ರಾಜಸ್ಥಾನ: ಬಿದ್ದ ಕಾಂಗ್ರೆಸ್ಸಿನ ಪತಾಕೆಯನ್ನು ಹಾರಿಸಿದ 'ಪೈಲಟ್'
Recommended Video
ಜೈಪುರ, ಡಿಸೆಂಬರ್ 12: ರಾಜಸ್ಥಾನದಲ್ಲಿ ಕಾಂಗ್ರೆಸ್ ಮತ್ತೆ 'ರಾಜ'ನಂತೆ ಬೀಗಿದೆ. ಬಿಜೆಪಿಯನ್ನು ಅಧಿಕಾರದಿಂದ ಕೆಳಕ್ಕಿಳಿಸಿ ಮತ್ತೆ ತನ್ನ ಬಾವುಟ ಹಾರಿಸಿದೆ.
ಕಾಂಗ್ರೆಸ್ನ ಹಿರಿಯ ಮುಖಂಡ ಮತ್ತು ಅನುಭವಿ ಅಶೋಕ್ ಗೆಹ್ಲೋಟ್ ಮುಖ್ಯಮಂತ್ರಿ ಗಾದಿಗೆ ಏರಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಸೋತರೆ ಆಳಿಗೊಂದು ಕಲ್ಲು: ಮುಳುವಾದ ವಸುಂಧರಾ ರಾಜೇ ಒರಟುತನ
ಆದರೆ ಅವರ ಅನುಭವವನ್ನು ಪಕ್ಕಕ್ಕಿರಿಸಿ, ರಾಜಸ್ಥಾನದಲ್ಲಿ ಕಾಂಗ್ರೆಸ್ ಪತಾಕೆ ಹಾರಲು ಕಾರಣವಾದ ವ್ಯಕ್ತಿಯೇ ಸಿಎಂ ಸ್ಥಾನಕ್ಕೆ ಹೆಚ್ಚು ಸೂಕ್ತ ಎನ್ನುವುದು ಅನೇಕ ಕಾಂಗ್ರೆಸ್ಸಿಗರ ಅಂಬೋಣ.
ನಿಜ. 2013ರ ರಾಜಸ್ಥಾನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಕ್ಷರಶಃ ನೆಲಕಚ್ಚಿತ್ತು. 200 ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆದ್ದಿದ್ದು ಆಗ ಕೇವಲ 21 ಸ್ಥಾನಗಳಲ್ಲಿ. ಬಿಜೆಪಿ 163 ಸೀಟುಗಳನ್ನು ಗೆದ್ದು ಭರ್ಜರಿ ಜಯಭೇರಿ ಬಾರಿಸಿತ್ತು.
ರಾಜಸ್ಥಾನದಲ್ಲಿ ಬಿಜೆಪಿಗೆ ಮುಖಭಂಗ : ಸೋಲಿಗೆ 5 ಕಾರಣಗಳು
ಆದರೆ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಯ ಶಕ್ತಿ ಅರ್ಧಕ್ಕಿಂತಲೂ ಹೆಚ್ಚು ಭಾಗ ಕುಸಿದಿದೆ. ಕಾಂಗ್ರೆಸ್ ನಾಲ್ಕು ಪಟ್ಟು ತನ್ನ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡಿದೆ. ಸರಳ ಬಹುಮತಕ್ಕೆ ಎರಡು ಸ್ಥಾನಗಳು ಮಾತ್ರ ಅದಕ್ಕೆ ಬೇಕಾಗಿದೆ. ಬಿಎಸ್ಪಿ ಸೇರಿದಂತೆ ಇತರೆ ಪಕ್ಷಗಳ ಬೆಂಬಲ ಪಡೆದು ಸರ್ಕಾರ ರಚಿಸುತ್ತಿದೆ.
ಕಾಂಗ್ರೆಸ್ ಆಪದ್ಬಾಂಧವ
ಕಾಂಗ್ರೆಸ್ನ ಈ ಎಲ್ಲ ಸಾಧನೆಗಳಿಗೆ ಕಾರಣವಾದ ವ್ಯಕ್ತಿ ಸಚಿನ್ ಪೈಲಟ್. ವ್ಯಕ್ತಿ ಹೆಸರಿನಲ್ಲಿ ಬಳುವಳಿಯಾಗಿ ಬಂದ 'ಪೈಲಟ್' ಸರ್ ನೇಮ್ನಂತೆ ವಿಮಾನ ಹಾರಿಸಬಲ್ಲರು, ಜನರೊಟ್ಟಿಗೆ ಬೆರೆಯಬಲ್ಲರು, ಮಿಗಿಲಾಗಿ ಜನರ ಮಿಡಿತ ಅರಿತುಕೊಂಡು ಕೆಲಸ ಮಾಡಬಲ್ಲರು. ಹೀಗಾಗಿಯೇ ತೀರಾ ಹೀನಾ ಸೋಲು ಕಂಡಿದ್ದ ಪಕ್ಷವನ್ನು ಏಕಾಏಕಿ ಮೇಲೆತ್ತಲು ಸಾಧ್ಯವಾಗಿದ್ದು. 2013ರ ಪಕ್ಷದ ಸೋಲಿನ ಸೇಡನ್ನು ತೀರಿಸಿಕೊಳ್ಳಲು ಕಾಂಗ್ರೆಸ್ಗೆ ನೆರವಾಗಿದ್ದು ಯುವ ಮುಖಂಡ ಸಚಿನ್ ಪೈಲಟ್.
ಪಕ್ಷ ಸಂಘಟಿಸಿದ ಸಚಿನ್
2013ರಲ್ಲಿ ಕಾಂಗ್ರೆಸ್ ರಾಜಸ್ಥಾನದಲ್ಲಿ ಹೀನಾಯ ಸೋಲು ಅನುಭವಿಸಿತ್ತು. ಬಿಜೆಪಿ 163ರಲ್ಲಿ ಗೆದ್ದರೆ, ಕಾಂಗ್ರೆಸ್ ಕೇವಲ 21ರಲ್ಲಿ ಗೆದ್ದು ಸೋಲು ಕಂಡಿತ್ತು. ರಾಜಸ್ಥಾನದಲ್ಲಿ ಕಾಂಗ್ರೆಸ್ ತಂತ್ರವೆಲ್ಲ ತಲೆಕೆಳಗಾಗಿದ್ದವು. ಈ ಸೋಲಿನ ಬಳಿಕ ಅಲ್ಲಿ ಪಕ್ಷವನ್ನು ಮರುಸ್ಥಾಪಿಸುವ ಹೊಣೆಯನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಸಚಿನ್ ಪೈಲಟ್ಗೆ ವಹಿಸಿದ್ದರು.
ಸಚಿನ್, ರಾಜ್ಯದಲ್ಲಿ ಪಕ್ಷವನ್ನು ಕಟ್ಟುವ ಜವಾಬ್ದಾರಿಯೊಂದಿಗೆ ತಮ್ಮ ಗಮನವನ್ನು ಕೇಂದ್ರೀಕರಿಸಿದರು. ತಮ್ಮ ರಾಜಕೀಯ ಬದುಕಿನ ಹೊಸ ಪ್ರಯಾಣ ಆರಂಭಿಸಿ ರಾಜಸ್ಥಾನದ ಉದ್ದಗಲಕ್ಕೂ ಸುಮಾರು ಐದು ಲಕ್ಷ ಕಿ.ಮೀ. ಸಂಚರಿಸಿದರು. ಪಕ್ಷವನ್ನು ತಳಮಟ್ಟದಿಂದ ಸಂಘಟಿಸಿ ಬಲಪಡಿಸುವ ಕಾರ್ಯ ಮಾಡಿದರು.
ಈ ಬಾರಿ ಚುನಾವಣೆಯಲ್ಲಿ ತೊಂಕ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಎದುರು 54 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಜಯಗಳಿಸಿದ್ದಾರೆ.
ಕಾಮನ್ವೆಲ್ತ್ ಚಿನ್ನದ ಹುಡುಗಿ ಕೃಷ್ಣಾ ಪೂನಿಯಾ ಈಗ ಕಾಂಗ್ರೆಸ್ ಶಾಸಕಿ
ನಾಲ್ಕು ವರ್ಷದ ಬಳಿಕ ಟರ್ಬನ್
2014ರ ಲೋಕಸಭೆ ಚುನಾವಣೆಯಲ್ಲಿ ಒಂದು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಸೋಲು ಅನುಭವಿಸಿದ್ದ ಸಚಿನ್, ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವವರೆಗೂ ತಲೆಗೆ ಕಟ್ಟುವ ಸಾಂಪ್ರದಾಯಿಕ ಪೇಟ 'ಸಫಾ'ವನ್ನು ಧರಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದರಂತೆ. ಪ್ರಚಾರ ನಡೆಸುವ ವೇಳೆ ಜನರು 'ಸಫಾ'ಗಳನ್ನು ನೀಡಿದ್ದರು. ಆದರೆ ಅವುಗಳನ್ನು ಸಚಿನ್ ಧರಿಸಲು ಬಯಸಿರಲಿಲ್ಲ. ಈಗ ಅವರು ಮತ್ತೆ ಪೇಟ ಕಟ್ಟಿಕೊಳ್ಳುವ ಗಳಿಗೆ ಕೂಡಿಬಂದಿದೆ.
ಶೇ 70ರಷ್ಟು ಶಾಸಕರ ಬೆಂಬಲ
ರಾಜಸ್ಥಾನದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಹಿರಿಯ ನಾಯಕ ಅಶೋಕ್ ಗೆಹ್ಲೋಟ್ ಅವರಿಗೆ ಆದ್ಯತೆ ನೀಡಲಾಗುತ್ತದೆ ಎನ್ನಲಾಗುತ್ತಿದೆ. ಆದರೆ, ಪಕ್ಷ ಸಂಘಟನೆಯಲ್ಲಿ ಚುರತೆ ತೋರಿಸುವ ಮೂಲಕ ಎಲ್ಲರ ಮನಗೆದ್ದಿರುವ ಸಚಿನ್ ಪೈಲಟ್ ಅವರೇ ಮುಖ್ಯಮಂತ್ರಿಯಾಗಬೇಕು ಎನ್ನುವುದು ಗೆದ್ದ ಶಾಸಕರಲ್ಲಿ ಹೆಚ್ಚಿನವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಶೇ 70ರಷ್ಟು ಕಾಂಗ್ರೆಸ್ ಶಾಸಕರು ಸಚಿನ್ ಪೈಲಟ್ ಅವರೇ ಸರ್ಕಾರದ ನೇತೃತ್ವ ವಹಿಸಬೇಕು ಎಂದು ಮುಖಂಡರ ಬಳಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂಬುದಾಗಿ ಮೂಲಗಳು ತಿಳಿಸಿವೆ.
ಅತಿ ಕಿರಿಯ ಸಂಸದ
41 ವರ್ಷದ ಸಚಿನ್ (1977, ಸೆಪ್ಟೆಂಬರ್ 7) ಹುಟ್ಟಿದ್ದು ಉತ್ತರ ಪ್ರದೇಶದ ಸಹರಾನ್ಪುರದಲ್ಲಿ. ಕಾಂಗ್ರೆಸ್ ನಾಯಕ ರಾಜೇಶ್ ಪೈಲಟ್ ಮತ್ತು ರಮಾ ಪೈಲಟ್ ಅವರ ಮಗನಾದ ಸಚಿನ್, ದೆಹಲಿಯ ಪ್ರತಿಷ್ಠಿತ ಸೇಂಟ್ ಸ್ಟೀಫನ್ ಕಾಲೇಜಿನಲ್ಲಿ ಇಂಗ್ಲಿಷ್ ಸಾಹಿತ್ಯ ಪದವಿ ಓದಿದರು. ಆಗಲೇ ಬಿಬಿಸಿಯ ದೆಹಲಿ ಬ್ಯೂರೊದಲ್ಲಿ ಮತ್ತು ಜನರಲ್ ಮೋಟಾರ್ಸ್ ಕಾರ್ಪೊರೇಷನ್ನಲ್ಲಿ ಕೆಲಸ ಮಾಡಿದ್ದರು. ಅಮೆರಿಕದ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದಲ್ಲಿ ಎಂಬಿಎ ಪದವಿ ಪಡೆದರು.
ತಮ್ಮ ತಂದೆ ರಾಜೇಶ್ ಪೈಲಟ್ ಅವರ ಕ್ಷೇತ್ರವಾದ ದೌಸಾದಲ್ಲಿ 2004ರಲ್ಲಿ ಲೋಕಸಭೆ ಚುನಾವಣೆಯಲ್ಲಿ ಗೆದ್ದ ಅವರು, ಸಂಸತ್ ಪ್ರವೇಶಿಸಿದ ಅತಿ ಕಿರಿಯ ಸಂಸದ ಎಂಬ ಹೆಗ್ಗಳಿಕೆಗೆ ಪಾತ್ರರಾದರು. 2009ರಲ್ಲಿ ಅಜ್ಮೇರ್ನಿಂದ ಮತ್ತೆ ಚುನಾಯಿತರಾದರು. ಆಗ 2009ರಲ್ಲಿ ಸಂವಹನ ಮತ್ತು ಐಟಿ ರಾಜ್ಯಖಾತೆ ಸಚಿವರಾಗಿ ಹಾಗೂ 2012ರಲ್ಲಿ ಕಾರ್ಪೊರೇಟ್ ವ್ಯವಹಾರಗಳ ಸಚಿವರಾಗಿ (ಸ್ವತಂತ್ರಖಾತೆ) ಕಾರ್ಯನಿರ್ವಹಿಸಿದ್ದರು.
ರಾಜಸ್ಥಾನ ಚುನಾವಣೆ : ಪಕ್ಷೇತರ ಅಭ್ಯರ್ಥಿ ವಿರುದ್ಧ ಸೋತ ಸಚಿವ!
ಪೈಲಟ್, ಶೂಟರ್
1995ರಲ್ಲಿ ಅಮೆರಿಕದಿಂದ ಖಾಸಗಿ ಪೈಲಟ್ ಪರವಾನಗಿ (ಪಿಪಿಎಲ್) ಪಡೆದ ಅವರು, ಕ್ರೀಡಾಪಟುವೂ ಹೌದು. ಅನೇಕ ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್ ಷಿಪ್ಗಳಲ್ಲಿ ಅವರು ದೆಹಲಿಯನ್ನು ಪ್ರತಿನಿಧಿಸಿದ್ದರು.
ಟೆರಿಟೋರಿಯಲ್ ಆರ್ಮಿಯಲ್ಲಿ ಲೆಫ್ಟಿನೆಂಟ್ ಆಗಿಯೂ ನೇಮಕವಾಗಿದ್ದರು. ರಾಜಸ್ಥಾನದ ಗಾಜಿಯಾಬಾದ್ನಲ್ಲಿ ಪತ್ನಿ ಸಾರಾ ಅಬ್ದುಲ್ಲಾ (ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಮಗಳು) ಮತ್ತು ಇಬ್ಬರು ಮಕ್ಕಳ ಜೊತೆ ನೆಲೆಸಿದ್ದಾರೆ.