ರಾಜಸ್ಥಾನ ಬಿಜೆಪಿಗೆ ಮತ್ತೆ ಬಿಗ್ ಶಾಕ್: ತಲೆನೋವಾದ ರಾಜೀನಾಮೆ ಪರ್ವ!
Recommended Video
ಜೈಪುರ, ನವೆಂಬರ್ 19: ರಾಜಸ್ಥಾನ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹೊತ್ತಲ್ಲಿ, ಬಿಜೆಪಿಯ ಶಾಸಕರು ರಾಜೀನಾಮೆ ನೀಡುತ್ತಿರುವುದು ಪಕ್ಷಕ್ಕೆ ಬಹುದೊಡ್ಡ ತಲೆನೋವಾಗಿ ಪರಿಣಮಿಸಿದೆ.
ರಾಜಸ್ಥಾನದ ರಾಮಗರ್ ಕ್ಷೇತ್ರದ ಬಿಜೆಪಿ ಶಾಸಕ ಗ್ಯಾನ್ ದೇವ್ ಅಹುಜಾ ಅವರು ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ವಿಧಾನಸಭೆ ಚುನಾವಣೆಗೆ ತಮಗೆ ಟಿಕೆಟ್ ದೊರಕದ ಹಿನ್ನೆಲೆಯಲ್ಲಿ ಅವರು ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.
ರೋಚಕ ದಿಕ್ಕಿನಲ್ಲಿ ರಾಜಸ್ಥಾನ ಚುನಾವಣೆ: ರಾಜೆ ವಿರುದ್ಧ ಬಲಾಢ್ಯ ಅಭ್ಯರ್ಥಿ!
ಇದುವರೆಗೂ ಬಿಜೆಪಿ 200 ಕ್ಷೇತ್ರಗಳ ವಿಧಾನಸಭೆಗೆ ತನ್ನ ಪಕ್ಷದ 170 ಅಭ್ಯರ್ಥಿಗಳನ್ನು ಘೋಷಿಸಿದೆ. ಆದರೆ ಹಾಲಿ ಶಾಸಕರಾಗಿದ್ದರೂ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಬಂಡಾಯ ಎದ್ದಿರುವ ಗ್ಯಾನ್ ದೇವ್ ರಾಜೀನಾಮೆ ನೀಡಿದ್ದಾರೆ.
ರಾಜಸ್ಥಾನ ವಿಧಾನಸಭೆ ಚುನಾವಣೆ ಈ ಮೂಲಕ ದಿನೇ ದಿನೇ ರೋಚಕತೆಯತ್ತ ಸಾಗುತ್ತಿದೆ.
ಗ್ಯಾನ್ ದೇವ್ ಗೆ ಟಿಕೆಟ್ ಕೈತಪ್ಪಿದ್ದೇಕೆ?
ಗ್ಯಾನ್ ದೇವ್ ಅವರು ಇತ್ತೀಚೆಗೆ ಹಲವು ಸಮಾರಂಭಗಳಲ್ಲಿ ಪರೋಕ್ಷವಾಗಿ ಬಿಜೆಪಿ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಗೋಹತ್ಯೆ ತಡೆಯುವ ನಿಟ್ಟಿನಲ್ಲಿ ಬಿಜೆಪಿ ಹೆಚ್ಚಿನ ಶ್ರಮ ವಹಸಿಯತ್ತಿಲ್ಲ ಎಂದು ಹೇಳಿದ್ದರು. ಇದೀಗ ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಲಿರುವ ಅವರು ರಾಮಜನ್ಮಭೂಮಿ ಮತ್ತು ಗೋ ರಕ್ಷಣೆಯನ್ನು ತಮ್ಮ ಮುಖ್ಯ ಗುರಿಯನ್ನಾಗಿ ಇರಿಸಿಕೊಳ್ಳುವುದಾಗಿ ಹೇಳಿದ್ದಾರೆ.
ಕಾಂಗ್ರೆಸ್ ಸೇರಿದ ಹರೀಶ್ ಮೀನಾ
ಬಿಜೆಪಿಯ ಪ್ರಮುಖ ನಾಯಕರಲ್ಲೊಬ್ಬರಾಗಿದ್ದ ಹರೀಶ್ ಮೀನಾ ಅವರು ಇತ್ತೀಚೆಗಷ್ಟೇ ಕಾಂಗ್ರೆಸ್ ಗೆ ಸೇರ್ಪಡೆಯಾಗುವ ಮೂಲಕ ಬಿಜೆಪಿಗೆ ಬಿಗ್ ಶಾಕ್ ನೀಡಿದ್ದರು. ಇಲ್ಲಿನ ದೌಸಾ ಕ್ಷೇತ್ರದ ಸಂಸದರಾಗಿರುವ ಮೀನಾ ಅವರ ರಾಜೀನಾಮೆ ಬಿಜೆಪಿಗೆ ಆಘಾತವನ್ನುಂಟು ಮಾಡಿತ್ತು. 64 ವರ್ಷ ವಯಸ್ಸಿನ ಹರೀಶ್ ಮೀನಾ, ಮಾಜಿ ಡಿಜಿಪಿಯೂ ಹೌದು. 2014 ರಲ್ಲಿ ಬಿಜೆಪಿ ಸೇರಿದ್ದ ಅವರಿಗೆ ಬಿಜೆಪಿ ದೌಸಾ ಕ್ಷೇತ್ರದಿಂದ ಟಿಕೆಟ್ ನೀಡಿತ್ತು.
ರಾಜಸ್ಥಾನದಲ್ಲಿ ಬಿಜೆಪಿಗೆ ಬಿಗ್ ಶಾಕ್, ಕಾಂಗ್ರೆಸ್ ಸೇರಿದ ಬಿಜೆಪಿ ಸಂಸದ!
ಮುಖ್ಯಮಂತ್ರಿ ವಿರುದ್ಧವೂ ಮಾಜಿ ಬಿಜೆಪಿ ನಾಯಕ!
ಮುಖ್ಯಮಂತ್ರಿ ವಸುಂಧರಾ ರಾಜೆ ಅವರ ವಿರುದ್ಧ ಇತ್ತೀಚೆಗಷ್ಟೇ ಕಾಂಗ್ರೆಸ್ ಸೇರಿದ ಬಿಜೆಪಿಯ ಮಾಜಿ ನಾಯಕ ಮನ್ವೇಂದ್ರ ಸಿಂಗ್ ಅವರು ಕಣಕ್ಕಿಳಿಯಲಿದ್ದಾರೆ. ಇದು ಬಿಜೆಪಿಗೆ ಅತೀ ದೊಡ್ಡ ಹಿನ್ನಡೆ ಅನ್ನಿಸಿದೆ. ನವೆಂಬರ್ 17 ರಂದು ನಡೆದ ಬಿಡುಗಡೆಯಾದ ಕಾಂಗ್ರೆಸ್ ಅಭ್ಯರ್ಥಿಗಳ ಎರಡನೇ ಪಟ್ಟಿಯಲ್ಲಿ ರಾಜೇ ಅವರ ವಿರುದ್ಧ ಮನ್ವೇಂದ್ರ ಸಿಂಗ್ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿರುವುದು ರಾಜಸ್ಥಾನದ ವಿಧಾನಸಭೆ ಚುನಾವಣೆಯನ್ನು ರೋಚಕ ದಿಕ್ಕಿನತ್ತ ಕೊಂಡೊಯ್ದಿದೆ. ಮನ್ವೇಂದ್ರ ಸಿಂಗ್ ಮಾಜಿ ಕೇಂದ್ರ ಸಚಿವ ಜಸ್ವಂತ್ ಸಿಂಗ್ ಅವರ ಪುತ್ರ.
ಡಿ.7 ರಂದು ಚುನಾವಣೆ
200 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ರಾಜಸ್ಥಾನದಲ್ಲಿ ಡಿಸೆಂಬರ್ 7 ರಂದು ಚುನಾವಣೆ ನಡೆಯಲಿದ್ದು, ಡಿ.11 ರಂದು ಫಲಿತಾಂಶ ಹೊರಬೀಳಲಿದೆ. ರಾಜಸ್ಥಾನದೊಟ್ಟಿಗೆ ಮಧ್ಯಪ್ರದೇಶ, ಛತ್ತೀಸ್ ಗಢ, ತೆಲಂಗಾಣ ಮತ್ತು ಮಿಜೋರಾಂ ರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶವೂ ಅಂದೇ ಹೊರಬೀಳಲಿದೆ.
ರಾಜಸ್ಥಾನ : ಕಾಂಗ್ರೆಸ್ ಸೇರಿದ ಜಸ್ವಂತ್ ಪುತ್ರ, ಬಿಜೆಪಿಗೆ ಭಾರಿ ಹಿನ್ನಡೆ