ರಾಜಸ್ಥಾನ ಪುರೋಹಿತ ಸಜೀವ ದಹನ: 50 ಲಕ್ಷಕ್ಕಾಗಿ ಕುಟುಂಬದ ಬೇಡಿಕೆ
ಜೈಪುರ್, ಅಕ್ಟೋಬರ್.10: ರಾಜಸ್ಥಾನದ ಕರೌಲಿ ಗ್ರಾಮದಲ್ಲಿ ರಾಧಾ ಕೃಷ್ಣ ದೇವಸ್ಥಾನದ ಟ್ರಸ್ಟ್ ಗೆ ಸೇರಿದ ಭೂಮಿ ವಿವಾದಕ್ಕೆ ಸಂಬಂಧಿಸಿದಂತೆ ನಡೆದ ಗಲಾಟೆಯಲ್ಲಿ ಪೆಟ್ರೋಲ್ ಸುರಿದು ಪುರೋಹಿತ ಬಾಬುಲಾಲ್ ವೈಷ್ಣವ್ ರನ್ನು ಹತ್ಯೆ ಮಾಡಲಾಗಿದ್ದು, ಮೃತದೇಹದ ಅಂತ್ಯಸಂಸ್ಕಾರಕ್ಕೆ ಕುಟುಂಬಕ್ಕೆ ವಿರೋಧಿಸಿದ್ದಾರೆ.
"ತಮ್ಮ ಕುಟುಂಬಕ್ಕೆ ನ್ಯಾಯ ಸಿಗುವವರೆಗೂ ತಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೂ ಅಂತ್ಯ ಸಂಸ್ಕಾರ ನೆರವೇರಿಸುವುದಕ್ಕೆ ಬಿಡುವುದಿಲ್ಲ. 50 ಲಕ್ಷ ರೂಪಾಯಿ ಪರಿಹಾರ ಮತ್ತು ಕುಟುಂಬದ ಒಬ್ಬ ಸದಸ್ಯರಿಗೆ ಸರ್ಕಾರಿ ಉದ್ಯೋಗವನ್ನು ನೀಡಬೇಕು. ಎಲ್ಲ ಆರೋಪಿಗಳನ್ನು ಬಂಧಿಸಬೇಕು. ಆರೋಪಿಗಳಿಗೆ ಬೆಂಬಲ ನೀಡಿದ ಕಂದಾಯ ಅಧಿಕಾರಿ, ಪೊಲೀಸರು ವಿರುದ್ಧವೂ ಶಿಸ್ತುಕ್ರಮ ತೆಗೆದುಕೊಳ್ಳಬೇಕು. ಜೊತೆಗೆ ನಮ್ಮ ಕುಟುಂಬಕ್ಕೆ ರಕ್ಷಣೆ ನೀಡಬೇಕು" ಎಂದು, ಮೃತ ಪುರೋಹಿತ ಬಾಬುಲಾಲ್ ವೈಷ್ಣವ್ ಕುಟುಂಬ ಸದಸ್ಯೆ ಲಲಿತಾ ಎಂಬುವವರು ಆಗ್ರಹಿಸಿದ್ದಾರೆ.
ದೇವಸ್ಥಾನ ಭೂ ವಿವಾದ: ಅರ್ಚಕರ ಮೇಲೆ ಪೆಟ್ರೋಲ್ ಸುರಿದು ಬೆಂಕಿ
ಉಪ ವಿಭಾಗದ ಮ್ಯಾಜಿಸ್ಟ್ರೇಟ್ ಆಗಿರುವ ಓಂಪ್ರಕಾಶ್ ಮೀನಾ ಅವರು, ಬಾಬುಲಾಲ್ ವೈಷ್ಣವ್ ಗ್ರಾಮಕ್ಕೆ ಭೇಟಿ ನೀಡಿದರು. ಅಂತ್ಯಸಂಸ್ಕಾರ ನಡೆಸುವ ಸ್ಥಳದಲ್ಲಿ ನೂರಾರು ಜನರು ನೆರೆದಿದ್ದರು. ಅವರು ಸರ್ಕಾರಕ್ಕೆ ಹಲವು ಬಗೆಯ ಬೇಡಿಕೆಗಳನ್ನು ಸಲ್ಲಿಸಿದ್ದಾರೆ. ಅಲ್ಲಿವರೆಗೂ ಎರಡು ದಿನಗಳ ಹಿಂದೆಯೇ ಮೃತಪಟ್ಟ ಪುರೋಹಿತರ ಅಂತ್ಯ ಸಂಸ್ಕಾರ ನೆರವೇರಿಸುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ" ಎಂದು ಅಧಿಕಾರಿ ಮೂಲಗಳಿಂದ ತಿಳಿದು ಬಂದಿದೆ.
ಏನಿದು ಪುರೋಹಿತನ ಹತ್ಯೆ ಪ್ರಕರಣ?
ಭೂಮಿ ವಿವಾದಕ್ಕೆ ಸಂಬಂಧಿಸಿದಂತೆ ದೇಗುಲದ ಅರ್ಚರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಈ ಘಟನೆ ಹಿನ್ನೆಲೆ ಆರು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಜೈಪುರ್ ನಿಂದ 177 ಕಿ.ಮೀ ದೂರದಲ್ಲಿರುವ ಕರೌಲಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ರಾಧಾ-ಕೃಷ್ಣ ದೇವಸ್ಥಾನಕ್ಕೆ ಸೇರಿದ 5.2 ಎಕರೆ ಭೂಮಿಗಾಗಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದೆ. ವಿರೋಧಿ ಗುಂಪಿನ ಸದಸ್ಯರು ದೇವಸ್ಥಾನದ ಅರ್ಚಕನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ.
ಕಳೆದ ಬುಧವಾರ ರಾಧಾ-ಕೃಷ್ಣ ದೇವಸ್ಥಾನದ ಅರ್ಚಕ ಬಾಬು ಲಾಲ್ ವೈಷ್ಣವ್ ಎಂಬುವವರ ಮೇಲೆ ಮೀನಾ ಸಮುದಾಯದ ವಿರೋಧಿ ಗುಂಪಿನ ಜನರು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಅರ್ಚಕರನ್ನು ಆಸ್ಪತ್ರೆಗೆ ದಾಖಲಿಸಲಾಗಿಯಿತಾದರೂ, ಚಿಕಿತ್ಸೆ ಫಲಕಾರಿಯಾಗದೇ ಅರ್ಚಕರು ಪ್ರಾಣ ಬಿಟ್ಟಿದ್ದಾರೆ.