ಕನ್ಹಯ್ಯಾ ಲಾಲ್ ಇಬ್ಬರು ಪುತ್ರರಿಗೆ ಸರ್ಕಾರಿ ಉದ್ಯೋಗ ನೀಡಿದ ಸಿಎಂ ಗೆಹ್ಲೋಟ್
ಜೈಪುರ್, ಜುಲೈ 7: ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾರನ್ನು ಬೆಂಬಲಿಸಿದ್ದಕ್ಕಾಗಿ ರಾಜಸ್ಥಾನದಲ್ಲಿ ಹತ್ಯೆಯಾದ ಟೈಲರ್ ಕನ್ಹಯ್ಯಾ ಲಾಲ್ ತೇಲಿಯ ಪುತ್ರರನ್ನು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸರ್ಕಾರಿ ಸೇವೆಗೆ ನೇಮಿಸಿದ್ದಾರೆ.
"ಉದಯಪುರದ ಭಯೋತ್ಪಾದಕ ಘಟನೆಯಲ್ಲಿ ಮಡಿದ ಕನ್ಹಯ್ಯಾ ಲಾಲ್ ತೇಲಿ ಪುತ್ರರಾದ ಯಶ್ ತೇಲಿ ಮತ್ತು ತರುಣ್ ತೇಲಿ ಅನ್ನು ಸರ್ಕಾರಿ ಸೇವೆಗೆ ನೇಮಿಸಲು ಸಂಪುಟ ನಿರ್ಧರಿಸಿದೆ" ಎಂದು ಮುಖ್ಯಮಂತ್ರಿ ಟ್ವೀಟ್ನಲ್ಲಿ ತಿಳಿಸಿದ್ದಾರೆ.
ರಾಜಸ್ಥಾನ ಕೋಮು ಗಲಭೆ ಸರಣಿ: ಬಿಜೆಪಿಗೆ ಲಾಭ, ಕಾಂಗ್ರೆಸ್ಗೆ ನಷ್ಟ
ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಪ್ರಕಾರ, "2008 ಮತ್ತು 2009ರ ರಾಜಸ್ಥಾನ ಅಧೀನ ಕಚೇರಿ ಕ್ಲರ್ಕ್ ಸೇವಾ (ತಿದ್ದುಪಡಿ) ನಿಯಮಗಳ ನಿಯಮ 6C ಅಡಿಯಲ್ಲಿ ನೇಮಕಾತಿ ನಿಯಮಗಳಲ್ಲಿ ಸಡಿಲಿಕೆ ನೀಡಲಾಗಿದೆ," ಎಂದು ಮತ್ತೊಂದು ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ.
ರಾಜಸ್ಥಾನ ಸರ್ಕಾರದಿಂದ ಕುಟುಂಬಕ್ಕೆ ನೆರವು
ರಾಜಸ್ಥಾನದ ಉದಯಪುರದಲ್ಲಿ ಹತ್ಯೆಯಾದ ಕನ್ಹಯ್ಯಾ ಲಾಲ್ ತೇಲಿ ಮನೆಯ ಏಕೈಕ ಆದಾಯದ ಮೂಲವಾಗಿದ್ದರು. ಇವರ ದುಡಿಮೆಯ ಮೇಲೆಯೇ ಹೊಟ್ಟೆ ತುಂಬಿಸಿಕೊಳ್ಳುವ ಪರಿಸ್ಥಿತಿಯಿತ್ತು. ಇದನ್ನು ಗಮನದಲ್ಲಿ ಇಟ್ಟುಕೊಂಡು ರಾಜಸ್ಥಾನ ಸರ್ಕಾರವು ಕುಟುಂಬಕ್ಕೆ ನೆರವು ನೀಡುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಂಡಿದೆ. ಅದಕ್ಕಾಗಿಯೇ ಕನ್ಹಯ್ಯಾ ಲಾಲ್ ಇಬ್ಬರೂ ಪುತ್ರರನ್ನು ಸರ್ಕಾರಿ ಸೇವೆಗೆ ನೇಮಕ ಮಾಡಿಕೊಳ್ಳಲಾಗಿದೆ.
ಕನ್ಹಯ್ಯಾ ಲಾಲ್ ಹಂತಕರ ವಿರುದ್ಧ ಕಠಿಣ ಕ್ರಮ
ಕಳೆದ ಜೂನ್ 28ರ ಮಂಗಳವಾರ ಮಧ್ಯಾಹ್ನ 3 ರಿಂದ 3.30 ಮಧ್ಯೆ ಕನ್ಹಯ್ಯಾ ಹತ್ಯೆ ನಡೆದಿತ್ತು. ಕೇಂದ್ರ ಗೃಹ ಸಚಿವಾಲಯದ ಭಯೋತ್ಪಾದನಾ ನಿಗ್ರಹ ವಿಭಾಗವು ಹೊರಡಿಸಿರುವ ಆದೇಶದ ಬಳಿಕ ಜೂನ್ 29 ರಂದು ರಾಷ್ಟ್ರೀಯ ತನಿಖಾ ಸಂಸ್ಥೆ ಈ ಕುರಿತು ತನಿಖೆ ಆರಂಭಿಸಿದೆ.
ಈ ಮೊದಲು ಉದಯಪುರ ಜಿಲ್ಲೆಯ ಧನ್ಮಂಡಿ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ (ಐಪಿಸಿ) ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಮತ್ತು ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯ ಸೆಕ್ಷನ್ 16, 18 ಮತ್ತು 20ರ ಅಡಿಯಲ್ಲಿ ಕನ್ಹಯ್ಯಾ ಲಾಲ್ ಹತ್ಯೆಯ ಇಬ್ಬರು ಹಂತಕರ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿತ್ತು.
ಎನ್ಐಎ ತಂಡದಿಂದ ಕನ್ಹಯ್ಯಾ ಲಾಲ್ ಹತ್ಯೆ ತನಿಖೆ
ಕೇಂದ್ರ ಗೃಹ ಸಚಿವಾಲಯದ ಆದೇಶದ ನಂತರ ರಾಷ್ಟ್ರೀಯ ತನಿಖಾ ಸಂಸ್ಥೆಯು, ರಾಷ್ಟ್ರೀಯ ತನಿಖಾ ಸಂಸ್ಥೆ ಕಾಯಿದೆ, 2008ರ ಪ್ರಕಾರ, ಪ್ರಕರಣದ ತನಿಖೆ ಕೈಗೆತ್ತಿಕೊಂಡಿತು. ಐಪಿಎಸ್ ಅಧಿಕಾರಿ ಆಗಿರುವ ಕೇಂದ್ರ ಸಂಸ್ಥೆಯ ಪೊಲೀಸ್ ವರಿಷ್ಠಾಧಿಕಾರಿ ರವಿ ಚೌಧರಿ ನೇತೃತ್ವದಲ್ಲಿ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಳ್ಳುವಂತೆ ಸೂಚಿಸಲಾಯಿತು. ಎನ್ಐಎ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 452, 302, 153 (ಎ), 153 (ಬಿ), 295 (ಎ) ಮತ್ತು 34 ಮತ್ತು ಯುಎ (ಪಿ) ಎ, 1967 ರ ಸೆಕ್ಷನ್ 16, 18 ಮತ್ತು 20 ರ ಅಡಿಯಲ್ಲಿ ಕನ್ಹಯ್ಯಾ ಲಾಲ್ ಹತ್ಯೆ ನಡೆಸಿದ ಮತ್ತು ಅದಕ್ಕೆ ಸಂಚು ರೂಪಿಸಿದ ಆರೋಪಿಗಳ ವಿರುದ್ಧ ಪ್ರಕರಣವನ್ನು ಮರು ನೋಂದಾಯಿಸಿಕೊಳ್ಳಲಾಗಿದೆ.
ಜೈಪುರ್ ಎನ್ಐಎ ಕಚೇರಿಯಲ್ಲಿ ಆರೋಪಿಗಳ ವಿಚಾರಣೆ
ಕನ್ಹಯ್ಯಾ ಲಾಲ್ ತೇಲಿ ಹತ್ಯೆ ಪ್ರಕರಣದ ತನಿಖೆಯ ವೇಳೆ ಇಬ್ಬರು ಆರೋಪಿಗಳಾದ ರಿಯಾಜ್ ಅಖ್ತರಿ ಅನ್ಸಾರಿ ಮತ್ತು ಗೌಸ್ ಮೊಹಮ್ಮದ್ ಅನ್ಸಾರಿ ಅನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ರಾಷ್ಟ್ರೀಯ ತನಿಖಾ ಸಂಸ್ಥೆಯ ಅಧಿಕಾರಿಗಳು ಆರೋಪಿ ಆಗಿರುವ ಉದಯಪುರದ ನಿವಾಸಿಗಳಿಬ್ಬರನ್ನೂ ಜೈಪುರದ ಎನ್ಐಎ ಕಚೇರಿಯಲ್ಲಿ ವಿಚಾರಣೆ ನಡೆಸುತ್ತಿದ್ದಾರೆ.
ಎನ್ಐಎಯ 6 ರಿಂದ 10 ಸದಸ್ಯರ ತಂಡವು ಇನ್ಸ್ಪೆಕ್ಟರ್ ಜನರಲ್ ಮತ್ತು ಡೆಪ್ಯುಟಿ ಇನ್ಸ್ಪೆಕ್ಟರ್ ಜನರಲ್ ಶ್ರೇಣಿಯ ಅಧಿಕಾರಿಯ ಮೇಲ್ವಿಚಾರಣೆಯಲ್ಲಿ ಈ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದೆ.
ಪ್ರವಾದಿ ಮೊಹಮ್ಮದ್ ವಿರುದ್ಧ ವಿವಾದಾತ್ಮಕ ಟೀಕೆಗಳನ್ನು ಮಾಡಿದ ಮಾಜಿ ಬಿಜೆಪಿ ನಾಯಕ ನೂಪುರ್ ಶರ್ಮಾ ಅನ್ನು ಬೆಂಬಲಿಸಿ ಇತ್ತೀಚೆಗೆ ಸಾಮಾಜಿಕ ಮಾಧ್ಯಮ ಪೋಸ್ಟ್ ಅನ್ನು ಶೇರ್ ಮಾಡಿದ್ದಕ್ಕಾಗಿ ಟೈಲರ್ ಕನ್ಹಯ್ಯಾ ಲಾಲ್ ಹತ್ಯೆ ಮಾಡಿರುವುದಾಗಿ ಹಂತಕರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ಹೇಳಿಕೊಂಡಿದ್ದರು.
Recommended Video