ಇವರೇ ದೇಶದ ಅತ್ಯಂತ್ಯ ಕಿರಿಯ ನ್ಯಾಯಾಧೀಶರು: ಇದು ಹೊಸ ದಾಖಲೆ
ಜೈಪುರದ, ನವೆಂಬರ್.22: ನ್ಯಾಯಾಂಗ ವ್ಯವಸ್ಥೆಯಲ್ಲಿ ಸೇವೆ ಸಲ್ಲಿಸುವ ಗಣ್ಯರಿಗೆ ಸಮಾಜದಲ್ಲಿ ಉನ್ನತ ಸ್ಥಾನವಿದೆ. ಈ ಗೌರವವೇ ಇಲ್ಲೊಬ್ಬ ಯುವಕನಿಗೆ ಸ್ಪೂರ್ತಿಯಾಗಿದೆ. ಅತ್ಯಂತ್ಯ ಕಿರಿಯ ವಯಸ್ಸಿನಲ್ಲೇ ಸಾಧನೆ ಶಿಖರವೇರಲು ಹಾದಿಯಾಗಿದೆ.
ರಾಜಸ್ಥಾನ ಸರ್ಕಾರ ಇತ್ತೀಚಿಗೆ ಜಾರಿಗೊಳಿಸಿದ ಒಂದು ನೀತಿ, ಯುವಕರಲ್ಲಿ ಹೊಸ ಚೈತನ್ಯ ಮೂಡಿಸಿದೆ. ಅದಕ್ಕೆ ಜೈಪುರ ಮೂಲದ ಯುವಕ ಮಯಾಂಕ್ ಪ್ರತಾಪ್ ಸಿಂಗ್ ಸಾಕ್ಷಿಯಾಗಿದ್ದಾರೆ. ನ್ಯಾಯಾಂಗ ಪರೀಕ್ಷಯಲ್ಲಿ ಉತ್ತೀರ್ಣರಾದ ಮಯಾಂಕ್ ಸಿಂಗ್ ದೇಶದ ಅತ್ಯಂತ್ಯ ಕಿರಿಯ ವಯಸ್ಸಿನ ನ್ಯಾಯಾಧೀಶರು ಎನಿಸಿದ್ದಾರೆ.
ಇತಿಹಾಸದಲ್ಲೇ ಮೊದಲು: ಹೈಕೋರ್ಟ್ ಜಡ್ಜ್ ವಿರುದ್ಧ ತನಿಖೆಗೆ ಸುಪ್ರೀಂ ಅನುಮತಿ
ಸಾಮಾನ್ಯವಾಗಿ ಈ ಮೊದಲು ನ್ಯಾಯಾಂಗ ಸೇವಾ ಪರೀಕ್ಷೆಗೆ ಅರ್ಜಿ ಸಲ್ಲಿಸುವ ಕನಿಷ್ಠ ವಯೋಮಿತಿ ಮೊದಲಿಗೆ 23 ವರ್ಷವಿತ್ತು. ಆದರೆ, ಕಳೆದ ವರ್ಷವಷ್ಟೇ ರಾಜಸ್ಥಾನ ಸರ್ಕಾರ, ಕನಿಷ್ಠ ವಯೋಮಿತಿಯನ್ನು 21 ವರ್ಷಕ್ಕೆ ಇಳಿಕೆ ಮಾಡಿತ್ತು. ಸರ್ಕಾರದ ಈ ಕ್ರಮದಿಂದ ನಾನು ಉತ್ತೇಜಿತನಾಗಿದ್ದೆ ಎಂದು ಸ್ವತಃ ಮಯಾಂಕ್ ಪ್ರತಾಪ್ ಸಿಂಗ್ ಹೇಳಿದ್ದಾರೆ.
ಸಮಾಜದಲ್ಲಿ ಸಿಗುವ ಗೌರವವೇ ಸ್ಪೂರ್ತಿ
ಸಮಾಜದಲ್ಲಿ ನ್ಯಾಯಾಧೀಶರಿಗೆ ಸಿಗುವ ಗೌರವವನ್ನು ಕಂಡು ನ್ಯಾಯಾಂಗ ವ್ಯವಸ್ಥೆಯಲ್ಲಿ ಸೇವೆ ಸಲ್ಲಿಸಬೇಕೆಂದು 2014ರಲ್ಲಿ ಮಯಾಂಕ್ ಸಿಂಗ್ ಎಲ್ಎಲ್ ಬಿ ಕೋರ್ಸ್ ಗೆ ಸೇರ್ಪಡೆಗೊಂಡರಂತೆ. ನಂತರ ಐದು ವರ್ಷಗಳ ಕಾಲ ವಿದ್ಯಾಭ್ಯಾಸ ಮುಗಿಸಿ ರಾಜಸ್ಥಾನ ವಿಶ್ವವಿದ್ಯಾಲಯದ ಎಲ್ಎಲ್ ಬಿ ಪದವಿ ಪಡೆದುಕೊಂಡಿದ್ದರು.
ಮೊದಲ ಪ್ರಯತ್ನದಲ್ಲೇ ಬಿಗ್ ಸಕ್ಸಸ್
2019ರಲ್ಲೇ ಕೋರ್ಸ್ ಮುಗಿಸಿದ ಮಯಾಂಕ್ ಸಿಂಗ್ ಮೊದಲ ಪ್ರಯತ್ನದಲ್ಲೇ ನ್ಯಾಯಾಂಗ ಸೇವಾ ಪರೀಕ್ಷೆಯಲ್ಲಿ ಪಾಸ್ ಆಗಿದ್ದಾರೆ. ಈ ಬಗ್ಗೆ ಸಂತಸ ವ್ಯಕ್ತಪಡಿಸುವ ಮಯಾಂಕ್, ತಮ್ಮ ಪರಿಶ್ರಮಕ್ಕೆ ಬೆಂಬಲ ನೀಡಿದ ಶಿಕ್ಷಕರು, ಸಂಬಂಧಿಕರು, ಸ್ನೇಹಿತರಿಗೆಲ್ಲ ಧನ್ಯವಾದ ಎಂದಿದ್ದಾರೆ.
ಸ್ಥಾನಕ್ಕೆ ನ್ಯಾಯ ಸಿಗುವಂತೆ ನಡೆದುಕೊಳ್ಳುವೆ
ಚಿಕ್ಕ ವಯಸ್ಸಿನಲ್ಲೇ ನ್ಯಾಯಾಂಗ ವ್ಯವಸ್ಥೆಯ ಉನ್ನತ ಹುದ್ದೆಗೆ ಏರುವ ಅವಕಾಶ ಸಿಕ್ಕಿದೆ. ಈ ವಯಸ್ಸಿಗೆ ಆ ಹುದ್ದೆ ತುಂಬಾ ದೊಡ್ಡದು ಎನಿಸಿದರೂ, ಅದಕ್ಕೆ ನ್ಯಾಯ ಒದಗಿಸಲು ಪ್ರಯತ್ನ ಪಡುತ್ತೇನೆ. ಇದರಿಂದ ಮತ್ತಷ್ಟು ಕಲಿಯಬೇಕು ಎಂಬ ಆಸೆ ಹುಟ್ಟುತ್ತಿದೆ ಎಂದು ಮಯಾಂಕ್ ಪ್ರತಾಪ್ ಸಿಂಗ್ ಹೇಳಿದ್ದಾರೆ.
ಯುವಕರಲ್ಲಿ ಹುರುಪುರ ತುಂಬಿದ ಸರ್ಕಾರದ ನಿರ್ಧಾರ
ಕಳೆದ ವರ್ಷವಷ್ಟೇ ನ್ಯಾಯಾಂಗ ಸೇವಾ ಪರೀಕ್ಷೆಗೆ ಅರ್ಜಿ ಸಲ್ಲಿಸುವವರ ಕನಿಷ್ಠ ವಯೋಮಿತಿಯನ್ನು 21 ವರ್ಷಕ್ಕೆ ಕಡಿತಗೊಳಿಸಲಾಗಿದೆ. ರಾಜಸ್ಥಾನ ಸರ್ಕಾರದ ಈ ನಿರ್ಧಾರ ಯುವಕರಲ್ಲಿ ಹೊಸ ಹುರುಪು ತುಂಬಿದೆ. ಜೊತೆಗೆ ನ್ಯಾಯಾಂಗ ವ್ಯವಸ್ಥೆಯಲ್ಲಿ ಯುವಕರಿಗೆ ಹೆಚ್ಚು ಹೆಚ್ಚು ಅವಕಾಶಗಳು ಸಿಗುತ್ತವೆ. ಉದ್ಯೋಗಕ್ಕಾಗಿ ಹವಣಿಸುತ್ತಿರುವವರಿಗೆ ಸರ್ಕಾರದ ತೀರ್ಮಾನದಿಂದ ಅನುಕೂಲವಾಗಿದೆ ಎಂದು ಮಯಾಂಕ್ ಸಿಂಗ್ ಸಂತಸ ವ್ಯಕ್ತಪಡಿಸಿದ್ದಾರೆ.