ರಾಜಸ್ಥಾನದಲ್ಲಿ ಬಿಜೆಪಿಗೆ ಮುಖಭಂಗ : ಸೋಲಿಗೆ 5 ಕಾರಣಗಳು
ಜೈಪುರ, ಡಿಸೆಂಬರ್ 11 : ರಾಜಸ್ಥಾನ ವಿಧಾನಸಭೆ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿಗೆ ಭಾರಿ ಮುಖಭಂಗವಾಗಿದೆ. 199 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕೇವಲ 72 ಸ್ಥಾನಗಳಲ್ಲಿ ಮಾತ್ರ ಪಕ್ಷ ಜಯಗಳಿಸಿದ್ದು, ಅಧಿಕಾರವನ್ನು ಕಾಂಗ್ರೆಸ್ಗೆ ಬಿಟ್ಟುಕೊಟ್ಟಿದೆ.
ಚುನಾವಣೋತ್ತರ ಸಮೀಕ್ಷೆಗಳು ಹೇಳಿದಂತೆ ಬಿಜೆಪಿಗೆ ರಾಜ್ಯದಲ್ಲಿ ಹಿನ್ನಡೆ ಆಗಿದೆ. ಆಡಳಿತ ವಿರೋಧಿ ಅಲೆಯನ್ನು ಸಮರ್ಥವಾಗಿ ಬಳಸಿಕೊಂಡ ಕಾಂಗ್ರೆಸ್ ಅಧಿಕಾರದ ಗದ್ದುಗೆ ಏರಲಿದೆ. ಮುಖ್ಯಮಂತ್ರಿ ಯಾರು? ಎಂಬುದು ಬುಧವಾರ ಅಂತಿಮವಾಗಲಿದೆ.
ರಾಜಸ್ಥಾನ ಕಾಂಗ್ರೆಸ್ ಕೈಗೆ : ಸಮೀಕ್ಷೆಗಳ ಫಲಿತಾಂಶ ನಿಜವಾಯ್ತು!
2013ರ ಚುನಾವಣೆಯಲ್ಲಿ ಬಿಜೆಪಿ 163 ಸ್ಥಾನಗಳಲ್ಲಿ ಜಯಗಳಿಸಿತ್ತು. 5 ವರ್ಷ ವಸುಂಧರಾ ರಾಜೆ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ್ದರು. ಆದರೆ, ಈ ಬಾರಿಯ ಚುನಾವಣೆಯಲ್ಲಿ ಪಕ್ಷ 72 ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ.
ಮುಖ್ಯಮಂತ್ರಿ ಪಟ್ಟಕ್ಕೇರಲು ಸಿದ್ಧರಾಗಿರುವ ಕಾಂಗ್ರೆಸ್ಸಿನ ಅಭ್ಯರ್ಥಿಗಳ್ಯಾರು?
ಒಂದು ಬಾರಿ ಅಧಿಕಾರ ಹಿಡಿದ ಪಕ್ಷ ಮತ್ತೊಮ್ಮೆ ಆಯ್ಕೆಯಾಗುವುದಿಲ್ಲ ಎಂಬ ಮಾತು ರಾಜಸ್ಥಾನದಲ್ಲಿ ಮತ್ತೊಮ್ಮೆ ಸಾಬೀತಾಗಿದೆ. ಕಾಂಗ್ರೆಸ್ನ ಯುವ ನಾಯಕ ಸಚಿನ್ ಪೈಲೆಟ್ ಮತದಾರರನ್ನು ಸೆಳೆಯುವಲ್ಲಿ ಸಫಲರಾಗಿದ್ದಾರೆ. ಬಿಜೆಪಿ ಸೋಲಿಗೆ 5 ಕಾರಣಗಳೇನು ಎಂಬುದನ್ನು ಚಿತ್ರಗಳಲ್ಲಿ ನೋಡಿ......
ರಾಜಸ್ಥಾನದಲ್ಲಿ ಕಾಂಗ್ರೆಸ್ ನಾಗಲೋಟ, ಬಿಜೆಪಿಗೆ ಹಿನ್ನಡೆ
ಕಾರಣ - 1 : ಬಿಜೆಪಿ ಅಭ್ಯರ್ಥಿಗಳ ಬಂಡಾಯ
ಮುಖ್ಯಮಂತ್ರಿ ವಸುಂಧರಾ ರಾಜೆ ಅವರ ಆಡಳಿತದ ಬಗ್ಗೆ ಜನರಿಗೆ ಇದ್ದಷ್ಟು ಆಕ್ರೋಶ ಪಕ್ಷದ ನಾಯಕರಿಗೂ ಇತ್ತು. ಅವರ ಸರ್ವಾಧಿಕಾರ ಧೋರಣೆಯನ್ನು ವಿರೋಧಿಸಿ ಹಲವು ಬಿಜೆಪಿ ಮುಖಂಡರು ಚುನಾವಣೆಗೆ ಮುನ್ನ ಬಂಡಾಯ ಎದ್ದಿದ್ದರು. ಟಿಕೆಟ್ ಕೈ ತಪ್ಪಿದ 21 ಶಾಸಕರು ಮುಖ್ಯಮಂತ್ರಿಗಳ ವಿರುದ್ಧವೇ ಪ್ರಚಾರ ಮಾಡಿದರು. ಆಡಳಿತ ವಿರೋಧಿ ಅಲೆಯೂ ಸೋಲಿಗೆ ಪ್ರಮುಖ ಕಾರಣವಾಯಿತು.
ಕಾರಣ - 2 ರೈತರ ಸಮಸ್ಯೆ ಬಗೆಹರಿಸಲು ವಿಫಲ
ರೈತರ ಸಮಸ್ಯೆಗಳನ್ನು ಬಗೆಹರಿಸಲು ಬಿಜೆಪಿ ಸರ್ಕಾರ ವಿಫಲವಾಯಿತು. ಇದರಿಂದಾಗಿ ಗ್ರಾಮೀಣ ಪ್ರದೇಶದಲ್ಲಿ ಪಕ್ಷಕ್ಕೆ ಹಿನ್ನಡೆ ಉಂಟಾಯಿತು. 2013ರ ಚುನಾವಣೆಯಲ್ಲಿ ಗ್ರಾಮೀಣ ಭಾಗದಲ್ಲಿ 134 ಸ್ಥಾನವನ್ನು ಪಕ್ಷ ಗೆದ್ದುಕೊಂಡಿತು. ಆದರೆ, ಈ ಬಾರಿ ರೈತ ಸಮುದಾಯ ಪಕ್ಷದ ಬೆಂಬಲಕ್ಕೆ ನಿಲ್ಲಲಿಲ್ಲ.
ಕಾರಣ - 3 : ಆಂತರಿಕ ಕಚ್ಚಾಟವಿಲ್ಲ
ಕಾಂಗ್ರೆಸ್ ಪಕ್ಷದಲ್ಲಿ ಸಚಿನ್ ಪೈಲಟ್ ಮತ್ತು ಅಶೋಕ್ ಗೆಹ್ಲೋಟ್ ಇಬ್ಬರು ನಾಯಕರು ಮುಖ್ಯಮಂತ್ರಿ ಪಟ್ಟದ ಆಕಾಂಕ್ಷಿಯಾಗಿದ್ದರು. ಆದರೆ, ಪಕ್ಷದಲ್ಲಿ ಆಂತರಿಕ ಕಚ್ಚಾಟ ಇರಲಿಲ್ಲ. ಆದರೆ, ಬಿಜೆಪಿಯಲ್ಲಿ 21 ಶಾಸಕರು ಟಿಕೆಟ್ ಹಂಚಿಕೆ ವಿಚಾರದಲ್ಲಿ ಅಸಮಾಧಾನಗೊಂಡಿದ್ದರು. ಸ್ಥಳೀಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂಬ ಆರೋಪವೂ ಇತ್ತು. ಚುನಾವಣೆಯಲ್ಲಿ ಇದು ಹೊಡೆತ ಕೊಟ್ಟಿದೆ.
ಕಾರಣ - 4 : ರಾಹುಲ್ ಗಾಂಧಿ ಪ್ರಚಾರ ಕಾರಣ
ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ರಾಜಸ್ಥಾನ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದರು. ಆದ್ದರಿಂದ, ರಾಜ್ಯದಲ್ಲಿ ಉತ್ತಮ ಪ್ರಚಾರ ನಡೆಸಿದ್ದರು. ವಸುಂಧರಾ ರಾಜೆ ವಿರುದ್ಧ ಅಸಮಾಧಾನಗೊಂಡಿದ್ದ ಹಲವು ರಾಷ್ಟ್ರೀಯ ನಾಯಕರು ಪ್ರಚಾರಕ್ಕೆ ರಾಜ್ಯಕ್ಕೆ ಬರಲಿಲ್ಲ. ಕೊನೆಯ ಹಂತದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸಮಾವೇಶಗಳ ಸಂಖ್ಯೆಯನ್ನು ಹೆಚ್ಚಿಸಿದರೂ ಚುನಾವಣೆಯಲ್ಲಿ ಜಯಗಳಿಸಲು ಸಾಧ್ಯವಾಗಿಲ್ಲ.
ಕಾರಣ - 5 : ಅಧಿಕಾರಕ್ಕೆ ಬಂದಿಲ್ಲ
1993ರ ಬಳಿಕ ಪ್ರತಿ ಬಾರಿಯೂ ರಾಜಸ್ಥಾನದಲ್ಲಿ ಆಡಳಿತ ಪಕ್ಷ ಬದಲಾಗಿದೆ. 2013ರ ಚುನಾವಣೆಯಲ್ಲಿ ಜನರು ಬಿಜೆಪಿ ಬೆಂಬಲಿಸಿದ್ದರು. ಆದ್ದರಿಂದ, ಈ ಬಾರಿ ಕಾಂಗ್ರೆಸ್ಗೆ ಅವಕಾಶ ಕೊಟ್ಟಿದ್ದಾರೆ.