ರಾಜಸ್ಥಾನದಲ್ಲಿ ಮತ್ತೆ 'ಕೈ' ಜೋಡಿಸಿದ ಗೆಹ್ಲೋಟ್ ಮತ್ತು ಪೈಲಟ್!
ಜೈಪುರ್, ಆಗಸ್ಟ್.13: ರಾಜಸ್ಥಾನದಲ್ಲಿ ವಿಧಾನಸಭಾ ಕಲಾಪ ಆರಂಭಕ್ಕೆ ಕೆಲವು ಗಂಟೆಗಳಷ್ಟೇ ಬಾಕಿ ಉಳಿರುವಂತೆ ಅಚ್ಚರಿಯ ಬೆಳವಣಿಗೆಳು ನಡೆದಿವೆ. ಶುಕ್ರವಾರ ಅಧಿವೇಶನ ಆರಂಭವಾಗಲಿದ್ದು, ಗುರುವಾರ ಸಂಜೆ 5 ಗಂಟೆಗೆ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನೇತೃತ್ವದಲ್ಲಿ ಶಾಸಕಾಂಗ ಸಭೆ ನಡೆಸಲಾಯಿತು.
ಜೈಪುರದಲ್ಲಿರುವ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನಿವಾಸದಲ್ಲಿ ನಡೆದ ಸಭೆಯಲ್ಲಿ ಸರ್ಕಾರದ ವಿರುದ್ಧ ಮುನಿಸಿಕೊಂಡಿದ್ದ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ಕೂಡಾ ಹಾಜರಾಗಿದ್ದು ಎಲ್ಲರ ಹುಬ್ಬೇರಿಸುವಂತೆ ಮಾಡಿತ್ತು. ಕಾಂಗ್ರೆಸ್ ಪಕ್ಷದ ಶಾಸಕರೆಲ್ಲ ಸಭೆಯ ಬಳಿಕ ವಿಕ್ಟರಿ ಚಿಹ್ನೆಯನ್ನು ತೋರಿಸಿದ್ದು, ವಿಶೇಷವಾಗಿತ್ತು.
ಸಚಿನ್ ಪೈಲೆಟ್ ಬಣದ ಇಬ್ಬರು ಶಾಸಕರ ಅಮಾನತು ವಾಪಸ್!
ಸರ್ಕಾರದ ವಿರುದ್ಧ ಬಂಡಾಯದ ಬಾವುಟ ಹಾರಿಸಿದ್ದ ಒಂದು ತಿಂಗಳ ನಂತರ ಮೊದಲ ಬಾರಿಗೆ ಸಿಎಂ ಅಶೋಕ್ ಗೆಹ್ಲೋಟ್ ಮತ್ತು ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ಮುಖಾಮುಖಿಯಾದರು. ಕಳೆದ ಒಂದು ತಿಂಗಳಿನಿಂದ ಪಕ್ಷದಲ್ಲಿ ಏನೇ ಮನಸ್ತಾಪಗಳಿದ್ದರೂ, ಎಲ್ಲವನ್ನೂ ಮರೆತು ದೇಶ, ರಾಜ್ಯ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳಿಗೋಸ್ಕರ ಎಲ್ಲವನ್ನೂ ಮರೆತು ಒಗ್ಗಟ್ಟಾಗಿದ್ದೇವೆ ಎಂದು ಅಶೋಕ್ ಗೆಹ್ಲೋಟ್ ಟ್ವೀಟ್ ಮಾಡಿದ್ದಾರೆ.
ಇಬ್ಬರು ಶಾಸಕರ ಅಮಾನತು ಆದೇಶ ವಾಪಸ್:
ಕಳೆದ ಜುಲೈ.17ರಂದು ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ಬಣದಲ್ಲಿ ಗುರುತಿಸಿಕೊಂಡಿದ್ದ ಶಾಸಕ ಬನ್ವಾರ್ ಲಾಲ್ ಶರ್ಮಾ ಮತ್ತು ವಿಶ್ವೇಂದ್ರ ಸಿಂಗ್ ರನ್ನು ಅಮಾನತುಗೊಳಿಸಿ ಆದೇಶಿಸಲಾಗಿತ್ತು. ಆದರೆ ಬುಧವಾರ ಇಬ್ಬರು ಶಾಸಕರ ಅಮಾನತು ಆದೇಶವನ್ನು ವಾಪಸ್ ಪಡೆದುಕೊಳ್ಳಲಾಗಿದೆ.
ಇಬ್ಬರು ಶಾಸಕರು ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಜೊತೆ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಟೇಪ್ ಬಹಿರಂಗವಾಗಿತ್ತು. ಶಾಸಕರು ಕಾಂಗ್ರೆಸ್ ಸರ್ಕಾರ ಪತನಗೊಳಿಸಲು ಸಂಚು ರೂಪಿಸಿದ್ದಾರೆ ಎಂಬ ಆರೋಪದ ಮೇಲೆ ಅವರನ್ನು ಅಮಾನತು ಮಾಡಲಾಗಿತ್ತು.