ಮನಮೋಹನ್ ಸಿಂಗ್ ವಿರುದ್ಧ ಅಭ್ಯರ್ಥಿ ಇಳಿಸದಿರಲು ಬಿಜೆಪಿ ನಿರ್ಧಾರ
ನವದೆಹಲಿ, ಆಗಸ್ಟ್ 13: ರಾಜ್ಯಸಭೆಯ ಉಪ ಚುನಾವಣೆಗೆ ರಾಜಸ್ಥಾನದಿಂದ ಸ್ಪರ್ಧಿಸುತ್ತಿರುವ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ವಿರುದ್ಧ ಅಭ್ಯರ್ಥಿಯನ್ನು ಇಳಿಸದೆ ಇರಲು ಬಿಜೆಪಿ ತೀರ್ಮಾನಿಸಿದೆ.
ಈ ಬೆಳವಣಿಗೆಗಳಿಗೆ ಸಂಬಂಧಿಸಿದಂತೆ ಮಾಹಿತಿ ನೀಡಿರುವ ಹೆಸರು ಬಹಿರಂಗಪಡಿಸಲು ಇಚ್ಛಿಸದ ಬಿಜೆಪಿ ಮುಖಂಡರೊಬ್ಬರು, ಮಾಜಿ ಪ್ರಧಾನಿ ವಿರುದ್ಧ ಯಾವುದೇ ಅಭ್ಯರ್ಥಿಯನ್ನು ಕಣಕ್ಕೆ ಇಳಿಸದೆ ಇರಲು ಪಕ್ಷ ಉದ್ದೇಶಿಸಿದೆ. ಆದರೆ, ಈ ಬಗ್ಗೆ ಇನ್ನೂ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಹೇಳಿದರು.
ಮತ್ತೆ ಸಂಸತ್ಗೆ ಬರಲಿದ್ದಾರೆ ಮನಮೋಹನ್ ಸಿಂಗ್
ರಾಜಸ್ಥಾನದಿಂದ ರಾಜ್ಯಸಭೆಯ ಸ್ಥಾನಕ್ಕೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಮಂಗಳವಾರ ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಸಲು ಬುಧವಾರ ಕೊನೆಯ ದಿನವಾಗಿದೆ. ಆದರೆ, ಇದುವರೆಗೂ ಬಿಜೆಪಿ ತನ್ನ ಅಭ್ಯರ್ಥಿಯ ಹೆಸರು ಘೋಷಣೆ ಮಾಡಿಲ್ಲ.
ರಾಜಸ್ಥಾನ ಬಿಜೆಪಿಯ ಘಟಕ ಮುಖ್ಯಸ್ಥರಾಗಿದ್ದ ಮದನ್ ಲಾಲ್ ಸೈನಿ ಅವರ ಜೂನ್ 24ರಂದು ನಿಧನರಾಗಿದ್ದರು. ಅವರಿಂದ ಈ ಸ್ಥಾನ ತೆರವಾಗಿತ್ತು.
ಇದೇ ತಿಂಗಳ 26ರಂದು ರಾಜ್ಯಸಭೆಯ ಈ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಮೂರು ದಶಕಗಳಿಂದ ರಾಜ್ಯಸಭೆ ಸಂಸದರಾಗಿದ್ದ ಮನಮೋಹನ್ ಸಿಂಗ್ ಅವರು, ಅಸ್ಸಾಂನಿಂದ ಪ್ರತಿ ಬಾರಿ ರಾಜ್ಯಸಭೆಗೆ ಆಯ್ಕೆಯಾಗುತ್ತಿದ್ದರು. ರಾಜಸ್ಥಾನದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದು, ಅವರ ಮಿತ್ರಪಕ್ಷಗಳ ಬೆಂಬಲ ಇರುವುದರಿಂದ ಮನಮೋಹನ್ ಸಿಂಗ್ ಅವರ ಆಯ್ಕೆ ಸುಲಭವಾಗಿದೆ.