ಪೆಹ್ಲು ಖಾನ್ ಮತ್ತು ಮಕ್ಕಳ ವಿರುದ್ಧ ಗೋ ಕಳ್ಳಸಾಗಣೆ ಆರೋಪ ರದ್ದು
ಜೈಪುರ್ (ರಾಜಸ್ಥಾನ), ಅಕ್ಟೋಬರ್ 30: ಪೆಹ್ಲು ಖಾನ್ ಪ್ರಕರಣದಲ್ಲಿ ಅಕ್ರಮ ಗೋ ಸಾಗಣೆ ಆರೋಪ ಹೊತ್ತಿದ್ದ ಆತನ ಮಕ್ಕಳು ಮತ್ತು ಇತರರ ವಿರುದ್ಧದ ಪ್ರಕರಣವನ್ನು ರದ್ದು ಮಾಡಲಾಗಿದೆ.
ಪೆಹ್ಲು ಖಾನ್ ಎಂಬಾತ ತನ್ನ್ ಇಬ್ಬರು ಮಕ್ಕಳು, ಟ್ರಕ್ ಚಾಲಕನ ಜತೆಗೆ ಸೇರಿ ಕಾನೂನುಬಾಹಿರವಾಗಿ ಗೋ ಸಾಗಣೆ ಮಾಡುತ್ತಿರುವುದಾಗಿ ಆರೋಪಿಸಿ, 2017ರ ಏಪ್ರಿಲ್ ನಲ್ಲಿ ಗೋ ರಕ್ಷಕರಿಂದ ಪೆಹ್ಲು ಖಾನ್ ಹತ್ಯೆಯಾಗಿತ್ತು. ಗೋ ವಧೆ ಮಾಡಲೆಂದು ಸಾಗಿಸುತ್ತಿದ್ದರು ಎಂದು ಆರೋಪ ಮಾಡಲಾಗಿತ್ತು. ಆದರೆ ಈ ಪ್ರಕರಣವನ್ನು ರಾಜಸ್ಥಾನ ಹೈ ಕೋರ್ಟ್ ಬುಧವಾರ ರದ್ದು ಮಾಡಿದೆ.
ಗೋಸಾಗಣೆ ಮಾಡುತ್ತಿದ್ದವನ ಗುಂಪು ಹತ್ಯೆ: 6 ಆರೋಪಿಗಳು ಖುಲಾಸೆ
ಏಕಸದಸ್ಯ ಪೀಠದ ನ್ಯಾ. ಪಂಕಜ್ ಭಂಡಾರಿ ಅವರು ರಾಜಸ್ಥಾನ ರಾಸು ಸಂರಕ್ಷಣಾ ಕಾಯ್ದೆ ಅಡಿ ರದ್ದು ಮಾಡಿದ್ದಾರೆ. ಗೋ ವಧೆಗಾಗಿಯೇ ಸಾಗಿಸಲಾಗುತ್ತಿತ್ತು ಎಂಬ ನಾಲ್ವರ ವಿರುದ್ಧ ಆರೋಪ ಪಟ್ಟಿಗೆ ಸಾಕ್ಷ್ಯಾಧಾರ ಇಲ್ಲದ ಕಾರಣ ಪ್ರಕರಣವನ್ನು ರದ್ದು ಮಾಡಿದ್ದಾರೆ.
ಟ್ರಕ್ ಚಾಲಕ ಖಾನ್ ಮೊಹಮ್ಮದ್ ಹಾಗೂ ಪೆಹ್ಲು ಖಾನ್ ರ ಇಬ್ಬರು ಮಕ್ಕಳು ಹೈ ಕೋರ್ಟ್ ನಲ್ಲಿ ಅರ್ಜಿ ಹಾಕಿಕೊಂಡಿದ್ದರು. ಸ್ಥಳೀಯ ಪ್ರಾಣಿ ಮಾರಾಟ ಮಾರುಕಟ್ಟೆ ರಸೀದಿ ಪ್ರಕಾರ, ಡೇರಿಗಾಗಿ ರಾಸು ಖರೀದಿ ಮಾಡಲಾಗಿತ್ತು. ಹಾಲು ಕೊಡುವ ಹಸುಗಳು ಹಾಗೂ ಕರುಗಳನ್ನು ಸಾಗಾಟ ಮಾಡಲಾಗುತ್ತಿತ್ತು ಎಂದು ವಕೀಲರು ತಿಳಿಸಿದ್ದಾರೆ.
ಪೆಹ್ಲು ಖಾನ್ ಮಗ ಇರ್ಷಾದ್ ಪಿಟಿಐ ಸುದ್ದಿ ಸಂಸ್ಥೆ ಜತೆ ಮಾತನಾಡಿ, ನಾವಿಬ್ಬರು ಸಹೋದರರ ವಿರುದ್ಧ ಎಫ್ ಐಆರ್ ಹಾಗ್ಗೂ ದೋಷಾರೋಪ ಪಟ್ಟಿ ರದ್ದು ಮಾಡಲು ಹೈ ಕೋರ್ಟ್ ನಿರ್ದೇಶನ ನೀಡಿರುವುದು ಖುಷಿ ತಂದಿದೆ. ನಾವು ಗೋ ವಧೆಗೆ ತೆಗೆದುಕೊಂಡು ಹೋಗುತ್ತಿರಲಿಲ್ಲ. ಆದರೂ ನಮ್ಮ ಮೇಲೆ ದಾಳಿ ನಡೆಯಿತು ಎಂದು ಹೇಳಿದ್ದಾರೆ.
ಎರಡೂವರೆ ವರ್ಷದ ಹಿಂದೆ ಪೆಹ್ಲು ಖಾನ್ ಮತ್ತು ಅವರ ಇಬ್ಬರು ಮಕ್ಕಳು ಮತ್ತಿತರರು ಗೋ ಸಾಗಾಟ ಮಾಡುತ್ತಿದ್ದಾಗ ಅಳ್ವಾರ್ ಜಿಲ್ಲೆಯ ಬೆಹ್ರೊರ್ ಬಳಿ ಗುಂಪೊಂದು ತಡೆದು, ಹಲ್ಲೆ ನಡೆಸಿತ್ತು. ಆ ಘಟನೆಯಾಗಿ ಎರಡು ದಿನಕ್ಕೆ ಆಸ್ಪತ್ರೆಯಲ್ಲಿ ಖಾನ್ ಸಾವನ್ನಪ್ಪಿದ್ದರು. ಈ ಘಟನೆ ನಂತರ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಗೋ ರಕ್ಷಣೆ ಹೆಸರಿನಲ್ಲಿ ನಡೆಯುವ ದಾಳಿ ಬಗ್ಗೆ ಗಮನ ಸೆಳೆದಿತ್ತು.
ಅಳ್ವಾರ್ ಕೋರ್ಟ್ ನಿಂದ ಈ ವರ್ಷದ ಆಗಸ್ಟ್ ಹದಿನಾಲ್ಕನೇ ತಾರೀಕು ಆರು ಮಂದಿ ಆರೋಪಿಗಳನ್ನು ಖುಲಾಸೆಗೊಳಿಸಿತ್ತು. ಆ ನಂತರ ರಾಜಸ್ಥಾನ ಸರ್ಕಾರವು ಆರೋಪಿಗಳ ಖುಲಾಸೆ ವಿರುದ್ಧ ಹೈ ಕೋರ್ಟ್ ನಲ್ಲಿ ಅರ್ಜಿ ಹಾಕಿತ್ತು. ವಿಶೇಷ ತನಿಖಾ ತಂಡ ರಚಿಸಿ, ತನಿಖೆಯಲ್ಲಾದ ಲೋಪ- ದೋಷಗಳನ್ನು ಪತ್ತೆ ಹಚ್ಚಲು ತಿಳಿಸಿತ್ತು. ತನಿಖೆಯಲ್ಲಿ ಲೋಪ ಆಗಿದ್ದಕ್ಕೆ ತನಿಖಾಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಿತ್ತು.