ಬಿಎಸ್ಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಬಿಜೆಪಿ ಜೊತೆ ಗುರುತಿಸಿಕೊಂಡಿದ್ದ ಅವರು, ಟಿಕೆಟ್ ವಂಚಿತರಾಗಿ ಬಂಡಾಯವೆದ್ದು, ಬಿಎಸ್ಪಿ ಸೇರಿದ್ದರು. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಸಾಫಿಯಾ ಖಾನ್ ಎಂಬುವವರನ್ನು ಕಣಕ್ಕಿಳಿಸಿದ್ದು, ಮೂರು ರಾಜ್ಯಗಳ ಚುನಾವಣಾ ಫಲಿತಾಂಶ ಈ ಕ್ಷೇತ್ರದ ಚುನಾವಣೆಯ ಮೇಲೂ ಪರಿಣಾಮ ಬೀರಲಿದೆ. ಕಾಂಗ್ರೆಸ್ 100ನೇ ಸೀಟು ಪಡೆಯಲು ನಾನು ಸಹಕರಿಸುತ್ತೇನೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅತ್ತ ಬಿಜೆಪಿ ಸುಖ್ವಂತ್ ಸಿಂಗ್ ಎಂಬುವವರನ್ನು ಕಣಕ್ಕಿಳಿಸಿದೆ.
ಮಾಯಾವತಿ-ಅಖಿಲೇಶ್ ಸೇರಿಗೆ ಕಾಂಗ್ರೆಸ್ ಸವ್ವಾ ಸೇರು!
ಮಾಯಾವತಿ ಆಟ ಬಲ್ಲವರ್ಯಾರು?
ಈಗಾಗಲೇ 6 ಕ್ಷೇತ್ರಗಳ್ಲಲಿ ಬಿಎಸ್ಪಿ ಜಯಗಳಿಸಿದ್ದು, ಇದು ಕಾಂಗ್ರೆಸ್ಸಿಗೆ ತಲೆಬಿಸಿಯನ್ನುಂಟು ಮಾಡಿದೆ. ಏಕೆಂದರೆ ಮಾಯಾವತಿ ಯಾವ ರೀತಿಯ ರಾಜಕೀಯ ದಾಳ ಉರುಳಿಸುತ್ತಾರೆ ಎಂಬುದನ್ನು ಊಹಿಸುವುದು ಕಷ್ಟ. ಅಕಸ್ಮಾತ್ ರಾಮ್ ಗರ್ ನಲ್ಲೂ ಗೆದ್ದರೆ ಮುಂಬರುವ ಲೋಕಸಭಾ ಚುನಾವಣೆಯಲ್ಲೂ ಬಿಎಸ್ಪಿಯನ್ನು ನೆಚ್ಚಿಕೊಳ್ಳುವುದು ಕಾಂಗ್ರೆಸ್ಸಿಗೆ ಅನಿವಾರ್ಯವಾಗಬಹುದು. ಆಗ ಲೋಕಸಬಾ ಚುನಾವಣೆಯ ಸೀಟು ಹಂಚಿಕೆಯ ವಿಷಯದಲ್ಲಿ ಮಾಯಾವತಿ ಅವರ ಬೇಡಿಕೆಗೆ ಸೊಪ್ಪು ಹಾಕುವುದು ಕಾಂಗ್ರೆಸ್ಸಿಗೆ ಅನಿವಾರ್ಯವಾಗಬಹುದು.
ಯಾರಿಗೆ ಎಷ್ಟು ಸ್ಥಾನ?
ರಾಜಸ್ಥಾನದಲ್ಲಿರುವ ಒಟ್ಟು 200 ಕ್ಷೇತ್ರಗಳಲ್ಲಿ 199 ಕ್ಕೆ ಡಿಸೆಂಬರ್ 7 ರಂದು ಚುನಾವಣೆ ನಡೆದಿತ್ತು. ಡಿಸೆಂಬರ್ 11 ರಂದು ಬಂದ ಫಲಿತಾಂಶದಲ್ಲಿ ಕಾಂಗ್ರೆಸ್ 99 ಸ್ಥಾನಗಳಲ್ಲಿ ಜಯಗಳಿಸಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಬಿಜೆಪಿ 73 ಸ್ಥಾನಗಳಲ್ಲಿ ಗೆದ್ದರೆ ಬಿಎಸ್ಪಿ ಸೇರಿದಂತೆ ಇತರರು 27 ಸ್ಥಾನಗಳಲ್ಲಿ ಗೆದ್ದಿದ್ದರು. ಅಶೋಕ್ ಗೆಹ್ಲೋಟ್ ಅವರನ್ನು ಕಾಂಗ್ರೆಸ್ ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಿತ್ತು. ರಾಜಸ್ಥಾನದೊಟ್ಟಿಗೆ ಮಧ್ಯಪ್ರದೇಶ, ಛತ್ತೀಸ್ ಗಢ ರಾಜ್ಯದಲ್ಲೂ ಕಾಂಗ್ರೆಸ್ ಜಯಗಳಿಸಿ ಸರ್ಕಾರ ರಚಿಸಿದೆ.