ಕರೌಲಿ ಹಿಂಸಾಚಾರ: ಜೀವದ ಹಂಗು ತೊರೆದು ಮಗುವನ್ನು ರಕ್ಷಿಸಿದ ಪೊಲೀಸ್ ಪೇದೆ
ಶನಿವಾರ (ಏಪ್ರಿಲ್ 2) ಕರೌಲಿಯಲ್ಲಿ ನಡೆದ ಕೋಮುಗಲಭೆಯ ಸಂದರ್ಭದಲ್ಲಿ ಶಿಶುವನ್ನು ರಕ್ಷಿಸಿದ್ದಕ್ಕಾಗಿ ರಾಜಸ್ಥಾನದ ಪೊಲೀಸ್ ಪೇದೆಯೊಬ್ಬರನ್ನು ಶ್ಲಾಘಿಸಲಾಗುತ್ತಿದೆ. 31 ವರ್ಷದ ಕಾನ್ಸ್ಟೇಬಲ್ ನೇತ್ರೇಶ್ ಶರ್ಮಾ ಕರೌಲಿ ಪ್ರದೇಶದಲ್ಲಿ ಸಿಕ್ಕಿಬಿದ್ದಿದ್ದ ಇಬ್ಬರು ಮಹಿಳೆಯರಿಂದ ಮಗುವನ್ನು ಬೆಂಕಿಯಿಂದ ರಕ್ಷಣೆ ಮಾಡಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು ಪ್ರಶಂಸೆ ವ್ಯಕ್ತವಾಗುತ್ತಿದೆ.
ಹಿಂದೂ ಹೊಸ ವರ್ಷ ಯುಗಾದಿಯನ್ನು ಆಚರಿಸಲು ಕರೌಲಿಯಲ್ಲಿ ಮೋಟಾರ್ ಸೈಕಲ್ ರ್ಯಾಲಿ ಮಾಡುವ ವೇಳೆ ಮುಸ್ಲಿಂ ಗಲ್ಲಿಯಲ್ಲಿ ಈ ಹಿಂಸಾಚಾರ ಭುಗಿಲೆದ್ದಿದೆ. "ನಾನು ಮೋಟಾರು ಸೈಕಲ್ ಗಸ್ತಿನಲ್ಲಿ ಮುನ್ನಡೆಸುವ ಮೂಲಕ ಮೆರವಣಿಗೆಗೆ ರಕ್ಷಣೆ ನೀಡುತ್ತಿದ್ದೆ. ಇದ್ದಕ್ಕಿದ್ದಂತೆ ಕಲ್ಲು ತೂರಾಟ ಪ್ರಾರಂಭವಾಯಿತು. ರಸ್ತೆಯಲ್ಲಿ ಇಬ್ಬರು ಕುಳಿತಿರುವುದನ್ನು ಕಂಡು ಅವರತ್ತ ಓಡಿದೆ. ಅವರು ಗಾಯಗೊಂಡಿದ್ದರು. ಹೀಗಾಗಿ ಅವರು ತಮ್ಮನ್ನು ಆಸ್ಪತ್ರೆಗೆ ಕರೆದೊಯ್ಯಲು ನನ್ನನ್ನು ವಿನಂತಿಸಿದರು. ನಾನು ಅವರಿಗೆ ಸಹಾಯ ಮಾಡಿದೆ" ಎಂದು ಶರ್ಮಾ ಸುದ್ದಿಗಾರರಿಗೆ ತಿಳಿಸಿದ್ದಾರೆ.
ತಕ್ಷಣ ಸ್ಥಳೀಯ ಅಂಗಡಿಗಳಿಗೆ ಬೆಂಕಿ ಹಚ್ಚಲಾಯಿತು. ಪೊಲೀಸರು ಬೆಂಕಿಯನ್ನು ನಂದಿಸುವಲ್ಲಿ ಮತ್ತು ಜನರನ್ನು ರಕ್ಷಿಸುವ ಕಾರ್ಯದಲ್ಲಿ ನಿರತರಾದರು. ಈ ವೇಳೆ ಎರಡು ಅಂಗಡಿಗಳ ಮಧ್ಯದಲ್ಲಿ ಉರಿಯುತ್ತಿರುವ ಬೆಂಕಿಯಲ್ಲಿ ಇಬ್ಬರು-ಮೂರು ಮಹಿಳೆಯರು ಸಿಕ್ಕಿಹಾಕಿಕೊಂಡಿರುವುದನ್ನು ಶರ್ಮಾ ನೋಡಿದ್ದಾರೆ. ಸಿಕ್ಕಿಕೊಂಡಿದ್ದ ಮಹಿಳೆಯರ ಒಬ್ಬರ ಕೈಯಲ್ಲಿ ಮಗು ಇತ್ತು. ಆ ದೃಶ್ಯವನ್ನು ನೋಡಿದ ತಕ್ಷಣ ಶರ್ಮಾ ಮನೆಗೆ ನುಗ್ಗಿದ್ದಾರೆ. ಕೂಡಲೇ ಮಗುವನ್ನು ಎತ್ತುಕೊಂಡು ಹೊರಗೆ ಓಡಿ ಬಂದಿದ್ದಾರೆ.
" ಬೆಂಕಿಯ ಜ್ವಾಲೆ ಹೊರಹೋಗುವ ದಾರಿಯನ್ನು ಆವರಿಸುತ್ತಿದ್ದಂತೆ ಮಹಿಳೆಯರು ನನಗೆ ಸಹಾಯ ಮಾಡುವಂತೆ ಬೇಡಿಕೊಂಡರು. ನಾನು ಒಳಹೋಗಿ ಶಾಲು ಹೊದಿಸಿದ ಮಗುವನ್ನು ನನಗೆ ಕೊಡಲು ಹೇಳಿದೆ. ನಾನು ಮಗುವನ್ನು ನನ್ನ ತೋಳುಗಳಲ್ಲಿ ತೆಗೆದುಕೊಂಡು ತಾಯಿ ಮತ್ತು ಇತರ ಮಹಿಳೆಯರಿಗೆ ನನ್ನ ಹಿಂದೆ ಹಿಂಬಾಲಿಸಲು ಹೇಳಿದೆ. ತಕ್ಷಣ ನಾನು ಹೊರ ಓಡಿ ಬಂದೆ" ಎಂದು ಅವರು ಹೇಳಿದ್ದಾರೆ. ಶರ್ಮಾ ಅವರು ತೋರಿದ ಸಾಹಸದ ಫೋಟೋ ವೈರಲ್ ಆಗಿದೆ. ಜೊತೆಗೆ ಅವರ ಮಹತ್ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ.
ಅವರ ಧೈರ್ಯದ ಕಾರ್ಯವನ್ನು ಆನ್ಲೈನ್ನಲ್ಲಿ ಮತ್ತು ರಾಜಸ್ಥಾನ ಪೊಲೀಸರಿಂದ ಶ್ಲಾಘಿಸಲಾಗುತ್ತಿರುವಾಗ, ಕಾನ್ಸ್ಟೆಬಲ್ ಶರ್ಮಾ ಅವರು "ನಾನು ನನ್ನ ಕರ್ತವ್ಯವನ್ನು ಮಾಡಿದ್ದೇನೆ" ಎಂದು ವಿನಮ್ರವಾಗಿ ಹೇಳಿಕೊಂಡಿದ್ದಾರೆ.
ಟ್ವಿಟ್ಟರ್ನಲ್ಲಿ ಬಳಕೆದಾರರು ಧೈರ್ಯಶಾಲಿ ಕಾನ್ಸ್ಟೇಬಲ್ಗೆ ವಂದನೆ ಸಲ್ಲಿಸುತ್ತಿದ್ದಾರೆ ಮತ್ತು ಅವರಿಗೆ ಶೌರ್ಯ ಪ್ರಶಸ್ತಿಯನ್ನು ನೀಡಬೇಕು ಎಂದು ಕೋರುತ್ತಿದ್ದಾರೆ. "ಮಗುವನ್ನು ರಕ್ಷಿಸಲು ತನ್ನ ಪ್ರಾಣದ ಹಂಗು ತೊರೆದ ಈ ವೀರ ಯೋಧನಿಗೆ ಹೃತ್ಪೂರ್ವಕ ವಂದನೆಗಳು. ಈ ವೀರ ಯೋಧನಿಗೆ ಪ್ರಶಸ್ತಿ ನೀಡಬೇಕು ಎಂದು ನಾನು ವಿನಂತಿಸುತ್ತೇನೆ" ಎಂದು ಬಳಕೆದಾರರು ಟ್ವೀಟ್ ಮಾಡಿದ್ದಾರೆ.
"ನೇತ್ರೇಶ್ ಶರ್ಮಾ ಅವರಿಗೆ ಬಡ್ತಿ ಮತ್ತು ಶೌರ್ಯ ಪ್ರಶಸ್ತಿ ನೀಡಿ ಗೌರವಿಸಬೇಕು. ಅವರು ತಮ್ಮ ಜೀವನದ ಬಗ್ಗೆ ಯೋಚಿಸದೆ 4 ಜನರ ಪ್ರಾಣವನ್ನು ಉಳಿಸಿದ್ದಾರೆ. ಅವರು ರಾಜಸ್ಥಾನ ಪೊಲೀಸರ ಗೌರವವನ್ನು ಮತ್ತು ಜನರ ವಿಶ್ವಾಸವನ್ನು ಹೆಚ್ಚಿಸಿದ್ದಾರೆ" ಎಂದು ಇನ್ನೊಬ್ಬ ಬಳಕೆದಾರರು ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಹಿಂಸಾಚಾರದ ನಂತರ ಕರೌಲಿಯಲ್ಲಿ ಕರ್ಫ್ಯೂ ವಿಧಿಸಲಾಗಿದೆ. ಶನಿವಾರ ಕಲ್ಲು ತೂರಾಟಕ್ಕೆ ಸಂಬಂಧಿಸಿದಂತೆ ಪೊಲೀಸರು 46 ಜನರನ್ನು ಬಂಧಿಸಿದ್ದಾರೆ. "ಘಟನೆಗೆ ಸಂಬಂಧಿಸಿದಂತೆ ಕರೌಲಿ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ 13 ಆರೋಪಿಗಳನ್ನು ಬಂಧಿಸಲಾಗಿದೆ ಮತ್ತು ಕರ್ಫ್ಯೂ ಆದೇಶ ಉಲ್ಲಂಘಿಸಿದ 33 ಜನರನ್ನು ಬಂಧಿಸಲಾಗಿದೆ. 07 ಜನರನ್ನು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಳ್ಳಲಾಗಿದೆ. ಒಟ್ಟು 21 ದ್ವಿಚಕ್ರ ಮತ್ತು ನಾಲ್ಕು ಚಕ್ರದ ವಾಹನಗಳನ್ನು ಸಹ ಪೊಲೀಸರು ವಶಪಡಿಸಿಕೊಂಡಿದ್ದಾರೆ" ಎಂದು ಭರತ್ಪುರ ರೇಂಜ್ನ ಪೊಲೀಸ್ ಇನ್ಸ್ಪೆಕ್ಟರ್ ಜನರಲ್ (ಐಜಿ) ಪ್ರಸನ್ನ ಕುಮಾರ್ ಖಮೇಸ್ರಾ ತಿಳಿಸಿದ್ದಾರೆ. ರಾಜ್ಯದ ರಾಜಧಾನಿ ಜೈಪುರದಿಂದ 170 ಕಿಮೀ ದೂರದಲ್ಲಿರುವ ಕರೌಲಿಯಲ್ಲಿ ವದಂತಿಗಳ ಹರಡುವಿಕೆಯನ್ನು ಪರಿಶೀಲಿಸಲು ಮೊಬೈಲ್ ಇಂಟರ್ನೆಟ್ ಅನ್ನು ಸಹ ಸ್ಥಗಿತಗೊಳಿಸಲಾಗಿದೆ.