ಗೋಸಾಗಣೆ ಮಾಡುತ್ತಿದ್ದವನ ಗುಂಪು ಹತ್ಯೆ: 6 ಆರೋಪಿಗಳು ಖುಲಾಸೆ
ಅಲ್ವಾರ್, ಆಗಸ್ಟ್ 14: ಗೋವನ್ನು ಕದ್ದು ಕಸಾಯಿ ಖಾನೆಗೆ ಸಾಗಿಸುತ್ತಿದ್ದಾನೆ ಎಂಬ ಆರೋಪದಲ್ಲಿ ರಾಜಸ್ಥಾನದ ಅಲ್ವಾರ್ನಲ್ಲಿ ಪೆಹ್ಲು ಖಾನ್ ಎಂಬುವವರನ್ನು ಜನರ ಗುಂಪು ಹಲ್ಲೆ ನಡೆಸಿ ಕೊಂದು ಹಾಕಿದ ಘಟನೆಗೆ ಸಂಬಂಧಿಸಿದಂತೆ ಎಲ್ಲ ಆರು ಆರೋಪಿಗಳನ್ನು ಸ್ಥಳೀಯ ನ್ಯಾಯಾಲಯವೊಂದು ಎರಡು ವರ್ಷಗಳ ಬಳಿಕ ಖುಲಾಸೆಗೊಳಿಸಿದೆ.
ಸಂಶಯದ ಲಾಭದ ಮೇರೆಗೆ ಈ ಎಲ್ಲ ಆರೋಪಿಗಳನ್ನು ಪ್ರಕರಣದಿಂದ ಖುಲಾಸೆ ಮಾಡುತ್ತಿರುವುದಾಗಿ ನ್ಯಾಯಾಲಯ ಹೇಳಿದೆ.
ಗುಂಪು ಹತ್ಯೆ ತಡೆಗೆ ಕೇಂದ್ರದಿಂದ ಉನ್ನತ ಮಟ್ಟದ ಸಮಿತಿ ರಚನೆ
2017ರ ಏಪ್ರಿಲ್ 1ರಂದು ಹರಿಯಾಣದ ನುಹ್ ಗ್ರಾಮದ 55 ವರ್ಷದ ಪೆಹ್ಲು ಖಾನ್, ರಂಜಾನ್ ಮಾಸಕ್ಕಾಗಿ ಹಾಲು ಉತ್ಪಾದನೆಯನ್ನು ಹೆಚ್ಚಿಸುವ ಸಲುವಾಗಿ ಹಸುವೊಂದನ್ನು ಖರೀದಿಸಲು ತೆರಳಿದ್ದರು. ಅವರನ್ನು ದೆಹಲಿ-ಅಲ್ವಾರ್ ಹೆದ್ದಾರಿಯಲ್ಲಿ ಗೋರಕ್ಷಕರ ಗುಂಪು ಅಡ್ಡಗಟ್ಟಿತ್ತು. ಹಸು ಖರೀದಿ ಮಾಡಿದ ರಶೀದಿ ತೋರಿಸಿ ತಮ್ಮನ್ನು ಉಳಿಸಿಕೊಳ್ಳಲು ಅವರು ಪ್ರಯತ್ನಿಸಿದರೂ ಗುಂಪು ಅವರನ್ನು ರಾಡ್ ಮತ್ತು ಬಡಿಗೆಗಳಿಂದ ಥಳಿಸಿತ್ತು. ಪೆಹ್ಲು ಖಾನ್ ಅವರು ಎರಡು ದಿನಗಳ ಬಳಿಕ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.
ಪೆಹ್ಲು ಖಾನ್ ಮೇಲೆ ಹಲ್ಲೆ ನಡೆಸುವ ವಿಡಿಯೋ ಎಲ್ಲೆಡೆ ಹರಿದಾಡಿತ್ತು. ಈ ವೈರಲ್ ವಿಡಿಯೋವನ್ನೇ ಮುಂದಿಟ್ಟುಕೊಂಡು ಗೋರಕ್ಷಕರ ವಿರುದ್ಧ ವಾದ ಮಂಡಿಸಲಾಗಿತ್ತು. ಆದರೆ, ಸಿಡಿಯಲ್ಲಿ ಇರುವ ವಿಡಿಯೋವನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿ ಅದು ನಕಲಿಯೇ ಅಥವಾ ಅಸಲಿಯೇ ಎಂಬುದನ್ನು ಖಚಿತಪಡಿಸಿಕೊಳ್ಳದ ಕಾರಣ ಅದನ್ನು ಒಪ್ಪುವಂತಹ ಪುರಾವೆಯೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ನ್ಯಾಯಾಲಯದ ತೀರ್ಪನ್ನು ಅಧ್ಯಯನ ಮಾಡಿದ ಬಳಿಕ ಮೇಲಿನ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸುವುದಾಗಿ ಹೆಚ್ಚುವರಿ ಪಬ್ಲಿಕ್ ಪ್ರಾಸಿಕ್ಯೂಟರ್ ಯೋಗೇಂದ್ರ ಖಟಾನಾ ತಿಳಿಸಿದ್ದಾರೆ.
ಗುಂಪು ಹಲ್ಲೆ: ಪ್ರಧಾನಿ ನರೇಂದ್ರ ಮೋದಿಗೆ 49 ಸೆಲೆಬ್ರಿಟಿಗಳ ಪತ್ರ
ಗುಂಪು ಹತ್ಯೆ ಪ್ರಕರಣದ ವಿಚಾರಣೆ ಆಗಸ್ಟ್ 7ರಂದು ಪೂರ್ಣಗೊಂಡಿತ್ತು. 40ಕ್ಕೂ ಹೆಚ್ಚು ಪ್ರತ್ಯಕ್ಷದರ್ಶಿಗಳನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ಘಟನೆ ನಡೆದ ಸಂದರ್ಭದಲ್ಲಿ ಖಾನ್ ಅವರೊಂದಿಗಿದ್ದ ಅವರ ಇಬ್ಬರು ಮಕ್ಕಳನ್ನು ಸಹ ವಿಚಾರಣೆಗೆ ಒಳಪಡಿಸಲಾಗಿತ್ತು.
ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್ಗಳ ಅಡಿ ಆರು ಮಂದಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಪೆಹ್ಲು ಖಾನ್ನ ಸಾವಿನ ಬಳಿಕ ಹತ್ಯೆ ಪ್ರಕರಣವನ್ನೂ ದಾಖಲು ಮಾಡಲಾಗಿತ್ತು. ಈ ಘಟನೆ ದೇಶದಾಂದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿತ್ತು.
ಪೆಹ್ಲು ಖಾನ್ ಹತ್ಯೆ ಪ್ರಕರಣದ ಏಳು ಆರೋಪಿಗಳ ಪೈಕಿ ಆರು ಮಂದಿಗೆ ರಾಜಸ್ಥಾನ ಪೊಲೀಸರು ಕ್ಲೀನ್ ಚಿಟ್ ನೀಡಿದ್ದರು. ಅಲ್ಲದೆ, ಕಳೆದ ಡಿಸೆಂಬರ್ನಲ್ಲಿ ಪೆಹ್ಲು ಖಾನ್ ಮತ್ತು ಆತ ಇಬ್ಬರು ಗಂಡುಮಕ್ಕಳ ವಿರುದ್ಧ ರಾಜ್ಯದ ಗೋಹತ್ಯೆಗೆ ಸಂಬಂಧಿಸಿದ ಕಾನೂನನ್ನು ಉಲ್ಲಂಘಿಸಿದ ಆರೋಪ ದಾಖಲಿಸಿದ್ದರು.