ರಾಜಸ್ಥಾನದಲ್ಲಿ ಪಟಾಕಿ ಮಾರಾಟ ನಿಷೇಧಿಸಿದ ಸರ್ಕಾರ
ಜೈಪುರ್, ನವೆಂಬರ್.02: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಆತಂಕದ ನಡುವೆ ಸಾಲು ಸಾಲು ಹಬ್ಬಗಳು ಬರುತ್ತಿವೆ. ರಾಜಸ್ಥಾನದಲ್ಲಿ ಬೆಳಕಿನ ಹಬ್ಬ ದೀಪಾವಳಿ ಆಚರಣೆ ಸಂದರ್ಭದಲ್ಲಿ ಪಟಾಕಿ ಮಾರಾಟಕ್ಕೆ ಸರ್ಕಾರವು ನಿರ್ಬಂಧ ವಿಧಿಸಿದೆ.
ರಾಜಸ್ಥಾನದಲ್ಲಿ ಕೊವಿಡ್-19 ರೋಗವನ್ನು ನಿಯಂತ್ರಿಸುವ ಉದ್ದೇಶದಿಂದ ಸರ್ಕಾರ ಈ ಕ್ರಮ ತೆಗೆದುಕೊಂಡಿದೆ. ರಾಜ್ಯದಲ್ಲಿನ ಸದ್ಯದ ಪರಿಸ್ಥಿತಿಯನ್ನು ಪರಿಶೀಲಿಸಿದಾಗ ಈ ಸವಾಲಿನ ಸಂದರ್ಭಗಳಲ್ಲಿ ಜನರ ಪ್ರಾಣವನ್ನು ರಕ್ಷಿಸಿವುದು ಸರ್ಕಾರಕ್ಕೆ ಮುಖ್ಯವಾಗುತ್ತದೆ ಎಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.
ಕೊರೊನಾ ವೈರಸ್ ಸಂಕಷ್ಟ: ದೀಪಾವಳಿ ಆಚರಿಸಲು ಸರ್ಕಾರದ ಮಾರ್ಗಸೂಚಿ!
ಪಟಾಕಿ ತಯಾರಿಕೆ ಮತ್ತು ಪಟಾಕಿ ಮಾರಾಟಕ್ಕೆ ಕಡಿವಾಣ ಹಾಕಬೇಕು. ಫಿಟ್ನೆಸ್ ಪ್ರಮಾಣಪತ್ರವಿಲ್ಲದೆ ಚಲಿಸುವ ವಾಹನಗಳ ಮೇಲೆ ನಿಗಾ ವಹಿಸುವ ಮೂಲಕ ಕೊರೊನಾವೈರಸ್ ಸೋಂಕಿತ ರೋಗಿಗಳು ಮತ್ತು ಸಾರ್ವಜನಿಕರ ಆರೋಗ್ಯವನ್ನು ರಕ್ಷಿಸಲು ಕಠಿಣ ಕ್ರಮ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸೂಚನೆ ನೀಡಿದ್ದಾರೆ.
ಪಟಾಕಿ ಸಿಡಿಸದಂತೆ ಸಿಎಂ ಮನವಿ:
ರಾಜಸ್ಥಾನದಲ್ಲಿ ಈ ಬಾರಿ ದೀಪಾವಳಿ ಹಬ್ಬವನ್ನು ಸರಳ ಮತ್ತು ಸುರಕ್ಷಿತವಾಗಿ ಆಚರಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಪಟಾಕಿ ಸಿಡಿಸದಂತೆ ದೀಪಗಳ ಮೂಲಕ ಹಬ್ಬವನ್ನು ಆಚರಿಸುವಂತೆ ರಾಜ್ಯದ ಪ್ರಜೆಗಳಿಗೆ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮನವಿ ಮಾಡಿಕೊಂಡಿದ್ದಾರೆ.
ನವೆಂಬರ್.16ರವರೆಗೂ ಶಾಲಾ-ಕಾಲೇಜು ಬಂದ್:
ಕೊರೊನಾವೈರಸ್ ಪರಿಶೀಲನಾ ಸಭೆ ನಡೆಸಿದ ಸಿಎಂ ಅಶೋಕ್ ಗೆಹ್ಲೋಟ್, ಮಹಾಮಾರಿಯ ನಿಯಂತ್ರಿಸುವ ಉದ್ದೇಶದಿಂದ ಮಾಸ್ಕ್ ಇಲ್ಲದವರಿಗೆ ಪ್ರವೇಶವಿಲ್ಲ, ಪರಿಶುದ್ಧತೆಗಾಗಿ ಯುದ್ಧ ಎಂಬ ಅಭಿಯಾನ ಆರಂಭಿಸುವಂತೆ ಸೂಚಿಸಿದ್ದಾರೆ. ಇದರ ಜೊತೆಗೆ ಮುನ್ನೆಚ್ಚರಿಕೆ ಕ್ರಮವಾಗಿ ರಾಜ್ಯಾದ್ಯಂತ ನವೆಂಬರ್.16ರವರೆಗೂ ಶಾಲಾ-ಕಾಲೇಜುಗಳನ್ನು ತೆರೆಯದಿರಲು ತೀರ್ಮಾನಿಸಲಾಗಿದೆ. ರಾಜ್ಯದಲ್ಲಿ ಸ್ವಿಮ್ಮಿಂಗ್ ಪೂಲ್, ಚಿತ್ರ ಮಂದಿರ, ಮಲ್ಟಿಫ್ಲೆಕ್ಸ್, ಮನರಂಜನಾ ಉದ್ಯಾನವನಗಳನ್ನು ನವೆಂಬರ್.30ರವರೆಗೂ ತೆರೆಯದಿರಲು ಸೂಚಿಸಲಾಗಿದೆ.
Recommended Video
ಅನ್ ಲಾಕ್ 6 ಮಾರ್ಗಸೂಚಿ ರಚನೆ ಬಗ್ಗೆ ಈ ಸಭೆಯಲ್ಲಿ ಚರ್ಚಿಸಲಾಯಿತು. ಶೀಘ್ರದಲ್ಲಿಯೇ 2000 ವೈದ್ಯರ ನೇಮಕಾತಿ ಪ್ರಕ್ರಿಯೆಯು ಪೂರ್ಣಗೊಳ್ಳಲಿದೆ. ಆಯ್ದ ಕೆಲವು ವೈದ್ಯರು ರೋಗಿಗಳಿಗೆ ಗರಿಷ್ಠ 10 ದಿನಗಳಲ್ಲೇ ಅಪಾಂಟ್ ಮೆಂಟ್ ನೀಡುವುದು ಕಡ್ಡಾಯ ಎಂದು ಸೂಚಿಸಲಾಗಿದೆ.