ರಾಜಸ್ತಾನದಲ್ಲಿ ಗುಜ್ಜರ್ ಇತರ ನಾಲ್ಕು ಸಮುದಾಯಕ್ಕೆ 5 ಪರ್ಸೆಂಟ್ ಮೀಸಲಾತಿ
ಜೈಪುರ್ (ರಾಜಸ್ತಾನ), ಫೆಬ್ರವರಿ 13: ರಾಜಸ್ತಾನದ ರಾಜ್ಯ ಸರಕಾರವು ಫೆಬ್ರವರಿ 13ರಂದು ಗುಜ್ಜರ್ ಸೇರಿದಂತೆ ಇತರ ನಾಲ್ಕು ಸಮುದಾಯಗಳಿಗೆ ಉದ್ಯೋಗ ಹಾಗೂ ಶಿಕ್ಷಣದಲ್ಲಿ ಶೇಕಡಾ 5ರಷ್ಟು ಮೀಸಲಾತಿ ಒದಗಿಸುವ ಮಸೂದೆಯನ್ನು ವಿಧಾನಸಭೆಯಲ್ಲಿ ಮಂಡಿಸಿದೆ.
ರಾಜಸ್ತಾನ ಹಿಂದುಳಿದ ವರ್ಗಗಳ (ರಾಜ್ಯದ ಶಿಕ್ಷಣ ಸಂಸ್ಥೆಗಳ ಸೀಟುಗಳಲ್ಲಿ ಹಾಗೂ ರಾಜ್ಯ ಸರಕಾರಗಳ ಸೇವೆಗಳ ನೇಮಕ ಮತ್ತು ಹುದ್ದೆಗಳಲ್ಲಿ ಮೀಸಲಾತಿ) ತಿದ್ದುಪಡಿ ಮಸೂದೆ, 2019 ಅನ್ನು ಸಚಿವ ಬಿ.ಡಿ.ಕಲ್ಲ ಮಂಡನೆ ಮಾಡಿದರು.
ಹಿಂಸಾಚಾರಕ್ಕೆ ತಿರುಗಿದ ಗುಜ್ಜರ್ ಸಮುದಾಯದ ಪ್ರತಿಭಟನೆ, ಪೊಲೀಸರಿಗೆ ಕಲ್ಲು
ಕಳೆದ ಶುಕ್ರವಾರದಿಂದಲೂ ರಾಜಸ್ತಾನದಲ್ಲಿ ಮೀಸಲಾತಿಗೆ ಒತ್ತಾಯಿಸಿ ಗುಜ್ಜರ್ ಸಮುದಾಯದವರು ಪ್ರತಿಭಟನೆ ನಡೆಸುತ್ತಿದ್ದಾರೆ. ದೆಹಲಿ-ಮುಂಬೈ ರೈಲು ಹಳಿಗಳು ಹಾಗೂ ಹಲವಾರು ಹೆದ್ದಾರಿ ಮತ್ತು ರಸ್ತೆಗಳನ್ನು ತಡೆದಿದ್ದರು.
ಇದೀಗ ಮಸೂದೆಯು ಹಿಂದುಳಿದ ವರ್ಗಗಳ ಮೀಸಲಾತಿಯನ್ನು ಸದ್ಯ ಇರುವ ಇಪ್ಪತ್ತೊಂದು ಪರ್ಸೆಂಟ್ ನಿಂದ ಇಪ್ಪತ್ತಾರು ಪರ್ಸೆಂಟ್ ಗೆ ಏರಿಸಲಿದೆ. ಇದರ ಲಾಭವು ಗುಜ್ಜರ್, ಬಂಜಾರ, ಗದಿಯಾ ಲೋಹರ್, ರೈಕಾ ಹಾಗೂ ಗದರಿಯಾ ಸಮುದಾಯಗಳಿಗೆ ಸಿಗಲಿದೆ.
ಈ ಐದು ಸಮುದಾಯಗಳು ಬಹಳ ಹಿಂದುಳಿದಿವೆ. ಇವರಿಗೆ ಪ್ರತ್ಯೇಕವಾಗಿ ಐದು ಪರ್ಸೆಂಟ್ ಮೀಸಲಾತಿ ಅಗತ್ಯವಿದೆ ಎಂಬ ಕಾರಣವನ್ನು ಮಸೂದೆಯಲ್ಲಿ ನೀಡಲಾಗಿದೆ. ಈಚೆಗೆ ಕೇಂದ್ರ ಸರಕಾರವು ಸಂವಿಧಾನ ತಿದ್ದುಪಡಿ ಮಸೂದೆಗೆ ಒಪ್ಪಿಗೆ ಪಡೆದಿದ್ದು, ಐವತ್ತು ಪರ್ಸೆಂಟ್ ಮೀಸಲಾತಿ ಪ್ರಮಾಣ ಏರಿಕೆ ಆಗಿದೆ.
ಅದರೆ, ಗಟ್ಟಿಯಾದ ತೀರ್ಮಾನ ಈ ಕುರಿತಂತೆ ಬರಬೇಕು ಎಂದು ಗುಜ್ಜರ್ ಸಮುದಾಯದ ನಾಯಕರು ಹೇಳಿದ್ದಾರೆ.