ಸಿಎಂ ಸ್ಥಾನ ಉಳಿವಿಗೆ ಅಧ್ಯಕ್ಷ ಚುನಾವಣೆಯಿಂದ ಹೊರಗುಳಿದರೇ ಅಶೋಕ್ ಗೆಹ್ಲೋಟ್?
ಜೈಪುರ, ಸೆ. 26: ರಾಜಸ್ಥಾನದಲ್ಲಿ ಕಾಂಗ್ರೆಸ್ ಶಾಸಕರ ನಡುವೆ ನಡೆಯುತ್ತಿರುವ ಜಗಳದ ನಡುವೆ, ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಚುನಾವಣೆಯಿಂದ ಹೊರಗುಳಿದಿದ್ದಾರೆ ಎಂದು ವರದಿಗಳು ಹೇಳಿವೆ.
ರಾಷ್ಟ್ರೀಯ ಮಾಧ್ಯಮದ ಜೊತೆ ಮಾತನಾಡಿರುವ ಕಾಂಗ್ರೆಸ್ನ ಹಿರಿಯ ನಾಯಕರೊಬ್ಬರು, ಕಾಂಗ್ರೆಸ್ ಅಧ್ಯಕ್ಷ ಚುನಾವಣೆ ರೇಸ್ನಲ್ಲಿ ಮುಕುಲ್ ವಾಸ್ನಿಕ್, ಮಲ್ಲಿಕಾರ್ಜುನ ಖರ್ಗೆ, ದಿಗ್ವಿಜಯ್ ಸಿಂಗ್, ಕೆಸಿ ವೇಣುಗೋಪಾಲ್ ಇದ್ದಾರೆ ಎಂದು ತಿಳಿಸಿದ್ದಾರೆ.
ರಾಜಸ್ಥಾನ ಬಿಕ್ಕಟ್ಟು; ರಾಜೀನಾಮೆ ನೀಡಲು ಸಿದ್ಧರಾದ 90ಕ್ಕೂ ಹೆಚ್ಚು ಶಾಸಕರು
ಹಿರಿಯ ನಾಯಕರು ಸೆಪ್ಟೆಂಬರ್ 30ಕ್ಕಿಂತ ಮೊದಲು ತಮ್ಮ ನಾಮಪತ್ರವನ್ನು ಸಲ್ಲಿಸುವ ಸಾಧ್ಯತೆಯಿದೆ. ಇದೇ ರೀತಿಯ ಹೇಳಿಕೆಗಳನ್ನು ಪ್ರತಿಧ್ವನಿಸುತ್ತಾ, ಸಿಡಬ್ಲ್ಯೂಸಿ ಸದಸ್ಯರಾಗಿರುವ ಮತ್ತೊಬ್ಬ ನಾಯಕ, ಗೆಹ್ಲೋಟ್ ಅವರ ನಡವಳಿಕೆಯು ಪಕ್ಷದ ಹೈಕಮಾಂಡ್ಗೆ ಸರಿ ಎನಿಸಿಲ್ಲ. ಅವರ ಬಗ್ಗೆ ತುಂಬಾ ನಿರಾಶೆಗೊಂಡಿದ್ದಾರೆ ಎಂದು ಹೇಳಿದ್ದಾರೆ.
ಇತ್ತ, ಭಾನುವಾರ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ನಿವಾಸದಲ್ಲಿ ಪಕ್ಷದ ರಾಜ್ಯ ಉಸ್ತುವಾರಿ ಅಜಯ್ ಮಾಕನ್, ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಸಂಘಟನೆಯ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಉಪಸ್ಥಿತರಿದ್ದ ಸಭೆಯಲ್ಲಿ ರಾಜಸ್ಥಾನದ ಸಿಎಂ ಅಶೋಕ್ ಗೆಹ್ಲೋಟ್ಗೆ ನಿಷ್ಠರಾಗಿರುವ ಶಾಸಕರು ಬಹಿರಂಗ ಬಂಡಾಯವೆದ್ದಿದ್ದರು.
ಇತ್ತ ಬಂಡಾಯ ನಂದಿಸುವ ಕಾರ್ಯದಲ್ಲಿ ಹಿರಿಯ ನಾಯಕ ಕಮಲ್ ನಾಥ್ ಸಭೆ ಸೇರುವ ಸಾಧ್ಯತೆ ಇದೆ. ಅಜಯ್ ಮಾಕನ್ ಮತ್ತು ಮಲ್ಲಿಕಾರ್ಜುನ ಖರ್ಗೆ ಇಬ್ಬರೂ ಸೋನಿಯಾ ಗಾಂಧಿ ಅವರಿಗೆ ರಾಜ್ಯದಲ್ಲಿನ ಘಟನೆಗಳ ಬಗ್ಗೆ ವಿವರಿಸುವ ನಿರೀಕ್ಷೆಯಿದೆ.
ಕಾಂಗ್ರೆಸ್ ಅಧ್ಯಕ್ಷರಾಗಲು ಗಾಂಧಿಯವರ ಆಯ್ಕೆ ಎಂದು ನಂಬಲಾಗಿರುವ ಅಶೋಕ್ ಗೆಹ್ಲೋಟ್ ಅವರು ಶಾಸಕರ ಬಂಡಾಯದಲ್ಲಿ ತಮ್ಮ ಯಾವುದೇ ಪಾತ್ರವಿಲ್ಲ ಎಂದು ಹೇಳಿದ್ದು, ಮಲ್ಲಿಕಾರ್ಜುನ ಖರ್ಗೆಯವರಲ್ಲಿ ಕ್ಷಮೆಯಾಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಆದರೂ ಹಲವು ನಾಯಕರು ಸಿಎಂ ಸ್ಥಾನ ಉಳಿಸಿಕೊಳ್ಳಲು ಮತ್ತು ರಾಜ್ಯದಲ್ಲಿ ಬಂಡಾಯವನ್ನು ಶಮನಗೊಳಿಸಲು ಅಶೋಕ್ ಗೆಹ್ಲೋಟ್ ಅಧ್ಯಕ್ಷ ಸ್ಥಾನದ ಚುನಾವಣೆಯಿಂದ ಹೊರಗುಳಿಯುತ್ತಿದ್ದಾರೆ ಎಂದು ಹಲವು ವರದಿಗಳು ತಿಳಿಸುತ್ತಿವೆ. ಆದರೂ ರಾಜಕಾರಣದಲ್ಲಿ ಯಾವಾಗ ಏನು ಬೇಕಾದರೂ ಸಂಭವಿಸಬಹುದು.
ಇನ್ನು, ಕಾಂಗ್ರೆಸ್ನಲ್ಲಿ ಸೀತಾರಾಮ್ ಕೇಸ್ರಿ ಅವರು ಕೊನೆಯ ಗಾಂಧಿಯೇತರ ಅಧ್ಯಕ್ಷರಾಗಿದ್ದರು. ಅವರು 1997 ರಲ್ಲಿ ಕಾಂಗ್ರೆಸ್ ಅಧ್ಯಕ್ಷರ ಚುನಾವಣೆಯಲ್ಲಿ ಪ್ರತಿಸ್ಪರ್ಧಿಗಳಾದ ಶರದ್ ಪವಾರ್ ಮತ್ತು ರಾಜೇಶ್ ಪೈಲಟ್ ಅವರನ್ನು ಸೋಲಿಸಿದ್ದರು. ಆದರೂ, ಅವರನ್ನು ಮಾರ್ಚ್ 5, 1998 ರಂದು ಹುದ್ದೆಯಿಂದ ತೆಗೆದುಹಾಕಲಾಗಿತ್ತು. ಈ ಬಾರಿ ಮತ್ತೆ ಗಾಂಧಿಯೇತರ ವ್ಯಕ್ತಿ ಕಾಂಗ್ರೆಸ್ ಅಧ್ಯಕ್ಷರಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.