ರಾಜಸ್ಥಾನ ವೈದ್ಯೆಯ ಆತ್ಮಹತ್ಯೆ: ಕಿರುಕುಳ ನೀಡಿದ್ದಕ್ಕಾಗಿ ಬಿಜೆಪಿ ನಾಯಕನ ಬಂಧನ
ಜೈಪುರ ಮಾರ್ಚ್ 31: ವೈದ್ಯರಿಗೆ ಕಿರುಕುಳ ನೀಡಲು ಗುಂಪನ್ನು ಪ್ರಚೋದಿಸಿದ್ದಕ್ಕಾಗಿ ರಾಜಸ್ಥಾನದ ಸ್ಥಳೀಯ ಬಿಜೆಪಿ ನಾಯಕನನ್ನು ಬಂಧಿಸಲಾಗಿದೆ. ಕೊಲೆ ಆರೋಪ ಹೊತ್ತಿದ್ದ ವೈದ್ಯೆ ಅರ್ಚನಾ ಶರ್ಮಾ ಬುಧವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜೊತೆಗೆ ಅವರು ಮನನೊಂದು ಆತ್ಮಹತ್ಯೆ ಪತ್ರ ಬರೆದು ತಾನು ನಿರಪರಾಧಿ ಎಂದು ಹೇಳಿದ್ದಾರೆ. ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾದ ವೈದ್ಯೆಯ ಆತ್ಮಹತ್ಯೆ ಪ್ರಕರಣದಿಂದಾಗಿ ಮುಖ್ಯಮಂತ್ರಿಗಳು ಆ ಪ್ರದೇಶದಲ್ಲಿ ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಿದ್ದಾರೆ. ಜೊತೆಗೆ ಅವರಿಗೆ ಕಿರುಕುಳ ನೀಡಿದ್ದಕ್ಕಾಗಿ ಬಿಜೆಪಿ ನಾಯಕನನ್ನು ಬಧಿಸಲಾಗಿದೆ.
ಈ ಪ್ರಕರಣದಲ್ಲಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕ ಮತ್ತು ಇನ್ನೊಬ್ಬ ವ್ಯಕ್ತಿಯನ್ನು ರಾಜಸ್ಥಾನ ಪೊಲೀಸರು ಗುರುವಾರ ದೌಸಾ ಜಿಲ್ಲೆಯಲ್ಲಿ ಮಹಿಳಾ ವೈದ್ಯೆಯ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಬಂಧಿಸಿದ್ದಾರೆ. ರಾಜಸ್ಥಾನ ಬಿಜೆಪಿ ಕಾರ್ಯದರ್ಶಿ ಜಿತೇಂದರ್ ಗೋಥ್ವಾಲ್ ಮತ್ತು ರಾಮ್ ಮನೋಹರ್ ಇಬ್ಬರ ವಿರುದ್ಧ ಐಪಿಸಿ ಸೆಕ್ಷನ್ 306 (ಆತ್ಮಹತ್ಯೆಗೆ ಪ್ರಚೋದನೆ), 384 ಮತ್ತು 388 (ಸುಲಿಗೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆದರೆ, ತಮ್ಮ ವಿರುದ್ಧ ಮಾಡಿರುವ ಆರೋಪಗಳನ್ನು ತಳ್ಳಿಹಾಕಿರುವ ಬಿಜೆಪಿ ನಾಯಕರು, ಅವರನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ಹೇಳಿದ್ದಾರೆ.
ಜೈಪುರದಲ್ಲಿರುವ ನನ್ನ ನಿವಾಸದಿಂದ ಬುಧವಾರ ತಡರಾತ್ರಿ ಪೊಲೀಸರು ನನ್ನನ್ನು ಬಂಧಿಸಲು ಬಂದಿದ್ದರು. ಡಾ.ಅರ್ಚನಾ ಶರ್ಮಾ ಅವರ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ನನ್ನ ವಿರುದ್ಧ ಐಪಿಸಿ 306ರ ಅಡಿಯಲ್ಲಿ ಸುಳ್ಳು ಪ್ರಕರಣ ದಾಖಲಿಸಲಾಗಿದೆ ಎಂದು ಗೋಥ್ವಾಲ್ ಟ್ವೀಟ್ ಮಾಡಿದ್ದಾರೆ.
कल आधी रात को मुझे गिरफ्तार करने जयपुर आवास पर पहुंची पुलिस... लालसोट की डॉ अर्चना शर्मा को आत्महत्या के लिए प्रेरित करने का दर्ज किया झूँठा केस... लगाई IPC की धारा 306..कांग्रेस नेत्री प्रियंका गांधी को ट्रेन का टिकिट भिजवाने का लिया बदला... pic.twitter.com/fCMF7H6EUR
— Jitender Gothwal (@JitenGothwal) March 31, 2022
ಇದೇ ಮಂಗಳವಾರ ರಾಜಸ್ಥಾನದ ದೌಸಾದ ಖಾಸಗಿ ಆಸ್ಪತ್ರೆಯಲ್ಲಿ ಹೆರಿಗೆಯಾದ ಸ್ವಲ್ಪ ಸಮಯದ ನಂತರ ರಕ್ತಸ್ರಾವದಿಂದ ಮಹಿಳೆಯೊಬ್ಬಳು ಸಾವನ್ನಪ್ಪಿದ್ದರು. ಆದರೆ ಇದೊಂದು ಸಹಜ ಸಾವಲ್ಲ. ಇದೊಂದು ಕೊಲೆ ಎಂದು ವೈದ್ಯೆ ಅರ್ಚನಾ ಶರ್ಮಾ ಅವರ ಮೇಲೆ ಆರೋಪ ಹೋರಿಸಿ ಕಿರುಕುಳ ನೀಡಲಾಗಿತ್ತು. ಮಾತ್ರವಲ್ಲದೇ ವೈದ್ಯ ಶರ್ಮಾ ವಿರುದ್ಧ ಪ್ರತಿಭಟನೆ ಕೂಡ ನಡೆಸಲಾಗಿತ್ತು.
ಶರ್ಮಾ ವಿರುದ್ಧ ಸಾವಿಗೀಡಾದ ಮಹಿಳೆಯ ಕುಟುಂಬ ಆಸ್ಪತ್ರೆಯ ಹೊರಗೆ ಪ್ರತಿಭಟನೆಗಳನ್ನು ನಡೆಸಿತು. ಪ್ರತಿಭಟನೆಯಿಂದಾಗಿ ಪೊಲೀಸರು ಡಾ ಶರ್ಮಾ ಮತ್ತು ಅವರ ಪತಿ ವಿರುದ್ಧ ಕೊಲೆ ಪ್ರಕರಣವನ್ನು ದಾಖಲಿಸಿದ್ದಾರೆ. ಡಾ. ಶರ್ಮಾ ಅವರು ಅವರ ವಿರುದ್ಧ ನಡೆದ ಪ್ರತಿಭಟನೆಗಳಿಂದಾಗಿ ಮತ್ತು ಎಫ್ಐಆರ್ ದಾಖಲಿಸಿರುವುದರಿಂದ ವಿಚಲಿತರಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ನಿತ್ಯ ಅವರು ಪತಿಯೊಂದಿಗೆ ಆಸ್ಪತ್ರೆಯನ್ನು ಹೋಗುತ್ತಿದ್ದರು. ಇದರಿಂದ ಮನನೊಂದ ಡಾ. ಶರ್ಮಾ ಮಾರ್ಚ್ 29 ರಂದು ಆಸ್ಪತ್ರೆಯ ಕೊಠಡಿಯೊಳಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸದ್ಯ ಮೃತ ರೋಗಿಯ ಕುಟುಂಬದವರ ದೂರಿನ ಆಧಾರದ ಮೇಲೆ ಅರ್ಚನಾ ಶರ್ಮಾ ವಿರುದ್ಧ ಕೊಲೆ ಪ್ರಕರಣ ದಾಖಲಿಸಿರುವ ರಾಜ್ಯ ಪೊಲೀಸರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ವೈದ್ಯರು ಬೀದಿಗಿಳಿದಿದ್ದಾರೆ. ಕೈಬರಹದ ಸೂಸೈಡ್ ನೋಟ್ನಲ್ಲಿ ಡಾ ಶರ್ಮಾ ಅವರು ತಮ್ಮ ಸಾವಿನ ನಂತರ ಪತಿ ಮತ್ತು ಇಬ್ಬರು ಚಿಕ್ಕ ಮಕ್ಕಳಿಗೆ ಕಿರುಕುಳ ನೀಡದಂತೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
'ರೋಗಿಯನ್ನು ಉಳಿಸಲು ಎಲ್ಲಾ ಪ್ರಯತ್ನಗಳ ಹೊರತಾಗಿಯೂ ಅಧಿಕ ರಕ್ತಸ್ರಾವದಿಂದ ಆಕೆ ಮರಣಹೊಂದಿದಳು. ಇದರಲ್ಲಿ ನನ್ನ ತಪ್ಪು ಏನೂ ಇಲ್ಲ. ಮುಗ್ಧ ವೈದ್ಯರಿಗೆ ಕಿರುಕುಳ ನೀಡಬೇಡಿ' ಎಂದು ಶಾರ್ಮಾ ಡೆತ್ ನೋಟ್ನಲ್ಲಿ ಬರೆದಿದ್ದಾರೆ. ಅವರ ಸಾವು ಅವರ ಮುಗ್ಧತೆಯನ್ನು ಸಾಬೀತುಪಡಿಸುತ್ತದೆ ಎಂದು ಸಹ ವೈದ್ಯರು ಹೇಳಿದ್ದಾರೆ.
ಡಾ.ಅರ್ಚನಾ ಶರ್ಮಾ ಅವರ ಪತಿ ಡಾ. ಸುನಿಲ್ ಉಪಾಧ್ಯಾಯ ಅವರು ಸುದ್ದಿಗಾರರೊಂದಿಗೆ ಮಾತನಾಡಿ, "ಪೊಲೀಸರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಅವರು ಅವರ ವಿರುದ್ಧ ಸೆಕ್ಷನ್ 302 (ಕೊಲೆ) ಪ್ರಕರಣವನ್ನು ಹೇಗೆ ದಾಖಲಿಸಿದರು? ವೈದ್ಯರಿಗೆ ಕಿರುಕುಳ ನೀಡುವುದನ್ನು ನಿಲ್ಲಿಸಲು ಮತ್ತು ಅವರ ಮೇಲೆ ಒತ್ತಡ ಹೇರದಂತ ಕಾನೂನು ಜಾರಿಗೆ ತರಬೇಕು. ನನ್ನ ಹೆಂಡತಿ ಸತ್ತಿದ್ದಾಳೆ. ಅವಳನ್ನು ಯಾವ ಪೋಲೀಸರು ವಾಪಸ್ ತಂದು ಕೊಡಲು ಸಾಧ್ಯವಿಲ್ಲ. ಆದರೆ ಇತರ ಅಮಾಯಕ ವೈದ್ಯರ ಗತಿ ಏನು?" ಎಂದು ಅವರು ಮನನೊಂದು ಪ್ರಶ್ನೆ ಮಾಡಿದ್ದಾರೆ.
Recommended Video
ಈ ಪ್ರಕರಣದಲ್ಲಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿರುವ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, "ಡಾ ಅರ್ಚನಾ ಶರ್ಮಾ ಅವರ ಆತ್ಮಹತ್ಯೆ ಘಟನೆ ತೀವ್ರ ದುಃಖ ತಂದಿದೆ. ನಾವು ವೈದ್ಯರನ್ನು ದೇವರು ಎಂದು ಪರಿಗಣಿಸುತ್ತೇವೆ. ರೋಗಿಗಳ ಜೀವ ಉಳಿಸಲು, ಪ್ರತಿಯೊಬ್ಬ ವೈದ್ಯರು ತಮ್ಮ ಕೈಲಾದಷ್ಟು ಪ್ರಯತ್ನಿಸುತ್ತಾರೆ, ಆದರೆ ಯಾವುದೇ ಅನಾಹುತ ಸಂಭವಿಸಿದಲ್ಲಿ, ವೈದ್ಯರನ್ನು ದೂಷಿಸುವುದು ಸಮರ್ಥನೀಯವಲ್ಲ" ಎಂದು ಟ್ವೀಟ್ ಮಾಡಿದ್ದಾರೆ. ಘಟನೆಯ ಬಗ್ಗೆ ಕೂಲಂಕುಷ ತನಿಖೆ ನಡೆಸಲಾಗುತ್ತಿದ್ದು, ವಿಚಾರಣೆ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ.
COOJ Mental Health Foundation (COOJ)- 0832-2252525, ಪರಿವರ್ತನ್- +91 7676 602 602, Connecting Trust- +91 992 200 1122/+91-992 200 4305 or Sahai- 080-25497777/ [email protected]