ಆರು ವರ್ಷದ ಕಂದಮ್ಮನನ್ನೂ ಬಿಡದ ಪಾಪಿ ಅತ್ಯಾಚಾರಿಗಳು
ಜೈಪುರ, ಡಿಸೆಂಬರ್ 2: ಆರು ವರ್ಷದ ಮುಗ್ಧ ಕಂದಮ್ಮನನ್ನು ಅಪಹರಿಸಿದ ದುಷ್ಕರ್ಮಿಗಳು ಆಕೆಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ ಮತ್ತೊಂದು ಹೃದಯ ವಿದ್ರಾವಕ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ.
ರಾಜಸ್ಥಾನದ ಟೊಂಕ್ ಜಿಲ್ಲೆಯ ಆರು ವರ್ಷದ ಶಾಲಾ ಬಾಲಕಿಯೊಬ್ಬಳು ಶನಿವಾರ ನಾಪತ್ತೆಯಾಗಿದ್ದಳು. ಆಕೆಯ ದೇಶ ಭಾನುವಾರ ಶಾಲಾ ಸಮವಸ್ತ್ರದೊಂದಿಗೆ ಪತ್ತೆಯಾಗಿದೆ. ಆಕೆಯ ಮೇಲೆ ಅತ್ಯಾಚಾರ ಎಸಗಿ ಸಮವಸ್ತ್ರದಲ್ಲಿನ ಬೆಲ್ಟ್ನಿಂದಲೇ ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಾಢನಿದ್ರೆಯಲ್ಲಿದ್ದ ಬಾಲಕಿಯನ್ನು ಸೇತುವೆ ಕೆಳಗೆ ಎಳೆದೊಯ್ದು ಅತ್ಯಾಚಾರ
ಅಲಿಘಡ ಪಟ್ಟಣದ ಖೆತಾದಿ ಎಂಬ ಗ್ರಾಮದಲ್ಲಿನ ನಿರ್ಜನ ಪ್ರದೇಶದ ಪೊದೆಗಳ ಸಮೀಪ ಆಕೆಯ ಮೃತದೇಹ ಪತ್ತೆಯಾಗಿದೆ. ಆಕೆಯ ದೇಹ ಸಿಕ್ಕ ಸ್ಥಳದಲ್ಲಿ ಮದ್ಯದ ಬಾಟಲಿಗಳು, ತಿನಿಸುಗಳು ಮತ್ತು ರಕ್ತದ ಕಲೆಗಳು ಪತ್ತೆಯಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. ತೆಲಂಗಾಣದಲ್ಲಿ ಪಶುವೈದ್ಯೆ, ಜಾರ್ಖಂಡ್ನ ರಾಂಚಿಯಲ್ಲಿ ಕಾನೂನು ವಿದ್ಯಾರ್ಥಿನಿ ಮತ್ತು ಗುಜರಾತ್ನ ರಾಜ್ಕೋಟ್ನಲ್ಲಿ ರಾತ್ರಿ ಮನೆಯಲ್ಲಿ ಮಲಗಿದ್ದ ಬಾಲಕಿಯನ್ನು ಹೊತ್ತೊಯ್ದು ಅತ್ಯಾಚಾರ ಎಸಗಿದ ಆಘಾತಕಾರಿ ಘಟನೆಗಳ ಬೆನ್ನಲ್ಲೇ ಮತ್ತೊಂದು ಹೀನ ಕೃತ್ಯ ವರದಿಯಾಗಿದೆ.
ಶಾಲೆಯಲ್ಲಿ ಕ್ರೀಡಾಕೂಟ
ಆ ಬಾಲಕಿ ಓದುತ್ತಿದ್ದ ಶಾಲೆಯಲ್ಲಿ ಶನಿವಾರ ಕ್ರೀಡಾ ಸ್ಪರ್ಧೆಗಳು ನಡೆದಿದ್ದವು. ಸ್ಪರ್ಧೆ ಮುಗಿದ ಬಳಿಕ ಬಾಲಕಿ ಕಾಣೆಯಾಗಿದ್ದಳು. ಶಾಲೆ ಮುಗಿದು ಮಧ್ಯಾಹ್ನ 3 ಗಂಟೆಯಾದರೂ ಬಾಲಕಿ ಮನೆಗೆ ಬಾರದಿದ್ದರಿಂದ ಆಕೆಯ ಪೋಷಕರು ಹುಡುಕಾಟ ಆರಂಭಿಸಿದ್ದರು. ಹೊಲಗಳು ಮತ್ತು ಸಂಬಂಧಿಕರ ಮನೆಗಳಲ್ಲಿ ಹಲವು ಗಂಟೆಗಳ ಕಾಲ ಹುಡುಕಾಡಿದ್ದರು. ಶಾಲೆಯಿಂದ ಸುಮಾರು ಅರ್ಧ ಕಿ.ಮೀ. ದೂರದಲ್ಲಿಯೇ ಇರುವ ನಿರ್ಜನ ಪ್ರದೇಶದಲ್ಲಿ ಭಾನುವಾರ ಬೆಳಿಗ್ಗೆ ಆಕೆಯ ರಕ್ತಸಿಕ್ತ ದೇಹ ಪತ್ತೆಯಾಗಿದೆ.
ಸ್ಥಳೀಯರ ಕಣ್ಣಿಗೆ ಬಿದ್ದ ದೇಹ
ಆಕೆಯ ಮೃತದೇಹ ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳದಲ್ಲಿ ಭಾರಿ ಸಂಖ್ಯೆಯಲ್ಲಿ ನೆರೆದಿದ್ದ ಜನರು ಘಟನೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸರು ಮತ್ತು ವಿಧಿವಿಜ್ಞಾನ ಪರಿಣತರ ತಂಡ ಬಾಲಕಿಯ ಅತ್ಯಾಚಾರ ಮತ್ತು ಸಾವಿನ ಪ್ರಕರಣದ ತನಿಖೆ ನಡೆಸಿವೆ. ಬಾಲಕಿ ಸರ್ಕಾರಿ ಶಾಲೆಯೊಂದರಲ್ಲಿ ಒಂದನೇ ತರಗತಿ ಓದುತ್ತಿದ್ದಳು.
ತೆಲಂಗಾಣ ಅತ್ಯಾಚಾರ ಪ್ರಕರಣ: ಒಂದು ಗಂಟೆಯಲ್ಲೇ ಅದೆಲ್ಲಾ ಮುಗಿದಿತ್ತು
ವಿಶೇಷ ತಂಡಗಳ ರಚನೆ
ಆ ಗ್ರಾಮದಲ್ಲಿ ಮರಣೋತ್ತರ ಪರೀಕ್ಷೆಗೆ ಸೌಲಭ್ಯ ಇಲ್ಲದ ಕಾರಣ ಬೇರೆ ಸ್ಥಳಕ್ಕೆ ಮೃತದೇಹವನ್ನು ಕೊಂಡೊಯ್ಯಲಾಯಿತು. ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಎಂಬುದಾಗಿ ಪ್ರಾರಂಭಿಕ ತನಿಖೆಯನ್ನು ನಡೆಸಲಾಗಿದೆ. ಅರೋಪಿಯ ಪತ್ತೆಗೆ ಬಲೆ ಬೀಸಲಾಗಿದೆ. ಅದಕ್ಕಾಗಿ ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಆದರ್ಶ್ ಸಿಂಧ್ ತಿಳಿಸಿದ್ದಾರೆ.
ಪಶುವೈದ್ಯೆ ಹತ್ಯೆ; ಪ್ರಕರಣದ ವಿಚಾರಣೆಗೆ ತ್ವರಿತಗತಿ ನ್ಯಾಯಾಲಯ
ಸಂಬಂಧಿಕರ ಮನೆಗೆ ಹೋಗಿರಬಹುದು...
ಬಾಲಕಿಯ ಪೋಷಕರ ಮನೆ ಸಮೀಪದಲ್ಲಿಯೇ ಸೋದರ ಮಾವಂದಿರ ನಾಲ್ಕು ಮನೆಗಳಿದ್ದವು. ಸಾಮಾನ್ಯವಾಗಿ ರಜೆ ಇದ್ದಾಗ ಆಕೆ ಅವರ ಮನೆಗಳಲ್ಲಿಯೇ ಉಳಿದುಕೊಳ್ಳುತ್ತಿದ್ದಳು. ಹೀಗಾಗಿ ಆಕೆ ಸಂಜೆಯಾದರೂ ಮನೆಗೆ ಬಾರದಿದ್ದಾಗ ಅವರಲ್ಲಿಯೇ ಒಂದು ಮನೆಗೆ ಹೋಗಿ ಮಲಗಿರಬಹುದು ಎಂದು ಪೋಷಕರು ಭಾವಿಸಿದ್ದರು. ಹೀಗಾಗಿ ಆಕೆ ಮನೆಗೆ ಬಾರದೆ ಇದ್ದರೂ ಅವರು ಪೊಲೀಸರಿಗೆ ದೂರು ನೀಡಲು ಹೋಗಿರಲಿಲ್ಲ.