3ಬಾರಿ ಏರ್ಪೋರ್ಟಿನಿಂದ ಅಶೋಕ್ ಗೆಹ್ಲೋಟ್ ವಾಪಸ್ ಕರೆಸಿಕೊಂಡ ರಾಹುಲ್
ರಾಜಸ್ಥಾನ ಚುನಾವಣೆಯನ್ನು ಭರ್ಜರಿಯಾಗಿ ಗೆದ್ದುಕೊಂಡ ಕಾಂಗ್ರೆಸ್ಸಿಗೆ, ಮುಖ್ಯಮಂತ್ರಿಗಳ ಹೆಸರನ್ನು ಅಂತಿಮಗೊಳಿಸಲು ಸಾಕುಸಾಕಾಗುತ್ತಿದೆ. ಮಧ್ಯಪ್ರದೇಶಕ್ಕಿಂತಲೂ ಕಗ್ಗಾಂಟಾಗುತ್ತಿದೆ ಅಲ್ಲಿನ ಸಿಎಂ ಕುರ್ಚಿ.
ಬಳಲಿ ಬೆಂಡಾಗಿದ್ದ ಕಾಂಗ್ರೆಸ್ ಪಕ್ಷವನ್ನು ಅಧಿಕಾರದ ಹಂತಕ್ಕೆ ತಂದದ್ದು ನಾನು, ಸಿಎಂ ಹುದ್ದೆ ನನಗೇ ಬೇಕು ಎಂದು ರಾಜಸ್ಥಾನ ಕಾಂಗ್ರೆಸ್ ಘಟಕದ ಮುಖ್ಯಸ್ಥ ಸಚಿನ್ ಪೈಲಟ್ ಹಠ ಹಿಡಿರುವುದು ಕಾಂಗ್ರೆಸ್ ಹೈಕಮಾಂಡಿಗೆ ತಲೆನೋವಾಗಿ ಪರಿಣಮಿಸಿದೆ.
ಜ್ಯೋತಿರಾದಿತ್ಯ ಸಿಂದಿಯಾ ಮತ್ತು ಸಚಿನ್ ಪೈಲಟ್ ಮೇಲೆ ಸೋನಿಯಾ ಗಾಂಧಿಗೆ ಯಾವುದೇ ತಕರಾರು ಇಲ್ಲದಿದ್ದರೂ, ಅವರಿಗಿಂತ ಮುಂಚೆ ಪಕ್ಷಕ್ಕೆ ಸೇವೆ ಸಲ್ಲಿಸಿರುವ ಹಿರಿಯರಾದ ಕಮಲ್ ನಾಥ್ ಮತ್ತು ಅಶೋಕ್ ಗೆಹ್ಲೋಟ್ ಅವರಿಗೆ ನೀಡಬೇಕು ಎನ್ನುವುದು ಸೋನಿಯಾ ನಿಲುವು. ಅದರಂತೆಯೇ, ಕಮಲ್ ನಾಥ್ ಆಯ್ಕೆಯಾಗಿದ್ದಾರೆ.
ಆದರೆ, ಮಧ್ಯಪ್ರದೇಶದಷ್ಟು ಸುಲಭವಾಗಿ ರಾಜಸ್ಥಾನದ ಪರಿಸ್ಥಿತಿಯಿಲ್ಲ. ಅಸೆಂಬ್ಲಿ ಚುನಾವಣೆಯ ಗೆಲುವಿನ ಉತ್ಸಾಹವನ್ನು ಮುಂಬರುವ ಲೋಕಸಭಾ ಚುನಾವಣೆಯವರೆಗೂ ಮುಂದುವರಿಸಿಕೊಂಡು ಹೋಗಬೇಕಾಗಿರುವುದರಿಂದ, ಗೆಹ್ಲೋಟ್ ಮತ್ತು ಪೈಲಟ್ ಇಬ್ಬರನ್ನೂ ಸಮಾಧಾನದಿಂದ ಕರೆದುಕೊಂಡು ಹೋಗಬೇಕಿದೆ.
5 ರಾಜ್ಯಗಳ ಚುನಾವಣೆ : ಸಮೀಕ್ಷೆ ಹೇಳಿದ್ದೇನು? ಫಲಿತಾಂಶ ಬಂದಿದ್ದೇನು?
ರಾಜಸ್ಥಾನದಲ್ಲಿ ಮುಖ್ಯಮಂತ್ರಿಯನ್ನಾಗಿ ಯಾರನ್ನು ಫೈನಲ್ ಮಾಡುವ ವಿಚಾರದಲ್ಲಿ ಕಾಂಗ್ರೆಸ್ ಹೈಕಮಾಂಡ್ ಎಷ್ಟು ಗೊಂದಲದಲ್ಲಿದೆ ಎಂದರೆ, ಮೂರು ಬಾರಿ ವಿಮಾನ ನಿಲ್ದಾಣದಿಂದ ಅಶೋಕ್ ಗೆಹ್ಲೋಟ್ ಅವರನ್ನು ವಾಪಸ್ ಕರೆಸಿಕೊಳ್ಳಲಾಗಿದೆ.
ಅಶೋಕ್ ಗೆಹ್ಲೋಟ್ ಮತ್ತು ಸಚಿನ್ ಪೈಲಟ್
ಅಶೋಕ್ ಗೆಹ್ಲೋಟ್ ಮತ್ತು ಸಚಿನ್ ಪೈಲಟ್ ಇಬ್ಬರೂ ಸಿಎಂ ಹುದ್ದೆಯ ಮೇಲೆ ಕಣ್ಣಿಟ್ಟಿದ್ದರಿಂದ ಮತ್ತು ಇಬ್ಬರೂ ತಮ್ಮ ನಿಲುವಿಗೆ ಅಂಟಿಕೊಂಡಿರುವುದರಿಂದ, ಇಬ್ಬರೂ ನಾಯಕರನ್ನು ದೆಹಲಿಗೆ ಕರೆಸಿಕೊಂಡು ರಾಹುಲ್ ಗಾಂಧಿ, ಪ್ರತ್ಯೇಕ ಪ್ರತ್ಯೇಕವಾಗಿ ಮೂರು ಬಾರಿ ಮಾತುಕತೆ ನಡೆಸಿದ್ದಾರೆ.
ರಾಜಸ್ಥಾನ ಸಿಎಂ ಗೆಹ್ಲೋಟ್: ಅಧಿಕೃತ ಘೋಷಣೆಯೊಂದೇ ಬಾಕಿ?
ರಾಹುಲ್ ಗಾಂಧಿಯವರ ರಾಜಕೀಯ ಸಾಮರ್ಥ್ಯಕ್ಕೆ ಸವಾಲು
ರಾಹುಲ್ ಗಾಂಧಿಯವರ ರಾಜಕೀಯ ಸಾಮರ್ಥ್ಯಕ್ಕೆ ಸವಾಲಂತಾಗಿರುವ ರಾಜಸ್ಥಾನದ ಸಿಎಂ ಪಟ್ಟವನ್ನು ಯಾರಿಗೆ ನೀಡಬೇಕು ಎನ್ನುವ ವಿಚಾರದಲ್ಲಿ, ಗೆಹ್ಲೋಟ್ ಮತ್ತು ಪೈಲಟ್ ಜೊತೆಗೆ ರಹಸ್ಯ ಮಾತುಕತೆ ನಡೆಸಿದರೂ, ರಾಹುಲ್ ಗಾಂಧಿಗೆ ಅಂತಿಮ ಘೋಷಣೆ ಹೊರಹಾಕಲು ಸಾಧ್ಯವಾಗುತ್ತಿಲ್ಲ.
ಮಧ್ಯ ಪ್ರದೇಶದ ನಂತರ ರಾಜಸ್ಥಾನ, ಛತ್ತೀಸ್ ಗಢದತ್ತ ರಾಹುಲ್ ಚಿತ್ತ
ಮೂರು ಬಾರಿ ದೆಹಲಿ ವಿಮಾನ ನಿಲ್ದಾಣದಿಂದ ಗೆಹ್ಲೋಟ್ ವಾಪಸ್
ದೆಹಲಿಯಿಂದ ಜೈಪುರಕ್ಕೆ ಹೊರಟಿದ್ದ ಅಶೋಕ್ ಗೆಹ್ಲೋಟ್ ಅವರನ್ನು ಮೂರು ಮೂರು ಬಾರಿ ದೆಹಲಿ ವಿಮಾನ ನಿಲ್ದಾಣದಿಂದ ರಾಹುಲ್ ವಾಪಸ್ ಕರೆಸಿಕೊಂಡಿದ್ದಾರೆ. ಮೀಸಲಾತಿ ಮತ್ತು ರೈತರ ಸಮಸ್ಯೆ ರಾಜಸ್ಥಾನದಲ್ಲಿ ಗಂಭೀರವಾಗಿರುವುದರಿಂದ, ಅಶೋಕ್ ಗೆಹ್ಲೋಟ್ ಗೆ ಸಿಎಂ ಹುದ್ದೆ ನೀಡಲು ರಾಹುಲ್ ನಿರ್ಧರಿಸಿದ್ದರಾಗಿದ್ದರೂ, ಅದು ಅಷ್ಟು ಸುಲಭವಾಗಿ ಬಗೆಹರಿಯುತ್ತಿಲ್ಲ.
ಗುಜ್ಜಾರ್ ಸಮುದಾಯವನ್ನು ಪ್ರತಿನಿಧಿಸುವ ಸಚಿನ್ ಪೈಲಟ್
ಇದರ ಜೊತೆಜೊತೆಗೆ ಸಚಿನ್ ಪೈಲಟ್ ಅಭಿಮಾನಿಗಳು ಬೀದಿಗಿಳಿದಿರುವುದು ರಾಹುಲ್ ಗಾಂಧಿಗೆ ಇರಿಸುಮುರಿಸು ಉಂಟುಮಾಡಿದೆ. ಗುಜ್ಜಾರ್ ಸಮುದಾಯವನ್ನು ಪ್ರತಿನಿಧಿಸುವ ಸಚಿನ್ ಪೈಲಟ್ ಅವರಿಗೆ ಸಿಎಂ ಹುದ್ದೆ ನೀಡದೇ ಇದ್ದರೆ, ಎಲ್ಲಿ ಪಕ್ಷ ಒಡೆದು ಹೋಗುತ್ತೋ ಅಥವಾ ಮುಂದಿನ ಚುನಾವಣೆಯ ವೇಳೆ ಅವರು ತಟಸ್ಥರಾಗಿ ಉಳಿದು ಬಿಡುತ್ತಾರೋ ಅನ್ನುವ ಭಯ ರಾಹುಲ್ ಗಾಂಧಿಗೆ ಕಾಡುತ್ತಿದೆ.
ರಾಹುಲ್ ಗಾಂಧಿ ಅಂತಿಮ ಆದೇಶ
ಶುಕ್ರವಾರ (ಡಿ 14) ರಾತ್ರಿಯ ವೇಳೆಗೆ ಯಾರು ರಾಜಸ್ಥಾನದ ನೂತನ ಸಿಎಂ ಆಗಬೇಕು ಎನ್ನುವ ವಿಚಾರದಲ್ಲಿ ರಾಹುಲ್ ಗಾಂಧಿ ಅಂತಿಮ ಆದೇಶ ಹೊರಡಿಸುವ ಸಾಧ್ಯತೆಯಿದೆ. ಆದರೆ, ಈ ಪಕ್ಷದೊಳಗಿನ ಈ ವಿದ್ಯಮಾನ ರಾಹುಲ್ ಅವರ ಸಾಮರ್ಥ್ಯವನ್ನೇ ಶಂಕಿಸುವಂತಾಗಿದೆ ಎನ್ನುವ ಮಾಹಿತಿಯಿದೆ.