ಅಪಾಯಕಾರಿ ಕೊರೊನಾ: 100 ಸೋಂಕಿತರಲ್ಲಿ 90 ಮಂದಿ ಆಸ್ಪತ್ರೆಗೆ ದಾಖಲು!
ಜೈಪುರ್, ಏಪ್ರಿಲ್ 18: ರಾಜಸ್ಥಾನದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ಸಾಕಷ್ಟು ಅಪಾಯಕಾರಿ ಎನಿಸಿದೆ. ರಾಜ್ಯದ ಬಾರ್ಮರ್ ನಗರದಲ್ಲಿ ಪತ್ತೆಯಾದ ಶೇ.90ರಷ್ಟು ಸೋಂಕಿತರು ಆಸ್ಪತ್ರೆಗೆ ದಾಖಲಾಗಿದ್ದರೆ, ಈ ಪೈಕಿ ಶೇ.50ರಷ್ಟು ಸೋಂಕಿತರು ಆಕ್ಸಿಜನ್ ಸಹಾಯದಿಂದ ಉಸಿರಾಡುತ್ತಿದ್ದಾರೆ.
ಬಾರ್ಮರ್ ವೈದ್ಯಕೀಯ ಕಾಲೇಜಿನಲ್ಲಿ ಕೊವಿಡ್-19 ಸೋಂಕಿತರಿಗೆ ಅಗತ್ಯವಿರುವ ಆಕ್ಸಿಜನ್ ಕೊರತೆ ಎದುರಾಗಿದೆ. ಈ ಹಿನ್ನೆಲೆ ಆರೋಗ್ಯ ಇಲಾಖೆ ಖಾಸಗಿ ಗುತ್ತಿಗೆದಾರರಿಂದ ಆಮ್ಲಜನಕ ಖರೀದಿಸುತ್ತಿದೆ.
Explainer: ಕೊರೊನಾವೈರಸ್ ಅಲೆಗಳ ಆಯುಷ್ಯದ ಮೇಲೆ ಭಾರತದ ಭವಿಷ್ಯ!?
ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ 45 ಕೊರೊನಾವೈರಸ್ ಸೋಂಕಿತರು ಆಕ್ಸಿಜನ್ ಸಹಾಯದಿಂದ ಉಸಿರಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಕೊವಿಡ್-19 ಲಸಿಕೆ ಕೊರತೆಯಿಂದ 100ಕ್ಕೂ ಹೆಚ್ಚು ಲಸಿಕಾ ಕೇಂದ್ರಗಳು ಬಾಗಿಲು ಹಾಕಿವೆ. ಜಿಲ್ಲೆಯಲ್ಲಿ ಪ್ರತಿನಿತ್ಯ 40,000 ಡೋಸ್ ಲಸಿಕೆಗೆ ಬೇಡಿಕೆಯಿದ್ದು, ಕೇವಲ 10000 ಡೋಸ್ ಲಸಿಕೆ ಲಭ್ಯವಿದೆ.
ಮನೆಗಳಲ್ಲೇ ರಂಜಾನ್ ಪ್ರಾರ್ಥನೆ:
ಕೊರೊನಾವೈರಸ್ ಸೋಂಕಿನ ಹರಡುವಿಕೆ ವೇಗ ಹೆಚ್ಚುತ್ತಿರುವ ಹಿನ್ನೆಲೆ ಬಾರ್ಮರ್ ಜಿಲ್ಲೆಯಲ್ಲಿ ತಿಲ್ವಾರ್ ಜಾತ್ರೆಯನ್ನು ರದ್ದುಗೊಳಿಸಲಾಗಿದೆ. ಇದರ ಮಧ್ಯೆ ರಂಜಾನ್ ತಿಂಗಳು ಆಗಿರುವುದರಿಂದ ಮನೆಗಳಲ್ಲೇ ಪ್ರಾರ್ಥನೆ ಸಲ್ಲಿಸುವಂತೆ ಮನವಿ ಮಾಡಿಕೊಳ್ಳಲಾಗಿದೆ.
ಬಾರ್ಮರ್ ಜಿಲ್ಲೆಯಲ್ಲಿ ಕಳೆದ 10 ದಿನಗಳಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡು ಬಂದಿದೆ. ಈ ಹಿಂದೆ ಸಾಕಷ್ಟು ಬಾರಿ ಆಕ್ಸಿಜನ್ ಕೊರತೆ ಎದುರಾಗಿತ್ತು. ಆದರೆ ಈ ಹಂತದಲ್ಲಿ ಆಮ್ಲಜನಕ ಕೊರತೆ ಕಾಣಿಸಿಕೊಂಡಿಲ್ಲ ಎಂದು ಆರೋಗ್ಯ ಅಧಿಕಾರಿ ಬಾಬುಲಾಲ್ ವಿಷ್ಣು ತಿಳಿಸಿದ್ದಾರೆ.