ಗ್ರಾಮೀಣ ವೈದ್ಯಕೀಯ ವಿದ್ಯಾರ್ಥಿಗಳ ಏಮ್ಸ್ ಕನಸು ನನಸು ಮಾಡಿದ ಸಾಧಕ
ಬಾರ್ಮರ್, ಜೂನ್ 29: ವೈದ್ಯಕೀಯ ಶಿಕ್ಷಣ ಹಾಗೂ ಪ್ರವೇಶ ಪರೀಕ್ಷೆ ತರಬೇತಿಗೆ ವಿದ್ಯಾರ್ಥಿಗಳಿಂದ ಲಕ್ಷಾಂತರ ರೂ ಸುಲಿಗೆ ಮಾಡುವ ಉದಾಹರಣೆಗಳು ಎಲ್ಲರ ಕಣ್ಣಮುಂದಿವೆ.
ಕಾಲೇಜು ಶುಲ್ಕಕ್ಕಿಂತಲೂ ಹೆಚ್ಚಿನ ಹಣವನ್ನು ಟ್ಯೂಷನ್ ಮಾಫಿಯಾಕ್ಕೆ ನೀಡುವ ಅನಿವಾರ್ಯತೆ ಸೃಷ್ಟಿಯಾಗುತ್ತಿದೆ. ಆದರೆ ಆರ್ಥಿಕ ಹಾಗೂ ಮೂಲ ಸೌಕರ್ಯದ ಕೊರತೆ ಕಾರಣದಿಂದ ಗ್ರಾಮೀಣ ವಿದ್ಯಾರ್ಥಿಗಳು ಈ ತರಬೇತಿಗಳಿಂದ ವಂಚಿತರಾಗಿದ್ದಾರೆ.
ಇಂತಹ ಸನ್ನಿವೇಶಗಳ ಮಧ್ಯೆ ರಾಜಸ್ಥಾನದ ಬಾರ್ಮರ್ನಲ್ಲಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಉಚಿತ ತರಬೇತಿಯನ್ನು ಡಾಕ್ಟರ್ ಭರತ್ ಸಾರನ್ ಎನ್ನುವವರು ನೀಡುತ್ತಿದ್ದಾರೆ.
ವೈದ್ಯಕೀಯ ಪದವಿ ಕೋರ್ಸ್ಗಳಿಗೆ ಪ್ರವೇಶ ಪಡೆಯಲು ಹವಣಿಸುತ್ತಿರುವ ಗ್ರಾಮೀಣ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಪ್ರತಿ ವರ್ಷ ತರಬೇತಿ ಕೊಡುತ್ತಿದ್ದಾರೆ.
11ನೇ ತರಗತಿಯ 25, 12ನೇ ತರಗತಿಯ 25 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ತರಬೇತಿ ನೀಡಲಾಗುತ್ತಿದೆ. ಆಯ್ಕೆಯಾದ ವಿದ್ಯಾರ್ಥಿಗಳ ಆಹಾರ, ಪುಸ್ತಕ, ವಸತಿ ಹಾಗೂ ಅವರು ಓದುತ್ತಿರುವ ಶಿಕ್ಷಣ ಸಂಸ್ಥೆಯ ಶುಲ್ಕವನ್ನೂ ಕೂಡ ಭರತ್ ಸಾರನ್ ಅವರೇ ನೋಡಿಕೊಳ್ಳುತ್ತಿದ್ದಾರೆ.
ಕಳೆದ ಏಳು ವರ್ಷಗಳಲ್ಲಿ 140 ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗಿದೆ. ಎಲ್ಲರೂ ವೈದ್ಯಕೀಯ ಕೋರ್ಸ್ ಪಡೆಯಲು ಅರ್ಹರಾಗಿದ್ದು ಅವರಲ್ಲಿ ಈಗಾಗಲೇ 30 ಮಂದಿ ಎಂಬಿಬಿಎಸ್ ಮುಗಿಸಿದ್ದಾರೆ.
ವಿಶೇಷವೆಂದರೆ ಐವರು ವಿದ್ಯಾರ್ಥಿಗಳು ಪ್ರತಿಷ್ಠಿತ ಏಮ್ಸ್ ಸಂಸ್ಥೆಗೂ ಪ್ರವೇಶ ಪಡೆದಿದ್ದಾರೆ, ಕೆಲವರು ಪಶುವೈದ್ಯಕೀಯ ಹಾಗೂ ಆಯುರ್ವೇದ ಕೋರ್ಸ್ಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ.