ರಾಜಸ್ತಾನ ಸರಕಾರಕ್ಕೆ ಕೃಷಿ ಸಾಲ ಮನ್ನಾದಿಂದ 70 ಸಾವಿರ ಕೋಟಿ ಹೆಚ್ಚುವರಿ ಹೊರೆ
ಜೈಪುರ್, ಡಿಸೆಂಬರ್ 19: ವಿಧಾನಸಭಾ ಚುನಾವಣೆ ಪ್ರಚಾರದ ವೇಳೆ ಕಾಂಗ್ರೆಸ್ ಪಕ್ಷ ನೀಡಿದ ಮಾತಿನಂತೆ ಕೃಷಿ ಸಾಲ ಮನ್ನಾ ಮಾಡುವುದಕ್ಕೆ ರಾಜಸ್ತಾನದ ರಾಜ್ಯ ಸರಕಾರಕ್ಕೆ 70 ಸಾವಿರ ಕೋಟಿ ರುಪಾಯಿ ಆರ್ಥಿಕ ಹೊರೆ ಆಗಲಿದೆ ಎಂದು ಅಲ್ಲಿ ಆರ್ಥಿಕ ಇಲಾಖೆ ಅಂದಾಜು ಮಾಡಿದೆ.
ಕಾಂಗ್ರೆಸ್ ಅಧಿಕಾರಕ್ಕೆ ಬಂದ ಹತ್ತು ದಿನದೊಳಗೆ ಕೃಷಿ ಸಾಲ ಮನ್ನಾ ಮಾಡಲಾಗುವುದು ಎಂದು ರಾಹುಲ್ ಗಾಂಧಿ ಮಾತು ಕೊಟ್ಟಿದ್ದರು. ಈಗಾಗಲೇ ಕಾಂಗ್ರೆಸ್ ಜಯ ಗಳಿಸಿರುವ ಮಧ್ಯಪ್ರದೇಶ ಮತ್ತು ಛತ್ತೀಸ್ ಗಢದಲ್ಲಿ ಅಲ್ಪಕಾಲೀನ ಸಾಲ ಮನ್ನಾ ಘೋಷಣೆ ಮಾಡಿಯಾಗಿದೆ.
ರೈತರ ಸಾಲ ಮನ್ನಾ ಬಗ್ಗೆ ಸುಳ್ಳು ಹೇಳುತ್ತಿರುವ ರಾಹುಲ್, ವಾಸ್ತವ ಏನು?
ಈಗ ರಾಜಸ್ತಾನದಲ್ಲಿ ಅಶೋಕ್ ಗೆಹ್ಲೋಟ್ ನೇತೃತ್ವದ ಸರಕಾರವು ಕೃಷಿ ಸಾಲ ಮನ್ನಾ ವಿಚಾರವಾಗಿ ವಿವಿಧ ಸಾಧ್ಯತೆಗಳ ಬಗ್ಗೆ ಆರ್ಥಿಕ ಇಲಾಖೆ ಜತೆಗೆ ಚರ್ಚೆ ನಡೆಸುತ್ತಿದೆ. ಮೂಲಗಳ ಪ್ರಕಾರ, ಸಂಪೂರ್ಣ ಸಾಲ ಮನ್ನಾ ಮಾಡಲು 70 ಸಾವಿರ ಕೋಟಿ ರುಪಾಯಿ ಬೇಕಾಗುತ್ತದೆ.
ಇನ್ನು ಅಲ್ಪಕಾಲೀನ ಸಾಲ (ಒಂದು ವರ್ಷ ಅಥವಾ ಕಡಿಮೆ ಅವಧಿ) 50 ಸಾವಿರ ಕೋಟಿ ರುಪಾಯಿ ಇದೆ. ರಾಜ್ಯ ಸಹಕಾರಿ ಬ್ಯಾಂಕ್ ಗಳಲ್ಲಿ 20 ಸಾವಿರ ಕೋಟಿ ಬಾಕಿ ಬರಬೇಕಾದದ್ದು ಇದ್ದರೆ, ಉಳಿದದ್ದು ರಾಷ್ಟ್ರೀಕೃತ ಬ್ಯಾಂಕ್ ಗಳ ಸಾಲವಾಗಿದೆ.
ಒಟ್ಟಾರೆ ಬಜೆಟ್ ನ 47% ಮೊತ್ತ
ರಾಜಸ್ತಾನ ವಿ.ವಿ.ಯ ಅರ್ಥಶಾಸ್ತ್ರ ಪ್ರಾಧ್ಯಾಪಕರೊಬ್ಬರು ಈ ಬಗ್ಗೆ ಮಾತನಾಡಿ, ಇದು ಬಹಳ ದೊಡ್ಡ ಮೊತ್ತ. ಇದರಿಂದ ಜನ ಸಾಮಾನ್ಯರಿಗೆ ಅನುಕೂಲ ಇಲ್ಲ. ಇದು ಒಟ್ಟಾರೆ ಬಜೆಟ್ 47% ಮೊತ್ತ. ಅಂದರೆ 99 ಸಾವಿರ ಕೋಟಿ. ಈ ರೀತಿಯ ಸಾಲ ಮನ್ನಾದಿಂದ ಆರ್ಥಿಕತೆಗೆ ಸಹಾಯ ಆಗುವುದಿಲ್ಲ. ದೀರ್ಘಾವಧಿಯಲ್ಲಿ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದಿದ್ದಾರೆ.
ವಸುಂಧರಾ ರಾಜೇ ಐವತ್ತು ಸಾವಿರ ತನಕ ಮನ್ನಾ ಮಾಡಿದ್ದರು
ಇವೆಲ್ಲ ರಾಜಕೀಯ ನಿರ್ಧಾರಗಳು. ದೀರ್ಘಾವಧಿಯಲ್ಲಿ ದೇಶದ ಹಿತಾಸಕ್ತಿ ಗಮನದಲ್ಲಿ ಇಟ್ಟುಕೊಂಡು ತೆಗೆದುಕೊಂಡದ್ದಲ್ಲ ಎಂದು ಹೇಳಿದ್ದಾರೆ. ವಸುಂಧರಾ ರಾಜೇ ಅವರು ಮುಖ್ಯಮಂತ್ರಿ ಆಗಿದ್ದಾಗ ಇದೇ ವರ್ಷ, ರಾಜ್ಯ ಸಹಕಾರ ಬ್ಯಾಂಕ್ ಗಳಲ್ಲಿ ಕೃಷಿಕರ ಐವತ್ತು ಸಾವಿರ ರುಪಾಯಿವರೆಗಿನ ಸಾಲ ಮನ್ನಾ ಮಾಡಲಾಗಿತ್ತು. ಅದರಿಂದಾಗಿ 8,400 ಕೋಟಿ ರುಪಾಯಿ ಹೊರೆಯಾಗಿತ್ತು.
ರಾಜಕೀಯದಲ್ಲಷ್ಟೇ ಹಗೆ... ಮಿಕ್ಕಂತೆ ನಾವಿರೋದೇ ಹೀಗೆ!
ಮಾರುಕಟ್ಟೆಯಿಂದ ಸಾಲ ಪಡೆಯುವ ಸಾಮರ್ಥ್ಯ ಕೂಡ ಇಲ್ಲ
ರಾಜಸ್ತಾನ ಸರಕಾರವು ಮಾರುಕಟ್ಟೆಯಿಂದ ಸಾಲ ಪಡೆಯುವ ಸ್ಥಿತಿಯಲ್ಲೂ ಇಲ್ಲ. ಏಕೆಂದರೆ ಈ ಬಾರಿಯ ಬಜೆಟ್ ಪ್ರಕಾರ ಸಾಲ ಪಡೆಯುವ ಸಾಮರ್ಥ್ಯ 36 ಸಾವಿರ ಕೋಟಿ. ಆ ಪೈಕಿ 25 ಸಾವಿರ ಕೋಟಿ ರುಪಾಯಿ ಈಗಾಗಲೇ ಸಾಲ ತೆಗೆದುಕೊಳ್ಳಲಾಗಿದೆ. ಆದ್ದರಿಂದ ಆ ಸಾಧ್ಯತೆ ಕೂಡ ಕ್ಷೀಣವಾಗಿದೆ. ಸಂಪೂರ್ಣ ಸಾಲ ಮನ್ನಾ ಮಾಡಬೇಕು ಅಂದರೆ ಬಜೆಟ್ ನಲ್ಲೇ ಅವಕಾಶ ಮಾಡಬೇಕಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ರಾಜಸ್ತಾನದ ಆರ್ಥಿಕ ಸ್ಥಿತಿ ಗಂಭೀರ
ಇನ್ನು ರಾಜಸ್ತಾನದ ಆರ್ಥಿಕ ಸ್ಥಿತಿ ನೋಡಿದರೆ ಛತ್ತೀಸ್ ಗಢ ಹಾಗೂ ಮಧ್ಯಪ್ರದೇಶಕ್ಕಿಂತ ಹೆಚ್ಚು ಗಂಭೀರವಾಗಿದೆ. 2014-15ರಲ್ಲಿ ಜಿಡಿಪಿಗೆ ಹೋಲಿಸಿದರೆ ವಿತ್ತೀಯ ಕೊರತೆ 3.1% ಇತ್ತು. 2018-19ರಲ್ಲಿ ಆ ಪ್ರಮಾಣ 3.5% ಇದೆ. ಬಿಜೆಪಿ ವಕ್ತಾರ ಮುಕೇಶ್ ಪಾರೀಕ್ ಮಾತನಾಡಿ, ಅವರು (ಕಾಂಗ್ರೆಸ್) ಜನರಿಗೆ ಮಾತು ಕೊಟ್ಟಿದ್ದಾರೆ, ಅದನ್ನು ಈಡೇರಿಸಲೇಬೇಕು ಎಂದಿದ್ದಾರೆ.